Advertisement

ಈ ಮೇಲ್ಸೇತುವೆ ಈಗ ಡೇಂಜರ್‌ ಝೋನ್‌!

01:21 AM Jun 22, 2019 | Lakshmi GovindaRaj |

ಬೆಂಗಳೂರು: ಸಾಮಾನ್ಯವಾಗಿ ನಗರದಲ್ಲಿ ವಾಹನಗಳ ವೇಗಮಿತಿ ಗಂಟೆಗೆ 15ರಿಂದ 20 ಕಿ.ಮೀ. ಆದರೆ, ವಾಹನಗಳು ಈ ಮೇಲ್ಸೇತುವೆ ಏರುತ್ತಿದ್ದಂತೆ ವೇಗಮಿತಿ ಗಂಟೆಗೆ 60ರಿಂದ 90 ಕಿ.ಮೀ. ಆಗುತ್ತದೆ. ಈ “ಅವಸರವೇ’ ಅಪಘಾತಕ್ಕೆ ಕಾರಣವಾಗುತ್ತಿದೆ!

Advertisement

ಹೌದು ಯಶವಂತಪುರದ ಪಂಡಿತ್‌ ದೀನದಯಾಳ್‌ ಉಪಾದ್ಯಾಯ ಮೇಲ್ಸೇತುವೆ ಈಗ “ಡೇಂಜರ್‌ ಝೋನ್‌’. ಪದೇ ಪದೆ ಒಂದೇ ಕಡೆ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಉದ್ದೇಶಿತ ಮೇಲ್ಸೇತುವೆಯ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ ಮೌಲ್ಯಮಾಪನ ನಡೆಸಿತು. ಆಗ ಯಶವಂತಪುರ ಮೇಲ್ಸೇತುವೆಯು ದೋಷ ಪೂರಿತವಾಗಿರುವುದು ಪತ್ತೆಯಾಗಿದೆ.

ಮಲ್ಲೇಶ್ವರದಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆಯಲ್ಲಿ ರಸ್ತೆಯು 90 ಡಿಗ್ರಿ ತಿರುವು ಹೊಂದಿದೆ. ಅಷ್ಟೇ ಅಲ್ಲ ತಿರುವಿನ ಬಳಿ ರಸ್ತೆಯಲ್ಲಿ ಸೂಪರ್‌ ಎಲಿವೇಷನ್‌ (ರಸ್ತೆಯ ಒಂದು ಪಾರ್ಶ್ವವು ಇನ್ನೊಂದಕ್ಕಿಂತ ಸ್ವಲ್ಪ ಎತ್ತರ ಇರುವಂತಹ ರಸ್ತೆ ವಿನ್ಯಾಸ) ಕೂಡ ಇಲ್ಲ. ಪರಿಣಾಮ ಅಪಘಾತಗಳು ಪುನರಾವರ್ತನೆ ಆಗುತ್ತಿವೆ ಎಂದು ಐಐಎಸ್ಸಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಮೇಲ್ಸೇತುವೆಯ ಎರಡೂ ಬದಿಯಲ್ಲಿ ಸಂಪೂರ್ಣ ಇಳಿಜಾರು ಇದೆ. ಅದು ಎಷ್ಟರಮಟ್ಟಿಗೆ ಅಂದರೆ ಚಾಲಕನಿಗೆ ಎದುರಿನ ರಸ್ತೆ ಕೂಡ ಕಾಣುವುದಿಲ್ಲ. 90 ಡಿಗ್ರಿ ತಿರುವು ದಾಟಿ ಬರುವ ವಾಹನ ಏಕಾಏಕಿ ಇಳಿಜಾರಿನಲ್ಲಿ ವೇಗ ಪಡೆದುಕೊಳ್ಳುತ್ತದೆ. ಆಗ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಆಗುತ್ತಿದೆ.

ವಾಹನಗಳು ಗಂಟೆಗೆ 30 ಕಿ.ಮೀ. ವೇಗದಲ್ಲಿ ಸಾಗುವಂತೆ ಈ ಮೇಲ್ಸೇತುವೆ ನಿರ್ಮಿಸಲಾಗಿದೆ. ಆದರೆ, ಪೀಕ್‌ ಅವರ್ ಇಲ್ಲದ ವೇಳೆ ವೇಗಮಿತಿ ಗಂಟೆಗೆ 60 ಮತ್ತು ಕೆಲವೊಮ್ಮೆ 90 ಕಿ.ಮೀ. ವೇಗದಲ್ಲಿ ಸಾಗುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

Advertisement

ರಾತ್ರಿ ವೇಳೆ ಅದರಲ್ಲೂ ಭಾರಿ ವಾಹನಗಳು ಹೆಚ್ಚು ಅಪಘಾತಕ್ಕೀಡಾಗುತ್ತಿವೆ. ಅನೇಕ ಚಾಲಕರೂ ಇದಕ್ಕೆ ಬಲಿ ಆಗಿದ್ದಾರೆ. ಈಚೆಗೆ ಮಟನ್‌ ಮತ್ತು ಮಶ್ರೂಮ್‌ ಸಾಗಿಸುತ್ತಿದ್ದ ವಾಹನಗಳು ಅಪಘಾತಕ್ಕೀಡಾಗಿದ್ದವು ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಭಾರಿ ವಾಹನಗಳು ವೇಗವಾಗಿ ಸಾಗಿ ಬರುವಾಗ ತಿರುವಿನಲ್ಲಿ ರಸ್ತೆ ಅಂಚಿನಿಂದ ಹೊರಕ್ಕೆ ಚಲಿಸುತ್ತಿದ್ದವು.

ಇತ್ತೀಚೆಗೆ ಇಲ್ಲಿ ಅಣಬೆ ಸಾಗಿಸುತ್ತಿದ್ದ ಲಾರಿ ಮೇಲ್ಸೇತುವೆಯಿಂದ ಕೆಳಗೆ ಉರುಳಿಬಿದ್ದು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಯನ ಕೈಗೊಳ್ಳಲಾಗಿತ್ತು. ಮೇಲ್ಸೇತುವೆ ವಿನ್ಯಾಸದಲ್ಲಿ ದೋಷ ಇರುವುದು ಕಂಡುಬಂದಿದೆ ಎಂದು ಐಐಎಸ್ಸಿಯ ಸುಸ್ಥಿರ ಸಾರಿಗೆ ವ್ಯವಸ್ಥೆ ಎಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್‌ ವರ್ಮಾ ತಿಳಿಸಿದರು.

ಅಪಘಾತಗಳಿಗೆ ಕಡಿವಾಣ ಹಾಕಬೇಕಾದರೆ, ಮುಖ್ಯವಾಗಿ ಈ ಮಾರ್ಗದಲ್ಲಿ ವಾಹನಗಳ ವೇಗಕ್ಕೆ ಬ್ರೇಕ್‌ ಹಾಕಬೇಕು. ಈ ನಿಟ್ಟಿನಲ್ಲಿ ಈ ಮೇಲ್ಸೇತುವೆ ಆರಂಭವಾಗುವ ಹಾಗೂ ಅಂತ್ಯವಾಗುವಲ್ಲಿ ರಸ್ತೆಯ ರಬ್ಬಲ್‌ ಸ್ಟ್ರಿಪ್‌ (ರಸ್ತೆ ಉಬ್ಬುಗಳು)ಗಳನ್ನು ಅಳವಡಿಸಬೇಕು.

ಭಾರಿ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಎತ್ತರ ಸೀಮಿತಗೊಳಿಸುವ ಬ್ಯಾರಿಕೇಡ್‌ ಹಾಕಬೇಕು. ರಾತ್ರಿ ಹೊತ್ತಿನಲ್ಲೂ ವಾಹನ ಚಾಲಕರಿಗೆ ಕಾಣಿಸುವಂತೆ ರಸ್ತೆ ಸುರಕ್ಷತಾ ಸಂಕೇತಗಳನ್ನೂ ಅಳವಡಿಸಬೇಕು ಎಂದು ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.

ತಿಂಗಳ ಹಿಂದೆಯೇ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗಿದೆ. ಇದಕ್ಕೆ ಸಂಚಾರ ಪೊಲೀಸ್‌ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲವು ಪೂರಕ ಕ್ರಮ ಕೈಗೊಂಡಿದ್ದಾರೆ. ಆದರೆ, ಎಲ್ಲ ಶಿಫಾರಸುಗಳನ್ನು ಅನುಷ್ಠಾನಗೊಳಿಸಿಲ್ಲ.
-ಪ್ರೊ.ಆಶಿಶ್‌ ವರ್ಮಾ, ಐಐಎಸ್ಸಿ ಸುಸ್ಥಿರ ಸಾರಿಗೆ ವ್ಯವಸ್ಥೆ ವಿಭಾಗದ ಸಹ ಪ್ರಾಧ್ಯಾಪಕರು

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next