Advertisement

ಯಾವುದೇ ಕೈಗಾರಿಕೆ ರಾಜ್ಯ ಬಿಟ್ಟು ಹೋಗುವ ಮಾತೇ ಇಲ್ಲ

10:42 AM May 24, 2017 | Team Udayavani |

ಆರ್‌.ವಿ.ದೇಶಪಾಂಡೆ ರಾಜ್ಯ ಕಂಡ ಹಿರಿಯ ರಾಜಕಾರಣಿ. ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಎಚ್‌. ಡಿ. ದೇವೇಗೌಡ, ಜೆ.ಎಚ್‌. ಪಟೇಲ್‌, ಎಸ್‌.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಸಚಿವರಾಗಿ ಹಲವಾರು ಖಾತೆ ನಿರ್ವಹಿಸಿ
ಸೈ ಎನಿಸಿಕೊಂಡವರು. ಸಿದ್ದರಾಮಯ್ಯ ಸಂಪುಟದಲ್ಲಿ ಬೃಹತ್‌ ಕೈಗಾರಿಕೆ ಮತ್ತು ಮೂಲಸೌಕರ್ಯ ಖಾತೆ
ನಿರ್ವಹಿಸುತ್ತಿದ್ದಾರೆ.

Advertisement

– ನಾಲ್ಕು ವರ್ಷಗಳಲ್ಲಿ ನಿಮ್ಮ ಇಲಾಖೆಯಲ್ಲಿ ಆಗಿರುವ ಸಾಧನೆಗಳೇನು?
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ 4 ವರ್ಷಗಳಲ್ಲಿ ಎಲ್ಲ ರಂಗಗಳಲ್ಲಿಯೂ ಅತ್ಯುತ್ತಮ ಸಾಧನೆಯಾಗಿದೆ. ಕೈಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಂತೂ ಗಮನಾರ್ಹ ಸುಧಾರಣೆಯಾಗಿದೆ. ನೂತನ ಕೈಗಾರಿಕೆ ನೀತಿ 2014-19 ಜಾರಿ, ಏಕಗವಾಕ್ಷಿ ವ್ಯವಸ್ಥೆ ಅನುಷ್ಠಾನ, ಆನ್‌ಲೈನ್‌ ಮೂಲಕವೇ ವಿದ್ಯುತ್‌ ಸಂಪರ್ಕ, ಅಗ್ನಿಶಾಮಕ ಮತ್ತು ತುರ್ತುಸೇವೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ವಿತರಣೆ, ಕೈಗಾರಿಕೆ ಸಂಬಂಧಿತ ಸೇವೆಗಳನ್ನು
“ಸಕಾಲ’ ವ್ಯಾಪ್ತಿಗೆ ತಂದಿರುವುದು. ಕೈಗಾರಿಕೆಗಳ ಸ್ಥಾಪನೆಗಾಗಿ ಅಗತ್ಯವಾದ 13,574 ಎಕರೆ ಜಮೀನು ಕೆಐಡಿಬಿ ಮೂಲಕ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವುದು, 93 ಕೋಟಿ ರೂ. ವೆಚ್ಚದಲ್ಲಿ ಉದ್ದೇಶಿತ ಏರೋಸ್ಪೇಸ್‌ ಕಾಮನ್‌ μನಿಶಿಂಗ್‌ ಫೆಸಿಲಿಟಿ ಸ್ಥಾಪನೆಗೆ 15,052 ಎಕರೆ ಜಮೀನು ಕೆಐಡಿಬಿಗೆ ಉಚಿತವಾಗಿ ಹಸ್ತಾಂತರಿಸಿರುವುದು. ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮವು ಕೈಗಾರಿಕೆ ಶೆಡ್‌ಗಳಿಗಾಗಿ 317 ಎಕರೆ ಜಮೀನು ಸ್ವಾಧೀನ
ಪಡಿಸಿಕೊಂಡಿದೆ. ಇವೆಲ್ಲವೂ ಎದ್ದುಕಾಣುವ ಸಾಧನೆಗಳೇ.

– ರಾಜ್ಯದಿಂದ ಕೈಗಾರಿಕೆಗಳು ಬೇರೆ ಕಡೆ ಹೋಗುತ್ತಿವೆ ಎಂಬ ಮಾತು ನಿಜವೇ?
ನೋಡಿ, ಆರೋಪ ಮಾಡಬಹುದು. ಆದರೆ ಸತ್ಯಾಂಶ ಇರಬೇಕಲ್ಲವೇ. ಎರಡೂವರೆ ವರ್ಷದ ಹಿಂದಿನ ಹೀರೋ ಕಂಪನಿ ವಿಷಯವನ್ನೇ ಪದೇಪದೆ ಹೇಳುತ್ತಾ ಇದ್ದರೆ ಹೇಗೆ? ರಾಜ್ಯಕ್ಕೆ ಬಂದ ಹೊಸ ಉದ್ಯಮಗಳ ಬಗ್ಗೆಯೂ ಮಾತನಾಡಬೇಕಲ್ಲವೇ. ಆ್ಯಪಲ್‌ ಕಂಪನಿಯ ಐ ಫೋನ್‌ ಘಟಕ ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿದೆ. ವೋಲ್ವೋ ಕಾರು ಬಿಡಿ ಭಾಗ ಜೋಡಣಾ ಘಟಕ ಹೊಸಕೋಟೆ ಬಳಿ ಬರುತ್ತಿದೆ. ಬಾಷ್‌ ಸಂಸ್ಥೆ ಬಿಡದಿ ಬಳಿ ತನ್ನ ಎರಡನೇ ವಿಸ್ತರಣಾ ಯೋಜನೆ ಪ್ರಾರಂಭಿಸುತ್ತಿದೆ. ಶೆಲ್‌ ಕಂಪನಿ ಜಾಗತಿಕ ಮಟ್ಟದ ಸಂಶೋಧನಾ ಕೇಂದ್ರವನ್ನು ದೇವನಹಳ್ಳಿಯಲ್ಲಿ ಆರಂಭಿಸಿದೆ. ಇವನ್ನು ಯಾಕೆ ಪ್ರತಿಪಕ್ಷಗಳು ಹೇಳುವುದಿಲ್ಲ.ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ಸರ್ಕಾರವಿದೆ. ಯಾವುದೇ ಕೈಗಾರಿಕೆ ರಾಜ್ಯ ಬಿಟ್ಟು ಹೋಗುವ ಮಾತೇ ಇಲ್ಲ. ಹೀರೋ ಕಂಪನಿಜತೆಯೂ ನಾವು ಮಾತನಾಡಿದ್ದೇವೆ, ಕರ್ನಾಟಕ ಸರ್ಕಾರದ ಬಗ್ಗೆ ಬೇಸರಗೊಂಡು ಹೋಗಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

– ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಸ್ಥಿತಿಗತಿ ಏನು?
ಇನ್‌ವೆಸ್ಟ್‌ ಕರ್ನಾಟಕ-2016 ಜಾಗತಿಕ ಬಂಡವಾಳ ಸಮಾವೇಶ ಯಶಸ್ವಿಯಾಗಿ ಪೂರೈಸಿ 1,77,764 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 4,82,138 ಉದ್ಯೋಗ ಕಲ್ಪಿಸುವ 1080 ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ.

– ಪ್ರಸ್ತಾವನೆಗಳಿಗೆ ಒಪ್ಪಿಗೆ ಕೊಟ್ಟಿದ್ದು ಸರಿ, ಆದರೆ ಮುಂದಿನದು ಯಾವ ಹಂತದಲ್ಲಿದೆ?
ಎಲ್ಲ ಬಂಡವಾಳ ಹೂಡಿಕೆ ಸಮಾವೇಶಗಳಲ್ಲೂ ಪ್ರಸ್ತಾವನೆಗಳಿಗೆ ಒಪ್ಪಿಗೆ ಕೊಡುವುದು, ಆ ನಂತರ ಒಪ್ಪಂದ ಮಾಡಿಕೊಳ್ಳುವುದು ಮೊದಲ ಹಂತದ ಪ್ರಕ್ರಿಯೆ. ಆ ನಂತರದ್ದು ಇತರೆ ಅಗತ್ಯ ಅನುಮತಿ ಕೊಡುವುದು. ಆ ನಿಟ್ಟಿನಲ್ಲಿ ಸರ್ಕಾರ ವೇಗ ಗತಿಯಲ್ಲಿದೆ. 1,27,820 ಕೋಟಿ ರೂ. ಹೂಡಿಕೆ ಹಾಗೂ 1,69,880 ಉದ್ಯೋಗ ಕಲ್ಪಿಸುವ 122 ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆ ಪೈಕಿ ಬಹುತೇಕ ಯೋಜನಾ ವರದಿ
ಸಿದ್ಧಗೊಂಡು ಕಾರ್ಯಾರಂಭವೂ ಮಾಡಿವೆ.

Advertisement

– ಹೂಡಿಕೆ ಸಂಬಂಧದ ಪ್ರಸ್ತಾವನೆಗಳು, ಮಾಡಿಕೊಂಡ ಒಪ್ಪಂದಗಳಿಂದ ನಿರೀಕ್ಷಿತ ಬಂಡವಾಳ ಹರಿದು ಬಂದಿಲ್ಲ
ಎಂಬ ಆರೋಪ ಇದೆಯಲ್ಲ?

ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ಪ್ರಕಾರವೇ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2016ರ ಜನವರಿಯಿಂದ ಡಿಸೆಂಬರ್‌ವರೆಗೆ 1,54,173 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ಇದನ್ನು ಕೇಂದ್ರ ಸರ್ಕಾರವೇ ಹೇಳಿದೆ.

– ಮೇಕ್‌ ಇನ್‌ ಇಂಡಿಯಾ ಸಮಾವೇಶದಿಂದ ಏನಾದರೂ ಪ್ರಗತಿಯಾಗಿದೆಯಾ?
ಖಂಡಿತ. 2017ರ ಫೆಬ್ರವರಿಯಲ್ಲಿ ನಡೆದ ಮೇಕ್‌ ಇನ್‌ ಇಂಡಿಯಾ ಸಮಾವೇಶದಲ್ಲಿ 1712ಪ್ರಸ್ತಾವನೆಗಳಿಗೆ ಒಪ್ಪಿಗೆ
ನೀಡಲಾಗಿದೆ. 3,07,997 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 8.65 ಲಕ್ಷ ಉದ್ಯೋಗ ಕಲ್ಪಿಸುವ ಯೋಜನೆಗಳಿವು.

– ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ದೂರಿದೆಯಲ್ಲ?
ಅಂತಹ ಆರೋಪ ಸುಳ್ಳು. ಕೈಗಾರಿಕಾ ಮೂಲಸೌಕರ್ಯ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಿಮಾನ, ರೈಲು, ರಸ್ತೆ ಸಂಪರ್ಕ ಕಲ್ಪಿಸಲು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನಮ್ಮ ಸರ್ಕಾರ ನೀಡಿದೆ. 1453 ಕೋಟಿ ರೂ. ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿಗೆ ವೆಚ್ಚ ಮಾಡಿದ್ದೇವೆ. ಕೆಐಎಡಿಬಿ, ಕೆಎಸ್‌ಐಐಡಿಸಿಗೆ ಕೈಗಾರಿಕೆ ಪ್ರದೇಶ ಮೇಲ್ದರ್ಜೆಗೇರಿಸಲು 346.31 ಕೋಟಿ ರೂ. ವೆಚ್ಚ ಮಾಡಲಾಗಿದೆ. 2007ರ ಮೂಲಸೌಕರ್ಯ ನೀತಿ ಪರಿಷ್ಕರಿಸಿ
ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಹೆಚ್ಚು ಒತ್ತು ನೀಡಿದ್ದೇವೆ.

– 2ನೇ ಹಂತದ ನಗರಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ, ರೈಲ್ವೆ ಯೋಜನೆಗಳ ಕಾಮಗಾರಿ ವಿಳಂಬವಾಗುತ್ತಿದೆಯಲ್ಲ?
ಜಮೀನು ಸ್ವಾಧೀನ, ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವೆಡೆ ವಿಳಂಬ ಆಗುತ್ತಿದೆ. ಆದರೆ, ಕಾಲ ಕಾಲಕ್ಕೆ ಎಲ್ಲ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಕಾಮಗಾರಿಗೆ ವೇಗ ಕೊಟ್ಟು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್‌ ವಿಸ್ತರಣೆ ಕಾರ್ಯ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ. ಎರಡನೇ ರನ್‌ವೇ ಹಾಗೂ ಟರ್ಮಿನಲ್‌ ಕಾಮಗಾರಿ ನಡೆಯುತ್ತಿದೆ. 408 ಎಕರೆಯಲ್ಲಿ ವಿಮಾನ ನಿಲ್ದಾಣ ಸಮೀಪ ಬಿಸಿನೆಸ್‌ ಪಾರ್ಕ್‌ ಸ್ಥಾಪಿಸಲು ಯೋಜನೆ ರೂಪಿಲಾಗಿದೆ. ಚಿಕ್ಕ ಮಗಳೂರು, ಕಾರವಾರ, ಮಡಿಕೇರಿಯಲ್ಲಿ ಏರ್‌ಸ್ಟ್ರಿಪ್ಸ್‌ ವ್ಯವಸ್ಥೆಗೆ ಪ್ರಾಯೋಗಿಕ ಯೋಜನೆ ಸಿದ್ಧಪಡಿಸಲಾಗಿದೆ. ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಯಡಿ ಮೈಸೂರು, ವಿದ್ಯಾನಗರ, ಬೀದರ್‌, ಕೆಂಪೇಗೌಡ ವಿಮಾನ ನಿಲ್ದಾಣ ಆಯ್ಕೆ ಮಾಡಲಾಗಿದೆ. ಕಲಬುರಗಿ ವಿಮಾನ ನಿಲ್ದಾಣದ ಮುಂದುವರಿದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರನ್‌ವೇ ವಿಸ್ತರಣೆ, ಹೊಸ ಟರ್ಮಿನಲ್‌ ಕಟ್ಟಡ, ಎರಡನೇ ರನ್‌ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಸೇರಿ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿದೆ.

– ರೈಲ್ವೆ ಯೋಜನೆಗಳು ಸ್ಥಿತಿಗತಿ ಏನು?
ದೇಶದಲ್ಲಿ ಮೊದಲ ಬಾರಿಗೆ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಶೇ.50 ರಷ್ಟು ಹಣ ಜತೆಗೆ ಜಮೀನು ಸ್ವಾಧೀನಪಡಿಸಿಕೊಡುತ್ತಿದೆ. 93 ಕಿ.ಮೀ. ರಾಮನಗರ-ಮೈಸೂರು ಜೋಡಿ ರೈಲು ಮಾರ್ಗಕ್ಕೆ ಅಡ್ಡಿಯಾಗಿದ್ದ ಟಿಪ್ಪು ಶಸ್ತ್ರಾಗಾರ ಸ್ಥಳಾಂತರ ಮಾಡಿ ಅನುವು ಮಾಡಿಕೊಟ್ಟಿದ್ದೇವೆ. ಬೀದರ್‌-ಕಲಬುರಗಿ ಹೊಸ ರೈಲ್ವೆ ಮಾರ್ಗಕ್ಕೆ ಪರಿಷ್ಕೃತ 1542.41 ಕೋಟಿ ರೂ. ಅಂದಾಜು ವೆಚ್ಚಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು ಯೋಜನೆ ಅಂತಿಮ ಹಂತದಲ್ಲಿದೆ.
167 ಕಿ.ಮೀ. ಬೆಂಗಳೂರು-ಹಾಸನ ಹೊಸ ಮಾರ್ಗ ಪ್ರಾರಂಭವಾಗಿದೆ. ಕಡೂರು-ಚಿಕ್ಕಮಗಳೂರು, ಕೋಲಾರ-ಚಿಕ್ಕಬಳ್ಳಾಪುರ, ಕೊಟ್ಟೂರು -ಹರಿಹರ ರೈಲ್ವೆ ಮಾರ್ಗ ಪೂರ್ಣಗೊಳಿಸಿದ್ದೇವೆ. ಮುನಿರಾಬಾದ್‌-ಮೆಹಬೂಬ್‌ನಗರ ನಡುವಿನ 170 ಕಿ.ಮೀ. ಮಾರ್ಗಕ್ಕೆ 1200 ಎಕರೆ ಜಮೀನು ಹಸ್ತಾಂತರ ಮಾಡಿದ್ದೇವೆ. ತುಮಕೂರು-ದಾವಣಗೆರೆ ಮಾರ್ಗಕ್ಕೆ 50 ಕೋಟಿ ರೂ.ಬಿಡುಗಡೆ ಮಾಡಿದ್ದೇವೆ. ತುಮಕೂರು-ರಾಯದುರ್ಗ ಮಾರ್ಗಕ್ಕೆ ಜಮೀನು ಸ್ವಾಧೀನ ಪ್ರಗತಿಯಲ್ಲಿದೆ. ಬಾಗಲಕೋಟೆ-ಕುಡುಚಿ ಹೊಸ ರೈಲು ಮಾರ್ಗಕ್ಕೆ ಜಮೀನು ಸ್ವಾಧೀನಕ್ಕಾಗಿ 177.82 ಕೋಟಿ ರೂ.
ಬಿಡುಗಡೆ ಮಾಡಲಾಗಿದೆ. 252 ಕಿ.ಮೀ.ಗದಗ-ವಾಡಿ ಮಾರ್ಗಕ್ಕೆ ಉಚಿತವಾಗಿ ಜಮೀನು ನೀಡಲು ಅನುಮತಿ ನೀಡಿ 152.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ. ಇವೆಲ್ಲವೂ ಸಾಧನೆಗಳಲ್ಲವೇ.

– ಕಾರ್ಯದೊತ್ತಡದ ನಡುವೆ ಬಿಡುವು ಸಿಕ್ಕಾಗ ನಿಮ್ಮ ಹವ್ಯಾಸಗಳೇನು?
ನನಗೆ ಸಂಗೀತ ಅಂದರೆ ಅಚ್ಚುಮೆಚ್ಚು.

– ರಾಜಕೀಯದಲ್ಲಿ ನಾವಿಬ್ಬರೇ..
ಇಬ್ಬರು ಗಂಡು ಮಕ್ಕಳು, ಇಬ್ಬರು ಸೊಸೆಯಂದಿರು, ನಾಲ್ಕು ಮೊಮ್ಮಕ್ಕಳು ಸೇರಿ ಹತ್ತು ಜನರ ಸುಖೀ ಕುಟುಂಬ ನಮ್ಮದು. ಕಿರಿಯ ಮಗ ಪ್ರಶಾಂತ್‌ ದೇಶಪಾಂಡೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸಿದ್ದ. ಆತ ನನ್ನ ಜತೆ ರಾಜಕೀಯದಲ್ಲಿದ್ದಾನೆ ಅಷ್ಟೆ. ಉಳಿದಂತೆ ನಮ್ಮ ಕುಟುಂಬದಲ್ಲಿ ಬೇರೆ ಯಾರೂ ಈ ಕ್ಷೇತ್ರ ಪ್ರವೇಶಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next