Advertisement

ನಾನು ಆರಾಮವಾಗಿದ್ದೇನೆ, ಅವೆಲ್ಲ ಗಾಳಿಸುದ್ದಿ; ಸದಾಶಿವ ಬ್ರಹ್ಮಾವರ

11:50 AM Aug 16, 2017 | Team Udayavani |

ಬೆಂಗಳೂರು:ಕನ್ನಡ ಚಿತ್ರರಂಗದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರನ್ನು ಮಕ್ಕಳು, ಮನೆಯವರು ಸೇರಿ ಮನೆಯಿಂದ  ಬಲವಂತವಾಗಿ ಹೊರಹಾಕಿದ ಹಿನ್ನೆಲೆಯಲ್ಲಿ ಕುಮಟಾದ ಬೀದಿ, ಬೀದಿಯಲ್ಲಿ ಅಲೆಯುತ್ತಿರುವುದನ್ನು ಸ್ಥಳೀಯರು ಗಮನಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಕುಮಟಾದಲ್ಲಿ ಕೆಲವರು ಹಿರಿಯ ನಟನ ಗುರುತು ಪತ್ತೆ ಹಚ್ಚಿ ವಿಚಾರಿಸಿದಾಗ, ಬೆಂಗಳೂರಿನಲ್ಲಿರುವ ತನ್ನ ಮಕ್ಕಳು ಮನೆಯಿಂದ ಹೊರಹಾಕಿರುವುದಾಗಿ ತಿಳಿಸಿದ್ದರಂತೆ. ತನ್ನಲ್ಲಿ ಬಿಡಿಗಾಸು ಇಲ್ಲ, ನನಗೆ ಹುಬ್ಬಳ್ಳಿಗೆ ಹೋಗಲು ನೆರವು ನೀಡಿ ಎಂದು ಕೇಳಿರುವುದಾಗಿ ವರದಿ ವಿವರಿಸಿದೆ.

ಬಳಿಕ ಸ್ಥಳೀಯರು ಊಟೋಪಚಾರ ಮಾಡಿಸಿ, ಹೋಟೆಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಸದಾಶಿವ ಬ್ರಹ್ಮಾವರ್ ಅವರು ಸುಮಾರು 140ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದರು. ನನ್ನ ಬಗ್ಗೆ ಮಕ್ಕಳು ಕಾಳಜಿ ವಹಿಸುತ್ತಿಲ್ಲ ಎಂಬುದು ಅವರ ಅಳಲು. ಒಬ್ಬ ಮಗ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಉದ್ಯೋಗಿ. ಆದರೆ ಮಗನ ವಿಳಾಸ ನೀಡಲು ಬ್ರಹ್ಮಾವರ್ ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸದಾಶಿವ ಬ್ರಹ್ಮಾವರ್ ಅವರನ್ನು ಮನೆಯಿಂದ ಬಲವಂತವಾಗಿ ಹೊರಹಾಕಿದ ಮನೆಯವರು ಕೆಲವು ಫೋಟೋಗಳನ್ನು ಹಾಗೂ ಪ್ರಶಸ್ತಿಗಳನ್ನು ಬೀದಿಗೆ ಎಸೆದಿರುವುದಾಗಿ ತಿಳಿಸಿದ್ದಾರೆ. ಬಾಲ್ಯದಲ್ಲಿ ರಂಗಭೂಮಿಯ ಸೆಳೆತದಿಂದಾಗಿ ಹುಟ್ಟೂರು ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬೆಂಗಳೂರಿಗೆ ಬಂದಿದ್ದರು.

Advertisement

ನಾನು ಆರಾಮವಾಗಿದ್ದೇನೆ, ಅವೆಲ್ಲ ಗಾಳಿಸುದ್ದಿ; ನಟ ಸದಾಶಿವ ಬ್ರಹ್ಮಾವರ್

ನಾನು ಆರಾಮವಾಗಿದ್ದೇನೆ. ಮನೆ ಬಿಟ್ಟು ಬೀದಿ, ಬೀದಿ ಸುತ್ತುತ್ತಿದ್ದೇನೆ ಎಂಬುದು ಗಾಳಿ ಸುದ್ದಿ ಎಂಬುದಾಗಿ ಸ್ವತಃ ನಟ ಸದಾಶಿವ ಬ್ರಹ್ಮಾವರ್ ಅವರು ಖಾಸಗಿ ಟಿವಿ ಚಾನೆಲ್ ವೊಂದರ ಜತೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ. ಕುಮಟಾ ಬಸ್ ನಿಲ್ದಾಣದಲ್ಲಿ ನಾನು ಬಸ್ ಕಾಯುತ್ತಿದ್ದಾಗ ಕೆಲ ಹುಡುಗರು ತಪ್ಪಾಗಿ ತಿಳಿದುಕೊಂಡಿರುವುದೇ ಗೊಂದಲಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಬ್ರಹ್ಮಾವರದಲ್ಲಿ ಮಗಳ ಮನೆ ಇದೆ, ಬೈಲಹೊಂಗಲದಲ್ಲಿ ಮಗನ ಮನೆ ಇದೆ, ನಾನು ಎರಡೂ ಕಡೆ ತಿರುಗಾಡಿಕೊಂಡು ಆರಾಮವಾಗಿದ್ದೇನೆ. ನನಗೆ ಯಾವುದೇ ತೊಂದರೆ ಇಲ್ಲ ಎಂದು ಬ್ರಹ್ಮಾವರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next