Advertisement

ಹೀಗೊಂದು ಪ್ರವಾಸ ಕಥನ !

07:30 AM Mar 30, 2018 | |

ಅದು ನಾನು 10ನೆಯ ತರಗತಿಯಲ್ಲಿ ಓದುತ್ತಿದ್ದ ಕಾಲ. ಸದಾ ಹಸಿರು ವನಸಿರಿಯಿಂದ ಕಂಗೊಳಿಸುತ್ತಿತ್ತು ನಮ್ಮ ಶಾಲೆ. ಸದಾ ಶಿಸ್ತುಬದ್ಧವಾದ ಅಧ್ಯಾಪಕರು ಮತ್ತು ಕಟ್ಟುನಿಟ್ಟಾದ ನಿಯಮಗಳು ನಮ್ಮ ಶಾಲೆಯಲ್ಲಿ ಜಾರಿಯಲ್ಲಿತ್ತು. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ನಡುವೆ ಸಲುಗೆಯ ವಾತಾವರಣ ಇರಲಿಲ್ಲ. ಆದರೂ ಸಹ ಕೆಲವು ಸಮಾರಂಭ ಮತ್ತು ವಿಶೇಷ ದಿನಗಳಂದು ಸ್ನೇಹಯುತ ವಾತಾವರಣ ಅಸ್ತಿತ್ವದಲ್ಲಿತ್ತು. ಇದಲ್ಲದೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಅಧಿಕ ಸೌಹಾರ್ದಯುತವಾದ ಸಂಬಂಧ ಬಳಕೆಯಲ್ಲಿದ್ದದ್ದು ಎಂದರೆ ಅದು ಶಾಲಾ ಪ್ರವಾಸದ ಸಂದರ್ಭದಲ್ಲಿ ಮಾತ್ರ.

Advertisement

ಎಂದಿನಂತೆ ಅದು ಚುಮು ಚುಮು ಚಳಿಯ ನವೆಂಬರ-ಡಿಸೆಂಬರದ ತಿಂಗಳಾಗಿತ್ತು. ನಮ್ಮ ಶಾಲೆಯಲ್ಲೂ ಪ್ರವಾಸದ ಸಮಯ. ನಮ್ಮ ತರಗತಿಗೆಂದೇ ವಿಶೇಷವಾಗಿ ಒಂದು ವಾರದ ಹಾಗೂ ಒಂದು ದಿನದ ಪ್ರವಾಸ ನಿಗದಿಯಾಗಿತ್ತು. ಒಂದು ದಿನದ ಪ್ರವಾಸವು ಸಮೀಪದ ಸೋಮೇಶ್ವರ, ಮಲ್ಪೆ, ಸೇಂಟ್‌ ಮೇರೀಸ್‌ ದ್ವೀಪ, ಉಡುಪಿ ಕ್ಷೇತ್ರ, ಮಣಿಪಾಲ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಸಂದರ್ಶನವನ್ನು ಒಳಗೊಂಡಿತ್ತು. ಒಂದು ವಾರ ಮನೆಯನ್ನು ಬಿಡಲು ಒಲ್ಲದ ನಾನು ಒಂದು ದಿನದ ಈ ಮಂಗಳೂರು ಪ್ರವಾಸಕ್ಕೆ ಹೆಸರನ್ನು ನೋಂದಾಯಿಸಿದ್ದೆ. ಆದರೆ ಫ‌ಜೀತಿ ಆದದ್ದು ಇಲ್ಲಿಯೇ. ಪ್ರವಾಸ ಕೇವಲ ಒಂದು ದಿನದ್ದು ನಿಜ, ಆದರೆ ಅದರ ಸಮಯವನ್ನು ನಾನು ವಿಚಾರಿಸದ್ದೇ ದೊಡ್ಡ ತಪ್ಪಾದದ್ದು. ಅಂತೂ ಮನೆಯವರನ್ನೆಲ್ಲ ಒಪ್ಪಿಸಿದ ನಾನು ಪ್ರವಾಸದ ತಯಾರಿಯಲ್ಲಿದ್ದೆ. ಪ್ರವಾಸದ ಮುನ್ನಾ ದಿನ ಕರೆದ ಸಭೆಯಲ್ಲಿ ತಿಳಿದ ವಿಷಯ ನನ್ನ ಆ ಪ್ರವಾಸದ ಸಂಭ್ರಮವನ್ನೆಲ್ಲ ಕಡಿಮೆಯಾಗುವಂತೆ ಮಾಡಿತು. ನಡೆದದ್ದು ಇಷ್ಟೇ. ಪ್ರವಾಸವು ಮುಂಜಾನೆ 3.30ಕ್ಕೆ ಸರಿಯಾಗಿ ಹೊರಟು ರಾತ್ರಿ ಸುಮಾರು ಹನ್ನೊಂದು-ಹನ್ನೊಂದೂವರೆಗೆ ತಲುಪಲು ನಿರ್ಧಾರವಾಗಿತ್ತು. ಅದಕ್ಕಾಗಿಯೇ ನಮ್ಮನ್ನು ಪ್ರವಾಸದ ಹಿಂದಿನ ದಿನದ ರಾತ್ರಿಯೇ ಶಾಲೆಯಲ್ಲಿ ತಂಗಲು ತಿಳಿಸಿದ್ದರು. ಇಲ್ಲವೇ ಮೂರು ಗಂಟೆಗೆ ಸರಿಯಾಗಿ ಶಾಲೆಗೆ ಬರಲು ಹೇಳಿದ್ದರು. ನಿಮಗೆ ಅಚ್ಚರಿಯಾಗಬಹುದು. ಇದೆಂತಹ ತಪ್ಪು ಎಂದು. ಆದರೆ ನನಗಂತೂ ಇದು ಸಮಸ್ಯೆಯಾಗಿಯೇ ಕಾಡಲಾರಂಭಿಸಿತು. ಮನೆಯನ್ನು , ಹೆತ್ತವರನ್ನು ಒಂದು ದಿನವೂ ಬಿಟ್ಟಿರದ ನಾನು ಒಂದು ರಾತ್ರಿ ಶಾಲೆಯಲ್ಲಿ ಹೇಗೆ ತಂಗಲಿ ಎಂದೇ ಚಡಪಡಿಸುತ್ತಿದ್ದೆ. ಮನೆಯಲ್ಲಿ ತಿಳಿಸಿದ ನನಗೆ ಕಾದಿದ್ದ ಆಶ್ಚರ್ಯದ ಸಂಗತಿ ಎಂದರೆ ತುಸು ಹೊತ್ತು ಆಲೋಚಿಸಿದ ನನ್ನ ತಂದೆ-ತಾಯಿ ನನ್ನ ಸ್ವಭಾವವನ್ನು ಅರಿತವರಾಗಿದ್ದರಿಂದ ನನ್ನನ್ನು ಶಾಲೆಗೆ ಮೂರು ಗಂಟೆಗೆ ತಲುಪಿಸುವ ಮಾತನ್ನು ಹೇಳಿದರು. ಈ ಮಾತು ನನ್ನ ಮನಸ್ಸಿನಲ್ಲಿ ಕಳೆದುಹೋಗಿದ್ದ ಪ್ರವಾಸದ ಅದೇ ಉತ್ಸಾಹವನ್ನು ಮರಳಿಸಿತು.

ಪ್ರವಾಸದ ದಿನವೂ ಬಂದುಬಿಟ್ಟಿತು. ನಾನು ಹೇಳಿದಂತೆ ನನ್ನ ಹೆತ್ತವರು ನನ್ನನ್ನು ಮೂರು ಗಂಟೆಗೆ ಶಾಲೆಗೆ ತಲುಪಿಸಿ ಶುಭವನ್ನು ಹಾರೈಸಿ ಬೀಳ್ಕೊಟ್ಟರು. ನಾನು ಅವರ ಹಾರೈಕೆಯನ್ನು ಮನಸಾ ಸ್ವೀಕರಿಸಿ ಪ್ರವಾಸದ ಬಸ್ಸನ್ನು ಏರಿದೆ. ಯೋಜನೆಯ ಹಾಗೆ ಐದರ ತಾಸಿಗೆ ಸೋಮೇಶ್ವರವನ್ನು ತಲುಪಿ, ದೇವರಿಗೆೆ ನಮಸ್ಕರಿಸಿ ಅಲ್ಲಿ ಬೀಚ್‌ನಲ್ಲಿ ಕೊಂಚ ಸಮಯ ವಿಹರಿಸಿ ಉಳ್ಳಾಲದ ಮಸೀದಿಯನ್ನು ಸಂದರ್ಶಿಸಿ ಅಲ್ಲಿ ಪ್ರಸಾದದ ರೂಪದಲ್ಲಿ ಕೊಟ್ಟ ಖರ್ಜೂರವನ್ನು ಸೇವಿಸಿ ಪಂಪ್‌ವೆಲ್‌ ಹೊಟೇಲಿನಲ್ಲಿ ಉಪಹಾರವನ್ನು ಮುಗಿಸಿ ಮಲ್ಪೆಯತ್ತ ಪಯಣ ಮುಂದುವರೆಸಿದೆವು. ನಾವು ಅಲ್ಲಿಗೆ ತಲುಪುವಾಗ ಮಟಮಟ ಮಧ್ಯಾಹ್ನ ಹನ್ನೆರಡರ ಸಮಯ. ಆ ಬಿಸಿಲಿಗೂ ಹಿಂಜರಿಯದ ನಾವು ಕಾಲ್ನಡಿಗೆಯಲ್ಲಿ ಸಾಗುತ್ತಾ ಅಲ್ಲಿನ ವಹಿವಾಟುಗಳನ್ನು ನೋಡುತ್ತಿದ್ದೆವು. ನಮ್ಮ ಅಧ್ಯಾಪಕರು ಸೇಂಟ್‌ ಮೇರೀಸ್‌ ದ್ವೀಪಕ್ಕೆ ತೆರಳಲು ಟಿಕೇಟ್‌ ಖರೀದಿಸಿ ನಮ್ಮನ್ನು ಬೋಟ್‌ ಪಯಣದಲ್ಲಿ ಮುಂದೆ ಕರೆದೊಯ್ದರು. ಬೋಟ್‌ ಪಯಣದ ಆನಂದ ನಿಜಕ್ಕೂ ಅವಿಸ್ಮರಣೀಯ. ಸಾಗುತ್ತಾ ಅಲ್ಲಿ ಮೀನುಗಾರರ ಕೆಲಸಗಳು, ದೂರದ ದ್ವೀಪದಲ್ಲಿ ಕಾಣುವ ತೆಂಗಿನ ತೋಟಗಳ ನೋಟ ನಿಜಕ್ಕೂ ಆ ಪ್ರಾಯದ ನಮಗೆ ಒಂದು ತರಹದ ಉಲ್ಲಾಸವನ್ನೇ ನೀಡಿತು. ಅಲ್ಲಿನ ಬಿಸಿಲಿನ ಝಳದಲ್ಲಿಯೂ ಬೀಚ್‌ ದಂಡೆಯ ಮೇಲೆ ಹೇರಳವಾಗಿ ಬಿದ್ದಿದ್ದ ಚಿಪ್ಪುಗಳೂ ಅನಾಯಾಸವಾಗಿ ನಮ್ಮ ಚೀಲಗಳನ್ನು ಸೇರಿದವು. ಇಷ್ಟಾಗುವಾಗ ಗಂಟೆ ಸರಿಯಾಗಿ 1.15 ಆಗಿತ್ತು. ನಂತರ ನಮ್ಮ ಪ್ರಯಾಣ ಸಾಗಿದ್ದು ಶ್ರೀಕ್ಷೇತ್ರ ಉಡುಪಿಗೆ. ಅಲ್ಲಿ ಶ್ರೀಕೃಷ್ಣನಿಗೆ ನಮಸ್ಕರಿಸಿ, ಪ್ರಸಾದ ಭೋಜನವನ್ನು ಮಾಡಿದೆವು. ಬಳಿಕ ತೀರಾ ಬಿಸಿಲಿದ್ದ ಕಾರಣ ಬಸ್ಸಿನಲ್ಲೇ ಕೊಂಚ ಹಾಡು-ಹರಟೆಯನ್ನು ಮಾಡುತ್ತಾ ವಿಶ್ರಾಂತಿ ಪಡೆದೆವು. ನಂತರ ಮೂರು ಗಂಟೆಗೆ ಮಣಿಪಾಲದ ಟಿ.ಎನ್‌. ಪೈ ಸಂಸ್ಥೆಗೆ ಭೇಟಿ ಕೊಟ್ಟೆವು. ಅಲ್ಲಿ ಸಂಗ್ರಹಿಸಿದ್ದ ಮಾನವನ ಹಲವು ವಯೋಮಾನದ ದೇಹ ರಚನೆಗಳ ಕುರಿತು ಅಧ್ಯಾಪಕರು ನೀಡುತ್ತಿದ್ದ ಮಾಹಿತಿಯನ್ನು ಕೇಳುತ್ತಾ ಮುಂದೆ ಸಾಗಿದೆವು. ಅಲ್ಲೇ ಹತ್ತಿರದಲ್ಲಿದ್ದ ನಕ್ಷತ್ರ ವೀಕ್ಷಣಾಲಯವನ್ನು ವೀಕ್ಷಿಸಿ ತಾರಾಮಂಡಲದಲ್ಲಿನ ವೈವಿಧ್ಯತೆಗೆ ಮಾರುಹೋದೆವು. ದಾರಿ ಮಧ್ಯೆ ಸಿಕ್ಕಿದ ಕೆ.ಎಂ.ಎಫ್. ಹಾಲಿನ ಸೊಸೈಟಿಯನ್ನು ವೀಕ್ಷಿಸಿ ಅಲ್ಲಿ ನೀಡಿದ “ಲಸ್ಸಿ’ಯ ಸವಿಯನ್ನು ಸವಿದೆವು. ನಂತರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಕ್ಕೆ ಬಂದು ಲಿಂಗಸ್ವರೂಪಿ ಶಿವನಿಗೆ ನಮಸ್ಕರಿಸಿ ಪ್ರಸಾದವನ್ನು ಪಡೆದು ಅಲ್ಲಿನ ರಾತ್ರಿಯ ಸೊಬಗನ್ನು ನೋಡಿ ಆನಂದಿಸಿದೆವು. ನಂತರ ತುಸುಕಾಲ ಶಾಪಿಂಗ್‌ ಮಾಡಿ, ರಾತ್ರಿಯ ಭೋಜನವನ್ನು ಪಡೆದು ಬಸ್‌ ಹತ್ತಿ ಆನಂದಿಸುತ್ತಾ, ಪ್ರವಾಸದ ಸವಿನೆನಪುಗಳೊಂದಿಗೆ ಶಾಲಾ ವಠಾರವನ್ನು ತಲುಪಿದೆವು. ನನಗಾಗಿ ಕಾಯುತ್ತಾ ಇದ್ದ ನನ್ನ ತಾಯ್ತಂದೆಯರೊಂದಿಗೆ ನಾನೂ ಮನೆಗೆ ಬಂದು ಸೇರಿದೆ.
ನನ್ನ ಈ ಪ್ರವಾಸದ ಅನುಭವಗಳ ಸವಿನೆನಪುಗಳನ್ನು ತಂದೆ-ತಾಯಿಯರ ಜತೆ ಹಂಚಿಕೊಂಡು ಮತ್ತೂಮ್ಮೆ ಖುಷಿಪಟ್ಟೆ.

ನಯನಾ ಜಿ.ಎಸ್‌.
ದ್ವಿತೀಯ ಬಿ. ಎ. ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ

Advertisement

Udayavani is now on Telegram. Click here to join our channel and stay updated with the latest news.

Next