Advertisement

ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ ! 

03:45 AM Apr 09, 2017 | Harsha Rao |

ಗೋಪಾಲಕೃಷ್ಣ ಅಡಿಗರ 1970ರ ವರ್ಧಮಾನ ಎಂಬ ಕವಿತೆ “ಹನುಮದ್ವಿಕಾಸಕ್ಕೆ ಇಲ್ಲ ಎÇÉೆ’ ಎಂಬ ಸಾಲಿನೊಂದಿಗೆ ಕೊನೆಯಾಗುತ್ತದೆ. ಸುಡು ಮಧ್ಯಾಹ್ನ ಕೆಳಗೆÇÉೊ ಪಂಚಾಗ್ನಿ ಮಧ್ಯೆ ಅಳಲುವ ಮಗನನ್ನು , ಮೇಲೆ ದಂಡೆಯಲ್ಲಿ ಕೂತ ಅಪ್ಪ ಕೂಗಿ ಕರೆದರೂ ಅವನಿಗೆ ಕೇಳಿಸದಿರುವಾಗ ಕವಿತೆಯಲ್ಲಿ ಬರುವ ಮಾತುಗಳು ಇವು: 
ಗಹ್ವರದ ಮುಖ ಅಲ್ಲಿ; ಆಚೆ ಬಯಲ ಬರಾವು;
ಹಣ್ಣು ಹಂಪಲು ಹಸುರ ಬಲ್ಲೆ ಬಲ್ಲೆ;
ಜೀವನನಿಧಾನಶ್ರುತಿ ಶುದ್ಧಿ ಮೊರೆವ ಕರಾವು;
ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ.
ಏನು ಈ ಹನುಮದ್ವಿಕಾಸವೆಂದರೆ? ರಾಮಾಯಣದ ಹನುಮಂತನ ಕಾಯವನ್ನು ಅತಿಕಾಯ ಮಾಡುವ ಗುಣವೇ? ಅಥವಾ ಡಾರ್ವಿನ್‌ನ ಜೀವ ವರ್ಗಗಳ ಕುರಿತಾದ ಥಿಯರಿಯೇ? ಎರಡೂ ಇರಬಹುದು. ಎರಡನೆಯದೇ ಆದರೆ, “ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ’ ಎಂಬ ಮಾತು ವಿಕಾಸವಾದಕ್ಕೆ ಸಂಬಂಧಿಸಿದುದಾಗುತ್ತದೆ: ಮಗ ಇನ್ನೂ ಬೆಳೆಯಬೇಕಷ್ಟೆ, ಆ ಬೆಳವಣಿಗೆಗೆ ಮಿತಿ ಎನ್ನುವುದೇ ಇಲ್ಲ ಎಂಬ ಆಶಾಭಾವ ಇಲ್ಲಿ ಕಾಣಿಸುತ್ತಿದೆ. 

Advertisement

ಆದರೆ ಜೀವವಿಕಾಸ ನಿಂತಿಲ್ಲವೇ? ಇನ್ನೂ ನಡೆಯುತ್ತಿದೆಯೇ? ನಡೆಯುತ್ತಿದೆ ಎಂದಾದರೆ, ಅದು ಎಲ್ಲಿಯ ತನಕ ನಡೆಯಬಹುದು? ಮುಂದೇನಾಗಬಹುದು? ಈ ರೀತಿಯ ಪ್ರಶ್ನೆಗಳು ಕಾಡುವುದು ಸಹಜ. 

ಡಾರ್ವಿನ್‌ನ On the Origin of Species 1859ರಲ್ಲಿ ಪ್ರಕಟವಾದಾಗ ಅದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಯಿತು; ಸನಾತನಿಗಳು ಅದುವರೆಗೆ ನಂಬಿದ್ದ ಸೃಷ್ಟಿವಾದವನ್ನು (ಎಲ್ಲಾ ಜೀವಿಗಳನ್ನೂ ದೇವರು ಸೃಷ್ಟಿಸಿದ ಹಾಗೂ ಬೇರೆ ಬೇರೆಯಾಗಿ ಸೃಷ್ಟಿಸಿದ ಎಂಬ ನಂಬಿಕೆಯನ್ನು) ಬಿಟ್ಟುಕೊಡಲು ತಯಾರಿರಲಿಲ್ಲ. ಆದರೆ ಡಾರ್ವಿನ್‌ನ ವಾದದಲ್ಲಿ ನಂಬಿಕೆಯಿರುವವರೂ ಕೆಲವರಿದ್ದರು: ಜೂಲಿಯನ್‌ ಹಕ್ಸ್‌ಲಿ, ಎಚ್‌. ಜಿ. ವೆಲ್ಸ್‌ ಮುಂತಾದವರು. ವಿಕಾಸವಾದವನ್ನು ಜನರಿಗೆ ಅರ್ಥವಾಗುವಂತೆ ಮಾಡಿದವರೇ ಅವರು. ಎಚ್‌. ಜಿ. ವೆಲ್ಸ್‌ , ಜೂಲಿಯನ್‌ ವೆಲ್ಸ್‌ , ಜಿ. ಎಫ್. ವೆಲ್ಸ್‌ ಒಟ್ಟಿಗೆ ಬರೆದ ಪುಸ್ತಕವೊಂದಿದೆ: Evolution – Fact and Theory (1934) ಎಂದು ಅದರ ಹೆಸರು. ಇದರ ಒಂದು ಅಧ್ಯಾಯ ಕಾಲದಲ್ಲಿ ಮನುಷ್ಯನ ಸ್ಥಾನ (Man’s Place in Time) ಏನು ಎಂಬ ವಿಷಯದ ಬಗ್ಗೆಯೇ ಇದೆ. ಕಾಲದಲ್ಲಿ ಮನುಷ್ಯನ ಸ್ಥಾನ ತೀರಾ ಅತ್ಯಲ್ಪ ಎನ್ನುವುದು ಉತ್ತರ. ನಾವು ಕಾಲ ಎಂದು ಕರೆಯುವುದು ಭೂಮಿ ಆರಂಭವಾದ ಲಾಗಾಯ್ತಿನಿಂದ. ಆದರೆ ಅದಕ್ಕೊಂದು ನಿರ್ದಿಷ್ಟ ಬಿಂದುವಿಲ್ಲ. ಅಲ್ಲದೆ ಜೀವಿಗಳು ಕೂಡ ಭೂಮಿಯೊಂದಿಗೇ ಅಸ್ತಿತ್ವಕ್ಕೆ ಬಂದವೋ ಅಥವಾ ಭೂಮಿ ರೂಪುಗೊಂಡು ಅದೆಷ್ಟೋ ಸಮಯವಾದ ಮೇಲೆ ಉಂಟಾದವೋ ತಿಳಿಯದು. ಜೀವಿಗಳು ಅನಿಲ ರೂಪದಲ್ಲೋ ದ್ರವ ರೂಪದಲ್ಲೋ ಅಥವಾ ಇನ್ನು ಯಾವುದೋ ಕಣರೂಪದಲ್ಲೋ ಇದ್ದಿರಲೂ ಸಾಕು; ಆದರೆ ಭೂಮಿ ಹೆಪ್ಪುಗಟ್ಟುತ್ತಿದ್ದಂತೆ ಅವುಗಳ ಕುರುಹುಗಳೂ ಮಾಯವಾಗಿರುತ್ತವೆ. ಪಳೆಯುಳಿಕೆಗಳಾಗಿ ದೊರಕಿರುವುದು ಗಟ್ಟಿಗೊಂಡ ಅಂಗಗಳ ಜೀವಿಗಳ ಕುರುಹುಗಳು ಮಾತ್ರ. ಪಳೆಯುಳಿಕೆಗಳಿಂದ ಭೂಮಿಯ ಆಯುಸ್ಸನ್ನು ಅಳೆಯುವ ಹಾಗಿಲ್ಲ; ಒಂದು ವರ್ಗದ ಜೀವಿಗಳು ಇನ್ನೊಂದು ವರ್ಗದ ಜೀವಿಗಳಿಗಿಂತ ಹಳತು ಅಥವಾ ಹೊಸತು ಎಂದು ಮಾತ್ರವೇ ತೌಲನಿಕವಾಗಿ ಹೇಳಬಹುದು. ಆದರೆ ಇದು ಕೂಡ ಮುಖ್ಯವೇ; ಯಾಕೆಂದರೆ, ಈ ವಿಧಾನದಿಂದ ಜೀವ ವರ್ಗಗಳ ಚರಿತ್ರೆಯನ್ನು ಅಂದಾಜು ಮಾಡುವುದಕ್ಕೆ ಸಾಧ್ಯವಾಗುತ್ತದೆ: ಜಲಚರಗಳು ಎಲ್ಲಕ್ಕಿಂತ ಮೊದಲು ಬಂದವು, ನಂತರ ಜಲ-ನೆಲ ವರ್ಗಗಳು ಬಂದವು, ನಂತರ ಸರೀಸೃಪಗಳು ಬಂದವು ಇತ್ಯಾದಿ; ಇವುಗಳಲ್ಲಿ ಮನುಷ್ಯ ವರ್ಗವೇ ತೀರಾ ಈಚಿನದು. 

ಹಾಗಿದ್ದರೆ ಭೂಮಿಯ ವಯಸ್ಸನ್ನು ಅಳೆಯುವುದು ಹೇಗೆ? ವಿಜ್ಞಾನಿಗಳು ಇದಕ್ಕಾಗಿ ಹಲವಾರು ವಿಧಾನಗಳನ್ನು ಆವಿಷ್ಕರಿಸಿ¨ªಾರೆ. ಅವುಗಳಲ್ಲಿ ಹೆಚ್ಚು ನಿಖರವಾದುದು ಕೆಲವೊಂದು ಪದಾರ್ಥಗಳ ವಿಕಿರಣ ಗುಣ. ಯುರೇನಿಯಂ, ಥೋರಿಯಂ, ರೇಡಿಯಂ ಮೊದಲಾದ ಚುರುಕಿನ ಖನಿಜಗಳನ್ನು ಕ್ರಮಬದ್ಧವಾಗಿ ವಿಕಿರಣಗೊಳ್ಳುತ್ತಲೇ ಇದ್ದು ತಂತಮ್ಮ ಪ್ರತ್ಯೇಕ ಕಾಲಾವಧಿಯಲ್ಲಿ ಜಡಗೊಳ್ಳುತ್ತವೆ (ಸೀಸದ ರೀತಿಯಲ್ಲಿ). ಇವು ಭೂಮಿ ಹುಟ್ಟಿದಾಗಿಂದಲೂ ನಡೆದು ಬರುತ್ತಿರುವಂಥ ಪ್ರಕ್ರಿಯೆ. ಇಂಥ ಖನಿಜಗಳು ಜಡಗೊಳ್ಳುವ ಆಧಾರದ ಮೇಲೆ ಭೂಮಿಯ ಆಯುಸ್ಸಿನ ಲೆಕ್ಕ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿವಿಧ ಜೀವಿ ವರ್ಗಗಳು ವಿಕಸನಗೊಂಡ ಅವಧಿಗಳನ್ನು ಅವಲೋಕಿಸಿದಾಗ ಇವುಗಳಲ್ಲಿ ಸಸ್ತನಿ ವರ್ಗದ ಕಾಲ ಈಚಿಗಿನದಾಗಿದ್ದು ತೀರಾ ಅಲ್ಪಾವಧಿಯದು ಎನ್ನುವುದು ಗೊತ್ತಾಗುತ್ತದೆ; ಅದರಲ್ಲೂ ಮನುಷ್ಯ ವರ್ಗದ್ದಂತೂ ಅತ್ಯಂತ ಅಲ್ಪಾವಧಿಯದು ಹಾಗೂ ಇತ್ತೀಚೆಗಿನದು. ಈ ಎÇÉಾ ಕಾಲದಲ್ಲೂ ಜೀವ ವಿಕಸನ ನಡೆಯುತ್ತಲೇ ಬಂದಿದ್ದು ಇಡೀ ವಿಕಸನ ಕ್ರಿಯೆ ಒಂದು ಅವ್ಯಾಹತ  ಪ್ರವಾಹವಾಗಿದೆ. ಮನುಷ್ಯ ವರ್ಗ ಇದರÇÉೊಂದು ಭಾಗ ಹಾಗೂ ಈಚೆಗಿನದು. ಹೀಗಿರುತ್ತ ವಿಕಸನ ಕ್ರಿಯೆ ಇಲ್ಲಿಗೆ ಮುಗಿಯಿತು ಎಂದು ಹೇಳುವುದು ಹೇಗೆ? ಮನುಷ್ಯ ಮೂಲದಿಂದ ಇನ್ನೊಂದು ತಳಿ ಹುಟ್ಟಿ ಬೆಳೆಯಬಹುದಲ್ಲವೆ? ಒಂದು ವೇಳೆ ಹಾಗಾದರೆ, ಅಂಥ ಹೊಸ ತಳಿ ವಾತಾವರಣಕ್ಕೆ ಹೆಚ್ಚು ಒಗ್ಗಿಕೊಂಡಿದ್ದು ಅದರ ಸಹಿಷ್ಣುತೆ ಹೆಚ್ಚಾಗಿರುವುದು ಖಂಡಿತ.

ಆದರೂ ಮನುಷ್ಯ ಮೂಲದಿಂದ ಇನ್ನೊಂದು ತಳಿ (ಅತಿಮಾನವ?) ಮೂಡೀತು ಎಂದು ಊಹಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಈ ಭಾವನೆಗೆ ತಾನೇ ಜೀವಿಗಳಲ್ಲಿ ಉತ್ತಮನೆಂಬ ಮನುಷ್ಯನ ಅಹಂಕಾರ ಮಾತ್ರ ಕಾರಣವೇ ಇನ್ನೇನಾದರೂ ಇದೆಯೇ?  

Advertisement

    ಮೊದಲನೆಯದಾಗಿ, ಮನುಷ್ಯ ಸಮಾಜ ಜೀವಿ; ಆದ್ದರಿಂದ ಕಠಿಣ ಪರಿಸ್ಥಿತಿಗಳನ್ನು ಒಟ್ಟಿಗೆ ಎದುರಿಸುವುದು ಅವನಿಗೆ ಸುಲಭವಾಗಿದೆ. ಎರಡನೆಯದಾಗಿ, ಮನುಷ್ಯ ಸಮಾಜ ದುಡಿಮೆಯನ್ನು ಹಂಚಿಕೊಂಡಿರುವುದರಿಂದ ಎಲ್ಲರೂ ಎಲ್ಲವನ್ನೂ ಮಾಡಬೇಕಾಗಿಲ್ಲ. ಆದ್ದರಿಂದ ಮನುಷ್ಯನಿಗೆ ಸಾಕಷ್ಟು ಕಾರ್ಯಲಾಭ ಸಿಕ್ಕಿದೆ, ಹಾಗೂ ಪರಿಣತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಸಾಧ್ಯವಾಗಿದೆ. ಮೂರನೆಯದಾಗಿ, ಮನುಷ್ಯ ಸಮಾಜ ಶಿಕ್ಷಣವನ್ನು ರೂಢಿಸಿಕೊಳ್ಳುವುದರಿಂದ ಒಬ್ಬನ ಅನುಭವ ಇನ್ನೊಬ್ಬನಿಗೆ ದೊರಕುವಂತಾಗಿದೆ. ಜ್ಞಾನವೆನ್ನುವುದು ಮನುಕುಲದ ಅರಿವಿನ ಮೊತ್ತವಾಗಿದ್ದು ಶಿಕ್ಷಣದ ಮೂಲಕ ಅದನ್ನು ಹಂಚಿಕೊಳ್ಳುವುದು ಮತ್ತು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿದೆ. ನಾಲ್ಕನೆಯದಾಗಿ, ಮನುಷ್ಯರಿಗೆ ಭಾಷೆಯೆಂಬ ಸೌಲಭ್ಯವಿರುವುದರಿಂದ ಸಂದರ್ಭ-ಮುಕ್ತವಾಗಿ ಬದುಕುವುದು, ಯೋಚಿಸುವುದು ಸಾಧ್ಯ. ಇವೆಲ್ಲದರ ಮೇಲೆ, ಮನುಷ್ಯರಿಗಿರುವ ಕರಕೌಶಲ ಮತ್ತು ಬುದ್ಧಿಶಕ್ತಿ ಅವರಿಗೆ ಭಾರೀ ಅನುಕೂಲತೆಗಳನ್ನು ಒದಗಿಸಿರುವುದು. ಎಲ್ಲ ಕಡೆಯೂ ಮನುಷ್ಯಸಮೂಹಗಳು ಅಭಿವೃದ್ಧಿಪಡಿಸಿಕೊಂಡಿರುವ ಕಲೆ, ಸಾಹಿತ್ಯ, ಕ್ರೀಡೆ ಮುಂತಾದ ಬದುಕಿನ ನಾಲ್ಕನೆಯ ಆಯಾಮ ಅವರಿಗೆ ಜೀವನಕ್ಕೊಂದು ಅರ್ಥವನ್ನು ತಂದಿದೆ. 

ಭೂಮಿಯ ಮಧ್ಯ ವಯಸ್ಸಿನಲ್ಲಿ ನಾವೀಗ ಇದ್ದೇವೆ; ಭೂಮಿಗೆ ಇನ್ನೂ ಇಷ್ಟೇ ವರ್ಷ ಆಯುಸ್ಸು ಇರುತ್ತದೆಯೆ? (ಎಂದರೆ ಯಾವ ಗ್ರಹಚಾರವೂ ಬಾಧಿಸದೆ ಇದ್ದರೆ!), ಪ್ರಕೃತಿಯಲ್ಲಿ ಗುರುತರವಾದ ಬದಲಾವಣೆಗಳು ಮುಂದೆ ಆಗುವುದಿಲ್ಲ ಎನ್ನುವುದು ಹೇಗೆ? ಹಾಗಿದ್ದರೂ ಇತರ ಜೀವಿಗಳಿಗೆ ಹೋಲಿಸಿದರೆ ಮನುಷ್ಯನೇ ಅವುಗಳನ್ನು ಎದುರಿಸಲು (ಡಾರ್ವಿನ್‌ನ ಭಾಷೆಯಲ್ಲಿ, ಹೊಂದಿಕೊಳ್ಳಲು) ಸಾಮರ್ಥ್ಯವುಳ್ಳವನು. ಹಲವು ವರ್ಷಗಳಿಂದ ಮನುಷ್ಯನ ಬೆಳವಣಿಗೆ (ವಿಕಾಸ) ಆಂತರಿಕ ಕೇಂದ್ರವಾಗಿರದೆ (endocentric), ಬಾಹ್ಯಕೇಂದ್ರಿತವಾಗಿದೆ (exocentric), ಎನ್ನುವುದನ್ನು ಗಮನಿಸಬೇಕು. ಯಾತಾಯಾತ, ವೈದ್ಯಕೀಯ, ಕೃಷಿ, ವಸತಿ ಇತ್ಯಾದಿ ಹತ್ತು ಹಲವು ಕ್ಷೇತ್ರಗಳು ಅಭಿವೃದ್ಧಿಗೊಂಡುದು ಬಾಹ್ಯಕೇಂದ್ರಿತವಾಗಿ. ತಂತ್ರಜ್ಞಾನದಲ್ಲಿ ಮನುಷ್ಯ ಸಾಧಿಸಿದ ಪ್ರಗತಿ ಹಲವು ಪ್ರಾಕೃತಿಕ ವಿಕೋಪಗಳನ್ನು ಎದುರಿಸುವಲ್ಲಿ ಅವನಿಗೆ ಸಹಾಯ ಒದಗಿಸಿದೆ. ಯಂತ್ರಗಳ ಆವಿಷ್ಕಾರ ಅವನಿಗೆ ಇನ್ನಷ್ಟು ಬಿಡುವನ್ನು ಒದಗಿಸುವಲ್ಲಿ ಸಹಾಯಕವಾಗಿದೆ. ಇದರ ಜತೆಯಲ್ಲಿ ಅನೇಕ ಸಮಸ್ಯೆಗಳೂ ಉತ್ಪತ್ತಿಯಾಗಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ನಿಜ. ಇವು ಬಾಹ್ಯಕೇಂದ್ರಿತ ವಿಕಸನ ಎದುರಿಸಬೇಕಾದ ಸವಾಲುಗಳು. ಏನಿದ್ದರೂ ಭವಿಷ್ಯದ ಚರಿತ್ರೆಯನ್ನು ಇಂದೇ ಬರೆಯುವ ಹಾಗಿಲ್ಲ.  

– ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next