Advertisement

ಕಲುಷಿತ ನೀರಿನ ಅನಾಹುತಗಳಿಗೆ ದೊರೆಯಬೇಕಿದೆ ಮುಕ್ತಿ

10:19 PM Aug 01, 2023 | Team Udayavani |

ಕಲುಷಿತ ನೀರು ಸೇವನೆಯಿಂದ ಜೀವಹಾನಿ, ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಾಡುತ್ತಿವೆ. ಅನಾಹುತಗಳು ಸಂಭವಿಸಿದಾಗಲೊಮ್ಮೆ ಸೂಕ್ತ ಕ್ರಮದ ಮಾತು-ಭರವಸೆಗಳು ಕೇಳಿಬರುತ್ತವೆ. ಮರು ವರ್ಷ ಮತ್ತದೇ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಲುಷಿತ ನೀರಿಗೆ ಹಲವು ಕಾರಣಗಳಿದ್ದು ಅವುಗಳನ್ನು ಸರಿಪಡಿಸುವ, ಸೂಕ್ತ ಪರಿಹಾರ ಮೂಲಕ ಜೀವಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ.

Advertisement

ಉತ್ತರ ಕರ್ನಾಟಕದ 14 ಜಿಲ್ಲೆಗಳ ಪೈಕಿ ಹಲವೆಡೆ ಪ್ರತಿ ವರ್ಷದ ಬೇಸಿಗೆ ಇಲ್ಲವೇ ಮುಂಗಾರು ಮಳೆ ಆರಂಭ ಕಾಲಕ್ಕೆ ಒಂದಲ್ಲ ಒಂದು ಕಡೆ ಕಲುಷಿತ ನೀರು ಸೇವನೆಯಿಂದ ಜೀವಹಾನಿ ಘಟನೆಗಳು ಘಟಿಸುತ್ತಲೇ ಬರುತ್ತಿವೆ. ಮಲೇರಿಯಾ ಸೇರಿ ಕೆಲವು  ಸಾಂಕ್ರಾಮಿಕ ರೋಗಗಳು ಹೇಗೆ ಊರಿಗೆ ಊರನ್ನೇ ಮಲಗುವಂತೆ ಮಾಡುತ್ತವೆಯೋ ಕಲುಷಿತ ನೀರು ಸಮಸ್ಯೆ ಸಹ ಇಡೀ ಊರಿಗೆ ಊರು ಪರಿತಪಿಸುವಂತೆ ಮಾಡಿದ ಉದಾಹರಣೆಗಳು ಇಲ್ಲಿ ಸಾಕಷ್ಟು.

ಕಲುಷಿತ ನೀರು ಸಮಸ್ಯೆಗೆ ಮುಖ್ಯವಾಗಿ ಶುದ್ಧ ನೀರು ಪೂರೈಕೆ ವ್ಯವಸ್ಥೆಯ ಕೊರತೆ ಒಂದು ಕಡೆಯಾದರೆ; ನದಿ-ಹಳ್ಳ-ಕೆರೆಗಳಿಗೆ ವಿವಿಧ ತ್ಯಾಜ್ಯಗಳ ಯಥೇತ್ಛ ಸೇರುವಿಕೆ, ಮಿತಿ ಮೀರಿದ ರಸಗೊಬ್ಬರ-ಕ್ರಿಮಿನಾಶಕ ಬಳಕೆ, ಬಯಲು ಬಹಿರ್ದೆಸೆ ಹಾಗೂ ಆರ್ಸೆನಿಕ್‌ ಅಂಶ ಸೇರ್ಪಡೆಯೂ ಕಾರಣವಾಗುತ್ತಿದೆ. ಕಾರ್ಖಾನೆಗಳಿಂದಲೂ ಸಂಸ್ಕರಣೆ ಮಾಡದೆಯೇ ನೀರನ್ನು ನದಿ-ಹಳ್ಳಗಳಿಗೆ ಬಿಡಲಾಗುತ್ತಿದೆ. ಇದರಿಂದ ನದಿಗಳಲ್ಲಿ ಮೀನು ಸೇರಿದಂತೆ ಜಲಚರಗಳ ಮಾರಣಹೋಮದ ಘಟನೆಗಳು ನಡೆದಿವೆ. ವಿಷಪೂರಿತ ನೀರು ಸೇವಿಸಿ ಜಾನುವಾರುಗಳು ಮೃತಪಟ್ಟಿವೆ. ಪ್ರತಿ ವರ್ಷ ವಿವಿಧ ಜಿಲ್ಲೆಗಳಲ್ಲಿ ಕಲುಷಿತ ನೀರು ಜನರ ಪ್ರಾಣ ತೆಗೆಯುತ್ತಿದೆ.

ಕೆಲ ವರ್ಷಗಳ ಹಿಂದೆ ಬೀದರ ಜಿಲ್ಲೆಯಲ್ಲಿ ಔಷಧ ಕಂಪನಿಗಳು ರಾತ್ರೋರಾತ್ರಿ ವಿಷಪೂರಿತ ತ್ಯಾಜ್ಯವನ್ನು ರೈತರ ಹೊಲದಲ್ಲಿ, ಹಳ್ಳ-ಕೊಳ್ಳಗಳಿಗೆ ಸುರಿಯುತ್ತಿದ್ದವು ಎಂಬ ಆರೋಪ ಕೇಳಿಬಂದಿತ್ತು. ಇದೇ ಸ್ಥಿತಿ ಇತರೆ ಜಿಲ್ಲೆಗಳಲ್ಲಿಯೂ ಇದೆ. ಮತ್ತೂಂದು ಕಡೆ ಗಣಿಗಾರಿಕೆ ತ್ಯಾಜ್ಯವೂ ಜಲಮೂಲಗಳಿಗೆ ಸೇರಿ ಕಲುಷಿತಗೊಳಿಸುತ್ತಿದೆ. ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ನೀರಿನಲ್ಲಿ ಆರ್ಸೆನಿಕ್‌ ಅಂಶ ಹೆಚ್ಚಿನ ರೀತಿಯಲ್ಲಿ ಸೇರಿದ್ದು, ಅಲ್ಲಿನ ಹಲವು ಗ್ರಾಮಗಳಲ್ಲಿ ಕೊಳವೆ ಬಾವಿ ನೀರು ಬಳಕೆಗೇ ಯೋಗ್ಯವಲ್ಲ ಎಂದು ಕೆಂಪು ಬಣ್ಣ ಬಳಿದು ಎಚ್ಚರಿಕೆ ನೀಡಲಾಗಿದೆ. ಆದರೂ ಅಲ್ಲಿನ ಜನ ಅನಿವಾರ್ಯವಾಗಿ ಇದೇ ನೀರನ್ನು ಸೇವಿಸಿ, ಹದಿಹರೆಯ ವಯಸ್ಸಿನಲ್ಲಿಯೇ ಚರ್ಮ ಕ್ಯಾನ್ಸರ್‌, ಕ್ಯಾನ್ಸರ್‌, ಮೂತ್ರಪಿಂಡ ಸಮಸ್ಯೆ ಇನ್ನಿತರ ಮಾರಕ ವ್ಯಾದಿಗಳಿಂದ ಬಳಲುವಂತಾಗಿದೆ.

ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರು ಪೂರೈಕೆ ಪೈಪ್‌ಗ್ಳು ಶಿಥಿಲಾವಸ್ಥೆಗೆ ತಲುಪಿದ್ದು ಸೋರಿಕೆ ಸ್ಥಿತಿಯಲ್ಲಿಯೇ ಪೂರೈಕೆ ಆಗುತ್ತಿವೆ. ಟ್ಯಾಂಕ್‌ಗಳಲ್ಲಿ ಸ್ವಚ್ಚತೆ ಇಲ್ಲದಿರುವುದು, ಶುದ್ಧೀಕರಿಸದೆ ಹಳ್ಳ, ಕೆರೆ, ನದಿಗಳಿಂದ ನೇರವಾಗಿ ಪೂರೈಕೆ ಮಾಡಲಾಗುತ್ತದೆ. ಇನ್ನು ಹಲವೆಡೆ ಕೊಳವೆ ಬಾವಿಗಳೇ ನೀರಿನ ಆಸರೆಯಾಗಿವೆ.

Advertisement

ವಿಶೇಷವಾಗಿ ಯಾದಗಿರಿ, ರಾಯಚೂರು, ಕೊಪ್ಪಳ, ಬೆಳಗಾವಿ ಇನ್ನಿತರ ಜಿಲ್ಲೆಗಳಲ್ಲಿ ಮಿತಿಮೀರಿದ ಕ್ರಿಮಿನಾಶಕ ಬಳಕೆ, ಇನ್ನಿತರ ಕೃಷಿ ತ್ಯಾಜ್ಯ ನೇರವಾಗಿ ಜಲಮೂಲಗಳಿಗೆ ಸೇರುತ್ತಿದೆ. ಮುಂಗಾರು ಮಳೆ ಸಂದರ್ಭ ಕಲುಷಿತ ನೀರಿನಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದು, ಇದಕ್ಕೆ ಶಾಶ್ವತ ಹಾಗೂ ಕಾಲಮಿತಿಯೊಳಗೆ ಪರಿಹಾರ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು, ಶುದ್ಧ ಕುಡಿಯುವ ನೀರು ಪೂರೈಕೆಯ ಇಚ್ಛಾಶಕ್ತಿಯನ್ನು ತೋರಬೇಕಾಗಿದೆ. ಇಲ್ಲವಾದರೆ ಪ್ರತಿವರ್ಷವೂ ಕಲುಷಿತ ನೀರು ಇತರೆ ಸಾಂಕ್ರಾಮಿಕ ರೋಗಗಳಿಗಿಂತ ಹೆಚ್ಚಿನ ರೀತಿಯಲ್ಲಿ ಜೀವಹಾನಿ, ಸಂಕಷ್ಟವನ್ನು ತಂದೊಡ್ಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next