Advertisement

ಅವರು ಸಿಕ್ಕರದೇ ಪೂರ್ವಜನ್ಮದ ಪುಣ್ಯ

11:40 AM Nov 25, 2018 | |

ಸರ್‌, ಒಂದು ಸಂದರ್ಶನ ಬೇಕು!’ “ಏನೂ ಬೇಕಾಗಿಲ್ಲ, ಹೋಗಯ್ಯ’ ನಿಮ್ಮದೊಂದು ಇಂಟರ್‌ವ್ಯೂ ಬೇಕು. ಆಗಲ್ಲ ಹೋಗ್ರೀ, ನಾನೇನೋ ಹೇಳ್ಳೋದು. ನೀವೇನೋ ಬರ್ಕೊಳ್ಳೋದು, ಈ ಸೌಭಾಗ್ಯಕ್ಕೆ ಯಾಕ್ರೀ ಇಂಟರ್‌ವ್ಯೂ ಕೊಡಬೇಕು!’ ಅಂಬರೀಶ್‌ ಹೀಗೆ ಮಾತಾಡಲು ಶುರುಮಾಡಿದ್ದಕ್ಕೂ ಅವರಿಗೆ ಅರವತ್ತಮೂರು ವರ್ಷ ಆಗಿರೋದಕ್ಕೂ ಯಾವುದೇ ಸಂಬಂಧ ಕಲ್ಪಿಸಬೇಕಿಲ್ಲ. ಅವರು ಇದ್ದದ್ದೇ ಹಾಗೆ. ಮೊದಲಿನಿಂದಲೂ ಅವರಿಗೆ ಸಂದರ್ಶನಗಳಲ್ಲಿ ನಂಬಿಕೆ ಇಲ್ಲ. ಪತ್ರಕರ್ತರಿಗೂ ಅವರ ಸಂದರ್ಶನ ಸಿಗುತ್ತದೆ ಎಂಬ ನಂಬಿಕೆ ಅಷ್ಟಕ್ಕಷ್ಟೇ.

Advertisement

ಅವರ ಮನೆಗೆ ಹೋದಾಗ ಅವರು ಸಿಕ್ಕರೆ ಅದು ಪೂರ್ವಜನ್ಮದ ಪುಣ್ಯ. ನಾಲ್ಕು ಮಾತಾಡಿದರೆ ಅದು ಭುವನದ ಭಾಗ್ಯ. ಹೋದರೆ ಅರ್ಧ ದಿನ, ಬಂದರೆ ಸಂದರ್ಶನ ಎಂದು ಮನಸ್ಸು ಗಟ್ಟಿಮಾಡಿಕೊಂಡೇ ಅಂಬರೀಶ್‌ ಮನೆಗೆ ಪತ್ರಕರ್ತರು ಕಾಲಿಡುತ್ತಿದ್ದದ್ದು. ಇತ್ತೀಚೆಗೆ ಅದೂ ಬದಲಾಗಿತ್ತು. ಅಂಬರೀಶ್‌ ಮನೆಗೆ ಹೋಗುವುದು ಕೂಡ ಕಷ್ಟವೇ. ಒಂದು ವೇಳೆ ಹೋದಿರಿ ಅಂತಿಟ್ಟುಕೊಳ್ಳಿ, ಅಲ್ಲಿ ನೂರಾರು ಮಂದಿ ಕಾಯುತ್ತಾ ನಿಂತಿರುತ್ತಿದ್ದರು. ಮಂಡ್ಯ, ಮಳವಳ್ಳಿ, ಮೈಸೂರು ಕಡೆಯಿಂದ ಬಂದವರಿಗೆಲ್ಲ ಅವರು ದರ್ಶನ ಕೊಡಲೇಬೇಕಿತ್ತು. ಆ ದರ್ಶನದ ನಡುವೆ ಸಂದರ್ಶನಕ್ಕೆ ಜಾಗವೆಲ್ಲಿ?

62ನೇ ಹುಟ್ಟುಹಬ್ಬದ ಹೊತ್ತಿಗೆ ಅಂಬರೀಶ್‌ ಸುಸ್ತಾಗಿದ್ದರು. ಅವರ ಆರೋಗ್ಯ ಹದಗೆಟ್ಟಿತ್ತು. 63ನೇ ಜನ್ಮದಿನದ ವೇಳೆಗೆ ಅವರು ಮತ್ತೆ ರಾಜಕಳೆಗೆ ಮರಳಿದ್ದರು. ರಾಜಕಳೆಯ ಜೊತೆ ರಾಜಕೀಯ ಕಳೆಯೂ ಬಂದಿತ್ತು. 2014ರಲ್ಲಿದ್ದ ಒಂದಷ್ಟು ಅಪವಾದ, ರಮ್ಯಾರೋಪ, ಪಕ್ಷದೋಷಗಳೆಲ್ಲ ಮಾಯವಾದಂತಿದ್ದವು. ವಸತಿ ಸಮಸ್ಯೆ ನಿವಾರಣೆಯಾಗಿತ್ತು. ಆದರೂ ಅಂಬರೀಶ್‌ ಸುದ್ದಿಯಲ್ಲಿ ಅಷ್ಟಾಗಿ ಇರಲಿಲ್ಲ. ಸಿನಿಮಾದಲ್ಲಂತೂ ಅವರ ಸುದ್ದಿಯೇ ಇರಲಿಲ್ಲ. ಅಪರೂಪಕ್ಕೆ ಯಾವುದಾದರೂ ಕಾರ್ಯಕ್ರಮಕ್ಕೆ ಬಂದರೆ ಅದು ಆ ದಿನದ ಭಾಗ್ಯ.

ಈ ಮಧ್ಯೆ ಅಂಬರೀಶ್‌ ಎರಡು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ದರ್ಶನ್‌ ಅಭಿನಯದ “ಅಂಬರೀಶ’ ಚಿತ್ರಕ್ಕೆ ಅವರದೇ ಹೆಸರಿತ್ತು. ಚಿತ್ರದೊಳಗೆ ಅವರು ಕೆಂಪೇಗೌಡರಾಗಿ ಮೀಸೆ ತಿರುವಿದ್ದರು. ಪ್ರೇಕ್ಷಕರು ಅವರನ್ನು ಅಷ್ಟಾಗಿ ಮೆಚ್ಚಿಕೊಂಡಂತೆ ಕಾಣಲಿಲ್ಲ. “ಬುಲ್‌ಬುಲ್‌’ ಚಿತ್ರದ ಅಂಬರೀಶ್‌ಗೂ “ಅಂಬರೀಶ’ ಚಿತ್ರದ ಅಂಬರೀಶ್‌ಗೂ ಅಜಗಜಾಂತರವಿತ್ತು. ಅದಾದ ನಂತರ ಅಂಬರೀಶ್‌ ನಟಿಸಿದ್ದು “ದೊಡ್ಮನೆ ಹುಡ್ಗ’ ಚಿತ್ರದಲ್ಲಿ. ಅದಾದ ನಂತರ ಇನ್ನು ಸಿನಿಮಾ ಒಪ್ಕೊಳ್ಳೋದಿಲ್ಲ ಅಂತ ಅಂಬರೀಶ್‌ ತಮ್ಮ ಆಪ್ತರ ಹತ್ತಿರ ಹೇಳಿಕೊಂಡಿದ್ದರಂತೆ. ಹೀಗಾಗಿ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಅಂತ ಹೊರಟಿದ್ದ ಎಸ್‌. ನಾರಾಯಣ್‌ ಕೂಡ ಸುಮ್ಮನಾಗಿದ್ದರು. 

ಅಂದೂ ಅಂಬರೀಶ್‌ ಚಿತ್ರರಂಗದ ಪಾಲಿಗಂತೂ ಬೇಕಾದಂಥ ವ್ಯಕ್ತಿಯಾಗಿದ್ದರು. ಆಗ ಚಿತ್ರೋದ್ಯಮ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ತೀವ್ರ ಬಿಕ್ಕಟ್ಟಿನಲ್ಲಿತ್ತು. ಕಾರ್ಮಿಕರು ಕಷ್ಟದಲ್ಲಿದ್ದರು. ಕಲಾವಿದರಿಗೆ ನಾಯಕರಿರಲಿಲ್ಲ. ಚಿತ್ರರಂಗಕ್ಕೂ ಸೂತ್ರಧಾರನಿರಲಿಲ್ಲ. ಅಂಬರೀಶ್‌ ಮಾರ್ಗದರ್ಶನಕ್ಕಾಗಿ ಚಿತ್ರರಂಗ ಕಾಯುತ್ತಿತ್ತು. ಆದರೆ, ಅಂಬರೀಶ್‌ ಚಿತ್ರರಂಗದ ಸಮಸ್ಯೆಗಳಿಗೆ “ವರದನಾಯಕ’ ಆಗುವುದಕ್ಕೆ ಯಾಕೋ ಮನಸ್ಸು ಮಾಡಿರಲಿಲ್ಲ. ಚಿತ್ರರಂಗದಲ್ಲಿ ತನ್ನ ಅವತಾರಕ್ಕೆ ಅಂಥ ಮಹತ್ವವಿಲ್ಲ ಎಂಬುದು ಅವರಿಗೂ ಗೊತ್ತಾದಂತಿತ್ತು.

Advertisement

ಆದರೆ, ಚಿತ್ರರಂಗದ ಸಂಕಷ್ಟಗಳನ್ನು ಬಲ್ಲ ನಾಯಕರೊಬ್ಬರು ಸಚಿವರಾಗಿದ್ದರಿಂದ, ಚಿತ್ರರಂಗಕ್ಕೆ ಬಜೆಟ್ಟಿನಲ್ಲಿ ಏನಾದರೂ ದಕ್ಕೀತೇನೋ ಎಂಬ ನಿರೀಕ್ಷೆ ಚಿತ್ರೋದ್ಯಮಕ್ಕಿತ್ತು. ಆದರೆ, ಅಂಥದ್ದೇನೂ ನಡೆಯಲಿಲ್ಲ. ಅಂಬರೀಶ್‌ ಅಲ್ಲೂ ಕೂಡ ನಿರ್ಲಿಪ್ತರಾಗಿದ್ದರು. ಆಗ ಎಲ್ಲರ ಎದುರಿದ್ದ ಪ್ರಶ್ನೆ ಅಂಬರೀಶ್‌ ಚಿತ್ರರಂಗಕ್ಕೆ ದಕ್ಕುತ್ತಾರೋ ಇಲ್ಲವೋ? “ದೊಡ್ಮನೆ ಹುಡುಗ’ ಅವರು ನಟಿಸಲಿರುವ ಕೊನೆಯ ಚಿತ್ರವಾ? ಹೊಸಬರ ನಿರ್ದೇಶನದ ಚಿತ್ರಗಳಲ್ಲಿ ನಟಿಸುವ ಆಸಕ್ತಿಯನ್ನು ಅಂಬರೀಶ್‌ ಕಳಕೊಂಡಿದ್ದಾರಾ? ಅಥವಾ ಅಂಬರೀಶ್‌ ಅವರ ಜಾಯಮಾನಕ್ಕೆ ಒಪ್ಪುವಂಥ ಪಾತ್ರಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕರು ಆಸಕ್ತರಾಗಿಲ್ಲವಾ?

ಅಂಬರೀಶ್‌ ಮೊದಲಿನಿಂದಲೂ ತಾವಾಗಿಯೇ ಮೇಲೆ ಬಿದ್ದು ಸಿನಿಮಾಗಳನ್ನು ಹುಡುಕಿಕೊಂಡು ಹೋದವರಲ್ಲ. ಅವರ ಬಳಿ ಬಂದು ಕತೆ ಹೇಳಿ, ಅವರನ್ನು ಓಲೈಸಿ, ಅವರ ಹೊತ್ತು-ಗೊತ್ತು ನೋಡಿಕೊಂಡು, ಅವರ ಪುರುಸೊತ್ತಲ್ಲಿ ಚಿತ್ರೀಕರಣ ಮುಗಿಸಿ, ಅವರ ವಿರಾಮದಲ್ಲಿ ಅವರು ನಟಿಸುವಂತೆ ಮಾಡುತ್ತಿದ್ದ ನಿರ್ದೇಶಕರು ಅನೇಕ ಮಂದಿ ಇದ್ದರು. ಅವರೆಂದರೆ ಹೊಸ ನಿರ್ದೇಶಕರಿಗೆ ಭಯ ಮತ್ತು ಭಕ್ತಿ. ಏನಾದರೂ ಹೇಳಿದರೆ ಎಲ್ಲಿ ರೇಗುತ್ತಾರೋ ಎಂಬ ಭಯವಿತ್ತು.

ಒರಟು ಮಾತು, ನೇರ ನುಡಿ: ಅಂಬರೀಶ್‌ ಚಿತ್ರಗಳು ಕೂಡ ಅಷ್ಟಾಗಿ ಟೀವಿಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಒಂದು ಕಾಲದ ಸೂಪರ್‌ಹಿಟ್‌ ಸಿನಿಮಾ “ಅಂತ’ದ ರುಚಿ ಈ ಕಾಲದ ಪ್ರೇಕ್ಷಕರಿಗೆ ತಿಳಿದಿಲ್ಲ. ಅಂಬರೀಶ್‌ ಅವರನ್ನು “ರೆಬೆಲ್‌ ಸ್ಟಾರ್‌’ ಮಾಡಿದ ಚಿತ್ರಗಳನ್ನು ಅವರ ಈ ಪೀಳಿಗೆಯ ಎಷ್ಟೋ ಅಭಿಮಾನಿಗಳು ನೋಡಿಲ್ಲ. ಅಂಬರೀಶ್‌ ಜನಪ್ರಿಯರಾಗಿರುವುದು ಅವರ ಚಿತ್ರಗಳಿಗಿಂತ ಹೆಚ್ಚಾಗಿ ಅವರ ಒರಟು ಮಾತು, ನೇರ ನುಡಿ ಮತ್ತು ಬಿರುಸು ನಡೆಯಿಂದ. ರಾಜಕೀಯಕ್ಕೆ ಬಂದ ನಂತರ ಅವರು ಅದನ್ನೂ ಕಳೆದುಕೊಳ್ಳಬೇಕಾಗಿ ಬಂದಿತ್ತು. ವಿವಾದಗಳೇ ಇಲ್ಲದ ಅವರನ್ನು ವಿವಾದಗಳೂ ಬೆನ್ನತ್ತಿಕೊಂಡು ಬಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next