Advertisement

ಬೆಳ್ಳಿ ವಸ್ತು ಕದ್ದ ಮೂವರ ಬಂಧನ

02:35 PM Aug 18, 2018 | Team Udayavani |

ಬೆಂಗಳೂರು: ಮಾಲೀಕರಿಗೆ ತಿಳಿಯದಂತೆ ಜ್ಯುವೆಲ್ಲರಿ ಶಾಪ್‌ ಗೋದಾಮಿನಲ್ಲಿ ಬೆಳ್ಳಿ ವಸ್ತುಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳು ಕಲಾಸಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕವಿಕಾ ಲೇಔಟ್‌ನ ಆದೇಶ್‌ ಅಲಿಯಾಸ್‌ ಆದಿ (24), ಅಂಧಾನಿ (23) ಮತ್ತು ಕಸ್ತೂರಿ ಬಾ ನಗರದ ಕಿರಣ್‌(19) ಬಂಧಿತರು. ಆರೋಪಿಗಳಿಂದ 18 ಲಕ್ಷ ರೂ. ಮೌಲ್ಯದ 45 ಕೆ.ಜಿ. ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬಂಧಿತ ಮೂವರು ಅವಿನ್ಯೂ ರಸ್ತೆಯ ರಾಜಾ ಮಾರುಕಟ್ಟೆಯಲ್ಲಿರುವ ಶ್ರೀಕಾಂತ್‌ ಎಂಬುವರ ಅಂಜನಾದ್ರಿ ಜ್ಯುವೆಲ್ಲರಿ ಅಂಗಡಿ ಮಳಿಗೆಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಚೆನ್ನಾಗಿ ಕೆಲಸ ಮಾಡಿ ಮಾಲೀಕರ ನಂಬಿಕೆ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಲೀಕ ಶ್ರೀಕಾಂತ್‌ ಆರೋಪಿಗಳಿಗೆ ಮಳಿಗೆ ಹಾಗೂ ಗೋದಾಮು ಕೀ ಕೊಟ್ಟು ಹೋಗುತ್ತಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ಮೂವರು ಜ್ಯುವೆಲ್ಲರಿ ಅಂಗಡಿಯಲ್ಲಿ ಆಗಾಗ್ಗೆ ಸಣ್ಣ -ಪುಟ್ಟ ಬೆಳ್ಳಿ ವಸ್ತುಗಳನ್ನು ಕಳವು ಮಾಡುತ್ತಿದ್ದರು. 

ಜತೆಗೆ ಗೋದಾಮಿನಲ್ಲಿದ್ದ ಬೆಳ್ಳಿಯ ವಸ್ತುಗಳನ್ನು ಅಂಗಡಿಗೆ ತರುವಾಗ ಬೆಳ್ಳಿಯ ದೀಪಗಳು, ತಟ್ಟೆಗಳನ್ನು ಕಳವು ಮಾಡಿ ಬೇರೆಡೆ ಇಡುತ್ತಿದ್ದರು. ಕೆಲ ದಿನಗಳ ಹಿಂದೆ ಮೂವರು ಬ್ಯಾಗ್‌ವೊಂದರಲ್ಲಿ ಕಳವು ಮಾಡಿದ ಬೆಳ್ಳಿಯ ವಸ್ತುಗಳನ್ನು ತುಂಬಿಕೊಂಡು ದೊಡ್ಡಮಾವಳ್ಳಿಯ ಸುಶೀಲ ರಸ್ತೆಯಲ್ಲಿ ಅನುಮಾನಸ್ವದವಾಗಿ ಹೋಗುತ್ತಿದ್ದರು. ಇದೇ ವೇಳೆ ಗಸ್ತು ತಿರುಗುತ್ತಿದ್ದ ಪೇದೆಗಳಾದ ಬೇಲೂರಯ್ಯ, ಕಾರಯ್ಯ, ವಿನೋದ್‌ ಕುಮಾರ್‌ ಮತ್ತು ಮಾಗಲ್ಯ ನಾಯಕ್‌ ಅನುಮಾನಗೊಂಡು ಮೂವರನ್ನು ತಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದಂದು ಮಾರಾಟ: ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಗಳು ಮುಂದಿನ ವಾರದಲ್ಲಿ ಬರುವ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಪರಿಚಯಸ್ಥರಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next