Advertisement

ಜಿಲ್ಲಾದ್ಯಂತ ಪೊಲೀಸರಿಂದ ಬಿಗಿ ಬಂದೋಬಸ್ತ್

08:56 PM Nov 09, 2019 | Team Udayavani |

ಚಾಮರಾಜನಗರ: ಅಯೋಧ್ಯೆಯ ರಾಮ ಮಂದಿರ ಮತ್ತು ಬಾಬರಿ ಮಸೀದಿ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್‌ ವತಿಯಿಂದ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್‌ ಪಡೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ, ನಾಗರಿಕರಲ್ಲಿ ಧೈರ್ಯ ತುಂಬಿದರು.

Advertisement

ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಂದೋಬಸ್ತ್ಗಾಗಿ 1200 ಪೊಲೀಸರನ್ನು ನಿಯೋಜಿಸಲಾಗಿತ್ತು. 7 ಡಿಎಆರ್‌ ತುಕಡಿಗಳು, 2 ಕೆಆಸ್‌ಆರ್‌ಪಿ ತುಕಡಿಗಳು, ಕಮ್ಯಾಂಡೋ, 300 ಹೋಂಗಾರ್ಡ್‌ ತಂಡಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಆಯಕಟ್ಟಿನ ಜಾಗಗಳಲ್ಲಿ ಪೊಲೀಸರ ಬಿಗಿ ಪಹರೆ ಏರ್ಪಡಿಸಲಾಗಿತ್ತು. ಶಾಂತಿ ಸುವ್ಯವಸ್ಥೆಗಾಗಿ ಅಪರಾಧ ಹಿನ್ನೆಲೆಯುಳ್ಳ 25 ಜನರನ್ನು ಮುಂಜಾಗ್ರತಾ ಕ್ರಮವನ್ನು ಬಂಧಿಸಲಾಗಿತ್ತು.

ಪೊಲೀಸರ ಪಥ ಸಂಚಲನ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್‌ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಿಂದ ಹೊರಟು, ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ಪೊಲೀಸರು ಪಥ ಸಂಚಲನ ನಡೆಸಿ, ಸಾರ್ವಜನಿಕರಲ್ಲಿ ಧೈರ್ಯ ತುಂಬಿದರು.

ಜಿಲ್ಲೆಯಾದ್ಯಂತ ತೀವ್ರ ಮುನ್ನೆಚ್ಚರಿಕೆ ಕ್ರಮ: ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಆನಂದಕುಮಾರ್‌, ಆಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಬಹಳ ಮುಂಚಿತವಾಗಿಯೇ ಶಾಂತಿ ಸುವ್ಯವಸ್ಥೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಎರಡು ಧರ್ಮಗಳ ಮುಖಂಡರನ್ನೂ ಕರೆದು ಅವರಿಗೆ ಸೌಹಾರ್ದತೆ ಕಾಪಾಡಿಕೊಳ್ಳುವ ಬಗ್ಗೆ ಮನನ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯಾದ್ಯಂತ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು.

ಪ್ರಚೋದನಾಕಾರಿ ಸಂದೇಶ ಅಪರಾಧ: ಬೆಳಗ್ಗೆಯಿಂದಲೇ ಪೊಲೀಸ್‌ ವಾಹನಗಳಲ್ಲಿ ಸಾರ್ವಜನಿಕರಿಗೆ ಮೈಕ್‌ ಮೂಲಕ ಸೂಚನೆಗಳನ್ನು ಸಾರಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಆಕ್ಷೇಪಾರ್ಹ, ಪ್ರಚೋದನಾಕಾರಿ ಸಂದೇಶಗಳನ್ನು, ಪೋಸ್ಟ್‌ಗಳನ್ನು, ಕಮೆಂಟ್‌ಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಯಾವುದೇ ಕಾರಣಕ್ಕೂ ಈ ರೀತಿಯ ಕೃತ್ಯ ಎಸಗಬಾರದು.

Advertisement

ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲಾಗುತ್ತಿದ್ದು, ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುವವರ ಕುರಿತು ಹಾಗೂ ಈ ರೀತಿಯ ಕೃತ್ಯಗಳನ್ನು ಮಾಡಲು ಪ್ರಚೋದನೆ ಮಾಡುವವರ ಕುರಿತು ಹಾಗೂ ಈ ರೀತಿಯ ಕೃತ್ಯಗಳನ್ನು ಮಾಡುವವರ ಮೇಲೆ ನಿಗಾ ಇಡಲಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

ಫೋನ್‌ ಕರೆ ಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಪ್ರಚೋದನಾಕಾರಿಯಾಗಿ ಯಾರನ್ನು ನಿಂದಿಸುವುದಾಗಲೀ, ಅವಮಾನಿಸುವುದಾಗಲೀ, ಚರ್ಚಿಸುವುದಾಗಲೀ ಮಾಡುವಂತಿಲ್ಲ ಎಂಬ ಸೂಚನೆಗಳನ್ನು ರಸ್ತೆ, ಬಡಾವಣೆಗಳಲ್ಲಿ ಮೈಕ್‌ ಮೂಲಕ ಘೋಷಿಸಲಾಯಿತು. ಎರಡನೇ ಶನಿವಾರವಾದ ಪ್ರಯುಕ್ತ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮುಚ್ಚಿದ್ದವು. ಹಾಗಾಗಿ ನಗರದಲ್ಲಿ ಜನ ಸಂಚಾರವೂ ವಿರಳವಾಗಿತ್ತು.

ಜಿಲ್ಲಾದ್ಯಂತ ನಿಷೇಧಾಜ್ಞೆ: ಅಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾದ್ಯಂತ ನ.9ರ ಬೆಳಗ್ಗೆ 6 ಗಂಟೆಯಿಂದ ಮುಂದಿನ ಆದೇಶದವರೆಗೆ ಸಿ.ಆರ್‌.ಪಿ.ಸಿ.144ರ ಕಲಂ ಅನ್ವಯ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದರು.

ಮದ್ಯ ಮಾರಾಟ ನಿಷೇಧ: ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶ ಒಳಗೊಂಡಂತೆ ಜಿಲ್ಲಾ ವ್ಯಾಪ್ತಿಯೊಳಗೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಸೂಚಿತ ಅವಧಿಯಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಹಾಗೂ ಯಾವುದೇ ರೀತಿಯ ಮದ್ಯ ಮಾರಾಟ ಮಾಡದಂತೆ ಆದೇಶದಲ್ಲಿ ತಿಳಿಸಲಾಗಿದೆ.

ಬಿಡಿ ಪೆಟ್ರೋಲ್‌, ಪಟಾಕಿ ಮಾರಾಟವಿಲ್ಲ: ಜಿಲ್ಲಾದ್ಯಂತ ನ.9ರ ಬೆಳಗ್ಗೆ 6 ಗಂಟೆಯಿಂದ ನ.10ರ ಬೆಳಗ್ಗೆ 6 ಗಂಟೆಯವರೆಗೆ ಪಟಾಕಿ ಹಾಗೂ ಬಿಡಿ ಪೆಟ್ರೋಲ್‌ ಮಾರಾಟ ಮಾಡುವುದನ್ನು ಸಹ ಜಿಲ್ಲಾಧಿಕಾರಿಯವರು ನಿಷೇಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next