Advertisement
ಮೈಸೂರು, ಚಾಮರಾಜ ನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟಾರೆ 20678 ಶಿಕ್ಷಕ ಮತದಾರರಿದ್ದು, ಕ್ಷೇತ್ರ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಪೈಕಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿದ್ದು, ಮೈಸೂರು ಜಿಲ್ಲೆಯಲ್ಲಿ 9643, ಮಂಡ್ಯ ಜಿಲ್ಲೆಯಲ್ಲಿ 4853, ಹಾಸನ ಜಿಲ್ಲೆಯಲ್ಲಿ 4277 ಹಾಗೂ ಚಾಮರಾಜ ನಗರ ಜಿಲ್ಲೆಯಲ್ಲಿ ಅತಿ ಕಡಿಮೆ 1899 ಮತದಾರರಿದ್ದಾರೆ.
Related Articles
Advertisement
ಮತದಾರರ ಸಂಖ್ಯೆ ಕಡಿಮೆಯಿದ್ದರೂ ಅಭ್ಯರ್ಥಿಗಳಿಗೆ ಅವರನ್ನು ತಲುಪುವುದೇ ದೊಡ್ಡ ಸಮಸ್ಯೆ, ಚಾಮರಾಜ ನಗರ ಜಿಲ್ಲೆಯಲ್ಲಿ ತಮಿಳುನಾಡು ಗಡಿ, ಎಚ್.ಡಿ.ಕೋಟೆ ತಾಲೂಕಿನಲ್ಲಿ ಕೇರಳದ ಗಡಿ, ಹಾಸನ ಜಿಲ್ಲೆಯಲ್ಲಿ ಸಕಲೇಶಪುರ, ಅರಸೀಕೆರೆ ತಾಲೂಕುಗಳ ಗಡಿ ಗ್ರಾಮಗಳಲ್ಲಿರುವ ಶಿಕ್ಷಕ ಮತದಾರರನ್ನು ತಲುಪಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದು,
ಕಳೆದ ಆರು ತಿಂಗಳಿಂದಲೇ ಪ್ರಚಾರ ಕಾರ್ಯ ಆರಂಭಿಸಿರುವ ಮೂರು ಪಕ್ಷಗಳ ಅಭ್ಯರ್ಥಿಗಳು ನಾಲ್ಕೂ ಜಿಲ್ಲೆಗಳ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಒಂದು ಸುತ್ತಿನ ಭೇಟಿ ನೀಡಿ ಮತಯಾಚನೆ ಮಾಡಿ ಬಂದಿದ್ದಾರೆ. ಇನ್ನುಳಿದ ಮೂರು ದಿನಗಳಲ್ಲಿ ಸಾಧ್ಯವಾದಷ್ಟೂ ಶಿಕ್ಷಕರುಗಳನ್ನು ಸೇರಿಸಿ ಸಭೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳ ಚಿತ್ತ ಅತಿ ಹೆಚ್ಚು ಮತದಾರರಿರುವ ಮೈಸೂರು ಜಿಲ್ಲೆಯ ಮೇಲಿದೆ.
ಇಲ್ಲೂ ಬಿಟ್ಟಿಲ್ಲ ಆಮಿಷ: ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರಿಗೆ ಹಣ, ಹೆಂಡದ ಆಮಿಷ ಒಡ್ಡುವುದು ಸಾಮಾನ್ಯವಾಗಿದೆ. ಆದರೆ, ಸುಶಿಕ್ಷಿತ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಹೊಂದಿರುವ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನೂ ಜಾತೀ ಪ್ರಭಾವ, ಹಣ, ಹೆಂಡದ ಆಮಿಷಗಳು ಬಿಟ್ಟಿಲ್ಲ. ಈಗಾಗಲೇ ಅಲ್ಲಲ್ಲಿ ಒಂದು ಸಮುದಾಯದ ಶಿಕ್ಷಕರನ್ನು ಸೇರಿಸಿ ಜಾತೀಯ ಪ್ರಭಾವ ಬೀರುವ, ಹೆಂಡ-ಬಾಡೂಟ ಹಾಕಿಸಲಾಗುತ್ತಿದ್ದರೂ ಅದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ.
ಸರ್ಕಾರದ ಹಿರಿಯ ಅಧಿಕಾರಿಗಳೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಇಂತದ್ದೇ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಫರ್ಮಾನು ಹೊರಡಿಸುವ, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಜಾತಿಗೆ ಸೇರಿದ ಅಭ್ಯರ್ಥಿಗೇ ಮತಹಾಕುವಂತೆ ಶಿಕ್ಷಕರು ಅದರಲ್ಲೂ ಶಿಕ್ಷಕಿಯರ ಮೇಲೆ ಒತ್ತಡ ಹೇರುವ ಪ್ರಯತ್ನಗಳೂ ಅಲ್ಲಲ್ಲಿ ನಡೆಯುತ್ತಿದೆ.
ಜೊತೆಗೆ ಮತಗಟ್ಟೆಗಳ ಬಳಿಯೂ ಶಿಕ್ಷಕರು ಜಾತಿವಾರು ಅಭ್ಯರ್ಥಿಗಳ ಪರ ನಿಂತು ಕಡೇ ಕ್ಷಣದಲ್ಲಿ ಮತದಾರ ಶಿಕ್ಷಕರನ್ನು ಮನವೊಲಿಸಲು ಪ್ರಯತ್ನ ಪಡುವುದನ್ನು ನೋಡಿದರೆ, ಸಾರ್ವತ್ರಿಕ ಚುನಾವಣೆಗೂ ಈ ಚುನಾವಣೆಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಇರುತ್ತದೆ ಚುನಾವಣಾ ಕಣದ ಚಿತ್ರಣ. ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಈ ಬಾರಿ ತಮ್ಮದಾಗಿಸಿಕೊಳ್ಳಬೇಕೆಂದು ಜಿದ್ದಿಗೆ ಬಿದ್ದಂತೆ ಆಯಾಯ ಪಕ್ಷಗಳ ಶಾಸಕರು, ಸ್ಥಳೀಯ ಮುಖಂಡರುಗಳು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.
ಬಿಎಸ್ವೈ ಸಭೆ: ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಪರ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಮತಯಾಚನೆಗೆ ಬರುತ್ತಿದ್ದು, ಸೋಮವಾರ ಚಾಮರಾಜ ನಗರ ಜಿಲ್ಲೆ, ಮಂಗಳವಾರ ಮೈಸೂರಿನಲ್ಲಿ ಶಿಕ್ಷಕರ ಜೊತೆಗೆ ಸಂವಾದ ನಡೆಸುವ ಮೂಲಕ ಮತಯಾಚನೆ ಮಾಡಲಿದ್ದಾರೆ.
ನೋಟಾಗೆ ಅವಕಾಶ: ಪ್ರಾಶಸ್ತ್ಯದ ಮತದಾನಕ್ಕೆ ಅವಕಾಶವಿರುವುದರಿಂದ ಈ ಚುನಾವಣೆಯಲ್ಲಿ ಮತಪತ್ರವನ್ನು ಬಳಸಲಿದ್ದು, ಈ ಬಾರಿ ನೋಟಾಗೂ ಅವಕಾಶ ನೀಡಲಾಗಿದೆ.
* ಗಿರೀಶ್ ಹುಣಸೂರು