Advertisement

ಬಹಿರಂಗ ಪ್ರಚಾರಕ್ಕೆ ಇಂದೇ ಕೊನೆ ದಿನ

11:59 AM Apr 21, 2019 | Team Udayavani |

ಧಾರವಾಡ: ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ರವಿವಾರ (ಏ.21) ಸಂಜೆ 6:00 ಗಂಟೆಗೆ ಅಂತ್ಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ವಿವಿಧೆಡೆಗಳಿಂದ ಆಗಮಿಸಿರುವ ರಾಜಕೀಯ ಕಾರ್ಯಕರ್ತರು, ಕ್ಷೇತ್ರದ ಮತದಾರರಲ್ಲದವರು ಧಾರವಾಡ ಕ್ಷೇತ್ರದಲ್ಲಿ ಇರುವಂತಿಲ್ಲ. ಕೂಡಲೇ ಅಂತಹವರು ಮತಕ್ಷೇತ್ರದಿಂದ ನಿರ್ಗಮಿಸಬೇಕು. ಬೇರೆ ಬೇರೆ ಕ್ಷೇತ್ರದಿಂದ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ರಾಜಕೀಯ ವ್ಯಕ್ತಿಗಳು, ಇತರರು ಜಿಲ್ಲೆಯ ವಿವಿಧ ಲಾಡ್ಜ್, ಫಾರಂಹೌಸ್‌, ಹೋಟೆಲ್ ಮತ್ತು ಇತರ ಸ್ಥಳಗಳಲ್ಲಿ ತಂಗಿರುವ ಸಾಧ್ಯತೆಗಳಿದ್ದು, ಅಂತಹವರು ಕೂಡಲೇ ಅಲ್ಲಿಂದ ನಿರ್ಗಮಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಭ್ಯರ್ಥಿಗಳು/ಏಜೆಂಟರಿಗೆ ಸೂಚನೆ: ಏ.23ರಂದು ಯಾವುದೇ ಪಕ್ಷ, ಅಭ್ಯರ್ಥಿಗಳು, ಏಜೆಂಟರು ಅಥವಾ ಅಭ್ಯರ್ಥಿಗಳ ಪರ ಮತದಾರರನ್ನು ಮತಗಟ್ಟೆಗಳಿಗೆ ಕರೆದುಕೊಂಡು ಬರಲು-ಹೋಗಲು ವಾಹನದ ವ್ಯವಸ್ಥೆ ಮಾಡುವಂತಿಲ್ಲ. ಅಲ್ಲದೆ ಉಪಾಹಾರ ಅಥವಾ ಊಟದ ವ್ಯವಸ್ಥೆ ಮಾಡಬಾರದೆಂದು ಸೂಚಿಸಿದ್ದಾರೆ.

ಮತಗಟ್ಟೆ ಏಜೆಂಟರು ಆದಷ್ಟು ನಿಗದಿತ ಸಮಯದೊಳಗೆ ಮತಗಟ್ಟೆಗಳಿಗೆ ಹಾಜರಾಗಬೇಕು. ಬೆಳಿಗ್ಗೆ 6:00 ಗಂಟೆಗೆ ಮತಗಟ್ಟೆಗಳಲ್ಲಿ ಸಿಬ್ಬಂದಿಗಳು ಅಣಕು ಮತದಾನ (ಮಾಕ್‌ ಪೋಲಿಂಗ್‌) ನಡೆಸುವರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಏಜೆಂಟರು ಹಾಜರಿರಬೇಕು. ಮತಗಟ್ಟೆಗಳಲ್ಲಿ ಏಜೆಂಟರು ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ಡಿ-ಮಸ್ಟರಿಂಗ್‌ ಕೇಂದ್ರದಿಂದ ಭದ್ರತಾ ಕೊಠಡಿಗೆ ಇವಿಎಂಗಳನ್ನು ಸಾಗಿಸುವಾಗ ಅಭ್ಯರ್ಥಿಗಳು ಕೂಡ ಜತೆಯಲ್ಲಿ ಬರಲು ಅವಕಾಶವಿದ್ದು, ಮತದಾನಕ್ಕೆ ಉಪಯೋಗಿಸಿದ ಇವಿಎಂ ಗಳನ್ನು ಭದ್ರತಾ ಕೊಠಡಿಯಲ್ಲಿಡುವಾಗ, ಅಭ್ಯರ್ಥಿಗಳು ಹಾಜರಿದ್ದು, ಕೊಠಡಿಗಳನ್ನು ಸೀಲ್ ಮಾಡುವಾಗ ತಮ್ಮ ಮೊಹರು ಮಾಡಬಹುದಾಗಿದೆ. ಅಭ್ಯರ್ಥಿಗಳು ಅಥವಾ ಅವರ ನಿಯೋಜಕರು ಭದ್ರತಾ ಕೊಠಡಿಗಳ ಬಳಿ ಮತ ಎಣಿಕೆಯವರೆಗೆ ಇರಬಹುದಾಗಿದೆ ಎಂದು ಹೇಳಿದ್ದಾರೆ.

ಲಾಡ್ಜ್ ಹೋಟೆಲ್ಗಳಿಗೆ ಸೂಚನೆ : ರಾಜ್ಯದ ಎರಡನೇ ಹಂತದಲ್ಲಿ ಧಾರವಾಡ ಸೇರಿದಂತೆ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅಂದು ಸಾರ್ವತ್ರಿಕ ರಜೆ ಘೋಷಣೆಯಾಗಿರುತ್ತದೆ. ಹೀಗಾಗಿ ಮತದಾರರು ಮತದಾನ ಮಾಡದೆ ಪ್ರವಾಸ ಕೈಗೊಳ್ಳಬಾರದು. ಇದರಿಂದ ಶೇಕಡಾವಾರು ಮತದಾನ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಹೋಟೆಲ್ಗಳು ಅಥವಾ ಲಾಡ್ಜ್ ನವರು ಕೊಠಡಿ ಕೋರಿ ಬರುವ ಪ್ರವಾಸಿಗರಿಗೆ ಹಾಗೂ ಇತರೆಯವರಿಗೆ ಕೊಠಡಿ ಕಾಯ್ದಿರಿಸುವ ಮೊದಲು ಅವರ ಎಪಿಕ್‌ ಕಾರ್ಡ್‌ ಹಾಗೂ ವಿಳಾಸ ಪರಿಶೀಲಿಸಬೇಕು. ಈ ವೇಳೆ ಮತದಾರರು ಚುನಾವಣೆ ನಡೆಯುವ ಕ್ಷೇತ್ರಗಳ ಪ್ರವಾಸಿಗರೆ ಅಥವಾ ಚುನಾವಣೆ ಇಲ್ಲದ ಕ್ಷೇತ್ರದ ಪ್ರವಾಸಿಗರೆ ಎಂಬುದನ್ನು ತಿಳಿದು ಚುನಾವಣೆ ಇಲ್ಲದ ಜಿಲ್ಲೆಯ ಪ್ರವಾಸಿಗರಿಗೆ ಆದ್ಯತೆ ನೀಡಿ, ಕೊಠಡಿ ಕಾಯ್ದಿರಿಸುವ ಮೂಲಕ ಲೋಕಸಭಾ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಕೋರಲಾಗಿದೆ.

Advertisement

ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಚುನಾವಣೆಗಳನ್ನು ಮುಕ್ತ-ಶಾಂತ ರೀತಿಯಿಂದ ಕೈಗೊಳ್ಳಲು ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

• ಮತಗಟ್ಟೆಗಳಲ್ಲಿ ಏಜೆಂಟರು ಶಾಂತಿ, ಸುವ್ಯವಸ್ಥೆ ಕಾಪಾಡಬೇಕು

• ಮತಗಟ್ಟೆಗಳಿಗೆ ಹೋಗಲು-ಬರಲು ವಾಹನ ವ್ಯವಸ್ಥೆ ಮಾಡುವಂತಿಲ್ಲ

• ಉಪಾಹಾರ-ಊಟದ ವ್ಯವಸ್ಥೆಯನ್ನೂ ಮಾಡುವಂತಿಲ್ಲ

• ಕ್ಷೇತ್ರದ ಮತದಾರರಲ್ಲದವರು ಕೂಡಲೇ ಕ್ಷೇತ್ರದಿಂದ ನಿರ್ಗಮಿಸಬೇಕು

ಉತ್ತಮ ಮತದಾನಕ್ಕೆ ಸುಗತೆ ಸರ್ಜಿಕಲ್ ಸಾಥ್‌

ಧಾರವಾಡ: ಏ. 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಮತದಾನ ಪ್ರಮಾಣ ದಾಖಲಿಸಲು ಜಿಲ್ಲಾ ಸ್ವೀಪ್‌ ಸಮಿತಿ ಪ್ರಯತ್ನಕ್ಕೆ ನಗರದ ಜ್ಯುಬಿಲಿ ಸರ್ಕಲ್ ಓಸ್ವಾಲ್ ಟವರ್ನಲ್ಲಿರುವ ಸುಗತೆ ಸರ್ಜಿಕಲ್ ಮತ್ತು ಕೆಮಿಕಲ್ಸ್ ಡಿಲರ್‌ನವರು ಕೈಜೋಡಿಸಿದ್ದಾರೆ. ಅಂದು ಮತ ಚಲಾಯಿಸಿ ಬೆರಳಿಗೆ ಹಾಕಿಸಿಕೊಂಡ ಶಾಹಿ ಹಾಗೂ ಗುರುತಿನ ಚೀಟಿ ತೋರಿಸಿದವರಿಗೆ ತಮ್ಮ ಸಂಸ್ಥೆಯಲ್ಲಿ ದೊರೆಯುವ ವಾಕರ್‌, ಕಮೋಡ್‌, ವ್ಹೀಲ್ಚೇರ್‌, ಅನಲೈಸರ್ ಸೇರಿದಂತೆ ಎಲ್ಲ ವೈದ್ಯಕೀಯ ಉಪಕರಣಗಳನ್ನು ಶೇ.25 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ: 9900299784 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಓಲಾ ಕ್ಯಾಬ್‌ ಉಚಿತ ಸೇವೆ

ಹು-ಧಾದಲ್ಲಿ ಏ. 23ರಂದು ನಡೆಯಲಿರುವ ಮತದಾನದ ವೇಳೆ ಹಿರಿಯ ನಾಗರಿಕರು, ಅಂಗವಿಕಲರು ಮತದಾನ ಮಾಡುವ ಸಲುವಾಗಿ ಓಲಾ ಕ್ಯಾಬ್‌ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಿ ಮತ್ತೆ ಮರಳಿ ಅವರ ಸ್ಥಳಕ್ಕೆ ತಲುಪಿಸಲು 25 ವಾಹನಗಳ ವ್ಯವಸ್ಥೆ ಒದಗಿಸಲಿದೆ ಎಂದು ಓಲಾ ಸಂಸ್ಥೆ ಅಧಿಕಾರಿ ಲಲಿತಕುಮಾರ ಹೇಳಿದ್ದಾರೆ.

ಬಸ್‌ ಸಂಚಾರದಲ್ಲಿ ವ್ಯತ್ಯಯ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ನಿಮಿತ್ತ ಏ. 22 ಹಾಗೂ 23ರಂದು ಮತಗಟ್ಟೆ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ ಸಾಗಿಸಲು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಾಸಂಗಿಕ ಕರಾರಿನ ಮೇರೆಗೆ 130 ಬಸ್‌ಗಳನ್ನು ನೀಡಲಿದೆ. ಇದರಿಂದ ಸಂಸ್ಥೆಯ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಸಹಕರಿಸ ಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಚುನಾವಣೆ ಹಬ್ಬ ಇದ್ದಂತೆ: ದೀಪಾ
ಹುಬ್ಬಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಬ್ಬದಂತಿದ್ದು, ಏ. 23ರಂದು ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಖುಷಿ ಪಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

ಬಿವಿಬಿ ಕಾಲೇಜಿನ ದೇಶಪಾಂಡೆ ಫೌಂಡೇಶನ್‌ನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದೀಪಾವಳಿ, ರಂಜಾನ್‌, ಕ್ರಿಸ್‌ಮಸ್‌ ಹಬ್ಬಗಳನ್ನು ಆಯಾ ಧರ್ಮದ ಅನುಯಾಯಿಗಳು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಿ ಸಂತಸ ಪಡುತ್ತಾರೆ. ಆದರೆ ದೇಶದ ಎಲ್ಲಾ ನಾಗರಿಕರು ಕೂಡಿಕೊಂಡು ಆಚರಿಸುವ ಹಬ್ಬ ಚುನಾವಣೆಯಾಗಬೇಕು. ನೀವು ಮತದಾನ ಮಾಡುವುದರೊಂದಿಗೆ ಕುಟುಂಬ, ನೆರೆಹೊರೆ ಹಾಗೂ ಸ್ನೇಹಿತರಿಂದಲೂ ಮತದಾನ ಮಾಡಿಸಬೇಕುಎಂದು ಹೇಳಿದರು.

ದೇಶಪಾಂಡೆ ಫೌಂಡೇಶನ್‌ ಸಿಇಒ ವಿವೇಕ ಪವಾರ ಮಾತನಾಡಿದರು. ವಿದ್ಯಾರ್ಥಿ ರಾಘವೇಂದ್ರ ಪವಾರ್‌ ಮತದಾನದ ಜಾಗೃತಿ ಗೀತೆ ಪ್ರಸ್ತುತಪಡಿಸಿದರು. ಫೌಂಡೇಶನ್‌ ನಿರ್ದೇಶಕ ಗುರುಗೌಡ, ಉಪನಿರ್ದೇಶಕ ರಾಜಪತಿ ಮಂಗಳಗಿ ಇನ್ನಿತರರಿದ್ದರು.

ಮತದಾನ ಮಾಡಿದ್ರೆ ಮದ್ಯದ ಮೇಲೆ ಶೇ. 3 ರಿಯಾಯ್ತಿ!
ಹುಬ್ಬಳ್ಳಿ:
ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಮತದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ವೈನ್‌ ಮಾರ್ಟ್‌ನವರು ಗ್ರಾಹಕರಿಗೆ ಮದ್ಯದ ಮುಖಬೆಲೆ (ಎಂಆರ್‌ಪಿ) ಮೇಲೆ ಶೇ. 3 ರಿಯಾಯ್ತಿ ಘೋಷಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಶಹರ ಪ್ರದೇಶಗಳಲ್ಲಿ ಮತದಾನ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಲೇ ಇದೆ. ಹೀಗಾಗಿ ಚುನಾವಣಾ ಆಯೋಗ, ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆ, ಶಾಲಾ-ಕಾಲೇಜು, ವ್ಯಾಪಾರಸ್ಥರು ಮತದಾನ ಉತ್ತೇಜಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

ಹು-ಧಾ ಮಹಾನಗರ ಪಾಲಿಕೆ ಮತದಾನ ಮಾಡಿದವರಿಗೆ ಪಾಲಿಕೆ ವ್ಯಾಪ್ತಿಯ ಉದ್ಯಾನಗಳಲ್ಲಿ ಉಚಿತ ಪ್ರವೇಶ ಒದಗಿಸಲು ಮುಂದಾಗಿದೆ. ನಗರದ ನಲಂದ ಪಿಯು ಕಾಲೇಜಿನವರು ಪ್ರವೇಶ ಅರ್ಜಿ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಕೆಲವು ವ್ಯಾಪಾರಸ್ಥರು ತಮ್ಮ ಉತ್ಪನ್ನಗಳ ಮೇಲೆ ರಿಯಾಯ್ತಿ ನೀಡುವುದಾಗಿ ಘೋಷಿಸಿದ್ದಾರೆ. ಈಗ ಕರ್ನಾಟಕ ವೈನ್‌ ಮಾರ್ಟ್‌ನವರು ಸಹಿತ ಏ. 23ರಂದು ಮತದಾನ ಮಾಡಿದ ಬಗ್ಗೆ ಏ. 24ರಂದು ಖಚಿತ ಪಡಿಸಿದರೆ ಅಂಥವರಿಗೆ ಮದ್ಯದ ಮುಖಬೆಲೆಯ ಮೇಲೆ ಶೇ. 3 ರಿಯಾಯ್ತಿ ನೀಡುವುದಾಗಿ ಮದ್ಯದಂಗಡಿಗಳ ಮುಂದೆ ಬ್ಯಾನರ್‌ ಹಾಕಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next