Advertisement

Thirthahalli; ನಾಳೆ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥರ ಪುರಪ್ರವೇಶ

07:39 PM Dec 29, 2023 | Vishnudas Patil |

ತೀರ್ಥಹಳ್ಳಿ: ಜಗದ್ಗುರು ಶ್ರೀಮಧ್ವಾಚಾರ್ಯರು ಭಕ್ತರ ಕಲ್ಯಾಣಕ್ಕಾಗಿ ಉಡುಪಿಯಲ್ಲಿ ಎಂಟು ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಸರ್ವಜ್ಞಪೀಠಾರೋಹಣವನ್ನು ನಾಲ್ಕನೇ ಬಾರಿಗೆ ಮಾಡಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯರಾದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರೊಡನೆ ಶನಿವಾರ( ಡಿ 30) ಸಂಜೆ ತೀರ್ಥಹಳ್ಳಿಗೆ ಆಗಮಿಸುವರು.

Advertisement

ಭಾನುವಾರ(ಡಿ 31) ಬೆಳಗ್ಗೆ 9.30 ಕ್ಕೆ ಕಾರ್ಯಕ್ರಮದ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಮುಂದಾಳತ್ವದಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲು ಧರ್ಮಸ್ಥಳ ಸ್ವಸಹಾಯ ಸಂಘದ ಭಜನಾ ಮಂಡಳಿಯ ಸುಮಾರು 300 ಕ್ಕೂ ಹೆಚ್ಚು ಕಾರ್ಯಕರ್ತರಿಂದ ಪಟ್ಟಣದ ಕೊಪ್ಪ ಸರ್ಕಲ್ ನಿಂದ ಕುರುವಳ್ಳಿಯ ಪುತ್ತಿಗೆ ಮಠದ ವರೆಗೆ ಪೂರ್ಣಕುಂಭ ಮೆರವಣಿಗೆಯೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಗುವುದು.

ಮಠದ ಪಕ್ಕದಲ್ಲೇ ಇರುವ ಆರ್‌ಎಸ್‌ಬಿ ಸಮಾಜದ ಸಭಾಭವನದಲ್ಲಿ ಭಕ್ತರಿಂದ ಸಾಮೂಹಿಕ ಪಾದಪೂಜೆ ಹಾಗೂ ಸಂಸ್ಥಾನ ಮಹಾಪೂಜೆ ಹಾಗೂ ಗುರುಗಳಿಂದ ಅನುಗ್ರಹ ಸಂದೇಶ ನಡೆಯಲಿದೆ. ಮಧ್ಯಾಹ್ನ ತೀರ್ಥ ಪ್ರಸಾದ ಮತ್ತು ಭೋಜ‌ನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಕೋಟಿ ಗೀತ ಲೇಖನಾ ಯಜ್ಞದ ಅಭಿಯಾನ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕೃಷ್ಣ-ಪಾಂಡುರಂಗ ವಿಟ್ಠಲ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಪುತ್ತಿಗೆ ಮಠದ ವ್ಯವಸ್ಥಾಪಕರು ಮತ್ತು ಅರ್ಚಕ ವೃಂದದವರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next