Advertisement

ಹಚ್ಚಹಸುರಿನ ಮಧ್ಯೆ ಧ್ಯಾನದಲ್ಲಿ ರಾಮೇಶ್ವರ

01:32 AM Apr 18, 2019 | Sriram |

ದಾವಣಗೆರೆಯ ಜಿಲ್ಲೆ, ಹೊನ್ನಾಳಿ ತಾಲೂಕಿನಲ್ಲಿರುವ ತೀರ್ಥ ರಾಮೇಶ್ವರ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳ. ಶ್ರೀರಾಮನಿಂದ ತೀರ್ಥ ಮತ್ತು ಈಶ್ವರನ ಮೂರ್ತಿ ಉದ್ಭವವಾಗಿದ್ದರಿಂದ ಈ ಕ್ಷೇತ್ರಕ್ಕೆ ತೀರ್ಥರಾಮೇಶ್ವರ ಎಂದು ಹೆಸರು ಬಂದಿದೆ ಎನ್ನಲಾಗಿದೆ.

Advertisement

ಹಚ್ಚ ಹಸುರಿನ ಚಾದರವನ್ನು ಹೊದ್ದ ಬೆಟ್ಟ- ಗುಡ್ಡಗಳು, ದಾರಿಯುದ್ದಕ್ಕೂ ಹಸಿರ ಝರಿಯಂತೆ ಕಾಣುವ ಗದ್ದೆಗಳು, ಕಾಯಕದಲ್ಲಿಯೇ ತಲ್ಲೀನರಾಗಿ ಉಳುಮೆ ಮಾಡುತ್ತಿರುವ ರೈತಾಪಿ ಜನರು. ತಣ್ಣಗೆ ಬೀಸುವ ಕುಳಿರ್ಗಾಳಿ ಇವೆಲ್ಲ ಕಾಣಸಿಗುವುದು ತೀರ್ಥ ರಾಮೇಶ್ವರಕ್ಕೆ ತೆರಳಬೇಕಾದ ದಾರಿಯಲ್ಲಿ.

ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮವನ್ನು ಹಾಯ್ದು ಅದರ ಅಂಚಿಗೆ ಬಂದು ನಿಂತಾಗ ಕಣ್ಣೆದುರು ದೈತ್ಯಾಕಾರದ ಹಸಿರು ಬೆಟ್ಟ, ಅದರುದ್ದಕ್ಕೂ ದಟ್ಟವಾದ ಕಾಡು ತಡೆದು ನಿಲ್ಲಿಸುತ್ತದೆ. ಅನತಿ ದೂರ ಕೃತಕ ಮೆಟ್ಟಿಲುಗಳನ್ನು ಏರುತ್ತ ಹೋಗುತ್ತಿದ್ದಂತೆ ಏದುಸಿರು ಆರಂಭವಾಗುತ್ತದೆ. ಗಮ್ಯವನ್ನು ತಲುಪಿದೊಡನೆ ತೀರ್ಥ ರಾಮೇಶ್ವರ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಶಾಂತ, ಸುಂದರ ನಿಸರ್ಗ ದಣಿವನ್ನೆಲ್ಲ ಮರೆಸಿಬಿಡುತ್ತದೆ.

ದೇವಸ್ಥಾನದ ಆವರಣದಲ್ಲಿ ಸಿಗುವ ಪುಟ್ಟ ನೀರಿನ ಹೊಂಡ ಇಲ್ಲಿನ ವಿಶೇಷ. ಈ ಹೊಂಡಕ್ಕೆ ನೀರು ಗುಪ್ತವಾಗಿ ಕಾಶಿಯಿಂದ ಹರಿದು ಬರುತ್ತದೆ ಎಂಬ ನಂಬಿಕೆ ಇದೆ. ಈ ನೀರು ಚಲನಶೀಲವಲ್ಲದಿದ್ದರೂ ಎಷ್ಟೇ ದಿನಗಳಾದರೂ ಮಲಿನವಾಗುವುದಿಲ್ಲ. ಇಲ್ಲಿನ ನೀರಿಗೆ ವಿಶಿಷ್ಟವಾದ ರುಚಿ ಇದ್ದು, ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಅದು ಹೊಂದಿದೆ ಎಂಬುದು ನಂಬಿಕೆ. ಈ ಪುಟ್ಟ ಹೊಂಡ ಯಾವತ್ತೂ ತುಂಬಿ ನೀರು ಹೊರ ಚೆಲ್ಲುವುದಿಲ್ಲ. ಇದರಲ್ಲಿನ ನೀರನ್ನು ಯಾವುದೇ ಪ್ರಮಾಣದಲ್ಲಿ ಮೇಲೆತ್ತಿಕೊಂಡಾಗಲೂ ನೀರಿನ ಮಟ್ಟದಲ್ಲಿ ವ್ಯತ್ಯಾಸವಾಗುವುದಿಲ್ಲವೆಂದು ಈ ದೇವಸ್ಥಾನದ ಅರ್ಚಕರಾದ ಶಿವಕುಮಾರ್‌ ಹೇಳುತ್ತಾರೆ.

ಮುಖ್ಯ ದೇಗುಲದಲ್ಲಿ ಕಂಡು ಬರುವ ಲಿಂಗವು ಉದ್ಭವ ಮೂರ್ತಿಯಾಗಿದೆ. ರಾಮ ಸೀತೆಯರು ವನವಾಸದಲ್ಲಿದ್ದಾಗ ಈ ಸ್ಥಳಕ್ಕೆ ಬಂದಿದ್ದರು. ಸೀತೆಗೆ ಬಾಯಾರಿಕೆಯಾಗಿ ನೀರಿಗಾಗಿ ರಾಮನನ್ನು ಯಾಚಿಸುತ್ತಾಳೆ. ಆಗ ರಾಮನು ಯಾವ ಸ್ಥಳದ ನೀರು ಬೇಕೆಂದಾಗ ಕಾಶಿಯ ನೀರನ್ನು ಕೇಳುತ್ತಾಳೆ. ಆಗ ರಾಮನು ಈಗಿರುವ ಹೊಂಡವನ್ನು ಕಟ್ಟಿ ಅಲ್ಲಿಗೆ ಕಾಶಿಯಿಂದ ನೀರು ಹರಿದು ಬರುವಂತೆ ಮಾಡುತ್ತಾನೆ. ಅನಂತರ ಸೀತೆ ಪೂಜಿಸಲು ಮೂರ್ತಿಯನ್ನು ಬೇಡಿದಾಗ ಲಿಂಗೋದ್ಭವವನ್ನು ಮಾಡಿದನೆಂದು ಪೂರ್ವಜರು ಹೇಳುತ್ತಾರೆ.

Advertisement

ನಮ್ಮಲ್ಲಿ ಬ್ರಹ್ಮನ ದೇವಾಲಯಗಳು ಅತೀ ವಿರಳವಾಗಿ ಕಂಡು ಬರುತ್ತವೆ. ದೇವಸ್ಥಾನದ ಎಡ ಪಾರ್ಶ್ವದಲ್ಲಿ ಚತುರ್ಮುಖ ಬ್ರಹ್ಮನ ಪುಟ್ಟ ದೇವಾಲಯವೊಂದಿದ್ದು, ಮೂರು ಮುಖಗಳನ್ನು ಎದುರಿನಿಂದ ನೋಡಬಹುದು. ನಾಲ್ಕನೇ ಮುಖವು ಹಿಂದೆ ಇರುವ ದರ್ಪಣದಲ್ಲಿ ಗೋಚರಿಸುತ್ತದೆ.
ವಿಜಯನಗರದ ಅರಸರು 1339ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದರು. ಅನಂತರ ಬಹಮನಿ ಸುಲ್ತಾನರ ಆಡಳಿತದಲ್ಲಿ ಈ ದೇಗುಲವು ದಾಳಿಗೆ ಒಳಗಾಯಿತು. ಪುನಃ ಮೈಸೂರು ಅರಸರ ಆಡಳಿತಾವಧಿಯಲ್ಲಿ ಪುನರುಜ್ಜೀವನಗೊಂಡಿತು ಈ ತೀರ್ಥ ರಾಮೇಶ್ವರ ಎನ್ನುತ್ತದೆ ಇತಿಹಾಸ. ರಾಮನಿಂದ ತೀರ್ಥ ಮತ್ತು ಈಶ್ವರ ಉದ್ಭವಗೊಂಡ ಕಾರಣಕ್ಕೆ ಈ ಕ್ಷೇತ್ರಕ್ಕೆ ತೀರ್ಥ ರಾಮೇಶ್ವರ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ. ದೀಪಾವಳಿ, ದಸರಾ, ಸಂಕ್ರಾಂತಿಯಂಥ ವಿಶೇಷ ದಿನಗಳಲ್ಲಿ ಅದ್ದೂರಿ ಪೂಜೆ ನಡೆಯುತ್ತದೆ.

ತೀರ್ಥ ರಾಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಆಡಳಿತವನ್ನು ಸ್ಥಳೀಯ ಟ್ರಸ್ಟ್‌ ನೋಡಿಕೊಳ್ಳುತ್ತದೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ದೈವಿಕ ತಾಣವಾದ ಈ ಕ್ಷೇತ್ರವು ಸೂಕ್ತ ನಿರ್ವಹಣೆ ಇಲ್ಲದೆ ಕಡೆಗಣಿಸಲ್ಪಟ್ಟಿರುವುದು ಇಲ್ಲಿಗೆ ಬರುವ ಪ್ರವಾಸಿಗರ ಮನಕಲಕುವಂತೆ ಮಾಡುತ್ತದೆ.

ರೂಟ್‌ ಮ್ಯಾಪ್‌

– ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿದೆ ದೇವಸ್ಥಾನ.
– ಶಿವಮೊಗ್ಗದಿಂದ 39 ಕಿ.ಮೀ. ಶಿಕಾರಿಪುರ ಮಾರ್ಗವಾಗಿ ಹೋಗಬಹುದು.
– ಮಂಗಳೂರಿನಿಂದ ಹೊನ್ನಾಳಿಗೆ ಸುಮಾರು 245 ಕಿ.ಮೀ. ಆಗುತ್ತದೆ.
– ಹತ್ತಿರದಲ್ಲಿ ನೀರು, ಆಹಾರದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿಗೆ ಬರುವಾಗ ಇದಕ್ಕೆ ವ್ಯವಸ್ಥೆ ಮಾಡಿಕೊಂಡು ಬರಬೇಕು.
– ಗ್ರಾಮೀಣ ಪ್ರದೇಶವಾದ್ದರಿಂದ ವಾಹನ ಸೌಲಭ್ಯಗಳೂ ಸರಿಯಾಗಿಲ್ಲ. ಸ್ವಂತ ಅಥವಾ ಬಾಡಿಗೆ ವಾಹನದ ಮೂಲಕ ತೆರಳಬಹುದು.

-  ಗೌರಿ ಚಂದ್ರ ಕೇಸರಿ

Advertisement

Udayavani is now on Telegram. Click here to join our channel and stay updated with the latest news.

Next