Advertisement

Tiger;ದೇಶದಲ್ಲಿ ಹೆಚ್ಚುತ್ತಲೇ ಸಾಗಿದೆ ಹುಲಿಗಳ ಸಾವು!; ಕಳೆದ ವರ್ಷ ದಶಕದಲ್ಲಿಯೇ ಗರಿಷ್ಠ

11:50 PM Jan 04, 2024 | Team Udayavani |

ದೇಶದಲ್ಲಿ ಹುಲಿಗಳನ್ನು ರಕ್ಷಿಸುವ ಸಲುವಾಗಿ ಆರಂಭಿಸಿದ್ದ ಹುಲಿ ಸಂರಕ್ಷಣೆ ಯೋಜನೆಯು 2023ರಲ್ಲಿ 50 ವರ್ಷಗಳನ್ನು ಪೂರೈಸಿದ ನಿಟ್ಟಿನಲ್ಲಿ ಕಳೆದ ವರ್ಷದ ಎಪ್ರಿಲ್‌ನಲ್ಲಿ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ವರದಿಯ ಪ್ರಕಾರ 2018 ರಿಂದ 2022ರ ವರೆಗಿನ ಅವಧಿಯಲ್ಲಿ ದೇಶದಲ್ಲಿರುವ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯನ್ನು ದಾಖಲಿಸಿದೆ. ಆದರೆ ಇತ್ತೀಚೆಗೆ ಭಾರತದ ವನ್ಯಜೀವಿ ರಕ್ಷಣ ಸಂಘವು ಬಿಡುಗಡೆ ಮಾಡಿದ ವರದಿಯಲ್ಲಿ ದೇಶದಲ್ಲಿ ಹುಲಿಗಳ ಸಾವು ಹೆಚ್ಚುತ್ತಲೇ ಸಾಗಿರುವುದರತ್ತ ಸರಕಾರದ ಗಮನ ಸಳೆದಿದೆ. ಈ ವರದಿಯ ಪ್ರಕಾರ ಕಳೆದ ವರ್ಷ ದೇಶದಲ್ಲಿ 202 ಹುಲಿಗಳು ಸಾವನ್ನಪ್ಪಿವೆ. ಇದೇ ವೇಳೆ ಹುಲಿ ಸಂರಕ್ಷಣೆ ಯೋಜನೆ, ವನ್ಯಜೀವಿಗಳ ರಕ್ಷಣ ಕಾಯಿದೆ ಸಹಿತ ವಿವಿಧ ಕಾನೂನುಗಳು ದೇಶದಲ್ಲಿ ಜಾರಿಯಲ್ಲಿದ್ದರೂ ವನ್ಯಜೀವಿಗಳನ್ನು ಬೇಟೆಯಾಡುವ ಜನರ ಪ್ರವೃತ್ತಿ ಇನ್ನೂ ಕಡಿಮೆಯಾಗದಿರುವ ಬಗೆಗೂ ವರದಿಯಲ್ಲಿ ಬೆಟ್ಟು ಮಾಡಲಾಗಿದೆ.

Advertisement

ಹುಲಿಗಳ ಸಂಖ್ಯೆ ಏರಿಕೆ
ದೇಶದಲ್ಲಿ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿಯನ್ನು ನಡೆಸಿ ಅದರ ವರದಿಯನ್ನು ಬಿಡುಗಡೆ ಮಾಡುತ್ತ ಬರಲಾಗಿದೆ.ಅದರಂತೆ ಒಂದು ವರ್ಷ ವಿಳಂಬವಾಗಿ 2023ರಲ್ಲಿ ಹುಲಿ ಗಣತಿ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಈ ವರದಿಯ ಪ್ರಕಾರ 2018ರಲ್ಲಿ ದೇಶದಲ್ಲಿ 2,967 ಹುಲಿಗಳಿದ್ದರೆ, 2023ರಲ್ಲಿ ಇದು 3,167ಕ್ಕೆ ಏರಿಕೆಯಾಗಿತ್ತು. ಸರಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ದೇಶದಲ್ಲಿ ವರ್ಷಗಳುರುಳಿದಂತೆಯೇ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಕೇವಲ ಸರಕಾರಕ್ಕೆ ಮಾತ್ರವಲ್ಲದೆ ಇಡೀ ದೇಶದ ವನ್ಯಜೀವಿ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿತ್ತು.

200ಕ್ಕೂ ಅಧಿಕ ಹುಲಿಗಳ ಸಾವು
ಭಾರತದ ವನ್ಯಜೀವಿ ರಕ್ಷಣ ಸಂಘ (ಡಬ್ಲ್ಯುಪಿಎಸ್‌ಐ)ದ ವರದಿಯ ಪ್ರಕಾರ 2023ರ ಜನವರಿ 1ರಿಂದ – ಡಿಸೆಂಬರ್‌ 25ರ ವರೆಗೆ ಭಾರತದಲ್ಲಿ 202 ಹುಲಿಗಳು ಸಾವನ್ನಪ್ಪಿವೆ. ಇದು ಕಳೆದೊಂದು ದಶಕದಲ್ಲಿಯೇ ಅತ್ಯಧಿಕವಾದುದಾಗಿದೆ. 2012ರಿಂದ ಹುಲಿಗಳ ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 52 ಹುಲಿಗಳು ಸಾವನ್ನಪ್ಪಿದ್ದರೆ, ಮಧ್ಯ ಪ್ರದೇಶದಲ್ಲಿ 45 ಹಾಗೂ ಉತ್ತರಾಖಂಡದಲ್ಲಿ 26 ಹುಲಿಗಳು ಸಾವಿಗೀಡಾಗಿವೆ.

ವಿವಿಧ ಕಾರಣಗಳಿಂದ ಸಾವು

ಹುಲಿಗಳ ಸಾವಿಗೆ ವಿವಿಧ ಕಾರಣಗಳನ್ನು ಪಟ್ಟಿ ಮಾಡಿರುವ ಡಬ್ಲ್ಯುಪಿ ಎಸ್‌ಐ, ಯಾವುದೇ ನಿರ್ದಿಷ್ಟ ಕಾರಣದಿಂದಾಗಿ ಹುಲಿಗಳ ಸಾವಿನಲ್ಲಿ ಹೆಚ್ಚಳವಾಗಿಲ್ಲ ಎಂದು ಹೇಳಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 79 ಹುಲಿಗಳು ನೈಸರ್ಗಿಕವಾಗಿ ಹಾಗೂ ಅಕ್ರಮ ಬೇಟೆ, ವಿದ್ಯುದಾಘಾತ ಸಹಿತ ಇತರ ಕಾರಣಗಳಿಂದಾಗಿ ಸಾವನ್ನಪ್ಪಿವೆ. ಇನ್ನು ಬೇಟೆಯ ಕಾರಣದಿಂದಾಗಿ 55, ಅಂತಃಕಲಹ ದಿಂದ 46 ಹುಲಿಗಳು ಸಾವನ್ನಪ್ಪಿವೆ. 14 ಹುಲಿಗಳು ರಕ್ಷಣ ಕಾರ್ಯಾಚರಣೆ ಹಾಗೂ ಚಿಕಿತ್ಸೆಯ ವೇಳೆಯಲ್ಲಿ ಸಾವ ನ್ನಪ್ಪಿವೆ. ರಸ್ತೆ ಹಾಗೂ ರೈಲು ಅಪ ಘಾತಗಳು 7 ಹುಲಿಗಳ ಸಾವಿಗೆ ಕಾರಣವಾಗಿವೆ. ಇತರ ಪ್ರಾಣಿಗಳ ದಾಳಿಗೆ 2 ಹುಲಿಗಳು ಹಾಗೂ ಅರಣ್ಯ ಇಲಾಖೆ/ ಪೊಲೀಸ್‌/ನಾಗರಿಕರಿಂದ 1 ಹುಲಿ ಸಾವನ್ನಪ್ಪಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

ಚಿರತೆಯ ಸಾವಿನಲ್ಲೂ ಏರಿಕೆ
ಡಬ್ಲ್ಯುಪಿಎಸ್‌ಐ ನ ಪ್ರಕಾರ ದೇಶದಲ್ಲಿ ಚಿರತೆಯ ಸಾವಿನ ಸಂಖ್ಯೆ ಏರಿಕೆ ಕಂಡಿದೆ. 2023ರಲ್ಲಿ ಕನಿಷ್ಠ 544 ಚಿರತೆಗಳು ಸಾವನ್ನಪ್ಪಿವೆ. ಇದರಲ್ಲಿ 152 ಚಿರತೆಗಳನ್ನು ಬೇಟೆಯಾಡಲಾಗಿದೆ.

ವನ್ಯಜೀವಿಗಳ ಕಳ್ಳಬೇಟೆಗೆ ಬಿದ್ದಿಲ್ಲ ಕಡಿವಾಣ
ವನ್ಯಜೀವಿಗಳ ಅಂಗಾಂಗಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇರುವುದರಿಂದ ವನ್ಯಜೀವಿಗಳ ಕಳ್ಳಬೇಟೆಯನ್ನು ದಂಧೆಯನ್ನಾಗಿಸಿಕೊಂಡಿದ್ದಾರೆ. ಇನ್ನು ಕೃಷಿಕರು ಅದರಲ್ಲೂ ಮುಖ್ಯವಾಗಿ ಅರಣ್ಯ ಪ್ರದೇಶದ ಸನಿಹದಲ್ಲಿನ ತಮ್ಮ ಕೃಷಿಬೆಳೆಗಳ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್‌ ಬೇಲಿಗಳನ್ನು ಅಳವಡಿಸಿದ್ದು, ಈ ತಂತಿಗಳಿಗೆ ಸಿಲುಕಿ ವನ್ಯಜೀವಿಗಳು ವಿದ್ಯುದಾಘಾತಗಳಿಗೆ ಒಳಗಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿವೆ. ಕೆಲವೊಂದು ಅಭಯಾರಣ್ಯಗಳ ನಡುವೆ ಹೆದ್ದಾರಿಗಳು, ರೈಲು ಮಾರ್ಗ ಹಾದುಹೋಗುವುದರಿಂದ ವನ್ಯಜೀವಿಗಳು ಅಪಘಾತಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ.

ಆತಂಕಪಡುವ ಅಗತ್ಯವಿಲ್ಲ

ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯನ್ನು ಕಾಣುತ್ತಿರುವುದರಿಂದ ಅವುಗಳ ಸಾವಿನ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಹುಲಿಗಳ ಸಾವಿಗೆ ಆತಂಕಪಡುವ ಅಗತ್ಯವಿಲ್ಲ ಎನ್ನುತ್ತಾರೆ ವನ್ಯಜೀವಿ ತಜ್ಞರು. ಪ್ರತೀ ವರ್ಷ ಹುಲಿಗಳ ಸಂಖ್ಯೆ ಶೇ.6ರಷ್ಟು ಏರಿಕೆಯನ್ನು ಕಾಣುತ್ತಿದೆ. ವಯೋಸಹಜ ಕಾರಣ, ಅನಾರೋಗ್ಯ, ಪರಸ್ಪರ ಕಾದಾಟ ಮತ್ತಿತರ ಕಾರಣಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಸಾವನ್ನಪ್ಪುತ್ತಿವೆ. ಇನ್ನು ಮಾನವ ಹಸ್ತಕ್ಷೇಪದ ಕಾರಣದಿಂದಾಗಿಯೂ ಒಂದಷ್ಟು ಹುಲಿಗಳು ಸಾವನ್ನಪ್ಪು ತ್ತಿರುವುದು ನಿಜ. ಇಂತಹ ಸಾವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಹೆಚ್ಚಿನ ಗಮನ ಹರಿಸಬೇಕು. ಇನ್ನು ವನ್ಯಜೀವಿಗಳನ್ನು ಮಾನವರು ಬೇಟೆಯಾಡುವುದಕ್ಕೆ ಸಂಪೂರ್ಣ ಕಡಿವಾಣ ಹಾಕುವ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಅಭಯಾರಣ್ಯ ಮತ್ತು ಅರಣ್ಯ ಪ್ರದೇಶದ ಅತಿ ಕ್ರಮಣ, ಬೃಹತ್‌ ಪ್ರಮಾಣದಲ್ಲಿ ಅಭಿವೃದ್ಧಿ ಚಟುವಟಿಕೆ ಗಳು ನಡೆಯುತ್ತಿರುವುದರಿಂದ ವನ್ಯಜೀವಿಗಳ ಆವಾಸ ಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರಿಂದಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳತ್ತ ಮುಖ ಮಾಡಲಾರಂಭಿಸಿದ್ದು ವನ್ಯಜೀವಿ-ಮಾನವ ಸಂಘರ್ಷ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಹುಲಿ, ಚಿರತೆ ಸಹಿತ ವನ್ಯಜೀವಿಗಳ ಬೇಟೆ ಕಾನೂನುಬಾಹಿರ ಮತ್ತು ದೊಡ್ಡ ಪ್ರಮಾಣದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಅರಿವಿದ್ದರೂ ದಂಧೆಕೋರದಿಂದ ಇಂತಹ ಅಕ್ರಮ ಕೃತ್ಯಗಳು ಇನ್ನೂ ಮುಂದುವರಿದಿರುವ ಬಗೆಗೆ ವನ್ಯಜೀವಿ ತಜ್ಞರು ಆತಂಕ ವ್ಯಕ್ತಪಡಿಸಲು ಮರೆಯುವುದಿಲ್ಲ.

2023ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿರುವ ಹುಲಿಗಳ ಸಂಖ್ಯೆ
ರಾಜ್ಯ ಸಾವು
ಮಹಾರಾಷ್ಟ್ರ 52
ಮಧ್ಯಪ್ರದೇಶ 45
ಉತ್ತರಾಖಂಡ 26
ತಮಿಳುನಾಡು 15
ಕೇರಳ 15
ಕರ್ನಾಟಕ 13
ಅಸ್ಸಾಂ 10
ರಾಜಸ್ಥಾನ 10
ಉತ್ತರಪ್ರದೇಶ 07
ಬಿಹಾರ 03
ಛತ್ತೀಸ್‌ಗಢ 03
ಒಡಿಶಾ 02
ಆಂಧ್ರಪ್ರದೇಶ 02
ತೆಲಂಗಾಣ 01

Advertisement

Udayavani is now on Telegram. Click here to join our channel and stay updated with the latest news.

Next