Advertisement

ಹಿಂದಿನ ಪಠ್ಯಕ್ರಮಕ್ಕೆ ಧಕ್ಕೆ ತಂದಿಲ್ಲ : ಬರಗೂರು ಸ್ಪಷ್ಟನೆ

03:45 AM Feb 10, 2017 | Team Udayavani |

ಬೆಂಗಳೂರು: “ತಮ್ಮ ನೇತೃತ್ವದಲ್ಲಿ ನಡೆಸಿರುವ ಪಠ್ಯ ಪರಿಷ್ಕರಣೆ ವೇಳೆ ಈ ಹಿಂದಿನ ಪಠ್ಯಕ್ರಮಕ್ಕೆ ಎಲ್ಲಿಯೂ ಧಕ್ಕೆ ತಂದಿಲ್ಲ, ಅಗತ್ಯವಿದ್ದ ಕಡೆ ಮಾತ್ರ ಪಠ್ಯವಸ್ತು ಸ್ವಲ್ಪಮಟ್ಟಿಗೆ ಬದಲಾಯಿಸಲಾಗಿದೆ, ಕೆಲವು ಪಾಠಗಳ ಪುನಾರಚನೆ, ಬದಲಾವಣೆ, ಹೊಸ ಸೇರ್ಪಡೆ ಮಾಡಲಾಗಿದೆ ಎಂದು ಪಠ್ಯ ಪರಿಷ್ಕರಣಾ ಸಮಿತಿಗಳ ಸರ್ವಾಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

Advertisement

1ರಿಂದ 10ನೇ ತರಗತಿವರೆಗಿನ ಸಮಗ್ರ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಂಟು ಪುಟಗಳ ಮುಖ್ಯಾಂಶಗಳುಳ್ಳ ತನ್ನ ಪೀಠಿಕೆ ಬರಹದ ಜತೆಗೆ 27 ಸಮಿತಿಗಳ ಅಧ್ಯಕ್ಷರು ನೀಡಿರುವ ವಿಸ್ತೃತ ಮಾಹಿತಿಯನ್ನೊಳಗೊಂಡ ಸಂಪೂರ್ಣ
ಮಾಹಿತಿಯನ್ನು ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಸಲ್ಲಿಸಿರುವ ಅವರು, 8 ಪುಟಗಳ ಪೀಠಿಕಾ ಬರಹವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಈ ಮೂಲಕ “ಕೇಸರೀಕರಣದ ಆರೋಪದಡಿ ಕಾಂಗ್ರೆಸ್‌ ಸರ್ಕಾರ ಪಠ್ಯ ಪರಿಷ್ಕರಿಸುತ್ತಿದ್ದು, ಅಹಿಂದ ಅಂಶಗಳನ್ನು ಸೇರಿಸಲಾಗಿದೆ. ಪರಿಷ್ಕೃತ ಪಠ್ಯದ ಮುದ್ರಣಕ್ಕೂ ಮೊದಲು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಮಾಡಿದ್ದ ಆರೋಪ, ಆಗ್ರಹ’ಗಳಿಗೆ ಪರೋಕ್ಷವಾಗಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಾಗಿರುವ ಕೆಲವು ತಾತ್ವಿಕ ಮುಖ್ಯಾಂ ಶಗಳನ್ನು ಉದಾಹರಣೆಯೊಂದಿಗೆ ತಿಳಿಸಿರುವ ಅವರು, ಭಾಷಾ ಪಠ್ಯಗಳಲ್ಲಿ ಆಯಾ ಭಾಷಾ ಸಾಹಿತ್ಯದ ಹಿರಿಯ ಸಾಧಕರ ಪರಿಚಯಕ್ಕೆ ಆದ್ಯತೆ ನೀಡಲಾಗಿದೆ.
ಬಿಟ್ಟುಹೋಗಿರುವ ಸಾಧಕರ ಬರಹವನ್ನು ಆಯಾ ತರಗತಿಯ ಅಗತ್ಯಕ್ಕನುಗುಣವಾಗಿ ಸೇರಿಸಲಾಗಿದೆ. ಉದಾಹರಣೆಗೆ ಕನ್ನಡದ ಆಸ್ತಿ ಎಂದೇ ಕರೆಯಲ್ಪಡುವ ಮಾಸ್ತಿ ವೆಂಕಟೇಶ್‌ ಅಯ್ಯಂಗಾರರ ಒಂದು ರಚನೆಯೂ ಕನ್ನಡ ಪಠ್ಯ ಪುಸ್ತಕಗಳಲ್ಲಿ ಇರಲಿಲ್ಲ. ಅವರ “ಯಶೋಧರ’ ನಾಟಕದ ಒಂದು ಭಾಗ ಅಳವಡಿಸಲಾಗಿದೆ. ಗೋಪಾಲಕೃಷ್ಣ ಅಡಿಗರ
ಯಾವ ರಚನೆಯೂ ಇರಲಿಲ್ಲ.

ಹಾಗಾಗಿ ಅವರ “ಕಟ್ಟುವೆವು ನಾವು ನಾಡೊಂದನು ರಸದ ಬೀಡೊಂದನು’ ಎಂದು ಆರಂಭ ವಾಗುವ ಪಠ್ಯ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಾಧ್ಯಾಪಕ ಅಸಮಾನತೆ ತಪ್ಪಿಸಲು ಕೆಲವು ಮಾರ್ಪಾಡು ಮಾಡಿದ್ದೇವೆ.
ಕನ್ನಡಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಹೈದರಾಬಾದ್‌ ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯ ಇರಲಿಲ್ಲ. ಕೆಲವು ಮಾರ್ಪಾಡು ಮಾಡಿ ಸಿದ್ದಯ್ಯಪುರಾಣಿಕ, ಶಾಂತರಸ, ಸಿಂಪಿಲಿಂಗಣ್ಣ, ಚೆನ್ನಣ್ಣ ವಾಲೀಕಾರ ಮುಂತಾದವರ ರಚನೆಗಳನ್ನು ವಿವಿಧ ತರಗತಿ ಪಠ್ಯದಲ್ಲಿ ಸೇರಿಸಲಾಗಿದೆ. ಉತ್ತರ ಕರ್ನಾಟಕ ಬರಹಗಾರರೂ ಇದ್ದಾರೆ. ಅದೇ ರೀತಿ ಲಿಂಗತ್ವ ಅಸಮಾನತೆ ತಪ್ಪಿಸಲು ಕೆಲವು ಲೇಖಕಿಯರ ಬರಹಗಳನ್ನು ಅಳವಡಿಸಲಾಗಿದೆ.

Advertisement

ಚಿಕ್ಕವಯಸ್ಸಿನಲ್ಲೇ ದೇಶದ ಬಗ್ಗೆ ಅಭಿಮಾನ ಮೂಡಲಿ ಎಂಬ ಕಾರಣಕ್ಕೆ ಪ್ರೌಢಶಾಲೆಯಲ್ಲಿದ್ದ ಕುವೆಂಪು ಅವರ “ಭರತಭೂಮಿ ನಮ್ಮ ತಾಯಿ’ ಪದ್ಯವನ್ನು 7ನೇ ತರಗತಿಗೆ ಸ್ಥಳಾಂತರಿಸಲಾಗಿದೆ. ಕನ್ನಡೇತರ ಭಾಷಾ ಪಠ್ಯಗಳಲ್ಲಿ ಒಂದೆರಡಾದರೂ ಕನ್ನಡ ಸಾಹಿತ್ಯ ಪಾಠಗಳಿರಬೇಕು ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು. ಅದರಂತೆ ಇಂಗ್ಲೀಷ್‌ ಪಠ್ಯಕ್ಕೆ ವಿ.ಕೃ. ಗೋಕಾಕ್‌ರ “ದಿ ಸಾಂಗ್‌ ಆಫ್ ಇಂಡಿಯಾ’ ಪದ್ಯ ಸೇರಿಸಲಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಅವರು
ವಿವರಣೆ ನೀಡಿದ್ದಾರೆ.

ಗಣಿತ ಮತ್ತು ವಿಜ್ಞಾನ ಪಠ್ಯಗಳಿಗೆ ಬಂದ ಆಕ್ಷೇಪಗಣೆಗಳು ಕಡಿಮೆಯಾದರೂ ಸಮಿತಿಯವರು ಸಂಪೂರ್ಣ ಪರಿಶೀಲಿಸಿ ಸೂಕ್ತ ರೀತಿಯಲ್ಲಿ ಸಂಯೋಜಿಸಿದ್ದಾರೆ. ಮೂಲತತ್ವ ಗಮನ ದಲ್ಲಿಟ್ಟುಕೊಂಡು ಕೇಂದ್ರೀಯ ಶಾಲಾ ಪಠ್ಯಗಳಿಗೆ ಕಡಿಮೆ ಇಲ್ಲದಂತೆ ಪರಿಷ್ಕರಿಸಲಾಗಿದೆ ಎಂದು ಅವರು 8 ಪುಟಗಳ ಪೀಠಿಕೆಯಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next