Advertisement

ಎಚ್‍ಡಿಕೆಯಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ

11:40 PM Jun 23, 2019 | Team Udayavani |

ಬೆಂಗಳೂರು: ಬರಪೀಡಿತ ಪ್ರದೇಶದಲ್ಲಿ ಒಳ್ಳೆಯ ಕೆಲಸ ಮಾಡಿದ ಅಧಿಕಾರಿಗಳಿಗೆ ಚೆನ್ನಾಗಿ ಕೆಲಸ ಮಾಡಿ ಎಂದಿದ್ದೇನೆ. ಸರಿಯಾಗಿ ಕೆಲಸ ಮಾಡದವರಿಗೆ ಛೀಮಾರಿ ಹಾಕಿದ್ದೇನೆ. ಪ್ರತಿ ಹೆಜ್ಜೆಗೂ ಪ್ರತಿಪಕ್ಷ ನಾಯಕನಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಾನು ಮುಖ್ಯಮಂತ್ರಿಗಳಿಂದ ಪಾಠ ಕಲಿಯಬೇಕಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳಿಗೆ ಮಾಹಿತಿ ಏನಿದೆಯೋ ಗೊತ್ತಿಲ್ಲ. ನಾನು ಸೇರಿ ಹಲವು ಮುಖಂಡರು ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೆವು. ಒಂದೆರಡು ಕಡೆ ಒಳ್ಳೆಯ ಕೆಲಸವಾಗಿದ್ದಕ್ಕೆ ಜಿಲ್ಲಾಧಿಕಾರಿಗಳಿಗೆ “ಒಳ್ಳೆಯ ಕೆಲಸ ಮಾಡಿದ್ದೀರಿ, ಮುಂದುವರಿಸಿ ಚೆನ್ನಾಗಿ ಕೆಲಸ ಮಾಡಿ’ ಎಂದು ಹೇಳಿದ್ದೆ. ಎಲ್ಲಿ ಸರಿಯಾಗಿ ಕೆಲಸ ನಡೆದಿಲ್ಲವೋ ಅಲ್ಲಿನ ಅಧಿಕಾರಿಗಳಿಗೆ ಪ್ರತಿಪಕ್ಷ ನಾಯಕನಾಗಿ ಛೀಮಾರಿ ಹಾಕಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದೆ. ಮುಖ್ಯಮಂತ್ರಿಗಳಿಂದ ನಾನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ಕರ್ತವ್ಯ ನಾನು ಮಾಡುತ್ತಿದ್ದೇನೆ’ ಎಂದು ಹೇಳಿದರು.

ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸಲಿ: “ನಾನು ಮೂರು ಜಿಲ್ಲೆಗಳ ಆರು ತಾಲೂಕುಗಳಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡ ಮೇಲೆ ಮುಖ್ಯಮಂತ್ರಿಗೆ ಬರದ ನೆನಪಾಯಿತು. ಜಿಲ್ಲಾಧಿಕಾರಿಗಳು, ಅಧಿಕಾರಿಗಳ ಸಭೆ ನಡೆಸಿದರು. ಅದು ಅಲ್ಲಿಗೆ ಮುಗಿಯಿತು. ವಿಧಾನಸೌಧಕ್ಕೆ ಹೋದರೆ ಮಂತ್ರಿಗಳಿಲ್ಲ. ಬರಪೀಡಿತ ಪ್ರದೇಶಗಳಿಗೆ ಹೋದರೆ ಮಂತ್ರಿಗಳು ಪ್ರವಾಸ ಮಾಡುತ್ತಿಲ್ಲ. ಇಂತಹ ದಾರುಣ ಸ್ಥಿತಿಯಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೆ ಇನ್ನಷ್ಟು ಹಾಹಾಕಾರ ತಲೆದೋರುವ ಆತಂಕ ಎದುರಾಗಿದೆ” ಎಂದು ಹೇಳಿದರು.

ರಾಜ್ಯದ ಯಾವುದೇ ಜಲಾಶಯದಲ್ಲೂ ನೀರಿಲ್ಲ. 40 ವರ್ಷಗಳಲ್ಲಿ ಹಿಂದೆಂದೂ ಇಂತಹ ಪರಿಸ್ಥಿತಿ ಕಂಡಿಲ್ಲ. ಶೇ.80ರಷ್ಟು ಬಿತ್ತನೆಯಾಗಬೇಕಿದ್ದ ಸಂದರ್ಭದಲ್ಲಿ ಸದ್ಯ ಶೇ.10ರಷ್ಟು ಬಿತ್ತನೆಯಷ್ಟೇ ಆಗಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕು. ಎಲ್ಲದಕ್ಕೂ ಯಡಿಯೂರಪ್ಪನನ್ನು ಟೀಕಿಸುವ ಬದಲಿಗೆ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.

ಮೂರು ದಿನ ಕೈಗೊಂಡ ಬರ ಅಧ್ಯಯನ ಪ್ರವಾಸದ ವೇಳೆ ಕಂಡ ಜನರ ಹಾಹಾಕಾರವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ವಾಸ್ತವ ಅರಿತು ಸಮಸ್ಯೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿಗಳು ಹಳ್ಳಿ ವಾಸ್ತವ್ಯ ಮಾಡುತ್ತೇನೆ, ಶಾಲೆಯಲ್ಲಿ ಮಲಗುತ್ತೇನೆ ಎಂದು ಹೇಳುತ್ತಾರೆ. ಯಾವುದೋ ಒಂದು ಗ್ರಾಮದತ್ತ ಗಮನ ಹರಿಸುತ್ತೇನೆ ಎಂದು ಹೇಳುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ಕಿಡಿ ಕಾರಿದರು.

Advertisement

ಗ್ರಾಮ ವಾಸ್ತವ್ಯಕ್ಕೆ ವಿರೋಧವಿಲ್ಲ: ಗ್ರಾಮ ವಾಸ್ತವ್ಯಕ್ಕೆ ವಿರೋಧವಿಲ್ಲ. ಆದರೆ, ಈ ಹಿಂದೆ ಅವರು ವಾಸ್ತವ್ಯ ಹೂಡಿದ್ದ ಗ್ರಾಮಗಳ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಹಳ್ಳಿಗಳ ವಾಸ್ತವ ಸ್ಥಿತಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ. ಈಗಲಾದರೂ ಮುಖ್ಯಮಂತ್ರಿಗಳು, ಸಚಿವರು ಜನರ ಸಮಸ್ಯೆಗೆ ಸ್ಪಂದಿಸಲಿ. ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸಲಿ ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಗೆ ಆಗ್ರಹ: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸದ ಕಾರಣ ರೈತರು ಬೀದಿ ಪಾಲಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ ಶೇ.6ರ ಬಡ್ಡಿ ದರದಲ್ಲಿ 6,000 ಕೋಟಿ ರೂ. ಸಾಲ ಸೌಲಭ್ಯ ಕಲ್ಪಿಸಿದೆ. ಶೇ. 90ರಷ್ಟು ಕಾರ್ಖಾನೆಗಳು ಈ ಸೌಲಭ್ಯ ಪಡೆದಿದ್ದರೂ ರೈತರಿಗೆ ಬಾಕಿ ಪಾವತಿಸಿಲ್ಲ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಮುಖ್ಯಮಂತ್ರಿಗಳು ಕಣ್ಣು ಮುಚ್ಚಿ ಕುಳಿತು ಕೇವಲ ಭರವಸೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸೌಲಭ್ಯ ಪಡೆದ ಹಾಗೂ ಪಡೆಯಬೇಕಾದ ಕಾರ್ಖಾನೆಗಳು ಕೂಡಲೇ ರೈತರಿಗೆ ಬಾಕಿ ಪಾವತಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.

ಡಿಪಿಆರ್‌ ಕೈಬಿಡಿ: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಹರಿಸುವ ಸಂಬಂಧ ಸರ್ಕಾರ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಯತ್ನ ಆರಂಭಿಸಿದ್ದು, ಇದಕ್ಕೆ ಆ ಭಾಗದ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಅವೈಜ್ಞಾನಿಕ. ಕಾರ್ಯಸಾಧುವಲ್ಲದ ಸುಳ್ಳು ಭರವಸೆಗಳನ್ನು ನೀಡಿ ಸಾವಿರಾರು ಕೋಟಿ ರೂ.ಖರ್ಚು ಮಾಡುವ ಬದಲಿಗೆ ವಾಸ್ತವ ಅರ್ಥ ಮಾಡಿಕೊಂಡು ಡಿಪಿಆರ್‌ ಸಿದ್ಧಪಡಿಸುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು. ಇದು ಆ ಭಾಗದ ಜನರ ಹೋರಾಟ. ಇದನ್ನು ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕು. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ಯಡಿಯೂರಪ್ಪ ಹೇಳಿದರು.

ಪರಮೇಶ್ವರ್‌ ಜತೆ ಮಾತನಾಡ್ತೇನೆ: ತುಮಕೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಂಚರಿಸುತ್ತಿದ್ದ ಮಾರ್ಗದಲ್ಲಿ ಕಟ್ಟಡದ ಮೇಲಿದ್ದ ಬಿಜೆಪಿ ಧ್ವಜ ತೆರವಿಗೆ ನೋಟಿಸ್‌ ನೀಡುವಂತೆ ಸೂಚಿಸಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಪಕ್ಷದ ಧ್ವಜ ಹಾರಿಸಬಾರದು ಎಂಬುದಾಗಿ ಅನುಭವಿ ರಾಜಕಾರಣಿಯಾದ ಪರಮೇಶ್ವರ್‌ ಅವರು ಹೇಳಿರುವುದಕ್ಕೆ ಸಾಧ್ಯವಿಲ್ಲ. ವಾಸ್ತವ ಸ್ಥಿತಿ ತಿಳಿದು ಅವರೊಂದಿಗೆ ಮಾತನಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next