Advertisement

ಟಿಪ್ಪರ್‌ ಪಲ್ಟಿ: ಇಬ್ಬರು ದಾರುಣ ಸಾವು

09:18 AM Jun 22, 2019 | Team Udayavani |

ಬ್ರಹ್ಮಾವರ: ಉಪ್ಪೂರು ಹೆರಾಬೆಟ್ಟು ಡಿವೈಡರ್‌ ಬಳಿ ಶುಕ್ರವಾರ ಬೆಳಗ್ಗೆ ಟಿಪ್ಪರ್‌ ಪಲ್ಟಿಯಾದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

Advertisement

ಟಿಪ್ಪರ್‌ ಚಾಲಕ ಬ್ರಹ್ಮಾವರ ಮೂಲದ ನಾಗರಾಜ ಗಾಣಿಗ (40), ಸಹಾಯಕ ಸಾಗರದ ಕುಮಾರ್‌ ಆರ್‌. ಎಂ. (27) ಮೃತಪಟ್ಟವರು. ವಾಹನದಲ್ಲಿದ್ದ ಸಾಗರದ ರಾಘವೇಂದ್ರ (19) ಗಂಭೀರ ಗಾಯ ಗೊಂಡಿದ್ದಾರೆ. ಕುಮಾರ್‌ ಹಾಗೂ ರಾಘವೇಂದ್ರ ಸಂಬಂದಿಗಳಾಗಿದ್ದರು.

ಶುಕ್ರವಾರ ಮುಂಜಾನೆ ಬ್ರಹ್ಮಾವರದಿಂದ ಉಡುಪಿಯತ್ತ ಸಾಗುತ್ತಿದ್ದ ಟಿಪ್ಪರ್‌ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಢಿಕ್ಕಿ ಹೊಡೆಯಿತು. ಈ ಸಂದರ್ಭ ಡಿವೈಡರ್‌ನಲ್ಲಿದ್ದ ಸಿಗ್ನಲ್‌ ದೀಪದ ಕಂಬ ಲಾರಿಯೊಳಗೆ ನುಗ್ಗಿದ ಪರಿಣಾಮ ವಾಹನ ಪಲ್ಟಿಯಾಗಿದ್ದು, ಇಬ್ಬರು ಅದರಡಿಯಲ್ಲಿ ಸಿಲುಕಿ ಮೃತಪಟ್ಟರು. ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಆಯಿಲ್‌ ಚೆಲ್ಲಿದ್ದ ಕಾರಣ ರಸ್ತೆ ಬಂದ್‌ ಮಾಡಿ ವಾಹನ ಸಂಚಾರವನ್ನು ನಿರ್ಬಂಧಿಸಲಾಯಿತು.

ಶ್ರೀನಿವಾಸ ಪೂಜಾರಿ ನೆರವು
ಅಪಘಾತ ನಡೆದ ಕೂಡಲೇ ಆ ದಾರಿಯಲ್ಲಿ ಸಾಗುತ್ತಿದ್ದ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಹನದಡಿ ಸಿಲುಕಿ ಒದ್ದಾಡಿದ್ದ ಕುಮಾರ್‌
ಮಧ್ಯದಲ್ಲಿ ಕುಳಿತಿದ್ದ ಕುಮಾರ್‌ ಅವರು ಟಿಪ್ಪರ್‌ನ ಅಡಿಗೆ ಸಿಲುಕಿ ತುಂಬಾ ಹೊತ್ತು ನರಳಾಡಿದ್ದರು. ಕ್ರೇನ್‌ ತರಿಸಿ ಟಿಪ್ಪರನ್ನು ಎತ್ತಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕಾಲು ಹಾಗೂ ಕಿಬ್ಬೊಟ್ಟೆಗೆ ತೀವ್ರ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ನಾಗರಾಜ ಗಾಣಿಗ ಅವರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು. ರಾಘವೇಂದ್ರ ಅವರು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚೇತರಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇವರೆಲ್ಲರೂ ಮಣಿಪಾಲದ ಸೈಟ್‌ಗೆ ತೆರಳುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next