Advertisement

ಯಾರನ್ನೂ ಬೆಟ್ಟು ಮಾಡಿ ಬೆಗ್ಗರ್ಸ್‌ ಎಂದಿಲ್ಲ

01:01 AM Feb 22, 2019 | |

ಬೆಂಗಳೂರು: ಲೋಕಸಭಾ ಚುನಾವಣೆ ಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ನಮ್ಮನ್ನುಬೆಗ್ಗರ್ಸ್‌ ಥರಾ ನೋಡಬೇಡಿ ಎಂದು ತಾವು ಯಾರಿಗೂ ಬೆಟ್ಟು ಮಾಡಿ ಹೇಳಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಗ್ಗರ್ಸ್‌ ಥರಾ ನೋಡಬೇಡಿ ಎಂದು ಯಾರನ್ನೂ ಗುರಿಯಾಗಿಸಿಕೊಂಡು ಹೇಳಿಲ್ಲ. ಮಾಧ್ಯಮಗಳಲ್ಲಿ ಅರ್ಧ ವಿಷಯ ಮಾತ್ರ ಬಂದಿದೆ. ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. ಸೀಟು ಹಂಚಿಕೆ ವಿಷಯ ಸುಗಮವಾಗಿ ನಡೆಯಲಿದೆ. ಆಪರೇಷನ್‌ಕಮಲದ ವಿಷಯ ಶಾಂತವಾಗಿ ಮುಕ್ತಾಯವಾದಂತೆ ಸೀಟು ಹಂಚಿಕೆ ವಿಚಾರವೂ ಸುಗಮವಾಗಿ ನಡೆಯಲಿದೆ ಎಂದು ಹೇಳಿದರು.

ಎಸ್‌ಐಟಿ ರಚನೆಗೆ ಆತುರವಿಲ್ಲ: ಎಸ್‌ಐಟಿ ರಚನೆ ವಿಳಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್‌ ಆಡಿಯೋ ಪ್ರಕರಣದ ಸಂಬಂಧ ಎಸ್‌ಐಟಿ ರಚನೆ ಸಂಬಂಧ ತಮಗೆ ಯಾವುದೇ ಆತುರವಿಲ್ಲ. ಯಾರನ್ನೋ ಹೆದರಿಸಲು ತನಿಖೆ ನಡೆಸುವುದೂ ಇಲ್ಲ. ವ್ಯವಸ್ಥೆ ಸರಿಪಡಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಬೇಕು. ಅದಕ್ಕೆ ಸಮಯಬೇಕು ಎಂದು ಹೇಳಿದರು.

“ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಈಗಾಗಲೇ ಆರೋಪ ಮುಕ್ತರಾಗಿದ್ದಾರೆ. ಹಾಗಂತ ಆತುರವಾಗಿ ಎಲ್ಲವನ್ನು ಮಾಡಬೇಕೆಂದು ಇಲ್ಲ. ಆಪರೇಷನ್‌ ಆಡಿಯೋ ಪ್ರಕರಣದಲ್ಲಿ ಬೇರೆ ವಿಷಯಗಳು ಇರುವುದರಿಂದ ಆ ಬಗ್ಗೆ ತನಿಖೆ ನಡೆಸಬೇಕಿದೆ’ ಎಂದರು.

ಪುಲ್ವಾಮಾ ಉಗ್ರರ ದಾಳಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೂಟಿಂಗ್‌ ಮಾಡುತ್ತಿದ್ದರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ರಾಜ್ಯ ಸರ್ಕಾರದಲ್ಲಿ ಮಾಡಲು ಸಾಕಷ್ಟು ಕೆಲಸಗಳಿವೆ. ನಾನು ಅನಗತ್ಯ, ವಿವಾದಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ’ ಎಂದು ಹೇಳಿದರು

Advertisement

ಸ್ಪರ್ಧೆಗೆ ಎಲ್ಲರೂ ಸ್ವತಂತ್ರರು: ಸುಮಲತಾಗೆ ಟಾಂಗ್‌

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧೆ ವಿಚಾರದಲ್ಲಿ ಸುಮಲತಾ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಿತ ಜೆಡಿಎಸ್‌
ನಾಯಕರು ಬಹಿರಂಗ ಅಸಮಾಧಾನ ಹೊರಕಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್‌ ಸಂಸದರಿದ್ದರೂ ಕಾಂಗ್ರೆಸ್‌ನಿಂದ ಸುಮಲತಾ ಅವರನ್ನು ಕಣಕ್ಕಿಳಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿರುವ ಬಗ್ಗೆ ಜೆಡಿಎಸ್‌ ನಾಯಕರು ಬೇಸರಗೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಯಾರು, ಎಲ್ಲಿಂದ ಬೇಕಾದರೂ ಸ್ಪರ್ಧಿಸಲು ಸ್ವತಂತ್ರರು, ನಾನು ಸ್ಪರ್ಧೆ ಮಾಡುವವರನ್ನು ಅಭಿನಂದಿಸುತ್ತೇನೆ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಪುಟ್ಟರಾಜು, ಯಾರು, ಯಾರನ್ನು ಭೇಟಿ ಮಾಡಿದ್ದರು ಎಂಬುದು ಮುಖ್ಯವಲ್ಲ. ದೇವೇಗೌಡರು ಹಾಗೂ ರಾಹುಲ್‌ಗಾಂಧಿ ತೀರ್ಮಾನ ಏನು ಎಂಬುದು ಮುಖ್ಯ ಎಂದು ಸಿದ್ದರಾಮಯ್ಯ -ಸುಮಲತಾ ಭೇಟಿಯಾದರೂ ಟಿಕೆಟ್‌ ಅಂತಿಮವಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿಯಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿತ್ತು. ನಾವು ಗೆದ್ದಿದ್ದೆವು. ಈ ಬಾರಿಯೂ ನಮಗೇ ಆ ಕ್ಷೇತ್ರವನ್ನು ಬಿಟ್ಟು ಕೊಡಲಾಗುವುದು ಎಂದು ಹೇಳಿದರು.

ನರೇಗಾದಡಿ ರಾಜ್ಯ ಸರ್ಕಾರದಿಂದ 438 ಕೋಟಿ ರೂ. ಬಿಡುಗಡೆ: ಸಿಎಂ

ಬೆಂಗಳೂರು: ನರೇಗಾ ಯೋಜನೆ ಅಡಿಯಲ್ಲಿ ಬಾಕಿ ಉಳಿದಿರುವ ಕಾರ್ಮಿಕರ 438 ಕೋಟಿ ರೂ.ಕೂಲಿ ಹಣವನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದ್ದು, ಸಿಂಗಲ್‌ ಇಎಫ್ಎಂಎಸ್‌ ಪೋರ್ಟಲ್‌ ಮೂಲಕ ನೇರವಾಗಿ ಕಾರ್ಮಿಕರಿಗೆ ಬಿಡುಗಡೆಗೊಳಿಸಲಾಗಿದೆ ಎಂದು ಸಿಎಂ ಹೇಳಿದರು.

ನರೇಗಾ ಕೂಲಿ ಕಾರ್ಮಿಕರಿಗೆ ಹಣ ವರ್ಗಾವಣೆಯ ರಾಜ್ಯ ಸರ್ಕಾರದ ಪೋರ್ಟಲ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ನವೆಂಬರ್‌ ತಿಂಗಳಿನಿಂದ ಕೂಲಿ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಕಂದಾಯ ಹಾಗೂ ಗ್ರಾಮೀಣಾಭಿವೃವೃದ್ಧಿ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಬಾಕಿ ಇರುವ 2,149 ಕೋಟಿ ರೂ.ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಕೇಂದ್ರ ಸರ್ಕಾರ ಕೇವಲ 117 ಕೋಟಿ ರೂ.ಬಿಡುಗಡೆ ಮಾಡಿದೆ ಎಂದರು.

ರಾಜ್ಯ ಸರ್ಕಾರ ಬಡವರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ್ದು, ಕೇಂದ್ರ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡದಿದ್ದರೂ ಮುಖ್ಯಮಂತ್ರಿಗಳು ತಕ್ಷಣ 438 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಉಳಿದ 440 ಕೋಟಿ ಹಣವನ್ನು ಇನ್ನೆರಡು ದಿನದಲ್ಲಿ ಬಿಡುಗಡೆ ಮಾಡಲಿದ್ದಾರೆ.
● ಕೃಷ್ಣಭೈರೇಗೌಡ ಗ್ರಾಮೀಣಾಭಿವೃದ್ಧಿ  ಸಚಿವ 

ಯಾರೂ ಬೆಗ್ಗರ್ಸ್‌ ಅಲ್ಲ. ಇದು ಮೈತ್ರಿ ಸರ್ಕಾರ. ಕೇಂದ್ರಕ್ಕೆ ಒಂದು ಸಂದೇಶ ಕಳುಹಿಸಬೇಕಿದೆ. ಜೆಡಿಎಸ್‌ಗೆ ಎರಡು, ಮೂರು ಸೀಟು ಬಿಟ್ಟು ಕೊಡುತ್ತಾರೆಂದು ಸಿಎಂಗೆ ಯಾರೋ ಹೇಳಿದ್ದಾರೆ. ಹಾಗಾಗಿ
ಸಿಎಂ ಆ ರೀತಿ ಹೇಳಿಕೆ ನೀಡಿರಬಹುದು.

● ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next