Advertisement

ಸಲೀಸಾಗಿ ಆಡಳಿತ ನಡೆಸಲು ಇರುವ ದಾರಿ ಇದು… 

12:31 PM Jul 30, 2018 | Team Udayavani |

2005ರ ಮಾಹಿತಿ ಹಕ್ಕು ಕಾಯ್ದೆಗೆ ಹಲವು ತಿದ್ದುಪಡಿಗಳ ಮೂಲಕ ಅದರ ಹರಿತವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಇಂದು ದೇಶದಲ್ಲಿ ಪ್ರತಿ ವರ್ಷ ನಾಲ್ಕರಿಂದ ಆರು ಮಿಲಿಯನ್‌ ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಬಹುಪಾಲು ಅರ್ಜಿಗಳನ್ನು “ಇತರ’ ಕಾರಣಗಳಿಂದ ತಿರಸ್ಕರಿಸುವ ಪ್ರಯತ್ನ ನಡೆಯುತ್ತದೆ. ಕೇಳಿದ ಮಾಹಿತಿಯ ಬದಲು ಭಿನ್ನ ಮಾಹಿತಿ ಕೊಟ್ಟು ವಿಳಂಬ ನೀತಿ ಅನುಸರಿಸಲಾಗುತ್ತದೆ.

Advertisement

ಪ್ರಜಾಪ್ರಭುತ್ವದ ಮಾದರಿ ಆಡಳಿತ ಎಂದರೆ ಜನಹಿತವನ್ನು ಕಾಪಾಡುವ ಕಾನೂನುಗಳನ್ನು ಜಾರಿಗೊಳಿಸುವುದು. ದಕ್ಷತೆಯನ್ನು ಹೆಚ್ಚಿಸಲು ಹೆಚ್ಚು ಪಾರದರ್ಶಕ ಆಡಳಿತ ಮಾಡುವುದು. ಆ ಪಾರದರ್ಶಕತೆಯನ್ನು ಲಭ್ಯ ಮಾಡಲು ಅಗತ್ಯವಾದ ಕಾಯ್ದೆ ನಿಯಮಗಳನ್ನು ಅಳವಡಿಸಿಕೊಳ್ಳುವುದು. ನಮ್ಮ ದೇಶದಲ್ಲಿ ಜನರ ಪರವಾದ ನೂರಾರು ಕಾನೂನುಗಳಿವೆ. ನಮಗೆ ಗೊತ್ತಿರಬೇಕು, ಕಾನೂನುಗಳನ್ನು ಅನ್ವಯಿಸಲು ಸರ್ಕಾರ ಸೂಕ್ತ ನಿಯಮಗಳನ್ನು ರಚಿಸಬೇಕು. ಆದರೆ ನಮ್ಮಲ್ಲಿ ನಿಯಮಗಳು ಭ್ರಷ್ಟರನ್ನು ರಕ್ಷಿಸುತ್ತವೆ. ಸಮರ್ಪಕ ಜಾರಿಯನ್ನು ತಡೆಯಲು ಕೂಡ ನೂರೆಂಟು ವಿಘ್ನಕಾರಕ ಅಂಶಗಳನ್ನು ನಿಯಮಗಳಲ್ಲಿ ಕೆಂಪು, ಹಸಿರು ಶಾಹಿಯ ಅಧಿಕಾರಿಗಳು ಇಟ್ಟಿರುತ್ತಾರೆ ಮತ್ತು ಬಳಸಿಕೊಳ್ಳುತ್ತಾರೆ. 2014ರಲ್ಲಿಯೇ ವಿಷಲ್‌ ಬ್ಲೋವರ್ ಆ್ಯಕ್ಟ್ ಸಂಬಂಧದಲ್ಲಿ ಪಾರ್ಲಿಮೆಂಟ್‌ ಸಮ್ಮತಿ ನೀಡಿದ್ದರೂ ಇಂದಿನವರೆಗೆ ಕೇಂದ್ರ ಸರ್ಕಾರ ಅದಕ್ಕೆ ಗೆಜೆಟ್‌ ನೋಟಿಫಿಕೇಷನ್‌ ಮಾಡಿ ಜಾರಿಗೊಳ್ಳುವ ದಾರಿ ಮಾಡಿಕೊಟ್ಟಿಲ್ಲ.

ವಿಷಯಕ್ಕೆ ಬರುವುದಾದರೆ, ಅಪ್ಪಿ ತಪ್ಪಿ ನಮ್ಮ ದೇಶದಲ್ಲಿ ಜನರಿಗೆ ವಿಶೇಷ ಅಧಿಕಾರಗಳನ್ನು ಕೊಡುವ ಕಾನೂನು ರಚನೆಯಾಗಿ ಜಾರಿಯಾಯಿತು ಎಂತಾದರೆ ಅಂತಹ ಕಾನೂನಿಗೆ ಹತ್ತಿರದಲ್ಲಿಯೇ ತಿದ್ದುಪಡಿ ಇದೆ ಎಂತಲೇ ಅರ್ಥ! ಲೋಕಾಯುಕ್ತ, ಸಕಾಲ ಈಗಲೂ ಇದೆ. ಪರಿಣಾಮ ಮಾಡುವಂತಿದೆಯೇ ಎಂಬ ಪ್ರಶ್ನೆ ಎದುರಾದರೆ ನಿರುತ್ತರರಾಗಬೇಕಾಗುತ್ತದೆ. ಇದೇ ಅವಸ್ಥೆ ಇದೀಗ ಮಾಹಿತಿ ಹಕ್ಕು ಕಾಯ್ದೆಗೂ ವಕ್ಕರಿಸಿದೆ. ಸಮಾಜದ ಒಂದಷ್ಟು ಜನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಉಘೇ ಉಘೇ ಹೇಳಲೇ ಹುಟ್ಟಿರುವಂತೆ ವರ್ತಿಸುತ್ತಿದ್ದಾರೆ. ಶ್ಲಾಘನೆ ತಪ್ಪಲ್ಲ, ಅದು ವಿಷಯಾಧಾರಿತವಾಗಿರಬೇಕು. ಮಾಹಿತಿ ಹಕ್ಕು ತಿದ್ದುಪಡಿ ಕಾಯ್ದೆ ಸೇರಿದಂತೆ ಹತ್ತು ಹಲವು ವಿಚಾರಗಳಲ್ಲಿ ಸದ್ಯದ ಕೇಂದ್ರ ಸರ್ಕಾರದ ನಿಲುವು ಪ್ರಶ್ನಾರ್ಹವಾಗಿದೆ.

ಮಾಹಿತಿ ಹಕ್ಕಿಗೆ ಮರ್ಮಾಘಾತ? 
ಜುಲೈ 18ರಿಂದ ಆರಂಭವಾದ ಲೋಕಸಭಾ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಕಾಯ್ದೆ, ತಿದ್ದುಪಡಿಗಳ ಪಟ್ಟಿಯ 14ನೇ ಅಂಶ ಮಾಹಿತಿ ಹಕ್ಕಿನ ತಿದ್ದುಪಡಿಯದಾಗಿದೆ. ಇಂಥದೊಂದು ತಿದ್ದುಪಡಿಗೆ ಮುನ್ನ ಪ್ರಜಾಪರ ಸರ್ಕಾರ ಅದರ ಕರಡನ್ನು ಸಾರ್ವತ್ರಿಕಗೊಳಿಸಬೇಕಾಗಿತ್ತು. ಮಾಹಿತಿ ಹಕ್ಕು ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್‌ ಈ ಪ್ರಸ್ತಾಪಿತ ತಿದ್ದುಪಡಿಗಳ ಕರಡನ್ನು ತಮ್ಮ ಮೂಲಗಳಿಂದ “ಸಂಪಾದಿಸಿ’ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್‌ ಮಾಡಿದ ನಂತರವಷ್ಟೇ ಇಡೀ ದೇಶಕ್ಕೆ ಈ ಬಗ್ಗೆ ಅರಿವಾಯಿತು! ಮಾಹಿತಿ ಹಕ್ಕು ತಜ್ಞರಾದ ಅರುಣ್‌ ರಾಯ್‌ ಹಾಗೂ ನಿಖೀಲ್‌ ದೇಯ್‌ ವ್ಯಂಗ್ಯವಾಡಿದ್ದು ಇದೇ ಅಂಶದ ಕುರಿತು, ದಶಕಗಳ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಬಂದಿದ್ದೇ ಎಲ್ಲ ಆಡಳಿತದ ವಿವರಗಳು ಪಾರದರ್ಶಕವಾಗಿರಬೇಕು ಎಂಬ ಇರಾದೆಯಿಂದಾಗಿತ್ತು. ಆದರೆ ಈಗ ಸರ್ಕಾರ ತರಲು ಹೊರಟಿರುವ ತಿದ್ದುಪಡಿ ಮಾತ್ರ ಗುಪ್ತ ಗುಪ್ತ!

ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗಗಳಿಗೆ ಈವರೆಗೆ ಚುನಾವಣಾ ಆಯೋಗಕ್ಕಿದ್ದಂತಹ ಸ್ವತಂತ್ರ ಸ್ಥಾನಮಾನಗಳಿತ್ತು. ಇದನ್ನು ಮತ್ತಷ್ಟು ವಿವರಿಸಿ ಹೇಳುವುದಾದರೆ, ಕೇಂದ್ರ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ವೇತನ ಈವರೆಗೆ ಚುನಾವಣಾ ಆಯೋಗದ ಮುಖ್ಯ ಕಮೀಷನರ್‌ ಹಾಗೂ ಕಮೀಷನರ್‌ರಿಗಿದ್ದಷ್ಟೇ ಆಗಿತ್ತು. ಅವರು ಪಡೆಯುವ ಭತ್ಯೆಗಳು ಕೂಡ ನಿರ್ಧಾರಿತ ಮಾನದಂಡಗಳಿಗೆ ಅನುಸಾರವಾಗಿತ್ತು. ಈಗಿನ ತಿದ್ದುಪಡಿಯ ಪ್ರಕಾರ, ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ಸಂಬಳ, ಅವಧಿ ಮತ್ತು ಭತ್ಯೆಗಳು ಕೇಂದ್ರ ಸರ್ಕಾರ ನಿರ್ಧರಿಸುವ ರೀತಿಯಲ್ಲಿರುತ್ತವೆ.

Advertisement

ಸಂಬಳ, ಭತ್ಯೆಗಳನ್ನು ಒಂದು ಕ್ಷಣ ಬದಿಗಿರಿಸಿ ಅವಧಿಯ ಆಯ್ಕೆ ಕೇಂದ್ರ ಸರ್ಕಾರಕ್ಕೆ ಲಭ್ಯವಾಗುತ್ತದೆ ಎಂಬುದು ಮಾಹಿತಿ ಆಯೋಗದ ದೃಢತೆಯನ್ನು ಕಂಪಿಸಿಬಿಡುತ್ತದೆ. ತಮ್ಮ ಹಿತಕ್ಕೆ ಧಕ್ಕೆ ಬರುತ್ತದೆ ಎನ್ನಿಸಿದ ಕ್ಷಣ ಯಾವುದೇ ಲಜ್ಜೆ, ಮುಲಾಜುಗಳಿಲ್ಲದೆ ಕೇಂದ್ರ ಸರ್ಕಾರ ಯಾವುದೇ ನಿಯಮವನ್ನಾದರೂ ತನ್ನ ಮೂಗಿನ ನೇರಕ್ಕೆ ರೂಪಿಸಬಹುದು. ಯಾವುದೇ ಕಾನೂನು ಬದ್ಧ ಹಕ್ಕನ್ನೂ ಮೊಟಕುಗೊಳಿಸಬಹುದು. ಇನ್ನೂ ದುರಂತವೆಂದರೆ, ಈ ವ್ಯವಸ್ಥೆಯನ್ನು ರಾಜ್ಯದ ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯುಕ್ತರಿಗೂ ಕೇಂದ್ರ ಅನ್ವಯಿಸಲು ಹೊರಟಿದೆ. 

ತಿದ್ದುಪಡಿ ಬರುತ್ತಿದೆ, ಕಾಪಾಡಿ!
ಈ ರೀತಿಯ ರಾಜಕೀಯ ಧುರೀಣರು, ಸಾಂಸ್ಥಿಕ ವ್ಯವಸ್ಥೆಗಳ ಹಿತ ಕಾಯುವ ಬದಲಾವಣೆಗಳನ್ನು ಆಡಳಿತವಾಗಲಿ, ವಿರೋಧ ಪಕ್ಷದ ಪ್ರತಿನಿಧಿಗಳಾಗಲಿ ವಿರೋಧಿಸುವ ಸಾಧ್ಯತೆ ಬಹಳ ಕಡಿಮೆ. ಸಂಸತ್‌ನಲ್ಲಿ ತಿದ್ದುಪಡಿಗೆ ಕುಳಿತಿರುವ ಕಾಯ್ದೆ ಚರ್ಚೆಯೂ ಇಲ್ಲದೆ ಹಸಿರು ನಿಶಾನೆ ಪಡೆದುಬಿಡಬಹುದು. ಗಮನಿಸಬೇಕಾದ ಅಂಶವೇನೆಂದರೆ, ಜುಲೈ ಎರಡರಂದು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ. ಅದು ಕೇಂದ್ರ ಹಾಗೂ ರಾಜ್ಯ ಮಾತಿ ಆಯೋಗದಲ್ಲಿ ಖಾಲಿ ಬಿಟ್ಟಿರುವ ಹುದ್ದೆಗಳನ್ನು ಭರ್ತಿ ಮಾಡದಿರುವುದನ್ನು ಪ್ರಶ್ನಿಸಿದೆ. ಈ ಸಂಬಂಧ ಅರ್ಜಿ ಸ್ವೀಕರಿಸಿರುವ ನ್ಯಾಯಾಲಯ ಕೇಂದ್ರಕ್ಕೆ ನೋಟೀಸ್‌ ಜಾರಿಗೊಳಿಸಿದೆ. ಒಂದೊಮ್ಮೆ ಈ ತಿದ್ದುಪಡಿ ಕಾಯ್ದೆಯ ಅಂಶವಾದರೆ ಆಗ ಸುಪ್ರೀಂಕೋರ್ಟ್‌ ಕೂಡ ಮಾಹಿತಿ ಆಯುಕ್ತರನ್ನು ಸರ್ಕಾರ ನೇಮಕ ಮಾಡದಿರುವುದನ್ನು ಪ್ರಶ್ನಿಸಲಾಗುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ಮೊಂಡುಗೊಳಿಸಲು ಇದೊಂದೇ ತಿದ್ದುಪಡಿ ಸಾಕು!

ಕೇಂದ್ರ ತಿದ್ದುಪಡಿಯ ಮೇಲ್ನೋಟದ ಕಾರಣವನ್ನು ಸ್ಪಷ್ಟಪಡಿಸಿದೆ, ಮಾಹಿತಿ ಆಯೋಗದ ಆಯುಕ್ತರದು ಚುನಾವಣಾ ಆಯುಕ್ತರ ಹುದ್ದೆಯ ಸ್ಥಾನಮಾನ ಹಾಗೂ ಸೇವಾ ನಿಯಮಗಳಿಗಿಂತ ಭಿನ್ನವಾಗಿರುವ ಹಿನ್ನೆಲೆಯಲ್ಲಿ ತಿದ್ದುಪಡಿಗಳನ್ನು ತರಲಾಗುತ್ತಿದೆ.

2005ರ ಮಾಹಿತಿ ಹಕ್ಕು ಕಾಯ್ದೆಗೆ ಹಲವು ತಿದ್ದುಪಡಿಗಳ ಮೂಲಕ ಅದರ ಹರಿತವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಇಂದು ದೇಶದಲ್ಲಿ ಪ್ರತಿ ವರ್ಷ ನಾಲ್ಕರಿಂದ ಆರು ಮಿಲಿಯನ್‌ ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಬಹುಪಾಲು ಅರ್ಜಿಗಳನ್ನು “ಇತರ’ ಕಾರಣಗಳಿಂದ ತಿರಸ್ಕರಿಸುವ ಪ್ರಯತ್ನ ನಡೆಯುತ್ತದೆ. ಕೇಳಿದ ಮಾಹಿತಿಯ ಬದಲು ಭಿನ್ನ ಮಾಹಿತಿ ಕೊಟ್ಟು ವಿಳಂಬ ನೀತಿ ಅನುಸರಿಸಲಾಗುತ್ತದೆ. ಒಬ್ಬ ಶಿಕ್ಷಣ ಇಲಾಖೆ ತಾಲೂಕು ಶಿಕ್ಷಣಾಧಿಕಾರಿ ತಾಲೂಕಿನ ಕಟ್ಟಡವೊಂದರ ನಿರ್ಮಾಣ ಮಾಹಿತಿ ಕೇಳಿದರೆ ಬೇಕೆಂದೇ ಪಕ್ಕದ ತಾಲೂಕಿನ ಕಟ್ಟಡ ನಿರ್ಮಾಣದ ಮಾಹಿತಿ ಕೊಡುತ್ತಾನೆ. ಪ್ರಶ್ನೆ ರೂಪದಲ್ಲಿ ಕೇಳುವಂತಿಲ್ಲ, ಸಾಸಿವೆ ಕಾಳಿನ ಅಧಿಕಾರವನ್ನು ಹೊಂದಿಲ್ಲದಿದ್ದರೂ ಮಾಹಿತಿ ಅರ್ಜಿ ಎರಡನೇ ಮೇಲ್ಮನೆ ಪ್ರಾಧಿಕಾರದ ಹಂತ ದಾಟಿಯೇ ರಾಜ್ಯ ಮಾಹಿತಿ ಆಯೋಗದ ಮುಂದೆ ಹೋಗತಕ್ಕದ್ದು…… ಈ ತರಹದ ನೂರಾರು ಸಬೂಬುಗಳು ಈಗಲೂ ಸಿಗುತ್ತಲೇ ಇವೆ ಹಾಗೂ ಭ್ರಷ್ಟರ ರಕ್ಷಣೆಯಾಗುತ್ತಿದೆ. ಆದರೂ ಸರ್ಕಾರಕ್ಕೆ ಸಮಾಧಾನವಾಗಿಲ್ಲ. ಹಾಗಾಗಿ ಇನ್ನಷ್ಟು ತಿದ್ದುಪಡಿ!

ತಿದ್ದುಪಡಿ ಬೇಡ; ಒತ್ತಾಯಕ್ಕೆ ನೀವೂ ಸಹಿ ಹಾಕಿ!
ಈ ರೀತಿ ಸರ್ಕಾರದ ಗಮನ ಸೆಳೆಯಲೇ ರೂಪಿಸಲಾಗಿರುವ ಒಂದು ಅಪರೂಪದ ಆನ್‌ಲೈನ್‌ ಮನ ವೇದಿಕೆ “ಚೇಂಜ್‌ ಡಾಟ್‌ ಆರ್ಗ್‌ [change.org]ನಲ್ಲಿ ಅಂಜಲಿ ಭಾರದ್ವಾಜ್‌ ನಾಗರಿಕ ಅಹವಾಲನ್ನು ಆರಂಭಿಸಿದ್ದು, ಕೇಂದ್ರ ಸರ್ಕಾರಕ್ಕೆ ಮಾಹಿತಿ ಹಕ್ಕಿನ ಕಾಯ್ದೆಯ ತಿದ್ದುಪಡಿ ಬೇಡ. ಅದು ಇದ್ದಂತೆಯೇ ಇರಲಿ ಬಿಡಿ ಎಂಬರ್ಥದ ಹಕ್ಕೊತ್ತಾಯದ ಪಿಟಿಷನ್‌ ಆರಂಭಿಸಿದ್ದಾರೆ. ದಿನದಿಂದ ದಿನಕ್ಕೆ ಈ ಒತ್ತಾಯದ ಪತ್ರಕ್ಕೆ ಸಹಿ ಹಾಕುವವರ ಸಂಖ್ಯೆ ಹೆಚ್ಚುತ್ತಿರುವುದು ಜನರ ಆಗ್ರಹ ಶಕ್ತಿಯ ಬಗ್ಗೆ ಭರವಸೆ ಮೂಡಲಾರಂಭಿಸಿದೆ. ಜುಲೈ 25ರ ವೇಳೆಗೇ 50 ಸಾವಿರಕ್ಕೂ ಹೆಚ್ಚು ಜನ ಈ ಪಿಟಿಷನ್‌ಗೆ ಸಹಿ ಮಾಡಿದ್ದಾರೆ. ಈ ಆಗ್ರಹದೊಂದಿಗೆ ಪ್ರತಿಯೊಬ್ಬ ಸಜ್ಜನ ನಾಗರಿಕ ಹೆಜ್ಜೆ ಜೋಡಿಸಬೇಕಿದ್ದು, ಆಸಕ್ತರೆಲ್ಲರೂ ಕೂಡ ಈ ಪಿಟಿಷನ್‌ಗೆ ಸಹಿ ಮಾಡಬಹುದು. ಈ ವೆಬ್‌ ಪುಟದಲ್ಲಿ ಇಣುಕಿದರೆ ಆ ಕೆಲಸ ಸುಲಭ, https://www.change.org/p/ prime-minister-of-india-no-amendments-to-dilutethe- rti-act

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next