Advertisement

ಕ್ಷಮೆ ಕೇಳುವ ಯಾವುದೇ ತಪ್ಪು ಮಾಡಿಲ್ಲ

12:33 PM Apr 30, 2019 | pallavi |

ದಾವಣಗೆರೆ: ನೇರ್ಲಿಗೆ ಘಟನೆಗೆ ಸಂಬಂಧಿಸಿದಂತೆ ಕ್ಷಮೆ ಕೇಳುವಂತಹ ಯಾವುದೇ ತಪ್ಪು ಮಾಡಿಯೇ ಇಲ್ಲ. ಹಾಗಾಗಿ ಕ್ಷಮೆ ಕೇಳುವುದಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ ಹೇಳಿದ್ದಾರೆ.

Advertisement

ಡಾ| ವೈ. ರಾಮಪ್ಪ 30 ವರ್ಷದ ಸಾರ್ವಜನಿಕ ಬದುಕಿನಲ್ಲಿ ಜಾತಿಯ ವಿಷ ಬೀಜ ಬಿತ್ತುವ, ಸಾಮರಸ್ಯ ಹಾಳು ಮಾಡುವಂತಹ ಕೆಲಸ ಮಾಡಿಯೇ ಇಲ್ಲ. ನೇರ್ಲಿಗೆ ಘಟನೆಗೆ ಸಂಬಂಧಿಸಿದಂತೆ ನನ್ನಿಂದ ಯಾವುದೇ ರೀತಿಯ ತಪ್ಪು ಆಗಿಲ್ಲ, ಹಾಗಾಗಿ ಆ ವಿಚಾರವಾಗಿ ಕ್ಷಮೆ ಕೊರುವ ಪ್ರಶ್ನೆಯೇ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಮಪ್ಪ ವಿದ್ಯಾವಂತರು, ಡಬ್ಬಲ್ ಡಿಗ್ರಿ ಪಡೆದವರು. ಚುನಾವಣೆ ಎಂದರೆ ಸಣ್ಣ ಪುಟ್ಟ ಘಟನೆ ಸಹಜ. ಅದನ್ನು ಮುಂದುವರೆಸದೆ ಪೂಜ್ಯರ ಬಳಿ ಕ್ಷಮೆ ಕೋರುವ ಮೂಲಕ ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಹೇಳಿದ್ದಾರೆ. ನಾನು ಕ್ಷಮೆ ಕೋರುವ ತಪ್ಪು ಮಾಡಿಯೇ ಇಲ್ಲ. ಕ್ಷಮೆ ಕೋರುವುದಿಲ್ಲ ಎಂದು ಪ್ರತಿಪಾದಿಸಿದರು.

ನಾನು ಎಲ್ಲಾ ಸ್ವಾಮೀಜಿಯವರು, ಪೂಜ್ಯರ ಬಳಿ ಹೋಗುತ್ತೇನೆ. ಕಾಲಿಗೆ ಬಿದ್ದು ನನ್ನ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ. ಅದು ಸಹಜ. ಆದರೆ, ಈ ವಿಚಾರವಾಗಿ ನಾನು ಪ್ರಸ್ತಾಪ ಮಾಡುವುದೇ ಇಲ್ಲ. ಸ್ವಾಮೀಜಿಯವರೇ, ಏನಪ್ಪ ರಾಮಪ್ಪ ಎಂದು ಕೇಳಿದರೆ, ಈ ರೀತಿ ಆಗಿದೆ ಎಂದು ಹೇಳುತ್ತೇನೆ. ಆದರೆ, ಕ್ಷಮೆ ಕೋರುವುದಿಲ್ಲ ಎಂದು ಹೇಳಿದರು.

ನಾನು ಸಣ್ಣ ಘಟನೆಯನ್ನು ದೊಡ್ಡ ಘಟನೆಯನ್ನಾಗಿ ಮಾಡಿಲ್ಲ. ಈ ಎಲ್ಲಾ ಘಟನೆಗೆ ಯಾರು ಮೂಲ ಕಾರಣರೋ ಅವರನ್ನೇ ಕರೆದು, ಯಶವಂತರಾವ್‌ ಜಾಧವ್‌ ಬುದ್ಧಿ ಹೇಳಬಹುದಿತ್ತು. ಈ ಘಟನೆ ಬೆಳೆಯಲಿಕ್ಕೆ ನಾನು ಕಾರಣ ಅಲ್ಲ. ಯಾರೂ ಜಾತಿ ನಿಂದನೆ ಪ್ರಕರಣದಲ್ಲಿ ಇದ್ದಾರೋ ಅವರಲ್ಲಿ ಕೆಲವರು ಕಾರಣ. ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಎಲ್ಲರನ್ನೂ ಬಂಧಿಸಬೇಕು ಮತ್ತು ಇನ್ನೂ ಕೆಲವರನ್ನು ಸೇರಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿಯವರಲ್ಲಿ ಕೋರುತ್ತೇನೆ. ಬಂಧನ ವಿಳಂಬವಾದಲ್ಲಿ ಮತ್ತೂಮ್ಮೆ ಮನವಿ ಮಾಡುತ್ತೇನೆ. ಪೊಲೀಸ್‌ ಇಲಾಖೆ ಬಗ್ಗೆ ಬಹಳ ಗೌರವ ಇದೆ ಎಂದರು.

Advertisement

ನೇರ್ಲಿಗೆ ಘಟನೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಮಾಜಿ ಶಾಸಕ ಎಂ. ಬಸವರಾಜನಾಯ್ಕ, ಅಣಬೇರು ಶಿವಮೂರ್ತಿ, ಎ.ಆರ್‌. ಉಜ್ಜನಪ್ಪ, ದೇವರಮನೆ ಶಿವಕುಮಾರ್‌ ಮಾತನಾಡಿದ್ದಾರೆ. ನಾನು ಉದ್ಧಟತನ ಮಾಡಿಲ್ಲ. ಜಾತಿ ನಿಂದನೆ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಮೂರ್ಖನಂತೆ ನನ್ನ ಕಾಲೇಜು ಕಟ್ಟಡಕ್ಕೆ ಕಲ್ಲು ಹೊಡೆಸಿ, ಸೆಲ್ಫಿ ತೆಗೆದುಕೊಂಡಿಲ್ಲ ಎಂದರು. ಯಾರ್ಯಾರು ಏನೇನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಂತಹವರಿಂದ ಬುದ್ಧಿವಾದ, ನಾಗರಿಕತೆ ಬಗ್ಗೆ ಹೇಳಿಸಿಕೊಳ್ಳುವ ನಾನಲ್ಲ. ವೀರಶೈವ-ಲಿಂಗಾಯತ ಪದವನ್ನೇ ಬಳಕೆ ಮಾಡಿಲ್ಲ. ಮಾಡುವುದೂ ಇಲ್ಲ. ಆದರೂ, ನಾನು ಯಾಕೆ ಕ್ಷಮೆ ಕೋರಬೇಕು ಎಂದು ಪ್ರಶ್ನಿಸಿದರು.

ಜಿಲ್ಲಾ ಭೋವಿ ಸಮಾಜದ ಮಾಜಿ ಅಧ್ಯಕ್ಷ ಹೇಮರಾಜ್‌, ಹೂವಿನಮಡು ಚನ್ನಬಸವಯ್ಯ, ಎಚ್. ತಿಮ್ಮಣ್ಣ, ಪ್ರಭಾಕರಯ್ಯ, ಸುಧಾಕರ್‌, ನಾಗರಾಜ್‌, ಶ್ರೀನಿವಾಸ್‌, ಪಿ. ಶ್ರೀನಿವಾಸ್‌, ಚಿರಡೋಣಿ ಮಂಜಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next