Advertisement

ಈ ವರ್ಷವೂ “ಬಿಎಸ್‌ಎಸ್‌ಕೆ’ಆರಂಭ ಅನುಮಾನ

08:32 PM Aug 20, 2021 | Team Udayavani |

ಹುಮನಾಬಾದ: ಸಾಲದ ಸುಳಿಯಲ್ಲಿ ಬಾಗಿಲು ಮುಚ್ಚಿಕೊಂಡ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯಕ್ಕೆ ಸೂಕ್ತ ಅನುದಾನ ದೊರೆತಿಲ್ಲವಾದ್ದರಿಂದ ಈ ವರ್ಷವೂ ಕೂಡ ಕಾರ್ಖಾನೆ ಆರಂಭವಾಗುವುದು ಬಹುತೇಕ ಅನುಮಾನವಾಗಿದೆ.

Advertisement

ಸಕ್ಕರೆ ಕಾರ್ಖಾನೆ ಕಾರ್ಯ ಚಟುವಟಿಕೆಗಳು ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಬಂದ್‌ ಆಗಿವೆ. ನಾಲ್ಕು ತಿಂಗಳ ಹಿಂದೆ ಚುನಾವಣೆ ಎದುರಿಸಿ ಬಂದ ಹೊಸ ಆಡಳಿತ ಮಂಡಳಿ ಕಾರ್ಖಾನೆ ಆರಂಭಿಸಲು ಅನುದಾನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಕಾರ್ಖಾನೆಯಲ್ಲಿನ ಸಕ್ಕರೆ ಮಾರಾಟ ಮಾಡಲಾಗಿದ್ದು, ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಿದ್ದಾರೆ. ಅನುದಾನಕ್ಕಾಗಿ ವಿವಿಧೆಡೆ ಭೇಟಿ ನೀಡುತ್ತಿರುವ ಆಡಳಿತ ಮಂಡಳಿಗೆ ಕಾರ್ಖಾನೆ ಮೇಲೆ ಹೆಚ್ಚಿದ ಸಾಲದ ಹೊರೆ ಹಾಗೂ ಬಂದ್‌ ಆಗಿದೆ ಎಂಬ ಕಾರಣಕ್ಕೆ ಹಿನ್ನಡೆ ಉಂಟಾಗುತ್ತಿದೆ.

ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ಉತ್ಸಾಹ ತೋರುತ್ತಿಲ್ಲ ಎಂಬ ಆರೋಪಗಳ ಮಧ್ಯೆಯೂ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಅನುದಾನ ತಂದು ಕಾರ್ಖಾನೆ ನಡೆಸುತ್ತೇವೆಂಬ ಸಜ್ಜಿನಲ್ಲಿದ್ದಾರೆ ಆಡಳಿತ ಮಂಡಳಿಯವರು.ಅದೂ ಅಲ್ಲದೇ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ನಿಗಮದ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಅವರು ಕಾರ್ಖಾನೆ ಉಪಾಧ್ಯಕ್ಷ ರಾಗಿದ್ದು, ಇದೀಗ ಆ ಸಂಸ್ಥೆಯಿಂದ ಅನುದಾನ ತರುವುದು ಸಾಧ್ಯವಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಅಫ್ಘಾನ್ ನಲ್ಲಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ ದಿನೇಶ್ ಗುಂಡೂರಾವ್

ಈಡೇರದ ಭರವಸೆ: 2018ರ ವಿಧಾನಸಭೆ ಚುನಾವಣೆ ಮುನ್ನ ಕೇಂದ್ರ ಸಚಿವ ಅಮಿತ್‌ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಹಾಗೂ ಕುಮಾರಸ್ವಾಮಿ ಅವರು ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಸೂಕ್ತ ಅನುದಾನ ಕಲ್ಪಿಸುವ ಮೂಲಕ ಕಾರ್ಖಾನೆ ಪುನಶ್ಚೇತನಗೊಳಿಸುವ ಭರವಸೆ ನೀಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿ ಇರುವ ಅವಧಿಯಲ್ಲಿ 20 ಕೋಟಿ ಅನುದಾನ ತಂದು ಕಾರ್ಖಾನೆ ಆರಂಭಿಸಲಾಗಿತ್ತು. ನಂತರ ಕಾರ್ಖಾನೆಗೆ ಸೂಕ್ತ ಅನುದಾನ ಇಲ್ಲದೆ ಬಾಗಿಲು ಮುಚ್ಚಿಕೊಂಡಿದೆ. ಬಾಗಿಲು ತೆರೆಯುವ ಕಾರ್ಯವನ್ನು ಮಾತ್ರ ಯಾವ ರಾಜಕಾರಣಿಗಳೂ ಮಾಡುತ್ತಿಲ್ಲವೆಂದು ರೈತರು ದೂರಿದ್ದಾರೆ.

Advertisement

ಮತ್ತೆ ಹೊಸ ಭರವಸೆ: ಬಿಎಸ್‌ಎಸ್‌ಕೆ ಕಾರ್ಖಾನೆಗೆ ಇತ್ತೀಚೆಗೆ ಭೇಟಿ ನೀಡಿದ ಕೇಂದ್ರ ಸಚಿವ, ಜಿಲ್ಲಾ ಸಂಸದ ಭಗವಂತ ಖೂಬಾ ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೊಸ ಭರವಸೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತೇನೆಂದು ತಿಳಿಸಿದ್ದಾರೆ.ಅನುದಾನ ಸಿಗದಿದ್ದರೆ ಖಾಸಗಿ ವ್ಯಕ್ತಿಗಳಿಗೆ ಲೀಸ್‌ ಆಧಾರದಲ್ಲಿ ನೀಡುವ ಚಿಂತನೆ ನಡೆಸುತ್ತಿದೆ. ಕಾರ್ಖಾನೆಯಲ್ಲಿನ ಚಟುವಟಿಕೆಗಳ ಕುರಿತು ಅಧ್ಯಕ್ಷರು ಗೌಪ್ಯತೆ ಕಾಪಾಡಿ ಕೊಳ್ಳುತ್ತಿದ್ದಾರೆ. ಹೇಗಾದರೂ ಮಾಡಿ ರೈತರ ಉಳಿವಿಗಾಗಿ ಈ ವರ್ಷ ಕಾರ್ಖಾನೆ ಆರಂಭ ಮಾಡಲೇಬೇಕೆಂದು ರೈತ ಸಂಘದ ಮುಖಂಡ ಸತೀಶ ನನೂರೆ ಒತ್ತಾಯಿಸಿದ್ದಾರೆ.

-ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next