Advertisement

ಮುಗಿದ ಮುನಿಸು: ರಾಣೆಬೆನ್ನೂರಿನಲ್ಲಿ ಅರುಣ್‌ಕುಮಾರ್‌ ಪೂಜಾರ್‌ಗೆ ಟಿಕೆಟ್‌

10:14 AM Nov 17, 2019 | mahesh |

ಬೆಂಗಳೂರು: ಅನರ್ಹ ಶಾಸಕರು ಬಿಜೆಪಿಯನ್ನು ಅಪ್ಪಿಕೊಂಡ ಬಳಿಕ ಪಕ್ಷದೊಳಗೆ ಉದ್ಭವಿಸಿದ್ದ ಅಸಮಾ ಧಾನವನ್ನು ಶುಕ್ರವಾರ ಶಮನಗೊಳಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

Advertisement

ತನಗೆ ಅಥಣಿ ಕ್ಷೇತ್ರದಿಂದ ಟಿಕೆಟ್‌ ನೀಡದೆ ಪಕ್ಷಕ್ಕೆ ನಿನ್ನೆಯಷ್ಟೇ ಸೇರಿರುವ ಮಹೇಶ್‌ ಕುಮಟಳ್ಳಿ ಅವರಿಗೆ ಮಣೆ ಹಾಕಿರುವುದರ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಅಸಮಾಧಾನಗೊಂಡಿದ್ದರು. ರಾಣೆಬೆನ್ನೂರು ಕ್ಷೇತ್ರದಲ್ಲಿ ತನ್ನ ಬದಲಾಗಿ ಅರುಣ್‌ ಕುಮಾರ್‌ ಪೂಜಾರ್‌ ಅವರನ್ನು ಕಣಕ್ಕಿಳಿಸಿದ್ದು ಮಾಜಿ ಸಚಿವ ಆರ್‌. ಶಂಕರ್‌ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇವರಿಬ್ಬರನ್ನು ಪ್ರತ್ಯೇಕವಾಗಿ ಮಾತ ನಾಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಬ್ಬರಲ್ಲಿದ್ದ ಅಸಮಾಧಾನವನ್ನು ಶಮನ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಾಗೆಯೇ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡ ಶರತ್‌ ಬಚ್ಚೇ ಗೌಡ ಸ್ಪರ್ಧಿಸಿ ಬಂಡಾಯ ಸಾರಿರುವುದು, ಶಿವಾಜಿ ನಗರದ ಅನರ್ಹ ಶಾಸಕ ರೋಶನ್‌ ಬೇಗ್‌ ಅವರಿಗೆ ಟಿಕೆಟ್‌ ತಪ್ಪಿರುವುದು ಇತ್ಯಾದಿ ವಿಷಯಗಳು ಬಿಜೆಪಿ ಪಾಳಯದ ವಾತಾವರಣವನ್ನು ಬಿಸಿ ಮಾಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸ ಶುಕ್ರವಾರ ಬಿರುಸಿನ ರಾಜಕೀಯ ಚಟುವಟಿಕೆಯ ಕೇಂದ್ರ ವಾಗಿತ್ತು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಜೆ.ಸಿ. ಮಾಧು ಸ್ವಾಮಿ, ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಮತ್ತಿತರರು ಭೇಟಿಯಾಗಿ ಚರ್ಚೆ ನಡೆಸಿದರು.

ರಾಣೆಬೆನ್ನೂರಿನಲ್ಲಿ ಪೂಜಾರ್‌ ಸ್ಪರ್ಧೆ
ಉಪ ಚುನಾವಣೆ ಘೋಷಣೆಯಾಗಿದ್ದ 15 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಗುರುವಾರ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿತ್ತು. ಬಾಕಿಯಿದ್ದ ರಾಣೆಬೆನ್ನೂರು ಕ್ಷೇತ್ರಕ್ಕೆ ಅರುಣ್‌ ಕುಮಾರ್‌ ಪೂಜಾರ್‌ಗೆ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ. ಸಚಿವರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ಶಾಸಕ ಸಿ.ಎಂ. ಉದಾಸಿ ಚರ್ಚೆ ನಡೆಸಿ ಅರುಣ್‌ ಕುಮಾರ್‌ ಹೆಸರನ್ನು ಶಿಫಾರಸು ಮಾಡಿದ್ದು, ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಆ ಮೂಲಕ 15 ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಂತಾಗಿದೆ.

Advertisement

ಶುಕ್ರವಾರ ಬೆಳಗ್ಗೆ ಅರುಣ್‌ ಕುಮಾರ್‌ ಹೆಸರು ಪ್ರಕಟವಾಗುತ್ತಿರುವಂತೆಯೇ ಅಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದ ಆರ್‌. ಶಂಕರ್‌ ಅಸಮಾಧಾನ ವ್ಯಕ್ತಪಡಿಸಿದರು. ತನಗೆ ವಿಧಾನ ಪರಿಷತ್‌ ಸ್ಥಾನದ ಅಗತ್ಯ ಇಲ್ಲ, ರಾಣೆ ಬೆನ್ನೂರಿನಿಂದಲೇ ಸ್ಪರ್ಧಿಸುತ್ತೇನೆ ಎಂದು ಹಠ ಹಿಡಿದಿದ್ದರು. ಸಿಎಂ ಭರವಸೆ ಬಳಿಕ ತಣ್ಣಗಾದರು.

ಫ‌ಲಿತಾಂಶದ ಅನಂತರ ತಿರುವು
ಡಾಲರ್ ಕಾಲನಿ ನಿವಾಸದ ಬಳಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಈಗಾಗಲೇ ಪ್ರತಿ ಕ್ಷೇತ್ರಕ್ಕೆ ಸಚಿವರನ್ನು ಉಸ್ತುವಾರಿಗಳನ್ನಾಗಿ ಮಾಡಲಾಗಿದೆ. ಡಿ. 9ರಂದು ಫ‌ಲಿತಾಂಶ ಬಂದ ಅನಂತರ ರಾಜ್ಯ ರಾಜಕೀಯಕ್ಕೆ ಸ್ವಲ್ಪ ತಿರುವು ಸಿಗಲಿದೆ. ನಾವು ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿಯೇ ಸರಕಾರವನ್ನು ಮುನ್ನಡೆಸುತ್ತೇವೆ ಎಂದರು.

ಮಾಜಿ ಸಚಿವ ಆರ್‌. ರೋಶನ್‌ ಬೇಗ್‌ ಅವರೊಂದಿಗೂ ಎರಡು- ಮೂರು ಬಾರಿ ಮಾತುಕತೆ ನಡೆಸಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ಟಿಕೆಟ್‌ ನೀಡಲು ಸಾಧ್ಯವಾಗುತ್ತಿಲ್ಲ. ತಮಿಳು ಭಾಷಿಕ ಶರವಣ ಅವರಿಗೆ ಟಿಕೆಟ್‌ ನೀಡಲಾಗುತ್ತಿದ್ದು, ಅವರ ಪರ ಕೆಲಸ ಮಾಡುವಂತೆ ಹೇಳಲಾಗಿದೆ. ಪಕ್ಷೇತರರಾಗಿ ಸ್ಪರ್ಧಿಸುವುದು ಅವರಿಗೆ ಬಿಟ್ಟ ವಿಚಾರ ಎಂದರು.

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶರತ್‌ ಬಚ್ಚೇಗೌಡ ಸ್ಪರ್ಧೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ. ಈ ಸಂಬಂಧ ರಾಜ್ಯಾಧ್ಯಕ್ಷರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಶರತ್‌ ಬಚ್ಚೇಗೌಡ ಅವರು ನಾಮಪತ್ರ ಸಲ್ಲಿಸಿರುವ ವಿಚಾರ ನನಗೆ ಗೊತ್ತಿಲ್ಲ. ಚುನಾವಣ ಕಣದಿಂದ ಹಿಂದೆ ಸರಿಯುವಂತೆ ನಾವು ಪ್ರಯತ್ನ ಮಾಡುತ್ತಿದ್ದು, ನೋಡೋಣ ಎಂದರು.

ಸೋಮವಾರ ನಾಮಪತ್ರ
ಬಿಜೆಪಿ ಅಭ್ಯರ್ಥಿಗಳ ಪೈಕಿ ಬಹುತೇಕರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಭಾರೀ ಸಂಖ್ಯೆಯಲ್ಲಿ ಬೆಂಬಲಿಗರು, ಕಾರ್ಯಕರ್ತರನ್ನು ಒಟ್ಟುಗೂಡಿಸಿ ನಾಮಪತ್ರ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶನ ತೋರಲು ಸಜ್ಜಾಗಿದ್ದಾರೆ. ಉಪ ಚುನಾವಣ ಉಸ್ತುವಾರಿಗಳು, ಹಿರಿಯ ನಾಯಕರು, ಸ್ಥಳೀಯ ಮುಖಂಡರು ಪಾಲ್ಗೊಂಡು ಉಪ ಚುನಾವಣ ಪ್ರಚಾರಕ್ಕೆ ಚಾಲನೆ ನೀಡಲು ಸಜ್ಜಾಗಿದ್ದಾರೆ.

ದಿನಕ್ಕೆ ಮೂರು ಕ್ಷೇತ್ರ
ಎರಡು ದಿನಗಳ ಅನಂತರ ಬಿಜೆಪಿ ತೀವ್ರಗತಿಯಲ್ಲಿ ಪ್ರಚಾರ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ದಿನಕ್ಕೆ ಎರಡು- ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ. ಸಾರ್ವಜನಿಕ ಸಭೆ, ಸಮಾವೇಶದ ಮೂಲಕ ಪ್ರಚಾರ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪ್ರಚಾರದಲ್ಲಿ ಅನ್ಯ ಪಕ್ಷಗಳ ನಾಯಕರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನಾಯಿತು, ನನ್ನ ಪಕ್ಷವಾಯಿತು. ನನ್ನ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಬಗ್ಗೆ ಅಷ್ಟೇ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ಚುನಾವಣ ಕಾರ್ಯತಂತ್ರ
ಡಾಲರ್ ಕಾಲನಿ ನಿವಾಸದಲ್ಲಿ ಹಲವು ಸಚಿವರು, ಮುಖಂಡರೊಂದಿಗೆ ಯಡಿಯೂರಪ್ಪ ಉಪ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚಿಸಿದರು. ಕೆ.ಆರ್‌. ಪೇಟೆ ಕ್ಷೇತ್ರದ ಉಸ್ತುವಾರಿಯಾಗಿರುವ ಸಚಿವ ಜೆ.ಸಿ. ಮಾಧುಸ್ವಾಮಿಯವರೊಂದಿಗೆ ಅಭ್ಯರ್ಥಿ ನಾರಾಯಣ ಗೌಡ ಗೆಲುವಿಗೆ ರೂಪಿಸಬೇಕಾದ ಕಾರ್ಯತಂತ್ರಗಳನ್ನು ಚರ್ಚಿಸಿದರು. ಅನರ್ಹರಾದ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next