Advertisement

ಯುವರಾಜನಿಲ್ಲದ ಕಾಡು: ಪ್ರಿನ್ಸ್‌ ಕಾಣದೆ ಬಂಡೀಪುರ ಭಣಭಣ

12:43 PM Apr 15, 2017 | Team Udayavani |

ಇಡೀ ಕರ್ನಾಟಕದಲ್ಲಿ ಯಾವುದೇ ಕಾಡಿಗೆ ಹೋದರೂ ನಿಮಗೆ ಹುಲಿ ದರ್ಶನ ಕಷ್ಟೋವೋ ಕಷ್ಟ. ಆದರೆ ಬಂಡೀಪುರ ಹಾಗಲ್ಲ. ಹುಲಿ ನೋಡಬೇಕು ಅಂದುಕೊಳ್ಳುವವರೆಲ್ಲರಿಗೂ ಇಲ್ಲಿ ಹಂಡ್ರೆಡ್‌ ಪರ್ಸೆಂಟ್‌ ಗ್ಯಾರಂಟಿ. ಏಕೆಂದರೆ ಪ್ರಿನ್ಸ್‌ ಇತ್ತು. ಎಲ್ಲರಿಗೂ ದರ್ಶನ ಕೊಡುತ್ತಿದ್ದ ಪ್ರೀನ್ಸ್‌ ಮೊನ್ನೆವಾರವಷ್ಟೇ ಅಸುನೀಗಿದೆ. ಈ ಹುಲಿಗೆ ಪ್ರಿನ್ಸ್‌ ಅಂತ ಹೆಸರಿಟ್ಟಿದ್ದು ಹವ್ಯಾಸಿ ಫೋಟೋಗ್ರಾಫರ್‌ 
ಪ್ರವೀಣ್‌ ಸಿದ್ದಣ್ಣವರ. ಅವರು ಪ್ರಿನ್ಸ್‌ ಒಡನಾಟದ ನೆನಪಿನ ಹೆಜ್ಜೆ ಇಲ್ಲಿ ಊರಿದ್ದಾರೆ. 

Advertisement

 ದಕ್ಷಿಣ ಭಾರತದ ಅತ್ಯಂತ ಸ್ಪುರದ್ರೂಪಿ ಮತ್ತು ಕೆಚ್ಚೆದೆಯ ಹುಲಿಯಾಗಿದ್ದ 12 ವರ್ಷದ “ಪ್ರಿನ್ಸ್‌’, ದುರದೃಷ್ಟವಶಾತ್‌ ಏಪ್ರಿಲ್‌ 2ರಂದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಪ್ರದೇಶದ ಕುಂದುಕೆರೆ ವ್ಯಾಪ್ತಿಯಲ್ಲಿ ಮೃತಪಟ್ಟಿದೆ. ಪ್ರಕೃತಿ ಪ್ರಿಯರು, ಸಂಶೋಧಕರು ಮತ್ತು ಸಹಜವಾಗಿಯೇ ವನ್ಯಜೀವಿ ಛಾಯಾಗ್ರಾಹಕರಿಗೆ ಪ್ರಿನ್ಸ್‌ನ ಅಗಲಿಕೆ ನಿಜವಾಗಲೂ ದೊಡ್ಡ ನಷ್ಟ.  

ಬಂಡೀಪುರಕ್ಕೆ ಭೇಟಿಕೊಟ್ಟಾಗಲೆಲ್ಲ ನಾನು ಪ್ರಿನ್ಸ್‌ ಅನ್ನು ಗಮನಿಸಿದ್ದೇನೆ; ಅದರಲ್ಲೂ 2009-2010ರಲ್ಲಿ ಈ ಹುಲಿ ತನ್ನ ಸಾಮರ್ಥಯದ ಉಚ್ಛಾ†ಯ ಕಾಲದಲ್ಲಿದ್ದಾಗ ಅದನ್ನು ಅತಿ ಹತ್ತಿರದಿಂದ ನೋಡಿದ ಭಾಗ್ಯ ನನ್ನದು.  2010ರಲ್ಲಿ ಈ ಹುಲಿಗೆ ನಾನು “ಪ್ರಿನ್ಸ್‌’ ಎಂದು ಹೆಸರಿಟ್ಟೆ. ಅಲ್ಲಿಯವರೆಗೂ ಬಂಡೀಪುರದ ಪ್ರವಾಸೋದ್ಯಮ ವಲಯವನ್ನು ಆಳುತ್ತಿದ್ದದ್ದು ಕಿಂಗ್‌ ಆಗಸಾö ಎಂಬ ಹುಲಿ. ಅದರ ಪಾರುಪತ್ಯ ಕೊನೆಗೊಂಡ ನಂತರ ಬಹುತೇಕ ಪ್ರವಾಸೋದ್ಯಮ ವಲಯವೆಲ್ಲ ಪ್ರಿನ್ಸ್‌ನ ವಶವಾಯಿತು. 

ಸಂಶೋಧನೆ ಮತ್ತು ಕ್ಯಾಮೆರಾ ಟ್ರಾಪ್‌ ದಾಖಲೆಗಳ ಪ್ರಕಾರ, ಪ್ರಿನ್ಸ್‌ ಬಂಡೀಪುರ ಪ್ರವಾಸೋದ್ಯಮ ವಲಯಕ್ಕೆ  ಬಂದದ್ದು ಎಡಿಹಾಳ ಕಾಡಿನಿಂದ.  ಮುಂಜಾವು ಮತ್ತು ಸಂಜೆಯ ವೇಳೆಯಲ್ಲಿ ಎಷ್ಟೇ ಸಫಾರಿ ವಾಹನಗಳು ಎದುರಾದರೂ ಪ್ರಿನ್ಸ್‌ ಮಾತ್ರ ಒಂದಿಷ್ಟೂ ಬೆದರದೇ ನಿರ್ವಿಘ್ನವಾಗಿ ತನ್ನ ಕೆಲಸದಲ್ಲಿ ಮಗ್ನವಾಗಿರುತ್ತಿತ್ತು. ಅನೇಕ ಬಾರಿ ತನ್ನ ಕ್ಷೇತ್ರದ ಗುರುತು ಹಾಕುತ್ತಾ (ಸಾಮಾನ್ಯವಾಗಿ ಈ ಪ್ರಾಣಿಗಳು ತಮ್ಮ ಗಡಿಯನ್ನು ಮೂತ್ರ ಸಿಂಪಡಿಸಿ ಗುರುತು ಹಾಕುತ್ತವೆ)  ಪ್ರವಾಸಿಗರ ಕಣ್ಣಿಗೆ ಬೀಳುತ್ತಿತ್ತು¤. 

ಪ್ರಿನ್ಸ್‌ಗೆ ಲಾಂಟಾನಾ ಸಸ್ಯಗಳ ಬಗ್ಗೆ ವಿಶೇಷ ಒಲವಿತ್ತು ಎನ್ನುವುದನ್ನು ಬಹಳಷ್ಟು ಸಂದರ್ಭದಲ್ಲಿ ಗಮನಿಸಿದ್ದೇನೆ. ಲಾಂಟಾನಾ ಹೂವುಗಳ ಪರಿಮಳವನ್ನದು ಆಘ್ರಾಣಿಸುತ್ತಾ ನಿಂತುಬಿಡುತ್ತಿತ್ತು. ಇನ್ನು ಈ ಹುಲಿರಾಯನಿಗೆ ಜಲಕ್ರೀಡೆಯ ಗುಂಗೂ ಬಹಳಷ್ಟಿತ್ತು ಎನ್ನುವುದು, ಅದು ಅಭಯಾರಣ್ಯದ ವಿವಿಧ ಹಳ್ಳಗಳಲ್ಲಿ ಸಮಯ ಕಳೆಯುತ್ತಿದ್ದದ್ದನ್ನು ನೋಡಿದ ನನ್ನ ಅಭಿಪ್ರಾಯ. ಅನೇಕ ನೀರು ಗುಂಡಿಗಳು ಪ್ರಿನ್ಸ್‌ನ ಫೇವರೇಟ್‌ ಲಿಸ್ಟ್‌ನಲ್ಲಿ ಇದ್ದವಾದರೂ, ಮೂಲಾಪುರದ ಹಳ್ಳ ಮಾತ್ರ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುತ್ತದೆ. 

Advertisement

ಇತರೆ ಹುಲಿಗಳು ಮತ್ತು ಪರಭಕ್ಷಕ ಪ್ರಾಣಿಗಳಿಗೆ ಹೋಲಿಸಿದರೆ ಪ್ರಿನ್ಸ್‌, ಯಾವಾಗಲೂ ದೊಡ್ಡ ಬೇಟೆಯನ್ನೇ ಬೆನ್ನತ್ತುತ್ತಿತ್ತು. ಅದರಲ್ಲೂ ಗೌರ್‌ ಕಾಡೆಮ್ಮೆಯಂತೂ ಅದರ ಅತಿಮೆಚ್ಚಿನ ಆಹಾರವಾಗಿತ್ತು. ಕೆಲವು ವರ್ಷಗಳ ಹಿಂದೆ ನಡೆದ ಘಟನೆಯಿದು- ಅನೇಕ ಸಫಾರಿ ವಾಹನಗಳ ಎದುರೇ ಪ್ರಿನ್ಸ್‌ ಬೃಹತ್‌ ಗಾತ್ರದ ಕಾಡೆಮ್ಮೆಯ ಮೇಲೆ ದಾಳಿ ಮಾಡಿ, 10-15 ನಿಮಿಷದಲ್ಲಿ ಅದನ್ನು ಕೊಂದುಹಾಕಿತ್ತು! ಇದಷ್ಟೇ ಅಲ್ಲ, ದಾರಿತಪ್ಪಿ ರಕ್ಷಿತ ಅಭಯಾರಣ್ಯವನ್ನು ಪ್ರವೇಶಿಸುತ್ತಿದ್ದ ದನಗಳನ್ನೂ “ಸ್ವಾಹಾ’ ಮಾಡುವುದರಲ್ಲಿ ಪ್ರಿನ್ಸ್‌ ಹೆಸರುವಾಸಿಯಾಗಿತ್ತು. 1, ಜುಲೈ 2014ರಲ್ಲಿ ಮೂಲಾಪುರದ ಹಳ್ಳದ ಬಳಿ ಸುಮಾರು 21 ಸಾಕು ಎಮ್ಮೆಗಳನ್ನು ಬೆನ್ನತ್ತಿದ್ದ ಪ್ರಿನ್ಸ್‌, ಅದರಲ್ಲಿ ಮೂರು ಎಮ್ಮೆಗಳನ್ನು ಕೊಂದು ಹಾಕಿತ್ತು ಎಂದರೆ ಯೋಚಿಸಿ! 

ಬಂಡೀಪುರದ ಹೆಮ್ಮೆಯಾಗಿದ್ದ ಪ್ರಿನ್ಸ್‌  ಪ್ರಿನ್ಸ್‌ ನಿಸ್ಸಂಶಯವಾಗಿಯೂ ಲೆಜೆಂಡರಿ ಹುಲಿಯಾಗಿತ್ತು. ಎಂದಿಗೂ ಪ್ರವಾಸಿಗಳನ್ನು, ವನ್ಯಜೀವಿ ಛಾಯಾಗ್ರಾಹಕರನ್ನು ನಿರಾಸೆಗೊಳಿಸುವ(ಅನ್ಯ ಹುಲಿಗಳಂತೆ) ಅಭ್ಯಾಸವೇ ಅದಕ್ಕಿರಲಿಲ್ಲ. ಪ್ರವಾಸಿಗಳು ಎದುರಾದಾಕ್ಷಣ ಪೊದೆಗಳಲ್ಲಿ ನುಸುಳುವ ಜಾಯಮಾನವೂ ಅದರದ್ದಾಗಿರಲಿಲ್ಲ. ಇದಕ್ಕೆ ತದ್ವಿರುದ್ಧವೆಂಬಂತೆ, ಬಹಿರಂಗವಾಗಿ ಕಾಣಿಸಿಕೊಳ್ಳಲು ಅದು ಗರ್ವ ಪಡುತ್ತಿತ್ತು. ಪ್ರವಾಸಿಗರು ಮತ್ತು ಛಾಯಾಗ್ರಾಹಕರಿಂದ ಫೋಟೋ ತೆಗೆಸಿಕೊಳ್ಳುವುದನ್ನು ಬಹಳ ಇಷ್ಟಪಡುತ್ತಿತ್ತು. ಎಂದೂ ಕೂಡ ಸಫಾರಿ ವಾಹನಗಳ ಹತ್ತಿರ ಹೋಗುವುದಕ್ಕೆ ಅದು ಹಿಂದೆ ಮುಂದೆ ನೋಡಿದ್ದೇ ಇಲ್ಲ. 

ನನಗಿನ್ನೂ ನೆನಪಿದೆ. ಕರ್ನಾಟವಷ್ಟೇ ಅಲ್ಲದೆ ವಿವಿಧ ರಾಜ್ಯದ ಮತ್ತು ದೇಶಗಳ ನನ್ನ ಸ್ನೇಹಿತರು ಈ ಅತ್ಯದ್ಭುತ ಬೆಕ್ಕನ್ನು ನೋಡಿಕೊಂಡು ಹೋಗಿದ್ದಾರೆ. ತನ್ನ ಶತ್ರು ಯಾವ ಪ್ರಾಣಿಯೇ ಆಗಿರಲಿ ಅದನ್ನು ಕೆಡವಿ ಕೊಲ್ಲುವುದರಲ್ಲಿ ಪ್ರಿನ್ಸ್‌ ನಂಬಿಕೆಯಿಟ್ಟಿತ್ತು. ಕೆಲವು ಸಂದರ್ಭಗಳಲ್ಲಿ ಮರಿ ಆನೆಗಳು, ಇನ್ನೂ ಕೆಲವೊಮ್ಮೆ ಕಾಡುಕೋಣಗಳೂ ಅದರ ದಾಳಿಗೆ ಕೊನೆಯುಸಿರೆಳೆದ ಉದಾಹರಣೆಗಳಿವೆ. ಆದಾಗ್ಯೂ ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದ ಮೇಲೆ ಹಕ್ಕು ಸಾಧಿಸುವ ವಿಚಾರದಲ್ಲಿ ಇತರೆ ಹುಲಿಗಳೊಂದಿಗೆ ನಡೆಸಿದ ಸಂಘರ್ಷದಿಂದಾಗಿ ಪ್ರಿನ್ಸ್‌ ಗಾಯಗೊಂಡಂತೆ ಕಾಣುತ್ತಿತ್ತು. ಒಮ್ಮೆ ಈ ರೀತಿಯ ತೀವ್ರ ಹೋರಾಟದಲ್ಲಿ ದೊಡ್ಡ ಹುಲಿಯನ್ನೇ ಇದು ಹೊಡೆದುರುಳಿಸಿತ್ತು.

ನನಗೆ ವೈಯಕ್ತಿಕವಾಗಿ ಪ್ರಿನ್ಸ್‌ ಜೊತೆಗೆ ಉತ್ತಮ ಬಾಂಧವ್ಯವಿತ್ತು. ಎಷ್ಟೋ ವರ್ಷಗಳವರೆಗೆ ನಾನು ಅವನ ವರ್ತನೆಯನ್ನು ಗಮನಿಸುತ್ತಾ, ದಾಖಲಿಸುತ್ತಾ ಬಂದಿದ್ದೇನೆ. ತನ್ನ ಅರಣ್ಯವನ್ನು ಆಳಲು ಬೇರಾವ ಹುಲಿಗಳಿಗೂ ಅವನು ಬಿಡಲಿಲ್ಲ. ಪ್ರಿನ್ಸ್‌ನ ಅಧೀನದಲ್ಲಿ ಬರುತ್ತಿದ್ದ ಪ್ರದೇಶದ ವಿಸ್ತಾರವಂತೂ ನಂಬಲಸಾಧ್ಯ ಎನ್ನುವಷ್ಟಿದೆ. ಮೂಲಾಪುರ, ಮೊಯಾರ್‌, ಕುಂದಕೆರೆ, ಇಯರ್‌ಕಟ್ಟೆ, ಕೆ.ಎಂ ಕಟ್ಟೆ, ಮೂರ್‌ಕೆರೆ ಸೇರಿದಂತೆ ಇನ್ನು ಎಷ್ಟೋ ಪ್ರದೇಶಗಳು ಅವನ ಹಿಡಿತದಲ್ಲಿದ್ದವು. ಬೇರಾವ ಹುಲಿಯೂ ಈ ಪಾಟಿ ರಾಯಭಾರ ಮಾಡಿದ್ದನ್ನು ನಾನು ಕಂಡಿಲ್ಲ ಬಿಡಿ. 

ಗೌರಿ ಹೋದ ಮೇಲೆ ಒಬ್ಬಂಟಿ
ಪ್ರಿನ್ಸ್‌ಗೆ ಅನೇಕ ಸಂಗಾತಿಗಳಿದ್ದವು. ಆದರೆ ಅವುಗಳಲ್ಲಿ ಹೆಣ್ಣು ಹುಲಿ ಗೌರಿಯ ಮೇಲೆ ಮಾತ್ರ ಅದಕ್ಕೆ ತುಸು ಹೆಚ್ಚೇ ಪ್ರೀತಿಯಿತ್ತು ಮತ್ತು ಅಷ್ಟೇ ಗೌರವವೂ ಇತ್ತು. ಗೌರಿಯನ್ನು ಬಹಳ ಮೆಚ್ಚುತ್ತಿದ್ದ ಪ್ರಿನ್ಸ್‌, ಆಕೆಯನ್ನು ಇಂಪ್ರಸ್‌ ಮಾಡಲು ಆಕೆಯ ಮರಿಗಳನ್ನೂ ಸ್ವೀಕರಿಸಿದ್ದ (ಆದಾಗ್ಯೂ ಅವುಗಳು ಪ್ರಿನ್ಸ್‌ನ ಮರಿಗಳೂ ಆಗಿದ್ದವೆನ್ನಿ.). ಹುಲಿಗಳ ವಿಷಯದಲ್ಲಿ ಬಹಳ ಅಪರೂಪದ ಮತ್ತು ಅದ್ಭುತ ವರ್ತನೆಯಿದು. ಏಪ್ರಿಲ್‌ 2013ರಲ್ಲಿ ಗೌರಿ ನಿಧನಳಾದದ್ದೇ, ಪ್ರಿನ್ಸ್‌ ಏಕಾಂಗಿಯಾಗಿಬಿಟ್ಟ. ಅವನು ಗೌರಿಯನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದಾನೆ ಎಂದೆನಿಸುತ್ತಿತ್ತು. ಆದರೆ ಜೀವನ ನಡೆಯಲೇಬೇಕಲ್ಲ? ಈ ಘಟನೆ ನಡೆದ ನಂತರ ಪ್ರಿನ್ಸ್‌ ಹಲವು ಬಾರಿ ಇತರೆ ಹುಲಿಗಳೊಡನೆ ಯುದ್ಧ ನಡೆಸಿದ್ದ ಮತ್ತು ಬಹುತೇಕ ಸಮಯ ಅವನು ಗಾಯಾಳುವಾಗೇ ಇದ್ದದ್ದನ್ನು ಜನ ನೋಡಿದ್ದರು.  

ಪ್ರಿನ್ಸ್‌ ಅಂದಿಗೂ ಇಂದಿಗೂ ಲೆಜೆಂಡ್‌ ಆಗಿಯೇ ಇರುತ್ತಾನೆ. ಬಂಡೀಪುರ ಪ್ರವಾಸೋದ್ಯಮ ಝೋನ್‌ನಲ್ಲಿನ ಅವನ ಅನುಪಸ್ಥಿತಿ ಸಫಾರಿ ವಾಹನಗಳ ಚಾಲಕರಿಗೆ, ಪ್ರವಾಸಿಗರಿಗೆ, ಫಾರೆಸ್ಟ್‌ ಗಾರ್ಡ್‌ಗಳಿಗೆ, ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮತ್ತು ಇನ್ನೂ ಅನೇಕರಿಗೆ ಕಾಡಲಿದೆ. ಸತ್ಯವೇನೆಂದರೆ, ಬಂಡೀಪುರ ಪ್ರವಾಸೋದ್ಯಮಕ್ಕೆ ಬಹಳಷ್ಟು ಆದಾಯ ಹುಟ್ಟುಹಾಕುತ್ತಿದ್ದ ಇಂಥ ಆಕರ್ಷಕ ಹುಲಿಯ ಸಾವು ನಿಜಕ್ಕೂ ದೊಡ್ಡ ನಷ್ಟ. 

ಕೊನೆಯದಾಗಿ, ನನಗೆ ಬಲವಾಗಿ ಅನ್ನಿಸುವುದೇನೆಂದರೆ,  ನಮ್ಮ ಅರಣ್ಯ ಇಲಾಖೆಯು ಪ್ರಿನ್ಸ್‌ಗೆ ಭವ್ಯವಾದ ವಿದಾಯವನ್ನು ಆಯೋಜಿಸುವ ಮೂಲಕ ಪ್ರಕೃತಿ ಪ್ರಿಯರು, ಪ್ರವಾಸಿಗರು, ಛಾಯಾಗ್ರಾಹಕರಿಗೆ ಕೊನೆಯ ನಮನ ಸಲ್ಲಿಸಲು ಅವಕಾಶ ಮಾಡಿಕೊಡಬಹುದಿತ್ತು. ಪ್ರಿನ್ಸ್‌ ಇತಿಹಾಸ ನಿರ್ಮಿಸಿದ್ದಾನೆ ಮತ್ತು ನಮ್ಮ ನೆನಪಿನಲ್ಲಿ ಅವನು ಸದಾ ಇರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ನಾನಂತೂ ಅವನನ್ನು ಖಂಡಿತಾ ಮಿಸ್‌ ಮಾಡಿಕೊಳ್ಳುತ್ತೇನೆ. 
(ಲೇಖಕರು ಪ್ರಶಸ್ತಿ ವಿಜೇತ ಛಾಯಾಗ್ರಾಹಕರು)

(ಕನ್ನಡ ಅನುವಾದ- ರಾಘವೇಂದ್ರ ಆಚಾರ್ಯ)

Advertisement

Udayavani is now on Telegram. Click here to join our channel and stay updated with the latest news.

Next