Advertisement

Kundapura; ಸ್ಪರ್ಧೆಗೆ ತೆರಳಲು ವಿಮಾನ ಟೆಕೆಟ್‌ಗೂ ಹಣ ಇಲ್ಲ!

01:35 AM Oct 15, 2024 | Team Udayavani |

ಕುಂದಾಪುರ: ನೂರು ಮೀ. ಓಟದಲ್ಲಿ ರಾಷ್ಟ್ರಮಟ್ಟದಲ್ಲಿ 3 ಬೆಳ್ಳಿ, 1 ಕಂಚು ಪದಕ ಪಡೆದ ಓಟಗಾರನಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸಲು ವಿಮಾನ ಟಿಕೆಟ್‌ಗೂ ಹಣ ಇಲ್ಲ! ಮುಂದಿನ ಫೆಬ್ರವರಿಯಲ್ಲಿ ದುಬಾೖಯಲ್ಲಿ ನಡೆಯುವ ಸೆಲೆಬ್ರಲ್‌ ಪಾಲ್ಸಿ ಗ್ರಾಂಡ್‌ ಪಿಕ್ಸ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಇದ್ದರೂ ಭಾಗವಹಿಸುವುದು ಹೇಗೆ ಎಂಬ ಚಿಂತೆ. ಇದು ಕ್ರೀಡಾ ಸಾಧಕ ಸೆಲೆಬ್ರಲ್‌ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಸಚ್ಚಿದಾನಂದ ದೇವಾಡಿಗ ಅವರ ಸ್ಥಿತಿ.

Advertisement

ಇವರು ಆಲೂರಿನ 5 ಸೆಂಟ್ಸ್‌ ನಿವಾಸಿ ಶ್ರೀನಿವಾಸ ದೇವಾಡಿಗ – ಶರಾವತಿ ದೇವಾಡಿಗರ ಪುತ್ರ. ಶ್ರೀನಿವಾಸರ ಇನ್ನೊಬ್ಬ ಪುತ್ರ, ಆಲೂರು ಶಾಲೆ 7ನೇ ತರಗತಿ ವಿದ್ಯಾರ್ಥಿ ಸೌರವ್‌ ದೇವಾಡಿಗ ಜಿಲ್ಲಾ ಮಟ್ಟದ ಚೆಸ್‌ ಪಂದ್ಯ ವಿಜೇತ.

ಕ್ರೀಡಾಸಕ್ತಿ
6ನೇ ತರಗತಿವರೆಗೆ ಬೆಂಗಳೂರಿನ ಹಿರಿಯೂರಿನಲ್ಲಿ ಓದಿರುವ ಇವರು 7ನೇ ತರಗತಿಗೆ ಆಲೂರಿಗೆ ಬಂದರು. ಇಲ್ಲಿ ಶಿಕ್ಷಕರಾಗಿದ್ದ ವೀರೇಂದ್ರ ಜೋಗಿ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಜಿಲ್ಲಾ ಮಟ್ಟ ದಲ್ಲಿ ಜಾವೆಲಿನ್‌ ಎಸೆತ ಹಾಗೂ ಶಾಟ್‌ಪುಟ್‌ನಲ್ಲಿ ಪದಕಗಳನ್ನು ಪಡೆದರು. ಅನಂತರ ಶಾಟ್‌ಪುಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಪಡೆದ ಇವರ ಬದುಕು ಕೊರೊನಾ ಬಳಿಕ ಬದಲಾಯಿತು. ಕ್ರೀಡೆ ನಿಂತ ನೀರಾಯಿತು. ಕ್ರೀಡೆಗೆ ತಿಲಾಂಜಲಿ ಇಡುವ ಯೋಚನೆ ಬಂತು. ಆಗ ಬೆಂಬಲ ಕೊಟ್ಟದ್ದು ತಾಯಿಯ ಸಹೋದರ, ಬೆಂಗಳೂರಿನಲ್ಲಿ ಸ್ಪೆಷಲ್‌ ಒಲಿಂಪಿಕ್ಸ್‌ನ ಆ್ಯತ್ಲಿಟ್‌ಗಳಿಗೆ ಕೋಚ್‌ ಆಗಿರುವ ಮಂಜುನಾಥ ದೇವಾಡಿಗರು. ಕುಂದಾಪುರ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ಉಪನ್ಯಾಸಕಿ ಸಂಧ್ಯಾ ನಾಯಕ್‌ ಅವರು ಪ್ರೋತ್ಸಾಹ ನೀಡಿದರು. ಆದರೆ ಕೋಚ್‌ ಇರಲಿಲ್ಲ. ರಾಷ್ಟ್ರಮಟ್ಟ ದಲ್ಲಿ ಆಡಿದರೂ ಪೌಷ್ಟಿಕ ಆಹಾರ ಸೇವಿಸಲು ಆರ್ಥಿಕವಾಗಿ ಕಷ್ಟವಿದ್ದುದು ಹಾಗೂ ಮಾಹಿತಿ ಕೊರತೆಯಿದ್ದ ಕಾರಣ ಪದಕ ಸ್ವಲ್ಪದರಲ್ಲಿ ಕೈ ತಪ್ಪಿತು. ಆಗ ಸಂಧ್ಯಾ ನಾಯಕ್‌ ಅವರು ಅಜ್ಜರಕಾಡಿನ ಸಮರ್‌ ಅವರ ಮೂಲಕ ಉಚಿತ ತರಬೇತಿಗೆ ಏರ್ಪಾಟು ಮಾಡಿದರು. ಪ್ರಸ್ತುತ ಉಡುಪಿ ಎಂಜಿಎಂ ಕಾಲೇಜಿ ನಲ್ಲಿ ದ್ವಿತೀಯ ಬಿಎ ಓದುತ್ತಿದ್ದಾರೆ.

ನಾಲ್ಕು ಪದಕ
ಗುಜರಾತ್‌, ದಿಲ್ಲಿ, ಗೋವಾದಲ್ಲಿ ಸಿಪಿಎಸ್‌ಎಫ್‌ಐ (ಸೆಲೆಬ್ರಲ್‌ ಪಾಲ್ಸಿ ನ್ಪೋರ್ಟ್ಸ್ ಇಂಡಿಯಾ) ನಡೆಸಿದ ರಾಷ್ಟ್ರ ಮಟ್ಟದ ಸೆಲೆಬ್ರಲ್‌ ಪಾಲ್ಸಿ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ 19ರ ವಯೋಮಾನದ ಒಳಗಿನ 100 ಮೀ. ಹಾಗೂ 200 ಮೀ. ಓಟದ ಸ್ಪರ್ಧೆಯಲ್ಲಿ 3 ರಜತ, 1 ಕಂಚಿನ ಪದಕ ಪಡೆದಿದ್ದಾರೆ. ಸರಿಯಾದ ಮಾರ್ಗದರ್ಶನ, ತರಬೇತಿ ದೊರೆತ ಬಳಿಕ ಪದಕ ಗಳಿಸುತ್ತಿದ್ದು, ಅದಕ್ಕೂ ಮೊದಲು ಆಡುತ್ತಿದ್ದ ಶಾಟ್‌ಪುಟ್‌ ಬದಲಾಗಿ ಪೂರ್ಣಪ್ರಮಾಣದಲ್ಲಿ ಓಟಕ್ಕಾಗಿಯೇ ತರಬೇತಿಯಲ್ಲಿದ್ದಾರೆ. 100 ಮೀ. ಓಟವನ್ನು 13.37 ಸೆಕೆಂಡ್‌ನ‌ಲ್ಲಿ ಕ್ರಮಿಸಿದ್ದಾರೆ. ವಿಶ್ವದಾಖಲೆ ಇರುವುದು 10.82 ಸೆಕೆಂಡ್‌.

ಹಣಕಾಸಿನ ಮುಗ್ಗಟ್ಟು

Advertisement

ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದ ಶ್ರೀನಿವಾಸ ದೇವಾಡಿಗರು ಈಗ ಆಲೂರಿನಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದಾರೆ. ಅವರ ಪತ್ನಿ ಗೃಹಿಣಿ. ಮಗನ ಓದಿಗೆ ತೊಂದರೆ ಮಾಡದೇ ಇದ್ದರೂ ಈಗ ಸ್ಪರ್ಧೆಗಾಗಿ ದುಬಾೖಗೆ ಕಳಿಸಲು ಇವರಲ್ಲಿ ಹಣ ಇಲ್ಲ. 2025ರ ಫೆಬ್ರವರಿಯ ಗ್ರ್ಯಾಂಡ್‌ ಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕನಸಿಗೆ ಗರಿ ಮೂಡಿಸುವ ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಂಪರ್ಕ ಸಂಖ್ಯೆ: 7619420649.

ಮಾತ್ರೆ ಇಲ್ಲದಿದ್ದರೆ ಸಮಸ್ಯೆ

ಸಚ್ಚಿದಾನಂದರಿಗೆ ಜೀವನಪೂರ್ತಿ ಔಷಧ ಬೇಕು. ಒಂದು ದಿನ ತಪ್ಪಿದರೂ ಸಮಸ್ಯೆ ಆಗುತ್ತದೆ. ಮಗುವಾಗಿದ್ದಾಗ ಬಿದ್ದು ತಲೆ, ಮೆದುಳಿಗೆ ಸಂಬಂಧಪಟ್ಟ ನರಕ್ಕೆ ಪೆಟ್ಟಾಗಿತ್ತು. ಆಗ ಶ್ರೀನಿವಾಸ ದೇವಾಡಿಗರಿಗೆ ಹೋಟೆಲ್‌ ಉದ್ಯಮ ಕೈ ಹಿಡಿದಿತ್ತು. ಅಲ್ಲೋ ಇಲ್ಲೋ ಹಣ ಒಟ್ಟು ಮಾಡಿ ತುಮಕೂರಿನಲ್ಲಿ ಚಿಕಿತ್ಸೆ ಕೊಡಿಸಿದರೂ ಜೀವನ ಪೂರ್ತಿ ಔಷಧ ಕೊಡುವುದು ತಪ್ಪಲಿಲ್ಲ.

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next