Advertisement

ನನಗೆಲ್ಲ ಗೊತ್ತು ಎಂದು ಹೇಳುವವನಷ್ಟು ದಡ್ಡ ಯಾರೂ ಇಲ್ಲ!

07:40 AM Sep 18, 2018 | Team Udayavani |

ಕಲಿಯುವುದಕ್ಕೆ ವಯಸ್ಸಿಲ್ಲ, ಜಾತಿಯಿಲ್ಲ, ವರ್ಣಭೇದವಿಲ್ಲ. ಎಷ್ಟೋ ಸಲ ನಾವು ತಪ್ಪು ಮಾಡುತ್ತಿದ್ದಾಗ ಚಿಕ್ಕಮಕ್ಕಳು ನಮ್ಮನ್ನು ಸರಿಪಡಿಸಿರುತ್ತಾರೆ. ಅವರಿಂದ ಕೂಡ ಕಲಿಯುವುದು ಬೇಕಾದಷ್ಟಿರುತ್ತದೆ. ಪ್ರತಿದಿನ ಕನಿಷ್ಠ ಹತ್ತು ಜನ ಬೀದಿಯಲ್ಲಿ ನಡೆದು ಹೋಗುವವರನ್ನು ಮಾತನಾಡಿಸಿ, ಒಬ್ಬೊಬ್ಬರಿಂದ ಒಂದೊಂದು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬಹುದು. 

Advertisement

ಕಲಿಯುವುದಕ್ಕೆ ಕೊನೆಯೇ ಇಲ್ಲ. ನಮಗೆ 100 ವರ್ಷಗಳ ಆಯಸ್ಸಿದೆ ಎಂದುಕೊಂಡರೆ, ಅಷ್ಟು ಕಾಲಾವಕಾಶದಲ್ಲಿ ಏನನ್ನೆಲ್ಲ ಕಲಿಯಬಹುದು, ಏನನ್ನೆಲ್ಲಾ ಅರಿಯಬಹುದು ! ಭಾರದ್ವಾಜ ಮಹಾಮುನಿಗಳು ದೇವರಿಂದ ವರ ಪಡೆದಿದ್ದರು, ನಾನು ಜಗತ್ತಿನಲ್ಲಿರುವುದನ್ನೆಲ್ಲಾ ಅರಿತುಕೊಳ್ಳುವ ತನಕ ನನ್ನ ಈ ಜನ್ಮ ಕೊನೆಯಾಗಬಾರದು ಎಂದು. ಅವರು 15 ಸಾವಿರ ವರ್ಷಗಳ ಕಾಲ ಜೀವಿಸಿ, ತಮಗೆ ಗೋಚರವಾದ ಎಲ್ಲಾ ವಿಚಾರಗಳನ್ನೂ, ವಿದ್ಯೆಗಳನ್ನೂ ಕಲಿಯುತ್ತಾ ನಡೆದರು. ಅವರು ಅಷ್ಟು ವರ್ಷ ಕಲಿತರೂ ಸಹ, ಪರಮಾತ್ಮನ ಸೃಷ್ಟಿಗೆ ಕೊನೆಯೇ ಇಲ್ಲದ ಕಾರಣ ಇನ್ನಷ್ಟು ವಿಚಾರಗಳು ತರ್ಕಕ್ಕೂ ಸಿಗದೆ, ಅಳತೆಗೂ ಸಿಗದೆ,  ಕಣ್ಣಿಗೂ ಕಾಣದೆ ಹಾಗೇ ಉಳಿದವು. ಹೀಗಿರುವಾಗ ಸಾಮಾನ್ಯ ಮನುಷ್ಯನಿಗೆ ಪ್ರಕೃತಿ ನಿಯಮದ ಪ್ರಕಾರ ಒಂದು ಜನ್ಮಕ್ಕೆ ನೂರೇ ವರ್ಷ ಇರುವುದು. ನಾವು 15 ಸಾವಿರ ವರ್ಷ ಬದುಕಬೇಕು ಅಂದರೆ ಸಾವಿರದ ಐನೂರು ಜನ್ಮಗಳು ಬೇಕು!

ಹಾಗಾದರೆ ಏಕೆ ಕೆಲವರು ಸ್ವಲ್ಪ ವಿಷಯಗಳನ್ನು ತಿಳಿದುಕೊಂಡ ತಕ್ಷಣ ಬಹಳ ಬುದ್ಧಿವಂತರಂತೆ ವರ್ತಿಸುತ್ತಾರೆ ? ಯಾವಾಗ ನಮ್ಮ ಕಿವಿಗಳು ವಿಷಯಗಳನ್ನು ಕೇಳಿಸಿಕೊಳ್ಳಲು ಮುಂದಾಗುತ್ತವೆಯೋ ಆಗ ವಿಚಾರಗಳು ತಾನಾಗೇ ತಲೆಗೆ ಹೋಗಿ ಪ್ರಶ್ನೆಗಳು ಹೊರಬರುತ್ತವೆ. ತರ್ಕ ಮಾಡುವುದು ತಪ್ಪಲ್ಲ, ಆದರೆ ತರ್ಕ ಸ್ವಾಭಿಮಾನಕ್ಕೆ ಧಕ್ಕೆ ತರುವಂಥದ್ದಾಗಲೀ ಅಥವಾ ದ್ವೇಷವಾಗಿ ಪರಿವರ್ತನೆಗೊಳ್ಳುವುದಾಗಲೀ ಆಗಿರಬಾರದು. ತರ್ಕ ಮಾಡುವುದರಿಂದ ಮನುಷ್ಯ ಚುರುಕಾಗುತ್ತಾನೆ, ಹಾಗೇ ಬೇರೆಯವರಲ್ಲಿರುವ ವಿಚಾರ ಚಿಂತನೆಗಳನ್ನು ಅರಿತು ಸರಿಯೋ ತಪ್ಪೋ ಎಂಬ ಸಂಶೋಧನೆಗಿಳಿಯುತ್ತಾನೆ. ಬೇರೆಯವರು ಹೇಳಿದ್ದೆಲ್ಲಾ ಸರಿ ಎಂದು ನಾವೇನೂ ಒಪ್ಪಿಕೊಳ್ಳಬೇಕಾಗಿಲ್ಲ, ಆದರೆ ಸರಿ ತಪ್ಪುಗಳನ್ನು ನಿರ್ಧರಿಸುವ ಸಾಮರ್ಥ್ಯ, ಜ್ಞಾನವನ್ನು ನಾವು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ವಿಚಾರಕ್ಕೂ ಸತ್ಯ-ಧರ್ಮದ ಆಧಾರ ಇರುತ್ತದೆ. ಅವರೆಡರ ಹೊರತಾಗಿ ಇರುವ ಎಲ್ಲಾ ವಿಚಾರಗಳು ಕೊನೆಗೊಳ್ಳುವುದು ನೋವಲ್ಲೇ, ಆದ್ದರಿಂದ ಆ ವಿಚಾರಗಳು ಸರಿಯಾಗಿರಲು ಸಾಧ್ಯವೇ ಇಲ್ಲ. ನಾವು ಯಾವಾಗ ನಾನು ಮಾಡಿದ್ದೇ ಸರಿ, ನನಗೆ ಎಲ್ಲಾ ಗೊತ್ತು ಎಂದು ಬೀಗುತ್ತೇವೋ ಅವತ್ತು ನಾವು ಕುಬjರಾಗುತ್ತೇವೆ ಮತ್ತು ನಮ್ಮ ಪೆದ್ದುತನ ಎದ್ದು ಕಾಣಿಸುತ್ತದೆ. ನನಗೆ ಎಲ್ಲಾ ಗೊತ್ತು ಎಂದ ಕೂಡಲೇ ನಮ್ಮ ಮುಂದೆ ನಾವೇ ಒಂದು ಅಡ್ಡಗೋಡೆ ಕಟ್ಟಿಕೊಂಡಂತೆ. ನಮ್ಮ ಬುದ್ಧಿಗೆ ನಾವೇ ಮೊಟುಕು ಹಾಕಿದಂತೆ. ನಾವು ಯಾವತ್ತು ದುರಭಿಮಾನ ಬಿಟ್ಟು ನಮ್ರತೆಯಿಂದ ಎಲ್ಲಾ ವಿಚಾರಗಳಿಗೂ ಗೌರವ ಕೊಡುತ್ತೇವೋ ಅವತ್ತಿನಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತಾ ಹೋಗುತ್ತದೆ. 

ನಾನು ಅಮೆರಿಕದಲ್ಲಿ ಒಬ್ಬ ವಿಜ್ಞಾನಿಯನ್ನು ಭೇಟಿಯಾದಾಗ ಅವರು ಹೇಳಿದ ಮಾತುಗಳು ನನಗೆ ಸದಾ ನೆನಪಾಗುತ್ತವೆ. ಪ್ರಪಂಚದಲ್ಲಿರುವ ಅತಿ ದೊಡ್ಡ ವಿಜ್ಞಾನಿ ಕೂಡ ಅವನ ಮೆದುಳಿನ ತಾಕತ್ತಿನಲ್ಲಿ ಬರೀ ಶೇ. 10ರಷ್ಟನ್ನು ಮಾತ್ರ ಉಪಯೋಗಿಸಿಕೊಂಡಿರುತ್ತಾನೆ. ಹಾಗಾದರೆ ಮೆದುಳಿಗಿರುವ ತಾಕತ್ತನ್ನು ಯೋಚಿಸಿ! ನಾವೆಲ್ಲ ಯಾವಾಗಲೂ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳಲ್ಲದೆ ಸಾಮಾನ್ಯ ಮನುಷ್ಯರಾಗಿ ಶೇಕಡಾ ಎಷ್ಟು ಭಾಗ ನಮ್ಮ ಮೆದುಳನ್ನು ಉಪಯೋಗಿಸಿ ಕೊಂಡಿರುತ್ತೇವೆ? ಅವರು ಹೇಳಿದ ಪ್ರಕಾರ ಸಾಮಾನ್ಯ ಮನುಷ್ಯ ಬಳಸುವುದು ಶೇ.1 ರಿಂದ ಶೇ.1.5 ಮಾತ್ರ. ಸಾಮಾನ್ಯ ಜೀವನ ಸಾಗಿಸುವವರು ಬಳಸುವ ಮೆದುಳಿನ ತಾಕತ್ತು ಇಷ್ಟೇ. ಆಗ ನನಗನ್ನಿಸಿದ್ದು, ನಾವೆಲ್ಲ ಅಷ್ಟು ಪೆದ್ದರಾ ಅಂತ. ನಮ್ಮೊಳಗೇ ಇರುವ ನಮ್ಮ ಮೆದುಳನ್ನು ನಾವೇ ಉಪಯೋಗಿಸಿಕೊಳ್ಳದಿದ್ದರೆ ಮತ್ತಿನ್ಯಾರು ಉಪಯೋಗಿಸಿಕೊಳ್ಳುತ್ತಾರೆ? ಪ್ರತಿಯೊಬ್ಬ ಮನುಷ್ಯನೂ 24 ಗಂಟೆ ಯೋಚಿಸುತ್ತಾ, ಸಂಶೋಧಿಸುತ್ತಾ ವಿಜ್ಞಾನಿ ಆಗುವುದಕ್ಕಂತೂ ಸಾಧ್ಯವಿಲ್ಲ, ಆದರೆ, ತಮ್ಮ ಮೆದುಳಿಗೆ ಕೆಲಸ ಕೊಟ್ಟು ಬುದ್ಧಿಜೀವಿಯಾಗಬಹುದು ಅಲ್ವಾ? ನಾನು ಕಂಡಂತೆ ಕೆಲವರು ಬುದ್ಧಿ ಜೀವಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ಪ್ರತಿದಿನ ಒಂದಷ್ಟು ಪುಸ್ತಕಗಳನ್ನು ನೋಡುತ್ತಾ ಕನ್ನಡ ಚಿತ್ರರಂಗವನ್ನು ತೆಗಳುತ್ತಿರುತ್ತಾರೆ, ಟೀವಿ ನೋಡುತ್ತಾ ಎಲ್ಲಾ ರಾಜಕೀಯ ವ್ಯಕ್ತಿಗಳನ್ನು ಬೈಯುತ್ತಿರುತ್ತಾರೆ. ಸ್ನಾನವನ್ನೂ ಮಾಡದೆ ಸಿಗರೇಟ್‌ ಸೇದುತ್ತಾ ಬರೀ ಮಾತನಾಡುತ್ತಲೇ ಇರುತ್ತಾರೆ! ತಾನು ಬಹಳ ಬುದ್ಧಿವಂತ ಎಂಬಂತೆ ಎಲ್ಲಾ ವಿಚಾರಕ್ಕೂ ತಲೆ ಹಾಕುತ್ತಾ ಹೋಗುತ್ತಾರೆ. 

ಪಾಪ, ಕೊನೆಗೆ ಅವರು ಯಾರೂ? ಅವರು ನಮ್ಮ ದೇಶ ಬೆಳೆಯಲು ಒಬ್ಬ ಪ್ರಜೆಯಾಗಿ ಏನು ಮಾಡಬೇಕು ಎನ್ನುವುದನ್ನೇ ಮರೆತು ಹೋಗಿರುತ್ತಾರೆ. ಇಂಥ ಒಣ ಜಂಭ ಇರುವವರಿಗೆ ಇಂಗ್ಲೀಷ್‌ನಲ್ಲಿ ಒಂದು ಮಾತಿದೆ- “ಗುಡ್‌ ಫಾರ್‌ ನಥಿಂಗ್‌’. ಒಬ್ಬ ಮನುಷ್ಯ ತನ್ನ ಬುದ್ಧಿವಂತಿಕೆಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸದೆ ಬರೀ ಮಾತನಾಡುತ್ತಲೇ ಇದ್ದರೆ ಅವನಿಗೆ ಆ ಬುದ್ಧಿವಂತಿಕೆ ಇದ್ದು ಏನು ಪ್ರಯೋಜನ ? ಅವನೂ ಕುಬjನೇ ಅಲ್ವಾ? 
ಪ್ರತಿಯೊಬ್ಬ ಜೀವಿಗೂ ಅವನದೇ ಆದ ಸಂಬಂಧಗಳು, ಆಸೆ, ಕನಸು, ಗೌರವ ಎಲ್ಲಾ ಇರುತ್ತವೆ. ಅವನು ಎಲ್ಲಾ ಸಂಬಂಧಗಳನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕು ಎಂದು ಆಸೆ ಪಡುತ್ತಾನೆ. ಆದರೆ ಎಲ್ಲರನ್ನೂ ಸಂತೋಷಪಡಿಸುವುದು ಎಷ್ಟು ಕಷ್ಟ ಅಂತ ನಮ್ಮೆಲ್ಲರಿಗೂ ಗೊತ್ತೇ ಇದೆ. ಆದ್ದರಿಂದ, ಬೇರೆಯವರು ನಮ್ಮ ತಲೆ ಕೆಡಿಸಿದರೂ ಸಹ ನಿರ್ಧಾರ ತೆಗೆದುಕೊಳ್ಳುವುದು ನಮಗೆ ಬಿಟ್ಟಿದ್ದು. 

Advertisement

ಕಲಿಯುವುದಕ್ಕೆ ವಯಸ್ಸಿಲ್ಲ, ಜಾತಿಯಿಲ್ಲ, ವರ್ಣಭೇದವಿಲ್ಲ. ಎಷ್ಟೋ ಸಲ ನಾವು ತಪ್ಪು ಮಾಡುತ್ತಿದ್ದಾಗ ಚಿಕ್ಕಮಕ್ಕಳು ನಮ್ಮನ್ನು ಸರಿಪಡಿಸಿರುತ್ತಾರೆ. ಅವರಿಂದ ಕೂಡ ಕಲಿಯುವುದು ಬೇಕಾದಷ್ಟಿರುತ್ತದೆ. ಪ್ರತಿದಿನ ಕನಿಷ್ಠ ಹತ್ತು ಜನ ಬೀದಿಯಲ್ಲಿ ನಡೆದು ಹೋಗುವವರನ್ನು ಮಾತನಾಡಿಸಿ, ಒಬ್ಬೊಬ್ಬರಿಂದ ಒಂದೊಂದು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಓದಿರುವ ಜನರು ತಮ್ಮ ಜೀವನಕ್ಕೆ ಎಷ್ಟು ಬೆಲೆ ಕೊಡುತ್ತಾರೋ, ಓದು ಬರಹ ತಿಳಿಯದೆ ಹಳ್ಳಿಯಿಂದ ಬಂದಿರುವ ಮುಗ್ಧರೂ ಸಹ ತಮ್ಮ ಜೀವನಕ್ಕೆ ಅಷ್ಟೇ ಗೌರವ ಕೊಡುತ್ತಾರೆ. ಅವರು ಕಷ್ಟಗಳನ್ನು ಕಷ್ಟ ಅಂದುಕೊಳ್ಳುವುದೇ ಇಲ್ಲ. ಅವೆಲ್ಲಾ ಜೀವನದಲ್ಲಿ ಬಂದು ಹೋಗುವ ಸನ್ನಿವೇಶಗಳು ಅಂತ ದುಡಿಯುತ್ತಲೇ ಇರುತ್ತಾರೆ. ಅವರು ಯಾವತ್ತೂ ಸಾಕಪ್ಪ ನಾನು ಕೆಲಸ ಮಾಡಿದ್ದು, ಇನ್ನು ನಾನು ಕುಳಿತು ತಿನ್ನಬೇಕು, ಕೆಲಸದಿಂದ ನಿವೃತ್ತಿ ಹೊಂದಬೇಕು ಎಂದು ಹೇಳುವಷ್ಟು ಸೋಂಬೇರಿಗಳಲ್ಲ, ಮತ್ತು ತಾವೇ ಮಹಾನ್‌ ಬುದ್ಧಿವಂತರೆಂದು ಬೀಗುವ ಕುಬ್ಜರು ಅಲ್ಲ! 

Advertisement

Udayavani is now on Telegram. Click here to join our channel and stay updated with the latest news.

Next