Advertisement

ಮಹಿಳಾ ಇಲಾಖೆಗಿಲ್ಲ ಕಾಯಂ ಅಧಿಕಾರಿ

02:44 PM Jan 06, 2021 | Team Udayavani |

ಬಾಗಲಕೋಟೆ: ಮಹಿಳಾ, ಮಕ್ಕಳ ಕಲ್ಯಾಣದಂತಹ ಪ್ರಮುಖ ಜವಾಬ್ದಾರಿ ಹೊತ್ತಿರುವ ಇಲಾಖೆಗೆ ಕಳೆದ 8ವರ್ಷಗಳಿಂದ ಕಾಯಂ ಅಧಿಕಾರಿಯೇ ಇಲ್ಲ. ಹೀಗಾಗಿ ಇಲಾಖೆಯಲ್ಲಿ ನಿಯಮ ಮೀರಿದ ಕೆಲಸ-ಕಾರ್ಯ ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಹೌದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹುದ್ದೆ ಪ್ರಮುಖವಾಗಿದೆ. ಅಂಗನವಾಡಿ ಕೇಂದ್ರಗಳು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, ವಿವಿಧ ಸಾಂತ್ವನ, ಸ್ವಾಧಾರ ಕೇಂದ್ರಗಳು ಸೇರಿದಂತೆ ಮಹಿಳೆ, ಮಕ್ಕಳ ಕಲ್ಯಾಣದ ಎಲ್ಲ ಯೋಜನೆಗಳ ಅನುಷ್ಠಾನಾಧಿಕಾರಿಯ ಜವಾಬ್ದಾರಿಯ ಜತೆಗೆ ಹಲವು ಜವಾಬ್ದಾರಿ ಅವರ ಮೇಲಿರುತ್ತವೆ. ಆದರೆ, ಕಳೆದ 8 ವರ್ಷದಿಂದ ಈ ಇಲಾಖೆಗೆ ಕಾಯಂ ಅಧಿಕಾರಿ ಇಲ್ಲ. ಆದರೆ, ಬೇರೆ ಬೇರೆ ಇಲಾಖೆಯ ಅಧಿಕಾರಿಗಳು, ಹುದ್ದೆಗೆ ಬರಲು ಭಾರಿ ಪೈಪೋಟಿ ನಡೆಸುವ ಪ್ರಸಂಗ ಹಲವು ಬಾರಿ ನಡೆದಿವೆ.

ವರೆಗೆ 10 ಜನ ಪ್ರಭಾರಿಗಳು: ಕಳೆದ 2013ರಲ್ಲಿ ಇದ್ದ ಎಚ್‌.ಎಸ್‌. ಪಾಟೀಲ ಎಂಬುವವರು ಸೇವಾ ನಿವೃತ್ತಿಯಾದ ಬಳಿಕ ಆ ಹುದ್ದೆಗೆ ಪಿ.ಎನ್‌. ಪಾಟೀಲ ಪ್ರಭಾರಿಯಾಗಿ ನೇಮಕವಾಗಿದ್ದರು. ಅಲ್ಲಿಂದ ಅಶೋಕಕೆಲವಡಿ, ಬಸವರಾಜ ಶಿರೂರ, ವಡವಟ್ಟಿ, ಎನ್‌.ಬಿ.ಗೊರವರ, ಅಶೋಕ ಬಸಣ್ಣವರ, ಮಲ್ಲಿಕಾರ್ಜುನ ರಡ್ಡಿ, ಎನ್‌.ವೈ. ಕುಂದರಗಿ, ಬಿ.ಸಿ. ಶಿವಲಿಂಗಪ್ಪ (ಡಿಸೆಂಬರ್‌31ರಂದು ನಿವೃತ್ತಿ)ಕಾರ್ಯನಿರ್ವಹಿಸಿದ್ದು, ಜನವರಿ 1ರಿಂದ ಶಿಕ್ಷಣ ಇಲಾಖೆಯ ಅಶೋಕ ಬಸಣ್ಣನವರ ಮತ್ತೆ ಇಲಾಖೆಯ ಪ್ರಭಾರಿ ಉಪ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಈ ಹುದ್ದೆಗೆ ಬೀಳಗಿಯ ಸಿಡಿಪಿಒ ಎಂ.ಎಂ. ಇಸರನಾಳ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು.

ನಿಯಮ ಮೀರಿದ ನಿಯೋಜನೆ: ಸರ್ಕಾರದ ಯಾವುದೇ ಇಲಾಖೆಯಲ್ಲಿ ನಿಯೋಜನೆ, ವಿವಿಧ ಹುದ್ದೆಗಳಿಗೆ ಬಡ್ತಿ ನೀಡಲು ನಿಯಮಗಳಿವೆ. ಬಡ್ತಿ ಹಾಗೂ ವರ್ಗಾವಣೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದ್ದು, ಇಲ್ಲಿ ತಮಗೆ ಬೇಕಾದ ಹುದ್ದೆಗಳಿಗೆ ನಿಯೋಜನೆ ಎಂಬ ಅಸ್ತ್ರ ಬಳಸಲಾಗುತ್ತಿದೆ ಎಂಬ ಆರೋಪವಿದೆ. ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಕಾಯಂ ಅಧಿಕಾರಿಗಳಿಗಿಂತ ನಿಯೋಜನೆ ಮೇಲೆ ಬಂದವರೇ ಹೆಚ್ಚಿನವರಿದ್ದಾರೆ. ಅದು ಬೇರೆ ಜಿಲ್ಲೆಯಿಂದ ಇಲ್ಲಿಗೆ ನಿಯೋಜನೆ ಮೇಲೆ ಬಂದವರು, ಪುನಃ ಬೇರೊಂದು ಪ್ರಮುಖ ಹುದ್ದೆಗೆ ನಿಯೋಜನೆ ಪಡೆದುಕೊಂಡು, ಇಲಾಖೆಯಲ್ಲಿ ದರ್ಬಾರ್‌ ನಡೆಸುತ್ತಿದ್ದಾರೆ ಎಂಬುದು ಇಲಾಖೆಯಲ್ಲಿಯೇ ಇರುವ ಕೆಲ ಅಧಿಕಾರಿಗಳ ಅಸಮಾಧಾನ.

ರಾಯಚೂರಿನಿಂದ ಕೋಟೆಗೆ ನಿಯೋಜನೆ: ಲಿಂಗಸುಗೂರಿನ ಸಿಡಿಪಿಒ ಕಚೇರಿಯಲ್ಲಿ ಹಿರಿಯ ಸೂಪರ್‌ವೈಸರ್‌ (ಹಿರಿಯ ಅಂಗನವಾಡಿ ಮೇಲ್ವಿಚಾರಕರು) ಹುದ್ದೆಯಲ್ಲಿ ಅಧಿಕಾರಿಯೊಬ್ಬರು, ಬಾಗಲಕೋಟೆಯ ಬಾಲಕಿಯರ ಬಾಲ ಮಂದಿರದ ಪರಿವೀಕ್ಷಕರಾಗಿ ನಿಯೋಜನೆ ಪಡೆದಿದ್ದಾರೆ. ಅವರು ಐಸಿಡಿಎಸ್‌ ಯೋಜನೆಯಡಿ ನೇಮಕಗೊಂಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಮುಖ ಹುದ್ದೆಗಳಿಗೆ ನಿಯೋಜನೆಗಳ್ಳಲು ಅವಕಾಶವಿಲ್ಲ. ಆದರೂ ಕರ್ನಾಟಕ ನಾಗರಿಕ ಸೇವಾ ನಿಯಮ ಗಾಳಿಗೆ ತೂರಿ, ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ನಿಯೋಜನೆ ಕೊಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

Advertisement

ಈ ಹುದ್ದೆಗೆ ಇಂತಹದ್ದೇ ಸಮಾನ ಹುದ್ದೆಯಲ್ಲಿದ್ದ ಕೋರವಾರ ಎಂಬುವವರಿಗೆ ಹಿಂದೆ ನಿಯೋಜನೆ ಮಾಡಲಾಗಿತ್ತು. ಅವರು ಇಲಾಖೆಯ ನಿಯಮಾನುಸಾರ, ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಅರ್ಹರರಲ್ಲ ಎಂದು ಆ ಹುದ್ದೆಗೆ ತೆಗೆಯಲಾಗಿತ್ತು.

ಈ ವರೆಗೆ ಬೀಳಗಿಯ ಸಿಡಿಪಿಒ ಎಂ.ಎಂ. ಇರಸನಾಳ ನಿರ್ವಹಿಸುತ್ತಿದ್ದ ಹಿರಿಯ ಸಹಾಯಕ ನಿರ್ದೇಶಕ ಹುದ್ದೆಗೆ ಬಾಲಕಿಯರ ಬಾಲ ಭವನದ ಪರಿವೀಕ್ಷಣಾಧಿಕಾರಿ ಜಯಮಾಲಾ ದೊಡ್ಡಮನಿ ಅವರಿಗೆ ಪ್ರಭಾರ ವಹಿಸಲಾಗಿದೆ. ಅದೂ ಈವರೆಗೆ ಉಪನಿರ್ದೇಶಕ ಹುದ್ದೆಯಲ್ಲಿದ್ದ ಬಿ.ಸಿ. ಶಿವಲಿಂಗಪ್ಪ ಸೇವಾ ನಿವೃತ್ತಿ ಹೊಂದಿದ ಡಿಸೆಂಬರ್‌ 31ರಂದು ಈ ಆದೇಶ ಮಾಡಿದ್ದು, ಇದು ಇಲಾಖೆಯ ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಒಟ್ಟಾರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರಭಾರ ಹುದ್ದೆಗಳಲ್ಲೇ ಮುನ್ನಡೆಯುತ್ತಿದೆ. ಅದರಲ್ಲೂ ಕೆಲವು ಆಯಕಟ್ಟಿನ ಹುದ್ದೆಗಳಿದ್ದು, ಅವುಗಳ ನಿಯೋಜನೆಯಲ್ಲಿ ಸರ್ಕಾರದ ನಿಯಮಪಾಲನೆಯಾಗುತ್ತಿಲ್ಲ. ಪ್ರಭಾರ ಹುದ್ದೆಗಳಿಗೆ ನಿಯೋಜನೆ ಮಾಡುವಾಗ, ಕರ್ನಾಟಕ ನಾಗರಿಕ ಸೇವಾ ನಿಯಮದ 68 ಅನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮ ಜಿಲ್ಲೆಯ ಮಟ್ಟಿಗೆ ಪ್ರತಿ ಕಾರ್ಯಭಾರದ ವೇಳೆಯೂ ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಬಾಲಕಿಯರ ಬಾಲ ಮಂದಿರದ ಪರಿವೀಕ್ಷಣಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಈ ನಿಯೋಜನೆ ನಾನು ಮಾಡಿಲ್ಲ. ಕಳೆದ ವಾರ ನಿವೃತ್ತಿಯಾದ ಹಿಂದಿನ ಉಪ ನಿರ್ದೇಶಕರು ಮಾಡಿದ್ದಾರೆ. ನಿಯಮಾನುಸಾರ ನಿಯೋಜನೆ ಮಾಡಲು ಅವಕಾಶವಿಲ್ಲ. ಆದರೆ, ಹೇಗೆ ಮಾಡಿದ್ದಾರೆ ಗೊತ್ತಿಲ್ಲ. ಅಶೋಕ ಬಸಣ್ಣವರ, ಪ್ರಭಾರಿ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next