Advertisement

ಮಧ್ಯಾಹ್ನ 2 ಗಂಟೆ ಅನಂತರ ಈ ಊರಿಗೆ ಬಸ್ಸಿಲ್ಲ

11:55 PM Jan 30, 2020 | Sriram |

ಅಂಪಾರು: ಶಂಕರನಾರಾಯಣ ಹಾಗೂ ಅಂಪಾರು ಎರಡು ಪೇಟೆಗಳಿಂದ ಸರಿ ಸುಮಾರು 8 ಕಿ.ಮೀ. ಅಂತರವಿರುವ ಕ್ರೋಢಬೈಲೂರಿಗೆ ಮಧ್ಯಾಹ್ನ 2.15 ಗಂಟೆಯ ಅನಂತರ ಯಾವುದೇ ಬಸ್‌ ಬರುತ್ತಿಲ್ಲ. ಇಲ್ಲಿಗೆ ಸಂಜೆ 3.45 ಹಾಗೂ ಸಂಜೆ 5.30 ಕ್ಕೆ ಎರಡು ಖಾಸಗಿ ಬಸ್‌ ಸಂಚಾರವನ್ನು ವಾರದಿಂದ ಹಿಂದೆ ಸ್ಥಗಿತಗೊಳಿಸಲಾಗಿದೆ.

Advertisement

ಇದರಿಂದ ಕ್ರೋಢ ಬೈಲೂರಿನಿಂದ ಶಾಲಾ -ಕಾಲೇಜುಗಳಿಗೆ, ಹೊರಗಡೆ ಕೆಲಸಕ್ಕೆ ಹೋಗುವವರು ವಾಪಾಸು ಮನೆ ಸೇರಲು 3-4 ಕಿ.ಮೀ. ನಡೆದುಕೊಂಡು ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗ ಶಂಕರನಾರಾಯಣ, ಅಂಪಾರು, ಕುಂದಾಪುರಕ್ಕೆ ತೆರಳಬೇಕಾದರೆ 3 ಕಿ.ಮೀ. ದೂರದ ಕೊಂಡಳ್ಳಿಯವರೆಗೆ ನಡೆದುಕೊಂಡು ಬರಬೇಕಾಗಿದೆ.

ಕ್ರೋಢಬೈಲೂರಿಗೆ ಒಟ್ಟು ಬೆಳಗ್ಗಿನಿಂದ ಸಂಜೆಯವರೆಗೆ 4 ಬಸ್‌ಗಳು ಬರುತ್ತಿದ್ದವು. ಬೆಳಗ್ಗೆ 8.30 ಕ್ಕೆ ಸರಕಾರಿ ಬಸ್‌ ಬರುತ್ತದೆ. ಆ ಬಳಿಕ ಕುಂದಾಪುರದಿಂದ ಶಂಕನಾರಾಯಣದಿಂದ ಬೆಳಗ್ಗೆ 11 ಕ್ಕೆ ಕ್ರೋಢಬೈಲೂರಿಗೆ ಬಂದು ಮತ್ತೆ ಶಂಕರನಾರಾಯಣಕ್ಕೆ ಒಂದು ಬಸ್‌ ಸಂಚರಿಸುತ್ತದೆ. ಅನಂತರ 2.15ಕ್ಕೆ ಅಮಾಸೆಬೈಲು – ಕ್ರೋಢಬೈಲೂರು – ಕುಂದಾಪುರಕ್ಕೆ ತೆರಳುವ ಬಸ್‌ ಬರುತ್ತದೆ.

ಆ ಬಳಿಕ ಖಾಸಗಿ ಬಸ್‌ 3.45ಕ್ಕೆ ಕೊಲ್ಲೂರು – ಕಾರ್ಕಳ ವಂಡ್ಸೆ, ನೇರಳಕಟ್ಟೆ, ಅಂಪಾರಿನಿಂದ ಕ್ರೋಢಬೈಲೂರಿಗೆ ಬರುತ್ತಿತ್ತು. ಅನಂತರ 5.30ಕ್ಕೆ ಅಮಾಸೆಬೈಲು – ಹಾಲಾಡಿ – ಶಂಕರನಾರಾಯಣ, ಕ್ರೋಢಬೈಲೂರಿಗೆ ಬಂದರು ಅಂಪಾರು ಆಗಿ ಕುಂದಾಪುರಕ್ಕೆ ಸಂಚರಿಸುತ್ತಿತ್ತು. ಆದರೆ ಈಗ ಇವರೆಡೂ ಬಸ್‌ಗಳು ಇದೇ ಮಾರ್ಗವಾಗಿ ಸಂಚರಿಸಿದರೂ, ಕ್ರೋಢ ಬೈಲೂರಿಗೆ ಮಾತ್ರ ಬರುತ್ತಿಲ್ಲ.

ಯಾಕೆ ಬರುತ್ತಿಲ್ಲ?
ಕ್ರೋಢ ಬೈಲೂರಿಗೆ ಬಸ್‌ ಹೋಗಬೇಕಾದರೆ ಅಂಪಾರು -ಶಂಕರನಾರಾಯಣ ಮಾರ್ಗದ ಕೊಂಡಳ್ಳಿಯಿಂದ 2.8 ಕಿ.ಮೀ. ಒಳಗೆ ಹೋಗಬೇಕು. ಇಲ್ಲಿಗೆ ಹೋಗುವಾಗ ಜನ ಇದ್ದರೂ, ಹಿಂತಿರುಗಿ ಬರುವಾಗ ಅಷ್ಟೇನು ಜನ ಇರುವುದಿಲ್ಲ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕೊಂಡು ಈಗ ಬಸ್ಸಿನವರು ಕ್ರೋಢಬೈಲೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

Advertisement

ಹಿಂದೆ ಶಂಕರನಾರಾಯಣದಿಂದ ಕ್ರೋಢಬೈಲೂರಿಗೆ 10 ರೂ. ಟಿಕೇಟು ನೀಡಲಾಗುತ್ತಿತ್ತು. ಆದರೆ ಕಳೆದೊಂದು ವರ್ಷದಿಂದ ಕ್ರೋಢಬೈಲೂರಿಗೆ ಟಿಕೇಟು ನೀಡದೇ ಶಂಕರನಾರಾಯಣದಿಂದ ಅಂಪಾರಿಗೆ ಟೀಕೆಟು 16 ರೂ. ನೀಡಲಾಗುತ್ತಿದೆ. ಇದಕ್ಕೆ ಕಾರಣ ಬಸ್ಸಿನವರು ಕ್ರೋಢಬೈಲೂರಿಗೆ ಇದ್ದ ಪರವಾನಗೆಯನ್ನು ನವೀಕರಿಸಿಲ್ಲ. ಆದರೆ ನಮಗೆ ಹೆಚ್ಚುವರಿ ಹೊರೆಯಾದರೂ ಪರಾÌಗಿಲ್ಲ. ನಮ್ಮೂರಿಗೆ ಬಸ್‌ ಬರಲಿ ಎನ್ನುವುದು ಈ ಊರಿನ ಜನರ ಬೇಡಿಕೆಯಾಗಿದೆ.

ವಿದ್ಯಾರ್ಥಿಗಳಿಗೆ ಸಂಕಷ್ಟ
ಕ್ರೋಢಬೈಲೂರಿನಿಂದ ಶಂಕರನಾರಾಯಣ, ಕುಂದಾಪುರ ಸಹಿತ ಬೇರೆ ಬೇರೆ ಕಡೆಗಳಿಗೆ ಶಾಲಾ – ಕಾಲೇಜಿಗೆ ಹೋಗಿ ಬರುವ ನೂರಾರು ಮಂದಿ ಮಕ್ಕಳಿದ್ದಾರೆ. ಇದಲ್ಲದೆ ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ವಾಪಾಸು ಬರುವ ಅನೇಕ ಮಂದಿಯಿದ್ದು, ಅವರೆಲ್ಲ ಮತ್ತೆ ಮನೆಗೆ ತೆರಳಲು ಸಮಸ್ಯೆಯಾಗುತ್ತಿದೆ. ಅವರೀಗ ಬಸ್‌ ಸೌಕರ್ಯವಿಲ್ಲದೆ ಯಾರ್ಯಾರದೋ ವಾಹನಗಳನ್ನು ಅಡ್ಡಹಾಕಿ ಅದರಲ್ಲಿ ಸಂಚರಿಸುವಂತಾಗಿದೆ.

ಮಾಹಿತಿ ಪಡೆಯಲಾಗುವುದು
ಪರ್ಮಿಟ್‌ ತೆಗೆದುಕೊಂಡವರು ಹಾಗೇ ಏಕಾಏಕಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸುವಂತಿಲ್ಲ. ಆದರೆ ಆ ರೂಟಿನ ಪರ್ಮಿಟ್‌ ಅವಧಿ ಮುಗಿದ್ದದ್ದರೆ, ಅದನ್ನು ಮರು ನವೀಕರಣ ಮಾಡಿದ್ದಾರೆಯೇ ಎನ್ನುವುದರ ಬಗ್ಗೆ ಮಾಹಿತಿ ಪಡೆಯಲಾಗುವುದು. ಊರವರು ನನಗೆ ಆ ಬಸ್ಸಿನ ಸಂಖ್ಯೆ ಅಥವಾ ಇನ್ನಿತರ ದಾಖಲೆಗಳನ್ನು ನೀಡಿ ದೂರು ಸಲ್ಲಿಸಲಿ. ಬಸ್ಸಿನ ಸಂಬಂಧಪಟ್ಟವರಿಗೆ ತಿಳಿಸಿ, ಮತ್ತೆ ಬಸ್‌ ಸಂಚಾರ ಆರಂಭಿಸಲು ಪ್ರಯತ್ನಿಸಲಾಗುವುದು.
– ರಾಮಕೃಷ್ಣ ರೈ,
ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ

ತುಂಬಾ ಸಮಸ್ಯೆಯಾಗುತ್ತಿದೆ
ಕುಂದಾಪುರದಿಂದ ಸಿದ್ದಾಪುರಕ್ಕೆ ಹೋಗುವ ಬಸ್‌ಗಳಲ್ಲಿ ಕೆಲವಾದರೂ ಅಂಪಾರು ಆಗಿ ಬಂದು ಕ್ರೋಢ ಬೈಲೂರು ಮೂಲಕವಾಗಿ ಶಂಕರನಾರಾಯಣ ಮಾರ್ಗವಾಗಿ ಅಲ್ಲಿಂದ ಸಿದ್ದಾಪುರಕ್ಕೆ ಸಂಚರಿಸಲಿ. ಕನಿಷ್ಠ ಕುಂದಾಪುರ – ಸಿದ್ದಾಪುರಕ್ಕೆ ಸಂಚರಿಸುವ ಸರಕಾರಿ ಬಸ್‌ಗಳನ್ನಾದರೂ ಕ್ರೋಢಬೈಲೂರಿಗೆ ಬರುವಂತೆ ಸಂಬಂಧಪಟ್ಟವರು ಗಮನವಹಿಸಲಿ. ನಮಗೆ ಅಂಪಾರು ಅಥವಾ ಶಂಕರನಾರಾಯಣಕ್ಕೆ ಹೋಗ ಬೇಕಾದರೆ ಬಸ್‌ ಬೇಕೇ ಬೇಕು. ಇಲ್ಲದಿದ್ದರೆ 8-10 ಕಿ.ಮೀ. ರಿಕ್ಷಾ ಅಥವಾ ಇನ್ನಿತರ ವಾಹನಗಳಲ್ಲಿ ಹೆಚ್ಚು ದುಡ್ಡು ತೆತ್ತು ತೆರಳಬೇಕಾಗಿದೆ.
-ದೇವಪ್ಪ ಶೆಟ್ಟಿ,ಸ್ಥಳೀಯರು, ಕ್ರೋಢಬೈಲೂರು

- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next