Advertisement

ಮಾಸ್ಕ್ ಇಲ್ಲ, ಅಂತರವೂ ಇಲ್ಲ; ಎಲ್ಲೆಡೆ ನಿರ್ಲಕ್ಷ್ಯ

11:43 PM Jun 29, 2020 | Sriram |

ಉಡುಪಿ: ಜಿಲ್ಲಾದ್ಯಂತ ಕೋವಿಡ್-19 ಸೋಂಕು ದಿನೇ ದಿನೆ ಹೆಚ್ಚಳವಾಗುತ್ತಿದ್ದರೂ ಕಾನೂನು ಪಾಲನೆ ಮಾತ್ರ ಮರೀಚಿಕೆಯಾಗುತ್ತಿದೆ. ಸೋಮವಾರದ ವರದಿಯಂತೆ ಜಿಲ್ಲೆಯಲ್ಲಿ ಇದುವರೆಗೆ 1,197 ಮಂದಿಗೆ ಕೋವಿಡ್-19 ಪಾಸಿಟಿವ್‌ ಕಂಡುಬಂದಿದೆ. ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದರೂ ಜನರು ಇನ್ನೂ ಎಚ್ಚೆತ್ತು ಕೊಳ್ಳದಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿದೆ.

Advertisement

ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಸಹಿತ ಕೋವಿಡ್‌-19 ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದೆ. ಸರಕಾರಿ ಕಚೇರಿಗಳಲ್ಲಷ್ಟೇ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉಳಿದಂತೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸುರಕ್ಷಾ ಕ್ರಮಗಳಿಲ್ಲದೆ ಜನರು ಓಡಾಟ ನಡೆಸುತ್ತಿದ್ದಾರೆ.

ವಲಸೆ ಕಾರ್ಮಿಕರ ದಂಡು
ಉಡುಪಿ ನಗರದಲ್ಲಿ ಲಾಕ್‌ಡೌನ್‌ ಸಮಯದಲ್ಲಿ ವಲಸೆ ಹೋಗಿದ್ದ ಕಾರ್ಮಿಕರ ಪೈಕಿ ಕೆಲವು ಮಂದಿ ಮತ್ತೆ ಹಿಂದಿರುಗಿದ್ದಾರೆ. ಸಾರಿಗೆ ಸಂಚಾರ ಆರಂಭಗೊಂಡ ಬಳಿಕ ಹೆಚ್ಚಿನ ಮಂದಿ ಕೆಲಸ ಅರಸುತ್ತಾ ಆಗಮಿಸಿದ್ದು, ಸಿಟಿ ಬಸ್ಸು ನಿಲ್ದಾಣದ ಬಳಿ ಸಂಜೆ ಹಾಗೂ ಬೆಳಗ್ಗಿನ ಹೊತ್ತು ಯಾವುದೇ ನಿಯಮಗಳನ್ನು ಪಾಲಿಸದೆ ಸಮಯ ಕಳೆಯುತ್ತಿದ್ದಾರೆ.

ಗುಟ್ಕಾ ಸೇವನೆ; ಧೂಮಪಾನ
ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವನೆ, ಧೂಮಪಾನ ಮಾಡಬಾರದು ಎಂಬ ನಿಯಮಗಳಿದ್ದರೂ ಅದರ ಪಾಲನೆ ಮಾತ್ರ ಶೂನ್ಯವಾಗಿದೆ. ಕೆಎಸ್ಸಾರ್ಟಿಸಿ, ಸಿಟಿ, ಸರ್ವೀಸು ಬಸ್ಸು ನಿಲ್ದಾಣಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಫ‌ುಟ್‌ಪಾತ್‌ಗಳಲ್ಲಿ ನಿಂತು ಮಾತನಾಡುವ ಹಾವಳಿ ಈಗಲೂ ಮುಂದುವರಿದಿದೆ.

ಬಸ್ಸುಗಳಲ್ಲಿಯೂ ನಿಯಮ ಪಾಲನೆಯಿಲ್ಲ
ಬಸ್ಸುಗಳಲ್ಲಿ ಶೇ.50ರಷ್ಟು ಮಾತ್ರ ಪ್ರಯಾಣಿಕರನ್ನು ಹಾಕಬೇಕೆಂಬ ನಿಯಮಾವಳಿಗಳಿದ್ದರೂ ಅದು ಪಾಲನೆಯಾಗುತ್ತಿಲ್ಲ. ಬೆಳಗ್ಗೆ ಹಾಗೂ ಸಂಜೆಯ ವೇಳೆ ಬಸ್ಸುಗಳಲ್ಲಿ ಜನ ಹೆಚ್ಚಿರುತ್ತಾರೆ. ಬೆರಳೆಣಿಕೆಯ ಬಸ್ಸುಗಳನ್ನು ಕಾಯುವುದರಿಂದ ಬಸ್ಸು ನಿಲ್ದಾಣಗಳಲ್ಲಿಯೂ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ.

Advertisement

ಮಾರುಕಟ್ಟೆಯಲ್ಲಿಯೂ ಇದೇ ಸ್ಥಿತಿ
ಸಂತೆಕಟ್ಟೆಯಲ್ಲಿ ರವಿವಾರ ನಡೆಯುವ ಮಾರುಕಟ್ಟೆ ಯಲ್ಲಿಯೂ ಇದೇ ಸನ್ನಿವೇಶ ಕಾಣಸಿಗುತ್ತದೆ. ಕಾಟಾಚಾರಕ್ಕೆ ಮಾಸ್ಕ್ ಧರಿಸಿ ಗ್ರಾಹಕರು ಹಾಗೂ ವರ್ತಕರು ವ್ಯವಹರಿಸುತ್ತಾರೆ. ಸಾಮಾಜಿಕ ಅಂತರ ಪಾಲನೆಯೂ ಕಷ್ಟಕರವಾಗುತ್ತಿದೆ. ಕೆಲವೊಂದು ಅಂಗಡಿಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಲಾಗಿದೆಯಾದರೂ ಹಲವೆಡೆ ನಿಯಮ ಉಲ್ಲಂಘನೆ ಮಾಡುತ್ತಿರುವುದು ಹೆಚ್ಚುತ್ತಿರುವ ರೋಗ ಲಕ್ಷಣಕ್ಕೆ ಮತ್ತಷ್ಟು ವೇಗ ನೀಡಿದಂತಾಗುವ ಸಾಧ್ಯತೆಗಳಿವೆ.

ಆದೇಶ ಉಲ್ಲಂಘಿಸಿದರೆ ಕ್ರಿಮಿನಲ್‌ ಪ್ರಕರಣ
ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಪಾಲನೆಗೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಈಗಾಗಲೇ ನೀಡಲಾಗಿದೆ. ಈ ಆದೇಶಗಳನ್ನು ಪಾಲಿಸದೆ ಇದ್ದವರ ಮೇಲೆ ಪೊಲೀಸ್‌ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗುವುದು. ಇದನ್ನು ಇನ್ನೂ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
-ಜಿ.ಜಗದೀಶ್‌, ಜಿಲ್ಲಾಧಿಕಾರಿ

32,800 ರೂ.
ದಂಡ ವಸೂಲು
ನಗರದಲ್ಲಿ ಮಾಸ್ಕ್ ಸಹಿತ ಸಾಮಾಜಿಕ ಅಂತರದ ನಿಯಮಾವಳಿಗಳನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿ ಒಟ್ಟು 328 ಪ್ರಕರಣಗಳು ದಾಖಲಾಗಿದ್ದು, 32,800 ರೂ.ದಂಡ ಸಂಗ್ರಹಿಸಲಾಗಿದೆ. ಅಂಗಡಿ-ಮುಂಗಟ್ಟು, ಮಾರುಕಟ್ಟೆ ಸಹಿತ ಹಲವೆಡೆ ದಾಳಿ ನಡೆಸಿ ತಲಾ 100 ರೂ.ನಂತೆ ದಂಡ ಸಂಗ್ರಹಿಸಲಾಗುತ್ತಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next