Advertisement

Sulthan Bathery: ವಯನಾಡ್ ನ ಗಣಪತಿವಟ್ಟಂ “ಸುಲ್ತಾನ್‌ ಬತ್ತೇರಿ”ಯಾಗಿ ಬದಲಾಗಿದ್ದು ಹೇಗೆ?

12:13 PM Apr 12, 2024 | ನಾಗೇಂದ್ರ ತ್ರಾಸಿ |

ಕರ್ನಾಟಕ ರಾಜಕಾರಣದಲ್ಲಿ ಸಾಕಷ್ಟು ಹುಯಿಲೆಬ್ಬಿಸಿದ್ದ ಟಿಪ್ಪು ಸುಲ್ತಾನ್‌ ವಿಷಯ ಇದೀಗ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ನಡುವೆಯೇ ಕೇರಳದ ವಯನಾಡ್‌ ನಲ್ಲಿ ರಾಜಕೀಯ ಪಕ್ಷದ ಮುಖಂಡರು ಟಿಪ್ಪು ಸುಲ್ತಾನ್‌ ವಿಷಯದೊಂದಿಗೆ ವಾಕ್ಸಮರಕ್ಕೆ ಇಳಿದಿದ್ದಾರೆ.

Advertisement

ಇದನ್ನೂ ಓದಿ:

ವಯನಾಡ್‌ ಜಿಲ್ಲೆಯಲ್ಲಿನ ಸುಲ್ತಾನ್‌ ಬತ್ತೇರಿ ಹೆಸರನ್ನು ಗಣಪತಿವಟ್ಟಂ ಎಂದು ಬದಲಾಯಿಸಬೇಕು ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಹೇಳಿಕೆ ನೀಡಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ಕೆ.ಸುರೇಂದ್ರನ್‌ ವಯನಾಡ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್‌ ಪಕ್ಷದಿಂದ ಹಾಲಿ ಸಂಸದ ರಾಹುಲ್‌ ಗಾಂಧಿ ಹಾಗೂ ಸಿಪಿಐನಿಂದ ಅನ್ನಿ ರಾಜಾ ಸ್ಪರ್ಧಿಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಯನಾಡ್‌ ಸುಲ್ತಾನ್‌ ಬತ್ತೇರಿ ಇತಿಹಾಸವೇನು?

Advertisement

ಸುಲ್ತಾನ್‌ ಬತ್ತೇರಿ ಕಥೆ ಶ್ರೀಮಂತ ಮತ್ತು ಸಂಕೀರ್ಣವಾಗಿದೆ. ನವಶಿಲಾಯುಗದ ಬೇರುಗಳನ್ನು ಹೊಂದಿರುವ ಈ ಪಟ್ಟಣವು ಬುಡಕಟ್ಟು ಜನಾಂಗ, ಆಕ್ರಮಣಕಾರರು ಮತ್ತು ವಸಾಹತುಶಾಹಿ ಆಡಳಿತಗಾರರ ವೈವಿಧ್ಯತೆಯ ಸಂಸ್ಕೃತಿಯನ್ನು ಕಂಡಿತ್ತು.

ಸುಲ್ತಾನ್‌ ಬತ್ತೇರಿ ಕೇರಳದ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆ ಪಡೆದಿದೆ. ಕುತೂಹಲದ ಸಂಗತಿ ಅಂದರೆ ಮಲಬಾರ್‌ ನಲ್ಲಿ ಮೈಸೂರು ಅರಸರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಈ ಪಟ್ಟಣ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಡಂಪಿಂಗ್‌ ಯಾರ್ಡ್‌ ಆಗಿತ್ತಂತೆ!

ಒಂದು ಕಾಲದಲ್ಲಿ ಜೈನ ದೇವಾಲಯವಿದ್ದ ಈ ಪಟ್ಟಣದ ಮೇಲೆ ಫಿರಂಗಿ ದಾಳಿ ನಡೆದಿತ್ತು. ಈ ಪಟ್ಟಣದ ಮೂಲ ಹೆಸರು “ಗಣಪತಿವಟ್ಟಂ” ಎಂದಾಗಿತ್ತು. ಸುಲ್ತಾನ್‌ ಬತ್ತೇರಿ ಮುನ್ಸಿಪಲ್‌ ವೆಬ್‌ ಸೈಟ್‌ ನಲ್ಲಿರುವ ಮಾಹಿತಿ ಪ್ರಕಾರ, ಹಿಂದೆ ಗಣಪತಿ ದೇವಾಲಯ ಇದ್ದ ಹಿನ್ನೆಲೆಯಲ್ಲಿ ಗಣಪತಿವಟ್ಟಂ ಎಂಬ ಹೆಸರಿನಿಂದ ಪಟ್ಟಣವನ್ನು ಗುರುತಿಸುತ್ತಿದ್ದರು.

17ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್‌ ಮಲಬಾರ್‌ ಪ್ರದೇಶದ ಮೇಲೆ ದಂಡೆತ್ತಿ ಬಂದಿದ್ದ. ಬಳಿಕ ಟಿಪ್ಪು ಸೇನೆ ಗಣಪತಿವಟ್ಟಂ ಪಟ್ಟಣವನ್ನು ಬ್ಯಾಟರಿ ಶೇಖರಿಸಿ ಇಡುವ ಸ್ಥಳವನ್ನಾಗಿ ಬಳಸಿಕೊಂಡಿದ್ದು…ಹೀಗೆ ಈ ಪಟ್ಟಣ ಸುಲ್ತಾನ್‌ ನ ಬ್ಯಾಟರಿ ಪ್ರದೇಶ ಎಂದೇ ಪ್ರಸಿದ್ಧವಾಯಿತು. ಇಲ್ಲಿ ಟಿಪ್ಪು ಸುಲ್ತಾನ್‌ ಕೋಟೆಯೊಂದನ್ನು ಕಟ್ಟಿಸಿದ್ದ, ಆದರೆ ಅದು ಈಗ ಪಾಳುಬಿದ್ದಿದೆ.

ಈ ಪ್ರದೇಶದಲ್ಲಿ ಟಿಪ್ಪು ಸೇನೆ ಬ್ಯಾಟರಿಯನ್ನು ತಯಾರಿಸುತ್ತಿತ್ತು. ಇದರಿಂದಾಗಿ ಪಟ್ಟಣಕ್ಕೆ ಸುಲ್ತಾನ್‌ ಬತ್ತೇರಿ ಎಂದೇ ಹೆಸರಾಯಿತು. ಈ ಹೆಸರು ಅಧಿಕೃವಾಗಿದ್ದು, ಇದೀಗ ಭಾರತೀಯ ಜನತಾ ಪಕ್ಷ ಹೆಸರನ್ನು ಬದಲಾಯಿಸಿ ಗಣಪತಿವಟ್ಟಂ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದೆ. ವಿಜಯನಗರ ಆಡಳಿತದ ಸಂದರ್ಭದಲ್ಲಿ 13ನೇ ಶತಮಾನದಲ್ಲಿ ಈ ಪಟ್ಟಣದಲ್ಲಿ ಜೈನ ಸಮುದಾಯ ವಾಸವಾಗಿತ್ತು. ಅಂದು ಕಟ್ಟಿಸಿದ್ದ ಜೈನ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆ ಸ್ಮಾರಕವನ್ನಾಗಿ ಮಾಡಿ ರಕ್ಷಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next