Advertisement

ಸಕಾಲಕ್ಕೆ  ಆಂಬ್ಯುಲೆನ್ಸ್‌ ಸೇವೆ ಅಲಭ್ಯ!

04:20 PM Dec 16, 2018 | |

ಗದಗ: ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾಸ್ಪತ್ರೆ, ತಾಲೂಕು ಮತ್ತು ವಿವಿಧ ಹೋಬಳಿ ಆಸ್ಪತ್ರೆಗಳಿಗೆ ಒಟ್ಟು 27 ಆ್ಯಂಬುಲೆನ್ಸ್ ಗಳಿವೆ. ಆದರೆ, ದುರಸ್ತಿ ಮತ್ತು ವಿಮೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಒಂಭತ್ತಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಸೇವೆಗೆ ಅಲಭ್ಯವಾಗುತ್ತಿವೆ. ಇನ್ನು, ಆ್ಯಂಬುಲೆನ್ಸ್  ಗಳು ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲವರು ಕೊನೆಯುಸಿರೆಳೆದ ಉದಾಹರಗಳಿಗೆ ಕೊರತೆಯಿಲ್ಲ.

Advertisement

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇಂದ್ರ ಸರಕಾರದ ಎನ್‌ಆರ್‌ ಎಚ್‌ಎಂ ಯೋಜನೆಯ ಜನನಿ ಸುರಕ್ಷಾ ವಾಹಿನಿ, ನಗು-ಮಗು ಸೇರಿ 14 ಹಾಗೂ ಆರೋಗ್ಯ ಕವಚ 108 ಅಡಿ 13 ಸೇರಿದಂತೆ ಒಟ್ಟು 27 ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ 2, ಜಿಲ್ಲೆಯ ನಾಲ್ಕೂ ತಾಲೂಕು ಕೇಂದ್ರಗಳಲ್ಲಿ ತಲಾ ಒಂದು, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಸೇರಿದಂತೆ ವಿವಿಧ ಹೋಬಳಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ.

ಅದರೊಂದಿಗೆ ಗ್ರಾಮೀಣ ಜನರ ಆರೋಗ್ಯ ಸೇವೆಗಾಗಿ ಪ್ರತಿ 10ರಿಂದ 13 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಆ್ಯಂಬುಲೆನ್ಸ್‌ ಇರುವಂತೆ ಕ್ರಮ ಕೈಗೊಂಡಿದೆ. ಆದರೆ, ಈ ಪೈಕಿ ಹಲವು ಆ್ಯಂಬುಲೆನ್ಸ್‌ ವಾಹನಗಳು ಹಳೆಯದಾಗಿದ್ದರಿಂದ ಮೇಲಿಂದ ಮೇಲೆ ಕೆಟ್ಟು ನಿಲ್ಲುತ್ತಿವೆ. ಪ್ರತೀ ಬಾರಿ ಅದರ ದುರಸ್ತಿಗೆ ಒಂದೆರಡು ದಿನ ಕಾಯುವಂತಾಗುತ್ತದೆ. ಅದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ಸಾಗಿಸುವುದರಿಂದ ಸ್ಥಳೀಯವಾಗಿ ಆ್ಯಂಬುಲೆನ್ಸ್‌ಗಳ ಕೊರತೆ ಎದ್ದು ಕಾಣುತ್ತದೆ ಎಂಬುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಮಾತು.

ಇನ್ನುಳಿದಂತೆ ಜಿಲ್ಲಾಸ್ಪತ್ರೆಯ ಎರಡು ಆ್ಯಂಬುಲೆನ್ಸ್‌ ಸೇರಿ ಒಟ್ಟು 5ಕ್ಕಿಂತ ಹೆಚ್ಚಿನ ಆ್ಯಂಬುಲೆನ್ಸ್‌ಗಳಲ್ಲಿ ವೆಂಟಿಲೇಟರ್‌ ಸೌಲಭ್ಯಗಳಿಲ್ಲ. ಹೀಗಾಗಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು,  ಹೃದಯಾಘಾತ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಂದ ಸ್ವಯಂ ಉಸಿರಾಟ ನಡೆಸದ ರೋಗಿಗಳನ್ನು ತಾತ್ಕಾಲಿಕವಾಗಿ ಸಮೀಪದ ತಾಲೂಕು ಆಸ್ಪತ್ರೆಗಳಿಗೆ ಸಾಗಿಸಿ, ರೋಗಿ ಚೇತರಿಸಿಕೊಂಡ ಬಳಿಕವಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಬೇಕು. ಇಲ್ಲವೇ ಜಿಲ್ಲಾಸ್ಪತ್ರೆಯಿಂದ ಆ್ಯಂಬುಲೆನ್ಸ್‌ಗಾಗಿ ಕಾಯುವುದು ಅನಿವಾರ್ಯ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಜಿಲ್ಲೆಯ ಗ್ರಾಮೀಣ ಭಾಗದ ವೈದ್ಯರು.

ಚಿಕಿತ್ಸೆಗೆ ಕಾದಿವೆ ಏಳು ಆ್ಯಂಬುಲೆನ್ಸ್‌: ಗದಗ ತಾಲೂಕಿನ ಮುಳಗುಂದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲಾಖೆಯಿಂದ ಒದಗಿಸಿರುವ ಒಂದು ಆ್ಯಂಬುಲೆನ್ಸ್‌ ದುರಸ್ತಿಯಲ್ಲಿದೆ. ಶಿರಹಟ್ಟಿ ತಾಲೂಕಿನ ಮೂರರಲ್ಲಿ ಎರಡು ಸೇವೆಗೆ ಅಲಭ್ಯವಾಗುತ್ತಿವೆ. ಒಂದು ವಾಹನ ದುರಸ್ತಿಗೀಡಾಗಿ ತಿಂಗಳಿಂದ ಗ್ಯಾರೇಜ್‌ ಸೇರಿದರೆ, ಮತ್ತೂಂದು ವಿಮೆ ಪಾವತಿಸದ ಹಿನ್ನೆಲೆಯಲ್ಲಿ ರಸ್ತೆಗಿಳಿದಿಲ್ಲ. ರೋಣ ತಾಲೂಕಿನಲ್ಲಿರುವ ಒಟ್ಟು ಐದು ತುರ್ತು ಚಿಕಿತ್ಸಾ ವಾಹನಗಳ ಪೈಕಿ ಒಂದು ಕೆಟ್ಟು ನಿಂತಿದೆ. ನರಗುಂದ ತಾಲೂಕಿಗೆ 108 ಸೇರಿದಂತೆ ಒಟ್ಟು ಐದು ಆ್ಯಂಬುಲೆನ್ಸ್  ಗಳಿದ್ದು, ಆ ಪೈಕಿ ಒಂದು ಬ್ಯಾಟರಿ ಸಮಸ್ಯೆಯಿಂದಾಗಿ ದುರಸ್ತಿಗೀಡಾಗಿದೆ. ಎರಡು ದಿನಗಳಲ್ಲಿ ದುರಸ್ತಿಗೊಳ್ಳಲಿದೆ ಎಂದು ಹೇಳಲಾಗಿದೆ.

Advertisement

ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರ ಮತ್ತು ರೋಣ ತಾಲೂಕಿನ ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಲಾ 108 ಆ್ಯಂಬುಲೆನ್ಸ್‌ಗಳು ದುರಸ್ತಿಗೀಡಾಗಿವೆ. ಅದರಲ್ಲಿ ಬೆಳವಣಕಿ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್‌ಗೆ ತಿಂಗಳೇ ಕಳೆದರೂ ದುರಸ್ತಿ ಭಾಗ್ಯ ಒದಗಿ ಬಂದಿಲ್ಲ. ಈ ಪೈಕಿ ನಾಲ್ಕು ಹೊರತಾಗಿ ಇನ್ನುಳಿದ ಆ್ಯಂಬುಲೆನ್ಸ್‌ಗಳು ಸಣ್ಣಪುಟ್ಟ ದೋಷಗಳಿಂದ ಕುಡಿದ್ದು, ಸ್ಥಗಿತಗೊಂಡಿವೆ. ಇವು ಒಂದೆರಡು ದಿನಗಳಲ್ಲಿ ದುರಸ್ತಿಯಾಗುವ ಸಾಧ್ಯತೆಗಳಿವೆ.

ವಿಮೆ ಕಟ್ಟದೇ ಕೊಳೆಯುತ್ತಿವೆ!: ಆರೋಗ್ಯ ಇಲಾಖೆ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಖರೀದಿಸಿರುವ ಆ್ಯಂಬುಲೆನ್ಸ್‌ ವಾಹನಗಳಿಗೆ ವಿಮೆ ಕಟ್ಟದ ಹಿನ್ನೆಲೆಯಲ್ಲಿ ತಿಂಗಳುಗಳಿಂದ ಮೂಲೆ ಸೇರಿವೆ. ಅದರಲ್ಲಿ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್‌ ವಿಮೆ ನವೀಕರಣಗೊಳ್ಳದ ಪರಿಣಾಮ ಕಳೆದ ಆರೇಳು ತಿಂಗಳಿಂದ ಆ್ಯಂಬುಲೆನ್ಸ್‌ ರಸ್ತೆಗಿಳಿದಿಲ್ಲ. ಬೆಟಗೇರಿಗೆ ಹೊಸದಾಗಿ ಮಂಜೂರಾಗಿರುವ ಆ್ಯಂಬುಲೆನ್ಸ್‌ಗೆ ವಿಮೆ ಕಟ್ಟಿಲ್ಲ ಹಾಗೂ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿಲ್ಲ. ಹೀಗಾಗಿ ತಾತ್ಕಾಲಿಕ ನೋಂದಣಿ ಸಂಖ್ಯೆಯಡಿಯೇ ಸ್ಥಳೀಯವಾಗಿ ಸೇವೆ ಒದಗಿಸುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಆ್ಯಂಬುಲೆನ್ಸ್‌ ಎಂಬುದು ಸಾವು ಬದುಕಿನ ಮಧ್ಯೆ ಹೋರಾಡುವವರಿಗೆ ಸಂಜೀವಿನಿಯಾಗಬೇಕು. ಆದರೆ, ಆ್ಯಂಬುಲೆನ್ಸ್‌ಗಳು ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಮೂರಕ್ಕಿಂತ ಅಧಿಕ ಜನರು ಕೊನೆಯುಸಿರೆಳೆದಿದ್ದಾರೆ. ಆ ಪೈಕಿ ಗಜೇಂದ್ರಗಡದಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಓರ್ವ ಯುವಕ, ಗದುಗಿನ ರೋಟರಿ ವೃತ್ತದಲ್ಲಿ ಸಂಭವಿಸಿದ ಅಫಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಇನ್ನು, ಹೊರಗುತ್ತಿಗೆ ನೌಕರರನೊಬ್ಬ ವೇತನ ಬಾಕಿ ಉಳಿಸಿಕೊಂಡಿರುವುದನ್ನು ಖಂಡಿಸಿ ಜಿ.ಪಂ. ಲೆಕ್ಕಾಧಿಕಾರಿ ಕಚೇರಿಯಲ್ಲೇ ವಿಷ ಸೇವಿಸಿದಾಗಲೂ ಆ್ಯಂಬುಲೆನ್ಸ್‌ ಬರಲಿಲ್ಲ. ಹೀಗಾಗಿ ಆಟೋವೊಂದರಲ್ಲಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ, ಬಹುತೇಕ ಆ್ಯಂಬುಲೆನ್ಸ್‌ ಹುಬ್ಬಳ್ಳಿ, ಇಲ್ಲವೇ ಜಿಲ್ಲಾಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತದೆ ಎಂಬ ಸಿದ್ಧ ಉತ್ತರ ಸಿಗುತ್ತದೆ ಎಂಬುದು ಸಾರ್ವಜನಿಕರ ಆರೋಪ.

ಆಂಬ್ಯುಲೆನ್ಸ್‌ಗೆ ಸಾರಥಿ ಇಲ್ಲ!
ಮುಂಡರಗಿ ತಾಲೂಕಿನಲ್ಲಿರುವ ಮೂರು ಆಂಬ್ಯುಲೆನ್ಸ್‌ಗಳ ಪೈಕಿ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ತುರ್ತು ವಾಹನಕ್ಕೆ ಚಾಲಕನೇ ಇಲ್ಲ. ಈ ಹಿಂದೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದ್ದ ಚಾಲಕನ ಅವಧಿ ಮುಕ್ತಾಯಗೊಂಡಿದೆ. ತಾಲೂಕಿನ ‘ಡಿ’ ಗ್ರುಪ್‌ ಸೇವೆಯನ್ನು ಹೊರ ಗುತ್ತಿಗೆಗೆ ನೀಡಲಾಗಿದ್ದರೂ ಗುತ್ತಿಗೆದಾರ ಹಾಗೂ ಹಳೇ ಸಿಬ್ಬಂದಿ ನಡುವಿನ ಹಗ್ಗಜಗ್ಗಾಟದಿಂದ ಈ ಹುದ್ದೆ ಖಾಲಿ ಉಳಿದಿದೆ. ಹೀಗಾಗಿ ಕೆಲ ದಿನಗಳಿಂದ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್‌ ವಾಹನ ನಿಂತಲ್ಲೇ ತುಕ್ಕು ಹಿಡಿಯುತ್ತಿದೆ ಎಂಬುದು ಗಮನಾರ್ಹ.

ಬೆಟಗೇರಿ ಹಾಗೂ ಶಿರಹಟ್ಟಿ ಆ್ಯಂಬುಲೆನ್ಸ್‌ಗಳ ವಿಮೆ ಪಾವತಿಗೆ ಸಂಬಂಧಿಸಿ ಕೆ-2 ಅಡಿ ಅನುದಾನ ಲಭಿಸಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಇನ್ನುಳಿದಂತೆ ವಾಹನಗಳು ದುರಸ್ತಿಗೀಡಾಗುತ್ತಿದ್ದಂತೆ ಆರ್‌ಟಿಒ ಅಧಿಕಾರಿಗಳಿಂದ ವರದಿ ಪಡೆದು ರಿಪೇರಿ ಮಾಡಿಸಲಾಗುತ್ತದೆ. ಸರಕಾರದಿಂದ ಮತ್ತಷ್ಟು ಹೊಸ ಆ್ಯಂಬುಲೆನ್ಸ್‌ಗಳು ಲಭಿಸುವ ನಿರೀಕ್ಷೆಯಿದೆ.
.ಸತೀಶ್‌ ಬಸರಿಗಿಡದ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ವೀರೇಂದ್ರ ನಾಗಲದ್ನಿನಿ

Advertisement

Udayavani is now on Telegram. Click here to join our channel and stay updated with the latest news.

Next