Advertisement

CAA ವಿರೋಧಿ ಪ್ರತಿಭಟನೆ;ಭಾರತ ಬಿಟ್ಟು ತೆರಳಿ,ಜರ್ಮನ್ ವಿದ್ಯಾರ್ಥಿ ಬಳಿಕ ನಾರ್ವೆ ಪ್ರಜೆ ಸರದಿ

10:16 AM Dec 28, 2019 | Team Udayavani |

ನವದೆಹಲಿ: ಕೇರಳದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಾರ್ವೆ ಪ್ರಜೆ ಜಾನ್ನೆ ಮೆಟ್ಟೆ ಜೋಹಾನ್ಸನ್ ಗೆ ಭಾರತ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಜಾನ್ನೆ ಎರಡು ತಿಂಗಳ ಹಿಂದೆ ನಾರ್ವೆಯಿಂದ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿರುವುದಾಗಿ ವರದಿ ವಿವರಿಸಿದೆ.ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಜಾನ್ನೆ ಇತ್ತೀಚೆಗೆ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಬಹಿರಂಗವಾಗುತ್ತಿದ್ದಂತೆಯೇ ವಲಸೆ ಅಧಿಕಾರಿಗಳು ಜಾನ್ನೆಗೆ ಭಾರತ ಬಿಟ್ಟು ತೆರಳುವಂತೆ ಸೂಚಿಸಿದ್ದಾರೆ.

ಇಲ್ಲವೇ ಕಾನೂನು ಕ್ರಮ ಎದುರಿಸಬೇಕೆಂದು ಎಚ್ಚರಿಕೆ ನೀಡಿರುವುದಾಗಿ ವರದಿ ಹೇಳಿದೆ.  ಇತ್ತೀಚೆಗಷ್ಟೇ ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ ಜರ್ಮನ್ ವಿದ್ಯಾರ್ಥಿಯನ್ನು ಕೂಡಾ ಭಾರತ ಬಿಟ್ಟು ತೆರಳುವಂತೆ ಸೂಚಿಸಲಾಗಿತ್ತು. ಇದೀಗ ನಾರ್ವೆ ಪ್ರಜೆಯ ಸರದಿಯಾಗಿದೆ.

ವೀಸಾ ನಿಯಮ ಉಲ್ಲಂಘಿಸಿದ ಪರಿಣಾಮ ಜಾನ್ನೆ ಭಾರತ ಬಿಟ್ಟು ತೆರಳಬೇಕು ಎಂದು ವಿದೇಶಿ ಪ್ರಾಂತೀಯ ನೋಂದಣಿ ಕಚೇರಿ(ಎಫ್ ಆರ್ ಆರ್ ಓ) ಸೂಚಿಸಿದೆ.  ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದ ಬಗ್ಗೆ 74 ವರ್ಷದ ಜೋಹಾನ್ಸನ್ ಅವರನ್ನು ಪ್ರಶ್ನಿಸಲಾಗಿದ್ದು, ಈ ನಿಟ್ಟಿನಲ್ಲಿ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ವಿವರಣೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಾರ್ವೆಗೆ ತೆರಳಲು ವಿಮಾನ ಪ್ರಯಾಣದ ಟಿಕೆಟ್ ತೋರಿಸದೇ ಭಾರತ ಬಿಟ್ಟು ತೆರಳುವಂತಿಲ್ಲ ಎಂದು ವಲಸೆ ಅಧಿಕಾರಿಗಳು ಶುಕ್ರವಾರ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next