Advertisement

ಅನುದಾನ ಬಿಡುಗಡೆಯಾದರೂ ಕಾಮಗಾರಿಗೆ ಮೀನ-ಮೇಷ

12:00 PM Jun 10, 2019 | Team Udayavani |

ಬಡಗನ್ನೂರು: ಮುಡಿಪಿನಡ್ಕ- ಸುಳ್ಯಪದವು ಜಿ.ಪಂ. ರಸ್ತೆಯ ಪೇರಾಲು- ಮೈಂದನಡ್ಕ ನಡುವಿನ 1.5 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದ್ದು, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ 80 ಲಕ್ಷ ರೂ. ಅನುದಾನ ಬಿಡುಗಡೆಯಾದರೂ ಟೆಂಡರ್‌ ಪ್ರಕ್ರಿಯೆ ವಿಳಂಬದಿಂದಾಗಿ ಕಾಮಗಾರಿ ಆರಂಭವಾಗದೆ ಸವಾರರಿಗೆ ಸಮಸ್ಯೆಯಾಗಿದೆ.

Advertisement

ಶಾಸಕ ಸಂಜೀವ ಮಠಂದೂರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಈ ರಸ್ತೆಗೆ 80 ಲಕ್ಷ ರೂ. ಅನುದಾನ ಇರಿಸಿದ್ದರು. ಟೆಂಡರ್‌ಗೂ ಮುಂಚಿತವಾಗಿ ರಸ್ತೆಯ ಡಾಮರು ಅಗೆದು, ದೊಡ್ಡ ಹೊಂಡ ಮುಚ್ಚುವ ಕಾರ್ಯ ನಡೆದಿದೆ. ಇದರಿಂದ ದ್ವಿಚಕ್ರ ವಾಹನ ಹಾಗೂ ಆಟೋ ಚಾಲಕರು ಸಂಚರಿಸಲು ಹರಸಾಹಸ ಮಾಡುವಂತಾಗಿದೆ.

ಮಳೆಗಾಲದಲ್ಲಿ ಮತ್ತಷ್ಟು ಸಂಕಷ್ಟ?

ಮಳೆಗಾಲಕ್ಕೆ ಮುಂಚಿತವಾಗಿ ಟೆಂಡರ್‌ ಅಂತಿಮಗೊಂಡು ಕಾಮಗಾರಿ ಪ್ರಾರಂಭವಾದರೆ ಸಂಚಾರ ಸುಗಮ ಆಗಬಹುದು. ಇಲ್ಲದೇ ಇದ್ದಲ್ಲಿ ವಾಹನ ಸಂಚಾರ ನರಕವಾಗಬಹುದು. ಚುನಾವಣ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣೆಯ ಬಳಿಕ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಲಾಗಿದ್ದರೂ ಇದೀಗ ಚುನಾವಣೆ ಪ್ರಕ್ರಿಯೆಗಳು ಮುಗಿದು ಎರಡು ವಾರ ಕಳೆದಿದ್ದರೂ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡಿಲ್ಲ. ಈ ನಡುವೆ ಪೇರಾಲು- ಮೈಂದನಡ್ಕದ ಸುಮಾರು 1.5 ಕಿ.ಮೀ. ರಸ್ತೆ ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ದುಸ್ತರವಾಗಿದೆ.

ಶಾಸಕ ಸಂಜೀವ ಮಠಂದೂರು ತಮ್ಮ ಕ್ಷೇತ್ರಾಭಿವೃದ್ಧಿ ಯೋಜನೆಯಲ್ಲಿ 80 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ ಬಳಿಕ ಫೆ. 20ಕ್ಕೆ ಟೆಂಡರ್‌ ಪ್ರಕ್ರಿಯೆ ಎಂದು ಪ್ರಕಟವಾಯಿತು. ಮೂರು ಬಾರಿ ಮುಂದೂಡಲಾಯಿತು. ಮಾ. 10ಕ್ಕೆ ಚುನಾವಣ ನೀತಿ ಸಂಹಿತೆ ಬಂತು. ಆನಂತರ ಮಾ. 20 ಟೆಂಡರ್‌, 21ಕ್ಕೆ ವರ್ಕ್‌ ಆರ್ಡರ್‌ ಎಂದು ಹೇಳಲಾಯಿತು.

Advertisement

ರಸ್ತೆ ಅಭಿವೃದ್ಧಿಗೆ ಹೋರಾಟ

ಈ ರಸ್ತೆ ಅಭಿವೃದ್ಧಿಪಡಿಸುವಂತೆ ಬಡಗನ್ನೂರು ಹಿತರಕ್ಷಣ ಸಮಿತಿ ವತಿಯಿಂದ ಒಂದು ದಿನ ರಸ್ತೆ ತಡೆ ಮಾಡಿ ಶಾಂತಿಯುತ ಪ್ರತಿಭಟನೆ, ಆ ಬಳಿಕ ಒಂದು ವಾರ ಆಹೋರಾತ್ರಿ ಸತ್ಯಾಗ್ರಹ, ಕೌಡಿಚ್ಚಾರು ಬಳಿ ಮಾಣಿ- ಮೈಸೂರು ಹೆದ್ದಾರಿಯಲ್ಲಿ 5 ನಿಮಿಷ ಕಾಲ ರಸ್ತೆ ತಡೆ, ಶಾಸಕರ ಕಚೇರಿ, ಎ.ಸಿ. ಕಚೇರಿ ಎದುರು ಪ್ರತಿಭಟನೆ, ಉಸ್ತುವಾರಿ ಸಚಿವ, ಲೋಕಸಭಾ ಸದಸ್ಯರ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಎಲ್ಲದರ ಫ‌ಲವಾಗಿ ಮುಡಿಪಿನಡ್ಕ- ಸುಳ್ಯಪದವು ಸುಮಾರು 7 ಕಿ.ಮೀ. ರಸ್ತೆಯಲ್ಲಿ ಸುಮಾರು 5.5 ಕಿ.ಮೀ. ಅಭಿವೃದ್ಧಿಗೊಂಡಿದೆ. ಉಳಿದ ಸುಮಾರು 1.5 ಕಿ.ಮೀ. ಅಭಿವೃದ್ಧಿ ಮೀನ-ಮೇಷ ಎಣಿಸುತ್ತಿದೆ.

ಸರಕಾರಿ ಬಸ್‌ ಸಂಚಾರ

ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ವರೆಗೆ 10 ಬಾರಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ, 8 ಬಾರಿ ಖಾಸಗಿ ಬಸ್‌ ಸಂಚಾರ, ಇದರ ನಡುವೆ ಮೂರು ಖಾಸಗಿ ಅಂಗ್ಲ ಮಾಧ್ಯಮ ಸ್ಕೂಲ್ ಬಸ್‌ಗಳು, ಇತರ ವಾಹನಗಳು ಎಡೆಬಿಡದೆ ಸಂಚಾರ ಮಾಡುತ್ತಿವೆ.

ರಸ್ತೆ ಕಾಮಗಾರಿಗೂ ಮುನ್ನ ದ್ವಿಚಕ್ರ ವಾಹನ ಸವಾರರಿಗೆ ಅಂಥ ಸಮಸ್ಯೆ ಇರಲಿಲ್ಲ. ಘನ ವಾಹನ ಸಂಚಾರಕ್ಕೆ ಮಾತ್ರ ತೊಂದರೆಯಿತ್ತು. ಆದರೆ ರಸ್ತೆ ಡಾಮರು ಅಗೆದ ಸ್ಥಿತಿ ಅದಲುಬದಲಾಗಿದೆ. ಜಲ್ಲಿ ಕಲ್ಲುಗಳು ರಸ್ತೆಯ ಮಧ್ಯ ಭಾಗದಲ್ಲಿ ರಾಶಿ ಬಿದ್ದು ದ್ವಿಚಕ್ರ ವಾಹನ ಹಾಗೂ ಆಟೋ ಚಾಲಕರು ಕಷ್ಟ ಪಡುತ್ತಿದ್ದಾರೆ. ಘನ ವಾಹನ ಚಲಿಸುವ ಸಂದರ್ಭ ದೊಡ್ಡ ಕಲ್ಲುಗಳು ರಭಸದಿಂದ ಸಿಡಿಯುತ್ತಿದ್ದು, ಪಾದಚಾರಿಗಳಿಗೂ ಅಪಾಯವಿದೆ.

– ದಿನೇಶ್‌ ಪೇರಾಲು

Advertisement

Udayavani is now on Telegram. Click here to join our channel and stay updated with the latest news.

Next