Advertisement

ದೋಷ ರಹಿತ ಮತದಾರರ ಪಟ್ಟಿ  ಸಿದ್ಧಪಡಿಸಲು ಸಹಕರಿಸಿ

04:12 PM Nov 01, 2018 | Team Udayavani |

ಬೆಳಗಾವಿ: ಲೋಪದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸುವುದು ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹ ಮತದಾರರ ಸೇರ್ಪಡೆ ಹಾಗೂ ಅನರ್ಹರ ಹೆಸರು ತೆಗೆದು ಹಾಕಲು ಸಹಕರಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಮನವಿ ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಲೋಪದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಪಟ್ಟಿ ಪರಿಷ್ಕರಣೆಗೆ ಕಾಲಾವಕಾಶ ನಿಗದಿಪಡಿಸಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ನಿಗದಿತ ಅವಧಿ ಯಲ್ಲಿ ಸಲಹೆ-ಸೂಚನೆ ನೀಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಎಂದರು. ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ನ. 20ರವರೆಗೆ ಕಾಲಾವಕಾಶವಿದ್ದು, ಇದನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳಬೇಕು. ಭಾವಚಿತ್ರ ಹೊಂದಿದ ಮತದಾರರ ಅಂತಿಮ ಪಟ್ಟಿಯನ್ನು ಜನವರಿ 4, 2019ರಂದು ಪ್ರಚುರಪಡಿಸಲಾಗುತ್ತದೆ. ಯಾವುದೇ ಸಮಸ್ಯೆಯಿದ್ದರೆ ನೇರವಾಗಿ ತಮ್ಮ ಗಮನಕ್ಕೆ (ಕಚೇರಿ ದೂ: 0831-2463730) ತರಬೇಕು ಎಂದು ಮೇಘಣ್ಣವರ ತಿಳಿಸಿದರು.

ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ಈಗಾಗಲೇ ಪ್ರಚುರಪಡಿಸುವ ಕರಡು ಮತದಾರರ ಪಟ್ಟಿ ಪರಿಶೀಲಿಸಿದಾಗ ಮಹಿಳಾ ಹಾಗೂ ಯುವ ಮತದಾರರ ನೋಂದಣಿ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿರುತ್ತದೆ. ಹೀಗಾಗಿ ಒಟ್ಟು ಮತದಾರರ ಪ್ರಮಾಣಕ್ಕೆ ತಕ್ಕಂತೆ ಮಹಿಳಾ ಮತ್ತು ಯುವ ಮತದಾರರ ಸೇರ್ಪಡೆಗೆ ರಾಜಕೀಯ ಪಕ್ಷಗಳೂ ಸಹಕರಿಸಬೇಕು ಎಂದು ಹೇಳಿದರು. ಜಿಪಂ ಸಿಇಒ ರಾಮಚಂದ್ರನ್‌ ಆರ್‌., ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next