Advertisement

ಗಡದ್ದಾದ ಗಡಾಯಿಕಲ್ಲು

03:25 AM Nov 17, 2018 | |

ಧರ್ಮಸ್ಥಳಕ್ಕೆ ತುಂಬ ಹತ್ತಿರದಲ್ಲಿಯೇ ಗಡಾಯಿಕಲ್ಲು ಕೋಟೆಯಿದೆ. ಇದು ಕುದುರೇಮುಖ ಪರ್ವತ ಶ್ರೇಣಿಯ ಒಂದು ಭಾಗ. ತನ್ನ ತಾಯಿಯ  ಸ್ಮರಣಾರ್ಥವಾಗಿ, ಟಿಪ್ಪು ಸುಲ್ತಾನ್‌ ಈ ಕೋಟೆಯನ್ನು ಕಟ್ಟಿಸಿದನಂತೆ. ಕೋಟೆಯ ಒಳಗೆ ಕಾಣಸಿಗುವ ಫಿರಂಗಿಗಳು, ಈ ಕೋಟೆ ಟಿಪ್ಪುವಿನ ಕಾಲದ್ದೇ ಎಂಬ ಮಾತಿಗೆ ಪುಷ್ಟಿ ನೀಡುತ್ತವೆ…

Advertisement

ಮಂಗಳೂರು, ಉಪ್ಪಿನಂಗಡಿ ಅಥವಾ ಮೂಡಬಿದ್ರಿಯಿಂದ ಧರ್ಮಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಹಾಗೇ ಕಣ್ಣು ಹಾಯಿಸಿ.  ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ರಸ್ತೆಯ ಎಡ ಭಾಗದಲ್ಲಿ ರಸ್ತೆಯುದ್ದಕ್ಕೂ ಒಂಟಿಯಾಗಿ ನಿಂತಿರುವ ಬೃಹತ್‌ ಕರಿದಾದ ಬೆಟ್ಟವೊಂದು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.  ಅದುವೇ  ಇತಿಹಾಸ ಪ್ರಸಿದ್ಧ ಗಡಾಯಿಕಲ್ಲು.

ಈ ತಾಣದ ಸೌಂದರ್ಯವನ್ನು  ದಾರಿ ಮೇಲೆ ಹೋಗುವಾಗ ಈ ರೀತಿ ಕಣ್ತುಂಬಿಕೊಂಡರೆ ಪ್ರಯೋಜನವಿಲ್ಲ.  ಬೆಳ್ತಂಗಡಿಯಿಂದ ಕಿಲ್ಲೂರು ರಸ್ತೆಯಲ್ಲಿ ಎಂಟು ಕಿ.ಮೀ ಸವೆಸಿದರೆ ಮಂಜೊಟಿ ಸಿಗುತ್ತದೆ. ಅಲ್ಲಿಂದ ಒಂದು ಕಿ.ಮೀ ದೂರದಲ್ಲೇ ಇರುವುದು ಈ ಗಡಾಯಿ ಬೆಟ್ಟ.  ಇದು ಕುದುರೆಮುಖ ಪರ್ವತ ಶ್ರೇಣಿಯ ಒಂದು ಭಾಗ.  ಪ್ರಾದೇಶಿಕವಾಗಿ ಇಲ್ಲಿನ ಜನರು ಈ ಕೋಟೆಯನ್ನು ‘ಗಡಾಯಿಕಲ್ಲು’, ‘ಜಮಲಾಬಾದ್‌’, ‘ಜಮಲಾಗದ್ದ’ ಮತ್ತು ‘ನರಸಿಂಹಗಢ’ ಅಂತೆಲ್ಲಾ ಕರೆಯುತ್ತಾರೆ. ಈ ಬೆಟ್ಟದ ಮೇಲ್ಭಾಗದಲ್ಲಿ ಸುಸಜ್ಜಿತವಾದ ಕೋಟೆ ಇದೆ.  ಕ್ರಿ.ಶ 1794ರಲ್ಲಿ ತನ್ನ ತಾಯಿ ಜಮಲಾಬಿಯ ನೆನಪಿಗಾಗಿ  ಟಿಪ್ಪು ಸುಲ್ತಾನ್‌ ಈ ಕೋಟೆಯನ್ನು ಕಟ್ಟಿಸಿದನಂತೆ. ಫ್ರೆಂಚ್‌ ಇಂಜಿನಿಯರ್‌ಗಳು ಕೋಟೆ ನಿರ್ಮಿಸಿರುವುದರಿಂದ ಇಲ್ಲಿ ಮುಸ್ಲಿಂ ಹಾಗೂ ಫ್ರೆಂಚ್‌ ಮಾದರಿಯ ವಾಸ್ತು ಶಿಲ್ಪಗಳ ಕುರುಹುಗಳು ಸಿಗುತ್ತವೆ.  

Advertisement

ಟಿಪ್ಪು ಕೋಟೆ

ಈ ಕೋಟೆಯ ಆರಂಭದಲ್ಲೇ ಸುಮಾರು ಹದಿನೈದರಿಂದ ಇಪ್ಪತ್ತು ಅಡಿ ಎತ್ತರದ ಬೃಹತ್‌ ಪ್ರವೇಶ ದ್ವಾರವಿದೆ.  ಬಂಡೆಗಲ್ಲನ್ನೇ ಕೆತ್ತಿ ನಿರ್ಮಿಸಿದ ಸುಮಾರು 1,876 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಬೇಕು. ದಾರಿಯ ಮಧ್ಯೆ ಅಲ್ಲಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಿಶ್ರಾಂತಿ ಗೃಹಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಚಾರಣದ ಕೆಲವೊಂದು ಸ್ಥಳಗಳು ಅತ್ಯಂತ ಅಪಾಯಕಾರಿಯೂ ಆಗಿದೆ.  ಚಾರಣಕ್ಕೆ ಹೊರಟವರು ಹೆಚ್ಚಿನ ಮುಂಜಾಗ್ರತೆ ವಹಿಸದೇ ಹೋದರೆ ಪ್ರಾಣಕ್ಕೇ ಸಂಚಕಾರ ಸಂಭವಿಸುವ ಸಾಧ್ಯತೆಗಳಿವೆ. ಕೋಟೆಯ ತಳ ಸುಮಾರು 4 ರಿಂದ 5 ಕಿ.ಮೀಯಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಮೇಲ್ಭಾಗದಲ್ಲಿ ಒಂದರಿಂದ ಎರಡು ಎಕರೆಯಷ್ಟು ವಿಶಾಲವಾದ ಪ್ರಸ್ಥಭೂಮಿಯಂತಿದೆ. ಇಲ್ಲಿ ಬೃಹತ್‌ ಗಾತ್ರದ ಮರಗಳು, ಕುರುಚಲು ಗಿಡಗಳು ಇವೆ. 

 ಬೆಟ್ಟದ ಮೇಲೆ ಕಲ್ಲಿನಿಂದಲೇ ನಿರ್ಮಿಸಿರುವ ಕೆರೆ ಇದೆ.  ಸುಡು ಬೇಸಿಗೆಯಲ್ಲೂ ಈ ಕೆರೆಯು ಬತ್ತುವುದೇ ಇಲ್ಲ.  ಬೆಟ್ಟದ ಮೇಲಾºಗದಲ್ಲಿ ನಿಂತರೆ ಬೆಳ್ತಂಗಡಿ ಮತ್ತು ಉಜಿರೆ ಪಟ್ಟಣಗಳ ವಿಹಂಗಮ ನೋಟ ಕಣ್ಮನಗಳನ್ನು ಸೆಳೆಯುತ್ತದೆ. ಕೋಟೆಯ ಕೊನೆಯ ಭಾಗದಲ್ಲಿ ಸಂಪೂರ್ಣ ಶಿಥಿಲಗೊಂಡ ಫಿರಂಗಿ ಮನೆ ಇನ್ನೇನು ಬೀಳುವ ಸ್ಥಿತಿಯಲ್ಲಿದೆ. ಇಲ್ಲಿಯೇ ಟಿಪ್ಪುಸುಲ್ತಾನ್‌ನ ಸೈನಿಕರು, ಫಿರಂಗಿಗಳಿಗೆ ಅವಶ್ಯವಿರುವ ಮದ್ದು ಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದರೆಂದು ಹೇಳಲಾಗುತ್ತದೆ. 

ಫಿರಂಗಿಗಳಿವೆ…

 ಕೋಟೆಯ ಪ್ರಮುಖ ಸ್ಥಳಗಳಲ್ಲೆಲ್ಲಾ ಫಿರಂಗಿಗಳನ್ನು ಜೋಡಿಸಿಡಲಾಗಿದೆ. ಕೋಟೆಯೆಡೆಗೆ ಧಾವಿಸುವ ಶತ್ರುಗಳನ್ನು ಇಲ್ಲಿಂದಲೇ ಗುಂಡು ಹಾರಿಸಿ ಟಿಪ್ಪು ಹಿಮ್ಮೆಟ್ಟಿಸುತ್ತಿದ್ದ ಎಂದು ಇತಿಹಾಸ ಹೇಳುತ್ತದೆ. ಈ ಕೋಟೆಗೆ ಪ್ರವೇಶಿಸಲು ಇರುವುದು ಒಂದೇ ದಾರಿ. ಅದು ತುಂಬಾ ಕಡಿದಾಗಿದೆ.  ಕ್ರಿ.ಶ 1799ರ ಮೈಸೂರು ಯುದ್ಧದಲ್ಲಿ, ಈ ಕೋಟೆ ಬ್ರಿಟೀಷರ ವಶವಾಯಿತಂತೆ.  ಇಲ್ಲಿ ಕಡಿದಾದ ‘ಪಾಶಿಸ್ಥಳ’ವೊಂದಿದೆ. ತೀರಾ  ಕೊರಕಲು ಕಂದಕವಾಗಿರುವುದರಿಂದ ಟಿಪ್ಪು ತನ್ನ ಶತ್ರುಗಳು, ಯುದ್ಧ ಕೈದಿಗಳನ್ನು  ತಲೆ ಕೆಳಗಾಗಿ ಎಸೆದು ಕೊಲ್ಲುತ್ತಿದ್ದನಂತೆ.   ಈ ಕೋಟೆಗೆ ಪ್ರವೇಶ ಹಾಗೂ ತುದಿಯನ್ನು ತಲುಪುವವರೆಗಿನ ಎಲ್ಲಾ ದಾರಿಗಳನ್ನೂ ಕೋಟೆಯ ಆಯಕಟ್ಟಿನ ಸ್ಥಳದಲ್ಲಿ ನಿಂತು ವೀಕ್ಷಿಸುವಂಥ ಚಾಣಾಕ್ಷ ತಂತ್ರಜ್ಞಾನ ಬಳಸಿ ಕಟ್ಟಲಾಗಿದೆ. 

ಚಾರಣ

ಗಡಾಯಿಕಲ್ಲು, ಚಾರಣ ಪ್ರಿಯರ ಸ್ವರ್ಗ. ಇಲ್ಲಿಗೆ ಹೋಗಬೇಕಾದರೆ  ಅರಣ್ಯ ಇಲಾಖೆ ಅನುಮತಿ ಬೇಕು.  ಪ್ರವೇಶ ಶುಲ್ಕ 20 ರೂ. ಇದ್ದು,  ಬೆಳಗ್ಗೆ 6ರಿಂದ ಸಂಜೆ 6ರ ತನಕ ಚಾರಣ ಮಾಡಬಹುದು. ಕೋಟೆ ಮುಟ್ಟಲು ಎರಡು, ಮೂರು ಗಂಟೆ ಬೇಕಾಗುತ್ತದೆ.  ಕೋಟೆಯ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆಯ ಗೇಟ್‌ ಇದೆ.  ಸೂರ್ಯನ ಬೇಗೆಯು ತಣಿಯುತ್ತಿದ್ದಂತೆಯೇ ಗೇಟ್‌ ಮುಚ್ಚುವುದರೊಳಗಾಗಿ ಕೋಟೆಯಿಂದ ವಾಪಾಸು ಬರಬೇಕು. ಸಂಜೆ ನಾಲ್ಕು ಗಂಟೆಯ ನಂತರ ಚಾರಣಕ್ಕೆ ಅವಕಾಶವಿಲ್ಲ.  ಯಾವುದೇ ಕಾರಣಕ್ಕೂ ಕೋಟೆಯ ಮೇಲ್ಭಾಗದಲ್ಲಿ ರಾತ್ರಿಯ ಹೊತ್ತು ಉಳಿದುಕೊಳ್ಳುವಂತಿಲ್ಲ. ಗಡಾಯಿಕಲ್‌ ಕೋಟೆ ಇರುವ ಪ್ರದೇಶದಲ್ಲಿ ಚಾರಣಕ್ಕೆ ಬೇಸಿಗೆ ಹೇಳಿ ಮಾಡಿಸಿದ ಕಾಲ. ಮಳೆಗಾಲ, ಚಳಿಗಾಲದಲ್ಲಿ ಮಂಜಿನ ಕಾಟವಿರುವುದರಿಂದ ಆ ಸಂದರ್ಭದಲ್ಲಿ ಚಾರಣ ಮಾಡುವುದು ಯೋಗ್ಯವಲ್ಲ. 

ಕೋಟೆಯ ಅಳಿದುಳಿದ ಕೋಣೆಗಳು ಇಂದಿಗೂ ಅತ್ಯಂತ ಬಲಿಷ್ಠವಾಗಿ ಮಳೆಗಾಳಿಯನ್ನೂ ಲೆಕ್ಕಿಸದೇ ನಿಂತಿವೆ. 
ಇಲ್ಲಿ ಉತ್ತಮವಾದ ಗಾಳಿ ಬೆಳಕಿನ ವ್ಯವಸ್ಥೆಯೂ ಇದೆ. ಕೋಟೆ ಹಾಗೂ ರಕ್ಷಣಾ ವ್ಯವಸ್ಥೆಗೆ ಪ್ರಕೃತಿಯನ್ನು ಬಳಸಿಕೊಂಡಿರುವುದನ್ನು ಇಲ್ಲಿ ಕಾಣಬಹುದು. ಚಾರಣಕ್ಕೆ ಹೋಗುವವರು ಗೋಡೆಗಳ ಮೇಲೆ ಕೆತ್ತುವುದು,  ಹುಲ್ಲಿನ ಗುಡ್ಡಕ್ಕೆ ಬೆಂಕಿಯನ್ನು ಹಚ್ಚುವ ಕಿಡಿಗೇಡಿ ಕೆಲಸಗಳನ್ನೂ ಮಾಡಿದ್ದಾರೆ. 

ಚಾರಣ ಮಾಹಿತಿಗೆ-08256-233189 

ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next