Advertisement

ನಾಡಿನೆಲ್ಲೆಡೆ ವರ್ಷಪೂರ್ತಿ ಪುಸ್ತಕ ಸಂಭ್ರಮ

06:00 AM Oct 07, 2018 | |

ಕನ್ನಡ ಪುಸ್ತಕ ಪ್ರಾಧಿಕಾರ ರಚನೆಯಾಗಿ ಇಪ್ಪತ್ತೈದು ವರ್ಷಗಳಾದವು. ಈಗಿನ ಅಧ್ಯಕ್ಷರಾದ ವಸುಂಧರಾ ಭೂಪತಿ ರಜತ ಸಂಭ್ರಮದ ಕುರಿತು ಮಾತನಾಡಿದ್ದಾರೆ…

Advertisement

ಇದು ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿ ಹಬ್ಬದ ಸಂದರ್ಭ. ಈ ಹಿನ್ನೆಲೆಯಲ್ಲಿ ನಿಮ್ಮ ಅನಿಸಿಕೆ ಏನು?
-ತುಂಬಾ ಸಂತೋಷ. ಅಷ್ಟೇ ಹೊಣೆಗಾರಿಕೆಯೂ ಇದೆ. ಈ ಹಿಂದಿನ ಅಧ್ಯಕ್ಷರ ಅವಧಿಗಳಲ್ಲಿ ಆರಂಭಿಸಿದ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರೆಸಬೇಕು ಮತ್ತು ನಮ್ಮ ಕನಸುಗಳಿಗೂ ನೆಲೆ ಒದಗಿಸಬೇಕು. ಬೆಳ್ಳಿಹಬ್ಬದ ನೆನಪಿಗೆಂದೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ವಿಶೇಷ ಅಂಚೆ ಚೀಟಿ, ಲಕೋಟೆ, ಈ-ಪುಸ್ತಕ, ಕೇಳು-ಪುಸ್ತಕ, ಹಾಗೆಯೇ 25 ಕೃತಿಗಳನ್ನು ಹೊರತರಲಾಗಿದೆ. ಇಡೀ ವರ್ಷ ಹಲವು ಕಾರ್ಯಕ್ರಮಗಳ ಮೂಲಕ ಈ ಹಬ್ಬವನ್ನು ನಾಡಿನಾದ್ಯಂತ ಆಚರಿಸಬೇಕೆಂದುಕೊಂಡಿದ್ದೇವೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ.

ಪ್ರಾಧಿಕಾರದ ಮೊದಲ ಮಹಿಳಾ ಅಧ್ಯಕ್ಷರು ನೀವು…
ಇದು ನನ್ನ ಭಾಗ್ಯ. ನಾನು ಚಿಕ್ಕಂದಿನಿಂದಲೂ ಪುಸ್ತಕಗಳ ಒಡನಾಟದಲ್ಲಿಯೇ ಬೆಳೆದವಳು. ನಮ್ಮ ತಂದೆ ನನಗೆ ಉಡುಗೊರೆಯಾಗಿ ಪುಸ್ತಕಗಳನ್ನೇ ಕೊಡುತ್ತಿದ್ದರು. ಕರ್ನಾಟಕ ಲೇಖಕಿಯರ ಸಂಘ, ವೈದ್ಯ ವಿಜ್ಞಾನ ಪರಿಷತ್ತು ಮುಂತಾದ ಕಡೆ ಕೂಡ ನಮ್ಮ ಕೆಲಸಗಳ ಮಧ್ಯೆ ಪುಸ್ತಕಗಳ ಪ್ರಕಾಶನ, ವಿತರಣೆ, ಅಭಿರುಚಿ ನಿರ್ಮಾಣದಂಥ ಕೆಲಸಗಳನ್ನು ಮಾಡುತ್ತಲೇ ಬಂದಿದ್ದು ಪ್ರಾಧಿಕಾರದ ಅಧ್ಯಕ್ಷೆಯಾದಮೇಲೆ ನನ್ನ ಕನಸಿಗೆ ಒಂದು ದೊಡ್ಡ ಕ್ಯಾನ್ವಾಸ್‌ ಸಿಕ್ಕಿದಂತಾಯಿತು. ಪ್ರಾಧಿಕಾರ ಎಂದರೆ ಕೇವಲ ಪುಸ್ತಕ ಪ್ರಕಟಣೆಗೆ ಸೀಮಿತವಾದುದಲ್ಲ , ಅದು ಪ್ರಕಾಶಕರ, ಲೇಖಕರ ಮತ್ತು ಓದುಗರ  ನಡುವಣ ಸೇತುವೆ. ಹಾಗಾಗಿ ಪ್ರಾಧಿಕಾರದ ಕೆಲಸ, ಜವಾಬ್ದಾರಿಗಳು ಹೊರೆಯೆಂದೆನಿಸದು. ನಾನು ಸಂತೋಷದ ಕರ್ತವ್ಯ ಎಂದು ಭಾವಿಸಿರುವುದರಿಂದ ಈ ಕೆಲಸದಲ್ಲಿ ಆತ್ಮತೃಪ್ತಿ ದೊರೆತಿದೆ.

ರಜತ ಮಹೋತ್ಸದ ವಿಶೇಷ ಯೋಜನೆಗಳೇನು?
ಈವರೆಗೆ ಮೂವತ್ತು ಯುವಬರಹಗಾರರಿಗೆ   ಚೊಚ್ಚಲ ಕೃತಿಗಳಿಗಾಗಿ ಹದಿನೈದು ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಬೆಳ್ಳಿಹಬ್ಬದ ಸಂದರ್ಭದಲ್ಲಿ 50 ಲೇಖಕರಿಗೆ ಅದನ್ನು ವಿಸ್ತರಿಸಲಾಗಿದೆ. ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡದ ಸಾಹಿತಿಗಳ ಕೃತಿಗಳಿಗೆ ಮೂವತ್ತೈದು ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ವಿದೇಶಗಳಲ್ಲಿರುವಂತೆ ಪುಸ್ತಕದ ಬಗೆಗೆ ಎಲ್ಲ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ಒಳಗೊಂಡ ಬುಕ್‌ ಪಾರ್ಕ್‌ ನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಮುಂದೆ ಇದು ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌ಗಳಿಗೆ ಭೇಟಿ ನೀಡುವಂತೆ, ಬುಕ್‌ಪಾರ್ಕ್‌ಗೂ ಜನ ಭೇಟಿ ನೀಡುವಂತೆ ಅದು ಪ್ರೇಕ್ಷಣೀಯ ಸ್ಥಳಗಳಲ್ಲೊಂದಾಗಬಹುದು. ಹಾಗೆಯೇ ಇಲ್ಲಿಯವರೆಗೆ ಸಾಹಿತಿ-ಕಲಾವಿದರಿಗೆ ಮಾಸಾಶನ ನೀಡುತ್ತಿದ್ದು ಅದನ್ನು ಪುಸ್ತಕೋದ್ಯಮದಲ್ಲಿ ತೊಡಗಿಕೊಂಡವರಿಗೂ ವಿಸ್ತರಿಸಲು ಸರ್ಕಾರವನ್ನು ಕೋರಿದ್ದೇವೆ. ಈವರೆಗಿನ ಕನ್ನಡ ಪುಸ್ತಕೋದ್ಯಮದ ಕುರಿತು ಸಮಗ್ರ ಚಿತ್ರಣವನ್ನೊಳಗೊಂಡ‌ ಮೂರು ಬೃಹತ್‌ ಸಂಪುಟವನ್ನು  ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಮನೆಮನೆಯಲ್ಲಿ ಪುಸ್ತಕ ಜಾಗೃತಿಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿರುವ ಸಿರಿಗನ್ನಡ ಪುಸ್ತಕಮಳಿಗೆಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದೇವೆ. ಹಾಗೆಯೇ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು  ಆಡಿಯೋ ಬುಕ್ಸ್‌, ಈ-ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ. ಇನ್ನು ವಿಚಾರಸಂಕಿರಣಗಳು, ಕಮ್ಮಟಗಳು, ಪುಸ್ತಕ ಮೇಳಗಳು ಎಂದಿನಂತೆ ನಡೆಯುತ್ತವೆ. ಈಗಾಗಲೇ ಮೊದಲ ಕಾದಂಬರಿ ಇಂದಿರಾಬಾಯಿಯ ದನಿಹೊತ್ತಿಗೆ,  ಕಾವ್ಯ, ಕಥೆಗಳನ್ನು ಒಳಗೊಂಡಂತೆ ಹಲವು ಸಾಹಿತ್ಯದ ಶ್ರಾವ್ಯಪುಸ್ತಕ (ಆಡಿಯೋ ಬುಕ್‌), ಪ್ರಾಧಿಕಾರ ನಡೆದು ಬಂದ ಹಾದಿಯ ಕುರಿತು ಸಾಕ್ಷ್ಯಚಿತ್ರಗಳು, ಇ-ಬುಕ್‌ ಪ್ರಕಟಣೆ ಬೆಳ್ಳಿಹಬ್ಬದ ಸಂಭ್ರಮದ ಭಾಗವಾಗಿವೆ. ಈವರೆಗೆ ಇದ್ದ “ಪುಸ್ತಕ ಸೊಗಸು’ ಬಹುಮಾನವನ್ನು ವಿಸ್ತರಿಸಿ “ಮುದ್ರಣ ಸೊಗಸು’ ಅನ್ನೂ ಆರಂಭಿಸಿದ್ದೇವೆ. ಪುಸ್ತಕ ಪ್ರಕಾಶನದ ಕುರಿತು ಸರ್ಟಿಫಿಕೇಟ್‌ ಕೋರ್ಸ್‌ ಮತ್ತು ಡಿಪ್ಲೊಮೊ ಕೋರ್ಸ್‌ಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಆರಂಭಿಸುವ ಆಲೋಚನೆಯೂ ಇದೆ.

ಸರ್ಕಾರ ಮತ್ತು ಅಧಿಕಾರಿಗಳು ನಿಮ್ಮ ಕೆಲಸಗಳಲ್ಲಿ ಸಹಕರಿಸುತ್ತಿದ್ದಾರೆಯೇ?
ಖಂಡಿತವಾಗಿ. ಅವರ ಎಲ್ಲ ರೀತಿಯ ಸಹಕಾರ ಇದೆ. ಪ್ರಾಧಿಕಾರವು ಕೇವಲ ಅಧ್ಯಕ್ಷರ ಆಶಯಗಳನ್ನು ಮಾತ್ರವಲ್ಲ, ಸರ್ಕಾರ ಸಾಂವಿಧಾನಿಕ ನಿಯಮಗಳಂತೆ ಪ್ರಾದೇಶಿಕ, ಸಾಮಾಜಿಕ ನ್ಯಾಯಗಳ ಹಿನ್ನೆಲೆಯಲ್ಲಿ ಸದಸ್ಯರನ್ನು ನೇಮಿಸುತ್ತದೆ. ಸದಸ್ಯರು ಕೂಡ ಸಮಾಜದ /ಸಮುದಾಯದ ಆಶಯಗಳ ಹಿನ್ನೆಲೆಯಲ್ಲಿ ಚರ್ಚಿಸಿ ಪ್ರಜಾಪ್ರಭುತ್ವವಾದಿ ನೆಲೆಯಲ್ಲಿ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಹೀಗಾಗಿ, ಇದು ಕೇವಲ ನನ್ನೊಬ್ಬಳ ಪ್ರಾಧಿಕಾರ ಮಾತ್ರವಾಗಿರದೆ ಎಲ್ಲರ ವಿಚಾರಗಳಿಗೆ, ಆಶಯಗಳಿಗೆ ವೇದಿಕೆಯಾಗಿದೆ. ಲೇಖಕರು, ಹಿಂದಿನ ಅಧ್ಯಕ್ಷರು, ಅಧಿಕಾರಿಗಳು, ಪ್ರಕಾಶಕರು, ಪ್ರಕಾಶಕರ ಸಂಘಟನೆಗಳು ಎಲ್ಲರೂ ನಮಗೆ ಸಹಕಾರ ನೀಡುತ್ತಿದ್ದಾರೆ.

Advertisement

ಜಾಗತೀಕರಣ ಪುಸ್ತಕ ಪ್ರೀತಿಯ ಮೇಲೆ ಪರಿಣಾಮ ಬೀರಿದೆಯೇ?
ಟಿ. ವಿ., ಮೊಬೈಲ್‌ಗ‌ಳು, ಕಂಪ್ಯೂಟರ್‌ಗಳು, ಅಂತರ್ಜಾಲಗಳ ಬಳಕೆ ಹೆಚ್ಚಾದಂತೆ ಮಕ್ಕಳು ಚಿತ್ರಸಹಿತ ಕತೆಗಳನ್ನು ನೋಡುತ್ತಾರೆ. ಅಲ್ಲಿ ತೋರುವುದೇ ಮಕ್ಕಳಲ್ಲಿ ಅಚ್ಚಾಗುತ್ತದೆ. ಆದರೆ, ಪುಸ್ತಕಗಳಲ್ಲಿ ಓದುವಾಗ ನಮ್ಮ ಕಲ್ಪನಾಶಕ್ತಿ ತನ್ನ ಕೆಲಸ ಮಾಡುತ್ತದೆ. ಏಳುಮಲ್ಲಿಗೆ ತೂಕದ ರಾಜಕುಮಾರಿ ಎಂದರೆ ನಾವು ಕಲ್ಪಿಸಿಕೊಳ್ಳುತ್ತಿ¨ªೆವು. ಏಳು ಸಮುದ್ರದಾಚೆ ಒಂದು ಗಿಣಿಯಲ್ಲಿ ರಾಕ್ಷಸನ ಪ್ರಾಣ ಇದೆ ಎಂದರೆ ರಾಕ್ಷಸ ಹೇಗಿದ್ದ, ಸಮುದ್ರ ಹೇಗಿತ್ತು ಎಂದೆಲ್ಲ ನಾವೇ ಒಂದು ಚಿತ್ರವನ್ನು ಕಣ್ಮುಂದೆ ತಂದುಕೊಳ್ಳುತ್ತಿ¨ªೆವು. ಈಗ ಕಣ್ಣ ಮುಂದೆ ಕಾಣುವುದಷ್ಟೇ ಮಕ್ಕಳ  ಪ್ರಪಂಚ. ಅದರಾಚೆಗಿನ ಕಲ್ಪನೆ ಸೀಮಿತವಾಗಿದೆ -ಸೃಜನಶೀಲತೆಗೊಂದು ಚೌಕಟ್ಟು ಮೂಡಿದೆ. ಯುವ ಜನರಿಗೆ ಮೊಬೈಲ್‌ ಮೂಲಕವೂ ಪುಸ್ತಕದ ಬಗೆಗೆ ಆಸಕ್ತಿ ಮೂಡಿಸಿದರೆ ಅವರೂ ಮುಂದೆ ಪುಸ್ತಕಗಳನ್ನು ಅದು ಯಾವುದೇ ಪ್ರಕಾರದಲ್ಲಿರಲಿ, ಓದುತ್ತಾರೆಂಬ ಭರವಸೆ ಇದೆ.

ಪುಸ್ತಕ ಪ್ರೀತಿಯನ್ನು ಹುಟ್ಟಿಸುವುದು ಹೇಗೆ?
ಇದು ಎಲ್ಲರ ಕರ್ತವ್ಯ. ಮನೆಯಲ್ಲಿ ಹಿರಿಯರು ಪುಸ್ತಕ ಓದುತ್ತಾರೆಂದಾದರೆ ಮಕ್ಕಳೂ ಓದುತ್ತಾರೆ, ಶಾಲೆಯಲ್ಲಿ ಕೂಡ ಮಕ್ಕಳಿಗೆ ಕಥೆ ಹೇಳುವ ಒಂದು ಪೀರಿಯೆಡ್‌ ಇರಬೇಕು. ಪುಸ್ತಕಗಳನ್ನು ಎಲ್ಲ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡುವ ಸಂಪ್ರದಾಯ ನಮ್ಮಲ್ಲಿ ಇನ್ನೂ ವ್ಯಾಪಕವಾಗಬೇಕು. 

ಮಾತುಕತೆ :ಶುಭಶ್ರೀ ಪ್ರಸಾದ್‌ ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next