Advertisement

ಮಗು ಸೇರಿ ಮೂವರ ಸಜೀವ ದಹನ

11:17 AM Dec 28, 2017 | Team Udayavani |

ಬೆಂಗಳೂರು/ಕೆ.ಆರ್‌.ಪುರ: ಆಕಸ್ಮಿಕ ಬೆಂಕಿ ತಗುಲಿ ಆರು ವರ್ಷದ ಹೆಣ್ಣು ಮಗು ಸೇರಿ ದಂಪತಿ ಸಜೀವ ದಹನವಾಗಿರುವ ಘೋರ ದುರಂತ ಮಹದೇವು ಪರದ ಉದಯನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಆದರೆ, ಘಟನೆಗೆ ಸೊಳ್ಳೆ ಬತ್ತಿ ಮತ್ತು ಮೇಣದ ಬತ್ತಿ ಹಚ್ಚಿದ್ದು ಕಾರಣವೋ ಅಥವಾ ಶಾರ್ಟ್‌ ಸರ್ಕಿಟ್‌ನಿಂದ ಘಟನೆ ಸಂಭವಿಸಿದಯೇ ಎಂಬ ಬಗ್ಗೆ ಇನ್ನು ಖಚಿತವಾಗಿಲ್ಲ. ಸಂತೋಷ್‌ (ಮುರಗನ್‌)(35), ಸೋಫಿಯಾ (30) ಹಾಗೂ ಫ್ಲೋರಾ (6) ಮೃತರು.

Advertisement

ಮಂಗಳವಾರ ರಾತ್ರಿ ದಂಪತಿ ಮಲಗುವ ಮೊದಲು ಸೊಳ್ಳೆ ಬತ್ತಿ ಹಾಗೂ ಮೇಣದ ಬತ್ತಿ ಹಚ್ಚಿದ್ದು, ತಲೆ ದಿಂಬಿನ ಪಕ್ಕ ಇರಿಸಿಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ತಡರಾತ್ರಿ ದಿಂಬಿಗೆ ಬೆಂಕಿಯ ಕಿಡಿ ತಗುಲಿ, ನಂತರ ಬೆಂಕಿಯ ಕೆನ್ನಾಲಗೆ ಇಡೀ ಮನೆ ಆವರಿಸಿದ್ದು, ಮನೆ ತುಂಬ ದಟ್ಟ ಹೊಗೆ ತುಂಬಿಕೊಂಡಿದೆ. ಗಾಢ ನಿದ್ರೆಯಲ್ಲಿದ್ದ ದಂಪತಿಗೆ ಕೆಲ ಸಮಯದ ನಂತರ ಎಚ್ಚರವಾಗಿದ್ದು, ಮನೆಯಿಂದ ಹೊರಬರ ಲಾಗದೆ ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ. ಶೇ.80ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಫ್ಲೋರಾ, ಕೆ.ಆರ್‌.ಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಳಾದಳು ಎಂದು ಪೊಲೀಸರು ತಿಳಿಸಿದ್ದಾರೆ.

ಟಿನ್‌ ಫ್ಯಾಕ್ಟರಿ ಬಳಿಯ ಉದಯನಗರದ ಕಾವೇರಿ ಸ್ಟ್ರೀಟ್‌ ಬಳಿ ಕೇಬಲ್‌ ಕೆಲಸ ಮಾಡುತ್ತಿದ್ದ ಸಂತೋಷ್‌, ಉದಯನಗರದ ಎರಡು ಅಂತಸ್ತಿನ ಸ್ವಂತ ಮನೆಯಲ್ಲಿ ಪತ್ನಿ ಸೋಫಿಯಾ, ಪುತ್ರಿ ಫ್ಲೋರಾ ಹಾಗೂ ತಂದೆ, ತಾಯಿಯೊಂದಿಗೆ ವಾಸವಿದ್ದಾರೆ. ಸಂತೋಷ್‌ ಪೋಷಕರು ಕ್ರಿಸ್‌ ಮಸ್‌ ಪ್ರಯುಕ್ತ ಪುಣೆಯಲ್ಲಿರುವ ಮಗಳ ಮನೆಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ದಂಪತಿ, ಮಗು ಮಾತ್ರ ಇದ್ದರು.

ಟ್ರಾನ್ಸ್‌ಫಾರ್ಮರ್‌ ಸ್ಫೋಟ: ಮಂಗಳವಾರ ರಾತ್ರಿ 10.30ರ ಸುಮಾರಿಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡಿದೆ. ಇದರಿಂದ ರಾತ್ರಿ ಪೂರ್ತಿ ವಿದ್ಯುತ್‌ ಇರಲಿಲ್ಲ. ಹೀಗಾಗಿ ಮೇಣದ ಬತ್ತಿ ಮತ್ತು ಸೊಳ್ಳೆ ಬತ್ತಿ ಹಚ್ಚಿದ ದಂಪತಿ, ಹಾಸಿಗೆ ಪಕ್ಕದಲ್ಲೇ ಇರಿಸಿಕೊಂಡಿದ್ದರು. ತಡರಾತ್ರಿಗೆ ಬೆಂಕಿಯ ಕಿಡಿ ಹಾಸಿಗೆಯ ದಿಂಬಿಗೆ ತಗುಲಿದ್ದು, ಕೆಲ ಹೊತ್ತಿನ ಬಳಿಕ ಬೆಂಕಿ ಇಡೀ
ಮನೆ ಆವರಿಸಿದೆ. ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮಗು ಬಾಗಿಲವರೆಗೆ ಬಂದು ನರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪಕ್ಕದ ಮನೆಯವರು ಹೊಗೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಜತೆ ಸ್ಥಳಕ್ಕೆ ಆಗಮಸಿದಾಗ ಬಾಗಿಲು ಮುರಿದು ಮನೆಯೊಳಗೆ ಹೋಗುತ್ತಿದ್ದಂತೆ ಮಗು ಸಿಕ್ಕಿದೆ. ಬೆಡ್‌ರೂಮ್‌ನ ಹಾಸಿಗೆ ಮೇಲೆ ದಂಪತಿಯ ದೇಹಗಳಿದ್ದವು. ಸ್ಥಳಕ್ಕೆ ಐಜಿಪಿ ಸೋಮೆಂದ್ರ ಮುಖರ್ಜಿ, ಡಿಸಿಪಿ ಅಬ್ದುಲ್‌ ಅಹ್ಮದ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Advertisement

ಗಾಳಿ ಸುಳಿಯಲು ಜಾಗವೇ ಇರಲಿಲ್ಲ: ಉದಯನಗರದಲ್ಲಿರುವ ಸಂತೋಷ್‌ ಮನೆ ಬಹಳ ಚಿಕ್ಕದಾಗಿದೆ. ಹೀಗಾಗಿ ಸುತ್ತ ಗಾಳಿ ಸುಳಿಯಲು ಸ್ಥಳಾವಕಾಶವಿಲ್ಲ. ಮನೆಯ ಒಂದು ಭಾಗದಲ್ಲಿ ದೊಡ್ಡ ಕಟ್ಟಡ ತಲೆ ಎತ್ತಿದ್ದು, ಮತ್ತೂಂದು ಭಾಗದಲ್ಲಿ ಬೃಹತ್‌ ಕಟ್ಟಡ ನಿರ್ಮಾಣವಾಗುತ್ತಿದೆ. ಹಿಂದೆ ಕೂಡ ಮನೆಗಳಿವೆ.

ಹಳ್ಳದ ಪುಟ್ಟ ಜಾಗದಲ್ಲಿ ಮನೆ ನಿರ್ಮಾಣವಾಗಿದೆ. ಅಲ್ಲದೇ ಮಲಗುವ ಕೊಣೆಯಲ್ಲಿ ಕಿಟಕಿಗಳಿಲ್ಲ. ಹೀಗಾಗಿ ದಂಪತಿ ಹಾಗೂ ಮಗು ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ಹಲವು ಅನುಮಾನ: ಮಲಗುವ ಕೋಣೆಯಲ್ಲಿ ದಂಪತಿ ಒಬ್ಬರ ಮೇಲೊಬ್ಬರು ಮಲಗಿದ ಸ್ಥಿತಿಯಲ್ಲಿ ಸಜೀವ ದಹನವಾಗಿದ್ದಾರೆ. ಮತ್ತೂಂದೆಡೆ 6 ವರ್ಷದ ಪುತ್ರಿ ನಡುಮನೆಗೆ ಬಂದದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಜತೆಗೆ ಮನೆಯಲ್ಲಿರುವ ಕೇಬಲ್‌ಗ‌ಳು ಚೆನ್ನಾಗಿವೆ. ನಡುಮನೆಯಲ್ಲಿರುವ ಫ್ಯಾನ್‌ ಮತ್ತು ಟ್ಯೂಬ್‌ಲೈಟ್‌ನ ಸ್ವಿಚ್‌ ಬೋರ್ಡ್‌ ಹೊರಬಂದಿದೆ. ಮಲಗುವ ಕೋಣೆಯಲ್ಲಿರುವ ಟ್ಯೂಬ್‌ಲೈಟ್‌ ಸ್ಫೋಟಗೊಂಡಿದೆ. ಹೀಗಾಗಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ವ್ಯಾಪಿಸಿರಲು ಸಾಧ್ಯವಿಲ್ಲ. ಹೀಗೇ ಘಟನೆ ಕುರಿತು ಅನುಮಾನಗಳಿದ್ದು, ವಿಧಿ ವಿಜ್ಞಾನ ಪರೀಕ್ಷೆಯ ವರದಿ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಪುಣೆಯಲ್ಲಿರುವ ಸಂಬಂಧಿ ಮನೆಯಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಹೋಗಿದ್ದೆವು. ಬುಧವಾರ ಬೆಳಗ್ಗೆ ಅಣ್ಣ, ಅತ್ತಿಗೆ ಹಾಗೂ ಮಗಳು ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿಯಿತು. ವಿಶೇಷ ವಿಮಾನದಲ್ಲಿ ಪುಣೆಯಿಂದ ಬೆಂಗಳೂರಿಗೆ ಬಂದಿದ್ದೇವೆ. ನೈಟ್ರೋಜನ್‌ ಗ್ಯಾಸ್‌ ಸೇವನೆಯಿಂದ ಮೂವರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 
●ಸತೀಶ್‌, ಮೃತ ಸಂತೋಷ್‌ರ ಸೋದರ

Advertisement

Udayavani is now on Telegram. Click here to join our channel and stay updated with the latest news.

Next