Advertisement

ಸಹಾಯದ ಹಿಂದೆ ಸ್ವಾರ್ಥವಿರಬಹುದು!

06:30 PM Jul 23, 2019 | mahesh |

ಬಾಸ್‌ ಮತ್ತು ಅವರ ಹೆಂಡತಿ, ಮೀನಾಕ್ಷಿಯ ಮನೆಗೆ ಊಟಕ್ಕೆ ಬಂದರು. ಶ್ರೀಮಂತ ಹಿನ್ನೆಲೆಯ ಬಾಸ್‌, ತಮ್ಮ ಸಿಂಪಲ್‌ ನಡವಳಿಕೆಯಿಂದ ಮನೆಯವರಿಗೆಲ್ಲಾ ದೈವ ಸಮಾನರೆನಿಸಿದರು. ಆಗಾಗ ಅಧ್ಯಾತ್ಮಿಕ ಮೆಸೇಜುಗಳನ್ನು ಮನೆಯವರಿಗೆಲ್ಲಾ ಕಳಿಸಿ, ಎಲ್ಲರ ನಂಬಿಕೆಯನ್ನೂ ಗಳಿಸಿದರು.

Advertisement

ಮೀನಾಕ್ಷಿಯ ಸಂಸಾರ ಹಠಾತ್ತಾಗಿ ಸಾಲದಿಂದ ಕಂಗಾಲಾಗಿತ್ತು. ಪ್ರಾಮಾಣಿಕರಾದ ಯಜಮಾನರು ಕೆಲಸದಿಂದ ವಜಾ ಆಗಿದ್ದರು. ಮಗಳ ಮದುವೆಯ ಖರ್ಚು ತೂಗಿಸುವುದಿತ್ತು. ಮಗನದ್ದು ಕಾಲೇಜಿನಲ್ಲಿ ಪೇಮೆಂಟ್‌ ಸೀಟು. ಆದರೂ, ಧೃತಿಗೆಡದ ಮೀನಾಕ್ಷಿ ಮನೆಯ ಖರ್ಚನ್ನು ಸರಿದೂಗಿಸಲು ಉದ್ಯೋಗಕ್ಕೆ ಸೇರಿದಳು.

ಕೆಲವೇ ದಿನಗಳಲ್ಲಿ ಆಫೀಸಿನಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾದ ಮೀನಾಕ್ಷಿಗೆ ಬಡ್ತಿಯೂ ಸಿಕ್ಕಿತ್ತು. ತರಬೇತಿ ಕಾರ್ಯಕ್ರಮದಲ್ಲಿ ಮೀನಾಕ್ಷಿಗೆ ಬಾಸ್‌ನ ಪರಿಚಯವಾಯ್ತು. ಇವಳು ಗಮನ ಕೊಡದಿದ್ದರೂ, ನೋಡಲು ಮಟ್ಟಸವಾಗಿದ್ದ ಮೀನಾಕ್ಷಿಯ ಮೇಲೆ ಬಾಸ್‌ ದೃಷ್ಟಿ ಬಿತ್ತು. ಮುಂದಿನ ಕಾರ್ಯಕ್ರಮಕ್ಕೆ ಮೀನಾಕ್ಷಿಯೇ ಸಂಚಾಲಕಿಯಾದಳು. ತರಬೇತಿ ಅಚ್ಚುಕಟ್ಟಾಗಿ ನಡೆದುದಕ್ಕೆ ಮೀನಾಕ್ಷಿಯನ್ನು ಹೊಗಳಿ ಅಟ್ಟಕ್ಕೇರಿಸಿದ ಬಾಸ್‌, ಆಕೆಗೆ ಬೋನಸ್‌ ಕೂಡಾ ನೀಡಿದರು.

ಹೀಗೆ ಮೀನಾಕ್ಷಿಗೆ ಹತ್ತಿರವಾದ ಬಾಸ್‌, ಮನೆಯನ್ನು ಮಾರಿ ಸಾಲ ತೀರಿಸುವ ಯೋಚನೆಯಲ್ಲಿದ್ದ ಮೀನಾಕ್ಷಿಯ ಗಂಡನಿಗೂ ಕೆಲಸ ಕೊಡಿಸಿದರು. ಬಾಸ್‌ ಮತ್ತು ಅವರ ಹೆಂಡತಿ, ಮೀನಾಕ್ಷಿಯ ಮನೆಗೆ ಊಟಕ್ಕೂ ಬಂದರು. ಶ್ರೀಮಂತ ಬಾಸ್‌, ತಮ್ಮ ಸಿಂಪಲ್‌ ನಡವಳಿಕೆಯಿಂದ ಮನೆಯವರಿಗೆಲ್ಲಾ ದೈವ ಸಮಾನರೆನಿಸಿದರು. ಆಗಾಗ ಅಧ್ಯಾತ್ಮಿಕ ಮೆಸೇಜುಗಳನ್ನು ಮನೆಯವರಿಗೆಲ್ಲಾ ಕಳಿಸಿ, ಎಲ್ಲರ ನಂಬಿಕೆಯನ್ನೂ ಗಳಿಸಿದರು.

ಬಿಸಿನೆಸ್‌ ಟ್ರಿಪ್‌ ಹೋಗಿದ್ದಾಗ ಬಾಸ್‌ ಹಾಗೂ ಮೀನಾಕ್ಷಿಯ ನಡುವೆ ಶಾರೀರಿಕ ಸಂಪರ್ಕ ಉಂಟಾಗಿತ್ತು. ಊರಿಂದ ಬಂದ ಮೇಲೆ ಬಾಸ್‌ ಮೀನಾಕ್ಷಿಯ ಬಳಿ ಮಾತು ನಿಲ್ಲಿಸಿಬಿಟ್ಟರು. ಆಗ ಮೀನಾಕ್ಷಿಗೆ, ಬಾಸ್‌ ತನ್ನನ್ನು ಸೆಕ್ಸ್ ಗಾಗಿ ಬಳಸಿಕೊಂಡರೆಂಬ ಭಾವನೆ ಕಾಡತೊಡಗಿತು ಅಥವಾ ಅವರು ತನ್ನಿಂದ ಸಂತೋಷಪಡಲಿಲ್ಲವೇನೋ ಎಂದು ಸಂಶಯಪಡತೊಡಗಿದಳು. ತಾನು ಮಾಡಿದ ತಪ್ಪಾದರೂ ಏನು ಎಂದು ಬಾಸ್‌ನಿಂದ ಆಕೆಗೆ ಉತ್ತರ ಬೇಕಾಗಿತ್ತು. ಅವಳ ಮೆಸೇಜುಗಳನ್ನು ತಡೆಯಲು ಬಾಸ್‌ ಅವಳ ನಂಬರ್‌ ಅನ್ನು ಬ್ಲಾಕ್‌ ಮಾಡಿದರು. ಮೀನಾಕ್ಷಿಗೆ ಕೆಲಸದಲ್ಲಿ ಆಸಕ್ತಿಯೇ ಹೋಯಿತು. ಖನ್ನತೆಗೆ ಜಾರಿದಳು. ಆಗಲೇ ನನ್ನ ಬಳಿ ಸಮಾಲೋಚನೆಗೆ ಬಂದದ್ದು.

Advertisement

ಹಣ ಮತ್ತು ಅಧಿಕಾರದ ಪ್ರಭಾವದಿಂದ ಸಂಸಾರಗಳನ್ನು ಮೊದಲಿಗೆ ತಮ್ಮ ಕಡೆಗೆ ಓಲೈಸಿಕೊಂಡ ಬಾಸ್‌, ಎಲ್ಲರಿಗೂ ಆಪತ್ಭಾಂಧವನಾಗುತ್ತಾನೆ. ಯಾರ ಕಣ್ಣಿಗೂ ಆತ ಕಾಮುಕನಾಗಿ ತೋರುವುದಿಲ್ಲ. ಹೆಂಗಸರಿಗೆ, ಮದುವೆಯ ಪವಿತ್ರತೆಯಲ್ಲಾದ ಸೆಕ್ಸ್ ಮಕ್ಕಳನ್ನು ಕೊಟ್ಟಿರುತ್ತದೆ. ಸುಖ ಕೊಟ್ಟಿಲ್ಲದಿರಬಹುದು. ವಾಣಿಜ್ಯ ಪ್ರವಾಸಗಳಲ್ಲಿ, ಮೈ ಮನಗಳು ಬಾಸ್‌ ನೀಡಿದ ಸುಖಕ್ಕೆ ಒಪ್ಪಿಕೊಂಡುಬಿಡುತ್ತವೆ. ಜೊತೆಗೆ ಕಷ್ಟಗಳನ್ನು ತೀರಿಸಿದ ಕೃತಜ್ಞತೆಯಿಂದಾಗಿ ಬಾಸ್‌ ಬಗ್ಗೆ ಕೆಟ್ಟದಾಗಿ ಮಾತನಾಡಲೂ ಆಕೆಗೆ ಆಗುವುದಿಲ್ಲ. ಸೆಕ್ಸ್ ನಂತರ ಹೆಂಗಸರು ತಮ್ಮನ್ನು ನಿಯಂತ್ರಣ ಮಾಡಬಹುದೆಂಬ ಅಗೋಚರ ಭಯದಿಂದ ಬಾಸ್‌ ಏಕಾಏಕಿ ಆಕೆಯೊಡನೆ ಮಾತು ಬಿಡುತ್ತಾರೆ. ಹಣದ ಅವಶ್ಯಕತೆ ಮತ್ತು ಮಾನ ಹೋಗುವ ಅಂಜಿಕೆಯಿಂದ ಹೆಂಗಸರ ಚೀರಾಟ ನಿಲ್ಲುತ್ತದೆ ಎಂಬ ಸತ್ಯ ಬಾಸ್‌ಗೆ ಗೊತ್ತು. ಅವರು ಬೇರೆ ಹುಡುಗಿಯ ಹುಡುಕಾಟಕ್ಕೆ ಇಳಿಯುತ್ತಾರೆ.

ಸುಖ ನೀಡಿದ ಸುಕುಮಾರ, ಗಡಸುತನದಲ್ಲಿ ನಡೆಸಿಕೊಳ್ಳುವುದು ಮೀನಾಕ್ಷಿಗೆ ಅರ್ಥವಾಗುವುದಿಲ್ಲ. ಮನೋವಿಶ್ಲೇಷಣೆಯ ನಂತರ ಮೀನಾಕ್ಷಿ ನಿಧಾನವಾಗಿ ಮನಸ್ಸನ್ನು ಗಟ್ಟಿಮಾಡಿಕೊಂಡರು. ಈಗವರು ಬೇರೆ ಕೆಲಸದಲ್ಲಿದ್ದಾರೆ.

ಈ ಪ್ರಸಂಗದ ನೆಪದಲ್ಲಿ ಎಲ್ಲ ಹೆಣ್ಣು ಮಕ್ಕಳಿಗೂ ಹೇಳಬಹುದಾದ ಮಾತು: ಬಾಸ್‌ಗಳ ನಡವಳಿಕೆಯಲ್ಲಿನ ಸ್ವಾರ್ಥ ಅರ್ಥಮಾಡಿಕೊಳ್ಳಿ; ಅವರು ಮಾಡಿದ ಸಹಾಯಕ್ಕೆ ಪ್ರಜ್ಞಾಪೂರ್ವಕವಾದ ಕೃತಜ್ಞತೆಯಿದ್ದರೆ ಸಾಕು.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next