Advertisement

ಸಾವಿರಾರು ಪತ್ರಗಳು ಅಂಚೆ ಕಚೇರಿಯಲ್ಲೇ ಬಾಕಿ

09:45 AM Mar 28, 2020 | Sriram |

ಮಂಗಳೂರು: ತುರ್ತು ಸೇವೆಗಳಲ್ಲಿ ಒಂದಾದ ಅಂಚೆ ಸೇವೆಗೂ ಭಾರತ ಲಾಕ್‌ಡೌನ್‌ ಪರಿಣಾಮ ಬೀರಿದೆ. ದ.ಕ. ಜಿಲ್ಲೆಯ ಒಟ್ಟು 542 ಕಚೇರಿಗಳ ಪೈಕಿ 8 ಅಂಚೆ ಕಚೇರಿ ಮಾತ್ರ ಕಾರ್ಯಾಚರಿಸುತ್ತಿದ್ದು, ಸಾವಿರಾರು ಪತ್ರಗಳು ಅಂಚೆ ಕಚೇರಿಯಲ್ಲಿಯೇ ಬಾಕಿಯಾಗಿವೆ. ಸದ್ಯ ಜಿಲ್ಲೆಯಲ್ಲಿ ತೆರೆದಿರುವ ಅಂಚೆ ಕಚೇರಿಯಲ್ಲಿ ಹಣ ಹಿಂಪಡೆಯಲು ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.

Advertisement

ಮಂಗಳೂರು ತಾಲೂಕು ಮತ್ತು ನಗರದಲ್ಲಿ ಒಟ್ಟು 53 ಇಲಾಖಾ ಕಚೇರಿ ಮತ್ತು 96 ಶಾಖಾ ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ ಸುಮಾರು 4,000 ಸಾಮಾನ್ಯ ಅಂಚೆ ಪತ್ರಗಳು ಮನೆಗಳಿಗೆ ತಲುಪಲು ಬಾಕಿ ಇವೆ. ಸುಮಾರು 1,000ದಷ್ಟು ರಿಜಿಸ್ಟ್ರರ್‌ ಮತ್ತು ಸ್ಪೀಡ್‌ ಪೋಸ್ಟ್‌ಗಳು ಕಚೇರಿಯಲ್ಲೇ ಬಾಕಿ ಉಳಿದಿವೆ.

ಪುತ್ತೂರು ವಿಭಾಗದಲ್ಲಿ ಅಂದರೆ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಕಾರ್ಕಳ ತಾಲೂಕಿನಲ್ಲಿ ಒಟ್ಟು 393 ಅಂಚೆ ಕಚೇರಿಗಳಿವೆ. ಅದರಲ್ಲೂ ಹೆಚ್ಚಿನ ಅಂಚೆ ಕಚೇರಿಗಳು ಗ್ರಾಮೀಣ ಭಾಗದಲ್ಲಿವೆ. ಈ ವಿಭಾಗದಲ್ಲಿ ಕೆಲವೊಂದು ಅಂಚೆ ಕಚೇರಿಗಳು ಮಾತ್ರ ತೆರೆದಿವೆ. ಇದೇ ಕಾರಣಕ್ಕೆ ಇನ್ನೂ ಸುಮಾರು 48 ಅಂಚೆ ಬ್ಯಾಗ್‌ಗಳನ್ನು ತೆರಯಲು ಬಾಕಿ ಇವೆ. ಒಂದು ಬ್ಯಾಗ್‌ನಲ್ಲಿ ಸುಮಾರು 200-300ರಷ್ಟು ಅಂಚೆ ಪತ್ರಗಳು ಇರುತ್ತವೆ.

ಮೆಸ್ಕಾಂ ಬಿಲ್‌ ಸೇವೆಯೂ ಬಂದ್‌
ಅಂಚೆ ಇಲಾಖೆ ಮೂಲಕ ಮೆಸ್ಕಾಂ ಬಿಲ್‌ ಸ್ವೀಕೃತಿಯ ಒಪ್ಪಂದವು ದ.ಕ. ಹಾಗೂ ಉಡುಪಿ ಜಿಲ್ಲೆಯ ಮೆಸ್ಕಾಂ ಗ್ರಾಹಕರು ತಮ್ಮ ವಿದ್ಯುತ್ಛಕ್ತಿ ಬಿಲ್‌ ಅನ್ನು ತಮ್ಮ ಸಮೀಪದ ಯಾವುದೇ ಅಂಚೆ ಕಚೇರಿಯಲ್ಲಿ ಪಾವತಿಸಲು ಅವಕಾಶವಿತ್ತು. ಪ್ರತಿ ತಿಂಗಳು ಸುಮಾರು 89,000 ಗ್ರಾಹಕರು ಮಂಗಳೂರು, ಪುತ್ತೂರು, ಉಡುಪಿ ವಿಭಾಗದ ಅಂಚೆ ಕಚೇರಿಗಳಲ್ಲಿ ಮೆಸ್ಕಾಂ ಬಿಲ್‌ ಅನ್ನು ಪಾವತಿಸುತ್ತಿದ್ದರು. ಇದೀಗ ಮೆಸ್ಕಾಂ ಬಿಲ್‌ ಪಾವತಿಗೂ ತೊಂದರೆಯಾಗಿದೆ.

7 ಅಂಚೆ ಕಚೇರಿ ಮಾತ್ರ ಕಾರ್ಯಾಚರಣೆ
ಪುತ್ತೂರು ಮತ್ತು ಮಂಗಳೂರು ವಿಭಾಗದ ಒಟ್ಟು ಒಟ್ಟು 149 ಅಂಚೆ ಕಚೇರಿಗಳಿದ್ದು, ಇದರಲ್ಲಿ ಗುರುವಾರದಂದು ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿ ಮತ್ತು ಕುಲಶೇಖರ, ಗಂಜಿಮಠದ ಕಚೇರಿಗಳು ತೆರೆದಿವೆ. ಅದೇ ರೀತಿ ಪುತ್ತೂರು ವಿಭಾಗದಲ್ಲಿ ಪುತ್ತೂರು, ಸುಳ್ಯ, ಕಾರ್ಕಳ ಮತ್ತು ಮೂಡುಬಿದಿರೆಯಲ್ಲಿ ಕಾರ್ಯಾಚರಿಸುತ್ತಿವೆ.

Advertisement

ಅಂಚೆ ಕಚೇರಿಯಲ್ಲಿ ತುರ್ತು ಸೇವೆಗೆ ಸಾರ್ವಜನಿಕರಿಗೆ ಹಣ ಹಿಂಪಡೆಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸದ್ಯ ಅಂಚೆ ಕಚೇರಿಯಲ್ಲಿ ಉಳಿದಿರುವ ಪತ್ರಗಳನ್ನು ಮುಂದಿನ ದಿನಗಳಲ್ಲಿ ಮನೆ ಮನೆಗೆ ತಲುಪಿಸಲಾಗುವುದು.
– ಶ್ರೀ ಹರ್ಷ, ಹಿರಿಯ ಅಂಚೆ ಅಧೀಕ್ಷಕ ಮಂಗಳೂರು ಅಂಚೆ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next