Advertisement

ತೂತುಕಡಿ ಗೋಲಿಬಾರ್‌; ವೈಫ‌ಲ್ಯಕ್ಕೆ ಹಿಡಿದ ಕೈಗನ್ನಡಿ

11:34 AM May 25, 2018 | Team Udayavani |

ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪೆನಿಯ ಸ್ಟಲೈಟ್‌ ತಾಮ್ರ ಘಟಕದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಪ್ರತಿಭಟನೆಯ 100ನೇ ದಿನ ಪರಿಸ್ಥಿತಿ ಕೈಮೀರಿದಾಗ ಪೊಲೀಸರು ನಡೆಸಿದ ಗೋಲಿಬಾರಿಗೆ 12 ಮಂದಿ ಬಲಿಯಾಗಿದ್ದಾರೆ. ಮೊದಲಾಗಿ ಈ ಪ್ರತಿಭಟನೆಯನ್ನು ಪೊಲೀಸರು ಮತ್ತು ಸರಕಾರ ನಿಭಾಯಿಸಿದ ರೀತಿಯಲ್ಲೇ ಲೋಪಗಳಾಗಿರುವುದು ಎದ್ದು ಕಾಣುತ್ತಿದೆ.

Advertisement

ಫೆಬ್ರವರಿಯಿಂದೀಚೆಗೆ ನಡೆಯುತ್ತಿರುವ ಪ್ರತಿಭಟನೆ ನೂರನೇ ದಿನಾಚರಣೆ ಸಂದರ್ಭದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಬಹುದು ಎಂಬ ಅಂದಾಜು ಸರ್ವೇ ಸಾಮಾನ್ಯ. ಗುಪ್ತಚರ ವರದಿಗಳೂ ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆಯ ಕುರಿತು ಮುನ್ನೆಚ್ಚರಿಕೆ ನೀಡಿತ್ತು. ಇದಕ್ಕಿಂತ
ಮಿಗಿಲಾಗಿ ಹೈಕೋರ್ಟ್‌ ಕೂಡಾ ಎಲ್ಲ ಪ್ರತಿಭಟನೆಗಳು ಶಾಂತಿಯುತವಾಗಿ ಇರಬೇಕೆನ್ನುವುದು ಕಡ್ಡಾಯವಲ್ಲ ಎಂದು ಹೇಳಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಮುಂಜಾಗರೂಕತೆಯ ಬಗ್ಗೆ ಸೂಚನೆ ನೀಡಿತ್ತು. ಇದರ ಹೊರತಾಗಿಯೂ ಪೊಲೀಸರಾಗಲಿ, ಆಡಳಿತವಾಗಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯವೇ ಸರಿ. ಕನಿಷ್ಠ ಸಾಕಷ್ಟು ಸಂಖ್ಯೆಯ ಭದ್ರತಾ ಸಿಬಂದಿಗಳನ್ನು ನಿಯೋಜಿಸುವ ಕೆಲಸವನ್ನೂ ಮಾಡಿರಲಿಲ್ಲ ಎನ್ನುವುದು ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಸಂವೇದನಾರಹಿತವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ತಮಿಳುನಾಡು ಸರಕಾರ ಘಟನೆಯ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದೇನೋ ನಿಜ.

ಹಾಗೆಂದು ಇದರಿಂದ ಪೂರ್ಣ ಸತ್ಯ ಹೊರ ಬರುತ್ತದೆ ಎನ್ನುವ ನಿರೀಕ್ಷೆ ಸಾಧ್ಯವಿಲ್ಲ. ಈ ಮಾದರಿಯ ಘಟನೆ ನಡೆದಾಗಲೆಲ್ಲ ನ್ಯಾಯಾಂಗ ತನಿಖೆಗೆ ಆದೇಶಿಸುವುದು ತಕ್ಷಣದ ಆಕ್ರೋಶವನ್ನು ಶಮನಗೊಳಿಸುವ ಕ್ರಮವಷ್ಟೆ. ನ್ಯಾಯಾಂಗ ತನಿಖೆ ಮುಗಿಯಲು ಎಷ್ಟು ಸಮಯ ಹಿಡಿಯಬಹುದು ಎಂದು ಹೇಳುವಂತಿಲ್ಲ. ಕೆಲ ವರ್ಷ ತನಿಖೆ ನಡೆಸಿ ವರದಿ ಸಲ್ಲಿಕೆಯಾಗುವಾಗ ಸರಕಾರವೇ ಬದಲಾಗಿರಬಹುದು. ಹಿಂದೆಯೂ ಈ ಮಾದರಿಯ ನೂರಾರು ತನಿಖಾ ಆಯೋಗಗಳನ್ನು ರಚಿಸಲಾಗಿತ್ತು.

ಅವುಗಳ ವರದಿ ಈಗಲೂ ಧೂಳು ತಿನ್ನುತ್ತಿವೆ. ಇಂಥ ಆಯೋಗಗಳ ವರದಿಗಳಿಂದ ಸಂತ್ರಸ್ತರಿಗೆ ವಿಶೇಷ ಪ್ರಯೋಜನವೇನೂ ಆಗಿಲ್ಲ. ತೂತುಕುಡಿಯ ನ್ಯಾಯಾಂಗ ತನಿಖೆಯೂ ಇದೇ ಹಾದಿ ಹಿಡಿಯಬಾರದು.. ದೇಶಾದ್ಯಂತ ಅನೇಕ ಔದ್ಯೋಗಿಕ ವಲಯಗಳಲ್ಲಿ ಇಂದು ತೂತುಕುಡಿ ಎದುರಿಸುವಂಥ ನೂರಾರು ಸಮಸ್ಯೆಗಳಿವೆ. ಮುಖ್ಯವಾಗಿ ಸ್ಥಳೀಯ ನಿವಾಸಿಗಳ ವಿರೋಧ ಕಟ್ಟಿಕೊಂಡೇ ಕೈಗಾರಿಕಾ ಘಟಕಗಳು ಸ್ಥಾಪನೆಯಾಗಿರುತ್ತವೆ. ಆರಂಭದಲ್ಲಿ ಸಂತ್ರಸ್ತರು ಪರಿಹಾರ ರೂಪದಲ್ಲಿ ಸಿಗುವ ಹಣದ ಆಸೆಯಿಂದ ಸುಮ್ಮನಾದರೂ ಕೈಗಾರಿಕಾ ಘಟಕಗಳಿಂದ ಬಾವಿ ನೀರು ಕಲುಷಿತ ವಾಗುವುದು, ಅಂತರ್ಜಲ ಮಟ್ಟ ಕಡಿಮೆಯಾಗುವಂತಹ ಸಮಸ್ಯೆಗಳು ತಲೆದೋರಿದಾಗ ಸಿಡಿದೇಳುತ್ತಾರೆ. ಈ ರೀತಿಯ ಪ್ರತಿಭಟನೆಗೆ ಸ್ಥಾಪಿತ ಹಿತಾಸಕ್ತಿ ಹೊಂದಿರುವ ಹೊರಗಿನವರು, ಸಮಾಜ ಘಾತುಕ ಶಕ್ತಿಗಳು ಸೇರಿದಾಗ ತೂತುಕುಡಿ  ಯಂತಹ ಘಟನೆ ಸಂಭವಿಸುತ್ತದೆ. 

ಜತೆಗೆ ರಾಜಕೀಯ ಸೇರಿಕೊಂಡರೆ ಮೂಲ ಉದ್ದೇಶವೇ ಮರೆಗೆ ಸರಿಯುತ್ತದೆ.ಪೊಲೀಸರಲ್ಲಿ ಬೃಹತ್‌ ಪ್ರತಿಭಟನೆಯನ್ನು ನಿಭಾಯಿಸುವ ಸಮರ್ಪಕ ತರಬೇತಿಯ ಕೊರತೆ ಎದ್ದು ಕಾಣುತ್ತಿರುವ ಅಂಶ. ಯಾವುದೇ ರಾಜ್ಯದಲ್ಲೂ ಪ್ರತಿಭಟಿಸುವವರು ಹಿಂಸಾಚಾರಕ್ಕೆ ಇಳಿದರೆ ಗೋಲಿಬಾರು ನಡೆಸಿ ಚದುರಿಸಬೇಕು ಎನ್ನುವುದೇ ಪೊಲೀಸರು ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌. ಈ ಚಿಂತನಾ ಕ್ರಮ
ಬದಲಾಯಿಸುವ ಅಗತ್ಯವಿದೆ. ಹಿಂಸೆಯ ಮೂಲಕ ದಮನಿಸುವುದು ಸರಿಯಾದ ಕ್ರಮವಲ್ಲ. ಬದಲಾಗಿ ಪ್ರತಿಭಟನೆಯ ತೀವ್ರತೆಯನ್ನು ಮುಂದಾಗಿ ಅಂದಾಜಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ತರಬೇತಿಯನ್ನು ಪೊಲೀಸರಿಗೆ ನೀಡುವ ಅಗತ್ಯವಿದೆ. ಪೂರಕವಾಗಿ ಗುಪ್ತಚರ ಮಾಹಿತಿ ಕ್ರೊಢೀಕರಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕು.

Advertisement

ಅಂತೆಯೇ ಆರ್ಥಿಕ ಅಭಿವೃದ್ಧಿಗೆ ಚಾಲಕ ಶಕ್ತಿಯಾಗಿರುವ ಕೈಗಾರಿಕೀಕರಣದ ಅಡ್ಡ ಪರಿಣಾಮಗಳನ್ನು ಸಮರ್ಪಕವಾಗಿ ನಿಭಾಯಿಸಲು ರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹವಾದ ನಿಯಂತ್ರಕ ವ್ಯವಸ್ಥೆ ಸ್ಥಾಪಿಸಲು ತೂತುಕುಡಿ ಘಟನೆ ಕಾರಣವಾಗಬೇಕು. ಇಂಥ ಕೆಲ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ಎಲ್ಲ ರಾಜ್ಯಗಳಲ್ಲೂ ಇಂಥದ್ದೇ ಸಮಸ್ಯೆ ಏಳಬಹುದು. 

Advertisement

Udayavani is now on Telegram. Click here to join our channel and stay updated with the latest news.

Next