Advertisement

ಮುಮ್ಮೇಳಕ್ಕೆ ಭಾವತುಂಬಿದ ಪರಂಪರೆಯ ಐವರು ಭಾಗವತರ ಹಿಮ್ಮೇಳ

07:27 PM Oct 10, 2019 | Team Udayavani |

ಯಕ್ಷಗಾನದ ಯಶಸ್ಸಿನಲ್ಲಿ ಹಿಮ್ಮೇಳ ಮುಮ್ಮೇಳ ಸಮಪಾಲು ಇರುತ್ತದೆ. ಯಾವ ಅಂಗ ಊನವಾದರೂ ಒಟ್ಟಂದದ ಪ್ರದರ್ಶನ ಕಳಪೆಯಾಗುತ್ತದೆ. ಹಿಮ್ಮೇಳ ಸಪ್ಪೆಯಾಗಿ ಮುಮ್ಮೇಳ ಗಟ್ಟಿಯಾದರೂ, ಮುಮ್ಮೇಳ ನೀರಸವಾಗಿ ಹಿಮ್ಮೇಳ ಮಾತ್ರ ಕಾಣಿಸಿದರೂ ಒಟ್ಟು ಕಾರ್ಯಕ್ರಮದ ಮೇಲೆ ಪ್ರಭಾವ ಬೀರುತ್ತದೆ.

Advertisement

ಭ್ರಾಮರಿ ಯಕ್ಷ ಮಿತ್ರರು ಆಯೋಜಿಸಿದ್ದ ಯಕ್ಷಗಾನದಲ್ಲಿ ಮುಮ್ಮೇಳ ಕಲಾವಿದರು ಸಮರ್ಥವಾಗಿ, ಒಪ್ಪವಾಗಿ ನಿರ್ವಹಿಸಿ ಸೈ ಎನಿಸಿದ್ದಾರೆ. ಇದಕ್ಕೆ ಸಮರ್ಥವಾಗಿ ಸಾಥ್‌ ನೀಡಿದ್ದು ಪರಂಪರೆಯ ಹಿಮ್ಮೇಳ.

ಪರಂಪರೆಯ ಹಿಮ್ಮೇಳ
ಮನೋಜ್ಞವಾಗಿ ಪ್ರಸಂಗವನ್ನು ದಾಟಿಸಿ ಚಿತ್ತಭಿತ್ತಿಯಲ್ಲಿ ಅಚ್ಚಳಿಯದೆ ದಾಖಲಾದ್ದು ಹಿಮ್ಮೇಳ ಕಲಾವಿದರು. ಕಲಾಸಕ್ತರ ಸ್ಮತಿಪಟಲದಲ್ಲಿ ಋತುಗಾನ ಮೂಡಿಸಿದ ಭಾಗವತರೆಲ್ಲರೂ ಈ ಕಾರ್ಯಕ್ರಮದ ಮೇರು ಪಂಕ್ತಿಯ ಗೌರವಾದರಕ್ಕೆ ಅರ್ಹರು. ಕಲಬೆರಕೆ ಇಲ್ಲದ, ಸಿನಿಮಾ, ಆಧುನಿಕ ಗಾಯನದ ಸೋಂಕಿಲ್ಲದ ಹಾಡುಗಾರಿಕೆಯಾಗಿತ್ತು ದಿನೇಶ ಅಮ್ಮಣ್ಣಾಯ, ಪ್ರಸಾದ ಬಲಿಪ, ಪಟ್ಲಸತೀಶ್‌ ಶೆಟ್ಟಿ, ಹೊಸಮೂಲೆ ಗಣೇಶ ಭಟ್‌ ಹಾಗೂ ರವಿಚಂದ್ರ ಕನ್ನಡಿಕಟ್ಟೆಯವರ ಭಾಗವತಿಕೆ.

ಚೂಡಾಮಣಿ ಪ್ರಸಂಗದ ಪ್ರದರ್ಶನದ ದೇಖರೇಖೀ ಹೀಗೇ ಇರಬೇಕೆಂದು ಇದಮಿತ್ಥಂ ಎಂದು ಲಕ್ಷ್ಮಣರೇಖೆ ಹಾಕಿಕೊಟ್ಟು ಹಾಡುಗಾರಿಕೆಯ ಛಾಪು ಏರಿಸಿದವರು ಅಮ್ಮಣ್ಣಾಯರು. ಭಾವಪೂರ್ಣ ಪ್ರಸ್ತುತಿಯಲ್ಲಿ ಗಾಯಕ ಹಾಗೂ ಮುಮ್ಮೇಳ ಕಲಾವಿದರ ಭಾವುಕ ಸಂವಹನ ಪ್ರೇಕ್ಷಕರನ್ನು ತಲುಪಲು ಕಷ್ಟವೇ ಆಗಲಿಲ್ಲ. ಸುರಳೀತವಾಗಿ ಪ್ರೇಕ್ಷಕರ ಮನದುಯ್ನಾಲೆಯಲ್ಲಿ ಗಾನದೇವಿಯನ್ನು ಕೂರಿಸಿ ಆರಾಧಿ ಸಿ ಜೀಕಿದ ಅವರು ಒಂದು ಭಾವಪೂರ್ಣ ಸನ್ನಿವೇಶದ ಚಿತ್ರಣವನ್ನು ಕಡೆದಿಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟರು. ಕಲಾಭಿಜ್ಞ ಪ್ರೇಕ್ಷಕರಿಗೆ ಸ್ವೂಪಜ್ಞ ಕಲಾವಿದ ಸ್ಪಂದಿಸಿದ ರೀತಿ ವ್ಯಕ್ತವಾಗುತ್ತಿತ್ತು.

ಮುಂಜಾನೆ‌ವರೆಗೆ ಯಕ್ಷಗಾನ ವೀಕ್ಷಿಸುವಂತೆ ಮಾಡಿದ್ದೇ ಪ್ರದರ್ಶನದ ಇಂತಹ ಆರಂಭ. ಅಮ್ಮಣ್ಣಾಯ ಶೈಲಿಯಲ್ಲಿ ವಿಭಿನ್ನ ರಾಗಗಳ ಬಳಕೆ ಮೂಲಕ ರಾವಣನ ಶೃಂಗಾರ, ಹನೂಮಂತನ ಅಚ್ಚರಿ, ಭಕ್ತಿ, ಸೀತೆಯ ದುಃಖ, ಕುತೂಹಲ, ಕರುಣ, ಸಂತೋಷ ರಸೋತ್ಪತ್ತಿಗೆ ಕಾರಣರಾದರು. ಇದಕ್ಕೆ ಪೂರಕವಾಗಿ ಗುರುಪ್ರಸಾದ್‌ ಬೊಳಿಂಜಡ್ಕ , ಚೈತನ್ಯಕೃಷ್ಣ ಪದ್ಯಾಣರ ಮದ್ದಳೆ ಚೆಂಡೆ. ಹಿತವಾದ ಹದವಾದ ನುಡಿತ. ಸಂಗೀತ ನಿಬದ್ಧವಾದ ಅಮ್ಮಣ್ಣಾಯರ ಹಾಡುಗಾರಿಕೆ ಎಷ್ಟು ಬೇಡುತ್ತದೋ ಅಷ್ಟೇ ಕೈ ಚಳಕ.

Advertisement

ದ್ವಂದ್ವ ಹಾಡುಗಾರಿಕೆ
ರಾಮಾಂಜನೇಯದಲ್ಲಿ ಪಟ್ಲ- ಕನ್ನಡಿಕಟ್ಟೆಯವರು. ಯುವ ಭಾಗವತರೆಂಬ ನೆಗಳೆ¤ ಹೊಂದಿ ಪೌರಾಣಿಕ (ಕವಿ ಕಲ್ಪನೆಯ ಪ್ರಸಂಗ) ಕಥಾನಕವನ್ನು ಹಳೆಕಾಲದ ಭಾಗವತಿಕೆಯಲ್ಲಿ ನೀಡಿದ್ದು ರಸದೌತಣ. ಕನ್ನಡಿಕಟ್ಟೆಯವರು ಮಾಂಬಾಡಿ ಶೈಲಿಯಲ್ಲಿ ಹಾಡುವ ಮೂಲಕ ಪದ್ಯಾಣರ ಹಾಡುಗಳ ನೆನಪನ್ನು ಮೆಲುಕು ಹಾಕುವಂತೆ ಮಾಡಿದರು. ಅಗರಿ ಶೆ„ಲಿಯಲ್ಲೂ ನಾಲ್ಕು ಹಾಡುಗಳಿದ್ದವು. ಒಂದಕ್ಕಿಂತ ಒಂದರ ಗಾನಪ್ರಸ್ತಾವನೆ ಅನನ್ಯ.

ಪರಂಪರೆ
ರುಚಿಶುದ್ಧಿಯುಳ್ಳ ಪ್ರೇಕ್ಷಕರಿಗೆ ಪರಂಪರೆಯ ಸೊಗಸನ್ನು ಉಣಬಡಿಸಿದರೆ ಅವರು ನಿರಾಕರಿಸುವುದಿಲ್ಲ,ಪುರಸ್ಕರಿಸುತ್ತಾರೆ ಎನ್ನುವುದಕ್ಕೆ ಆಗಾಗ ಕೇಳಿ ಬಂದ ಪ್ರಚಂಡ ಕರತಾಡನವೇ ಸಾಕ್ಷಿ. ಅಗರಿ ಶೆ„ಲಿಯ ಬಳಕೆ ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು, ಅಗರಿ ಶೈಲಿ ಆರಂಭಿಸಿದ ಕೂಡಲೇ ಪ್ರೇಕ್ಷಕರಿಗೆ ಇದು ಅಗರಿ ಶೈಲಿ ಎಂದು ನಿಕ್ಕಿಯಾಗಿ ಅರಿವಾಗುತ್ತಿರುವುದು ಹೊಸ ಮನ್ವಂತರದ ಉದಯದ ಲಕ್ಷಣ. ಪರಂಪರೆಯನ್ನು ಕಲಾರಸಿಕರು ಕೈ ಬಿಡುವುದಿಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳಬಹುದಾದ ಬದಲಾವಣೆ ಇದು. ಪ್ರಶಾಂತ್‌ ವಗೆನಾಡು ಚೆಂಡೆ, ಕೃಷ್ಣ ಪ್ರಕಾಶ ಉಳಿತ್ತಾಯರ ಮದ್ದಳೆ. ಪಟ್ಲ, ಕನ್ನಡಿಕಟ್ಟೆಯವರಿಗೆ ಅದ್ಭುತ ಜೊತೆಗಾರಿಕೆ ಹಾಡಿಗೆ ಉಳಿತ್ತಾಯರ ಅಪರೂಪದ ನುಡಿಸಾಣಿಕೆ, ವಿರಳ ನುಡಿತ ಬಿಡಿತ ಮುಕ್ತಾಯಗಳು ಮದ್ದಳೆ ಕಡೆಗೊಂದು ಮೆಚ್ಚುಗೆಯ ನೋಟ ಬೀರುವಂತೆ ಮಾಡಿತು. ರೂಪಕ, ತ್ರಿವುಡೆಯ ನುಡಿತಗಳು ಸ್ವಲ್ಪ ಕುತೂಹಲಭರಿತವಾಗಿದ್ದವು.

ಮರೆಯದ ಶೈಲಿ
ದ್ರೌಪದಿ ಪ್ರತಾಪ ಪ್ರಸಂಗದಲ್ಲಿ ಬಲಿಪರು- ಹೊಸಮೂಲೆಯವರು ಧೂಳೆಬ್ಬಿಸಿದರು. ಏರು ಶ್ರುತಿಯ ಹಾಡುಗಾರಿಕೆ. ಪರಂಪರೆಯ ಶೈಲಿ. ಅವಳಿ ಚೆಂಡೆಯಲ್ಲಿ ಲಕ್ಷ್ಮೀ ನಾರಾಯಣ ಅಡೂರು , ಮುರಾರಿ ಕಡಂಬಳಿತ್ತಾಯರು. ಗಣೇಶ ನೆಕ್ಕರೆಮೂಲೆಯವರ ಮದ್ದಳೆಯ ನುಡಿತ. ಈಗಿನ ಯುವಜನರಲ್ಲೂ, ಹೊಸತನದ ಹಾಡುಗಳ ನಡುವೆಯೂ, ಸಂಗೀತದ ಆಲಾಪದೆಡೆಯಲ್ಲೂ ಬಲಿಪ ಶೆ„ಲಿ ಕಳೆಗುಂದದೆ ಇರುವಲ್ಲಿ ಪ್ರಸಾದ್‌ ಬಲಿಪರ ಕೊಡುಗೆ ದೊಡ್ಡದು. ರಾಜೇಂದ್ರಕೃಷ್ಣರು ಎರಡೂ ಪ್ರಸಂಗದಲ್ಲಿ ಚಕ್ರತಾಳ ಕಲಾವಿದರಾಗಿದ್ದರು.

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next