Advertisement

ಇದು “ಒಂದು ಮತ’ದ ಕತೆ

06:04 PM Apr 16, 2019 | Lakshmi GovindaRaju |

ಬೆಂಗಳೂರು: ಪ್ರಜಾಪ್ರಭುತ್ವ ಎಂಬ ಭವ್ಯ ಬಂಗಲೆಗೆ ಮತಗಳೇ ಅಡಿಪಾಯ. ಕಟ್ಟಡ ಗಟ್ಟಿಯಾಗಿರಲು ಒಂದೊಂದು ಇಟ್ಟಿಗೆಯೂ ಮುಖ್ಯ. ಅದರಂತೆ ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಒಂದೊಂದು ಓಟೂ ಸಹ ನಿರ್ಣಾಯಕವಾಗುತ್ತದೆ.

Advertisement

ಜನತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಓಟಿಗೂ ಅದರದೇ ಆದ ಮೌಲ್ಯವಿದೆ. ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧರಿಸುವುದು ಸಹ ಈ ಮತಗಳೇ. ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿ ಅಚ್ಚರಿ ಮತ್ತು ಆಘಾತದ ಫ‌ಲಿತಾಂಶ ನೀಡುವ ಶಕ್ತಿ ಇರುವುದು ಈ ಮತಗಳಿಗೆ.

ದೇಶ ಮತ್ತು ರಾಜ್ಯದ ಚುನಾವಣಾ ಇತಿಹಾಸದಲ್ಲಿ ಓಟುಗಳು ಅಚ್ಚರಿ ಮತ್ತು ಆಘಾತದ ಫ‌ಲಿತಾಂಶ ಕೊಟ್ಟ ಅನೇಕ ಉದಾಹರಣೆಗಳಿವೆ. ಕೇವಲ ಒಂದು ಮತದಿಂದ ಸೋತವರು, ಅತಿ ಕಡಿಮೆ ಅಂತರದಿಂದ ಗೆದ್ದವರ ಕಥೆ ಮತ್ತು ವ್ಯಥೆಗೆ ಸುದೀರ್ಘ‌ ಇತಿಹಾಸವಿದೆ.

ಒಂದು ಓಟಿನ ಮಹತ್ವ ಎಷ್ಟು ಅನ್ನುವುದು ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಗೊತ್ತಾಗಿದ್ದು 2004ರಲ್ಲಿ. ಆಗ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕೇವಲ ಒಂದು ಮತದಿಂದ ಸೋತ ಜೆಡಿಎಸ್‌ನ ಎ.ಆರ್‌.ಕೃಷ್ಣಮೂರ್ತಿ ಇತಿಹಾಸ ಬರೆದು ಬಿಟ್ಟರು.

ಕಾಂಗ್ರೆಸ್‌ನಿಂದ ಗೆದ್ದ ಆರ್‌.ಧ್ರುವನಾರಾಯಣ 40,752 ಮತಗಳನ್ನು ಪಡೆದಿದ್ದರೆ, ಕೃಷ್ಣಮೂರ್ತಿ 40, 751 ಓಟುಗಳನ್ನು ಪಡೆದು ಕೇವಲ ಒಂದು ಓಟಿನ ಅಂತರದಿಂದ ಸೋತಿದ್ದರು. ವಿಪರ್ಯಾಸವೆಂದರೆ ಆ ದಿನ ಅವರ ವಾಹನ ಚಾಲಕ ಮತ ಚಲಾವಣೆ ಮಾಡಿರಲಿಲ್ಲ.

Advertisement

ಅದೇ ರೀತಿ, 2008ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ಸಿ.ಪಿ.ಜೋಶಿಯವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದರು.

ಆದರೆ, ದುರಾದೃಷ್ಟವಶಾತ್‌ ಜೋಶಿಯವರು ಕೇವಲ ಒಂದು ಓಟಿನಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣಸಿಂಗ್‌ ಚೌಹಾಣ್‌ ವಿರುದ್ಧ ಸೋತಿದ್ದರು. ಇಲ್ಲೂ ವಿಪರ್ಯಾಸದ ಸಂಗತಿಯೆಂದರೆ ಮತದಾನದ ಸಮಯದಲ್ಲಿ ಜೋಶಿಯವರ ಪತ್ನಿ, ಮಗಳು ಹಾಗೂ ವಾಹನ ಚಾಲಕ ದೇವಸ್ಥಾನಕ್ಕೆ ಹೋಗಿದ್ದರು.

ಕಡಿಮೆ ಅಂತರದಿಂದ ಸೋತವರ ಇತಿಹಾಸ: ರಾಜ್ಯದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅಂತರದಿಂದ ಸೋತವರು ಅನೇಕರಿದ್ದಾರೆ. 1978ರಿಂದ 2018ರವರೆಗಿನ ವಿಧಾನಸಭಾ ಚುನಾವಣೆಗಳಲ್ಲಿ 1ರಿಂದ 100ರೊಳಗಿನ ಅಂತರದಲ್ಲಿ 15 ಮಂದಿ ಗೆದ್ದಿದ್ದಾರೆ.

ಅದೇ ರೀತಿ, 1967ರಿಂದ 2014ರವರೆಗಿನ ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿ ಸಾವಿರ ಮತಗಳ ಅಂತರದಿಂದ ನಾಲ್ಕು ಮಂದಿ ಗೆದ್ದಿದ್ದಾರೆ. ಇಲ್ಲಿ ಗೆದ್ದವರು ಮತ್ತು ಸೋತವರಿಗೆ ಒಂದೊಂದು ಮತದ ಮಹತ್ವ ಏನು ಅನ್ನುವುದು ಚೆನ್ನಾಗಿ ಮನವರಿಕೆಯಾಗಿದೆ. ನಾವು ಹಾಕುವ ಒಂದೊಂದು ಮತಕ್ಕೂ ಎಷ್ಟೊಂದು ಮಹತ್ವ ಹಾಗೂ ಮೌಲ್ಯವಿದೆ ಅನ್ನುವುದನ್ನು ಈ ಫ‌ಲಿತಾಂಶಗಳಿಂದ ಅರ್ಥ ಮಾಡಿಕೊಳ್ಳಬೇಕು.

ಘಟಾನುಘಟಿಗಳ ಸೋಲು: ಸತತ ಏಳು ಬಾರಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್‌ ಅವರು ಎಂಟನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಗೆಲುವಿನ ನಾಗಲೋಟಕ್ಕೆ ಬ್ರೆಕ್‌ ಹಾಕಿದ್ದು ಕೇವಲ 70 ಮತಗಳಷ್ಟೇ.

ಅದೇ ರೀತಿ, ರಾಜ್ಯದ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಅತ್ಯಂತ ಜಿದ್ದಾಜಿದ್ದಿನ ಚುನಾವಣೆ ಎಂದು ಹೇಳಲಾಗುವ 2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಗೆದ್ದಿದ್ದು ಕೇವಲ 257 ಮತಗಳ ಅಂತರದಿಂದ.

1 ಮತದ ಅಂತರದಿಂದ ಸೋಲು: ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರ 1999ರಲ್ಲಿ ಕೇವಲ 1 ಮತದ ಅಂತರದಿಂದ ವಿಶ್ವಾಸಮತ ಕಳೆದುಕೊಂಡಿದ್ದು, ಪ್ರಪಂಚದ ಸಂಸದೀಯ ವ್ಯವಸ್ಥೆಯಲ್ಲಿ ಸಾಕ್ಷಿಯಾಗಿ ಉಳಿದು ಬಿಟ್ಟಿತು.

ವಿಧಾನಸಭೆಯಲ್ಲಿ ಅತಿ ಕಡಿಮೆ ಅಂತರದ ಗೆಲುವು
ವರ್ಷ ಅಭ್ಯರ್ಥಿ ಕ್ಷೇತ್ರ ಪಕ್ಷ ಅಂತರ
-2004 ಆರ್‌. ಧ್ರುವನಾರಾಯಣ ಸಂತೆಮರಹಳ್ಳಿ ಕಾಂಗ್ರೆಸ್‌ 1
-2004 ಬಿ. ಶಿವರಾಂ ಗಂಡಸಿ ಕಾಂಗ್ರೆಸ್‌ 18
-2008 ದಿನಕರ ಶೆಟ್ಟಿ ಕುಮಟಾ ಜೆಡಿಎಸ್‌ 20
-1983 ಅಪ್ಪಣ್ಣ ಹೆಗ್ಡೆ ಬೈಂದೂರು ಜನತಾ ಪಾರ್ಟಿ 24
-1985 ಬಿ.ಬಿ. ನಿಂಗಯ್ಯ ಮೂಡಿಗೆರೆ ಜನತಾ ಪಾರ್ಟಿ 33
-1983 ಎಂ. ಮಹದೇವು ನಂಜನಗೂಡು ಕಾಂಗ್ರೆಸ್‌ 45
-1978 ಜಿ.ಎಚ್‌. ಅಶ್ವಥರೆಡ್ಡಿ ಜಗಳೂರು ಜನತಾಪಾರ್ಟಿ 59
-2008 ದೊಡ್ಡನಗೌಡ ನರಿಬೋಳ ಜೇವರ್ಗಿ ಬಿಜೆಪಿ 70
-1985 ಪಟಮಕ್ಕಿ ರತ್ನಾಕರ ತೀರ್ಥಹಳ್ಳಿ ಕಾಂಗ್ರೆಸ್‌ 74
-1985 ಕೆ.ಬಿ.ಶಾಣಪ್ಪ ಶಹಬಾದ್‌ ಸಿಪಿಐ 75
-1985 ಸಿ.ಪಿ.ಮೂಡಲಗಿರಿಯಪ್ಪ ಸಿರಾ ಕಾಂಗ್ರೆಸ್‌ 82
-1985 ಎಚ್‌.ಜಿ. ಗೋವಿಂದೇಗೌಡ ಶೃಂಗೇರಿ ಜನತಾಪಾರ್ಟಿ 83
-1983 ಡಿ.ಜಿ.ಜಮಾದಾರ್‌ ಚಿಂಚೊಳ್ಳಿ ಕಾಂಗ್ರೆಸ್‌ 88
-1989 ಎ.ಕೆ.ಅನಂತಕೃಷ್ಣ ಶಿವಾಜಿನಗರ ಕಾಂಗ್ರೆಸ್‌ 91
-1985 ಎ. ಕೃಷ್ಣಪ್ಪ ವರ್ತೂರು ಕಾಂಗ್ರೆಸ್‌ 98

ಲೋಕಸಭೆಯಲ್ಲಿ ಅತಿ ಕಡಿಮೆ ಅಂತರದ ಗೆಲುವು
ವರ್ಷ ಅಭ್ಯರ್ಥಿ ಕ್ಷೇತ್ರ ಪಕ್ಷ ಅಂತರ
-1967 ಕೆ.ಲಕ್ಕಪ್ಪ ತುಮಕೂರು ಪಿಎಸ್‌ಪಿ 261
-1991 ಚೆನ್ನಯ್ಯ ಒಡೆಯರ್‌ ದಾವಣಗೆರೆ ಕಾಂಗ್ರೆಸ್‌ 455
-2004 ವೆಂಕಟೇಶ್‌ ನಾಯಕ್‌ ರಾಯಚೂರು ಕಾಂಗ್ರೆಸ್‌ 508
-2014 ಬಿ.ವಿ.ನಾಯಕ್‌ ರಾಯಚೂರು ಕಾಂಗ್ರೆಸ್‌ 1,499

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next