Advertisement

ಪುಸ್ತಕ ಗೂಡೊಳಗೆ ಪುಸ್ತಕವೇ ಇಲ್ಲ! ನಿರ್ಲಕ್ಷ್ಯದಿಂದ ಬಡವಾದ ವಿನೂತನ ಸಾಹಿತ್ಯ ಪ್ರಯೋಗ

03:57 PM Jun 26, 2023 | Team Udayavani |

ಮಹಾನಗರ: ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆರಂಭವಾದ ರಾಜ್ಯದಲ್ಲೇ ಅಪರೂಪದ “ಪುಸ್ತಕ ಗೂಡಿ’ನಲ್ಲಿ ಈಗ ಪುಸ್ತಕಗಳೇ ಕಾಣಿಸುತ್ತಿಲ್ಲ.

Advertisement

ಜಿಲ್ಲೆಯ ವಿವಿಧ ಪಂಚಾಯತ್‌ ವ್ಯಾಪ್ತಿಯ ಒಟ್ಟು 287 ಬಸ್‌ತಂಗುದಾಣಗಳಲ್ಲಿ ಪುಸ್ತಕ ಗೂಡು ನಿರ್ಮಿಸಲಾಗಿದೆ. ಆದರೆ ಪ್ರಸ್ತುತ ಶೇ. 50ಕ್ಕೂ ಅಧಿಕ ಬಸ್‌ ತಂಗುದಾಣಗಳಲ್ಲಿ ಗೂಡು (ಶೆಲ್ಫ್) ಮಾತ್ರ ಉಳಿದಿದೆ.

ಪುಸ್ತಕಗಳು ಕಾಣೆಯಾಗಿರುವುದರ ಜತೆಗೆ ಶೆಲ್ಫ್ಗೆ ಅಳವಡಿಸಿದ್ದ ಗಾಜು ಕೂಡ ಒಡೆದು ಹೋಗಿದೆ.
ದ.ಕ. ಜಿ.ಪಂ. ಸಿಇಒ ಆಗಿದ್ದ ಡಾ| ಕುಮಾರ್‌ ಅವರ ಕನಸಿನ ಯೋಜನೆ ಪುಸ್ತಕಗೂಡು 2021 ಅಕ್ಟೋಬರ್‌ ತಿಂಗಳಲ್ಲಿ ಅನುಷ್ಠಾನಗೊಂಡಿತ್ತು. ಇದು ರಾಜ್ಯದಲ್ಲೇ ವಿನೂತನ ಪ್ರಯೋಗವೂ ಆಗಿತ್ತು. ಹಂತ ಹಂತವಾಗಿ ಎಲ್ಲ ಪಂಚಾಯತ್‌ಗಳಿಗೆ ವಿಸ್ತರಿಸಲಾಗಿತ್ತು. ಇದೀಗ ಡಾ| ಕುಮಾರ್‌ ಮಂಡ್ಯ ಜಿಲ್ಲಾಧಿಕಾರಿಯಾಗಿ ತೆರಳಿದ್ದಾರೆ.

ನಿರ್ವಹಣೆಯೂ ಆಗುತ್ತಿಲ್ಲ, ಸ್ಪಂದನೆಯೂ ಸಿಗುತ್ತಿಲ್ಲ
ಗ್ರಾ.ಪಂ. ಮಟ್ಟದಲ್ಲಿ ಪುಸ್ತಕ ಗೂಡಿನ ನಿರ್ವಹಣೆ ಸರಿಯಾಗಿ ನಡೆಯದೆ ಯೋಜನೆ ಬಡ ವಾಗಿದೆ. ಸಾರ್ವ ಜನಿಕ ರಿಂದಲೂ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಮಾತುಗಳಿವೆ. ಗೂಡಿನಿಂದ ಪುಸ್ತಕಗಳನ್ನು ತೆಗದುಕೊಂಡ ಹೋದ ಕೆಲವರು ಮರಳಿ ತಂದು ಇಟ್ಟಿಲ್ಲ. ಕೆಲವು ಗೂಡುಗಳಲ್ಲಿ ಒಂದೆರಡು ಪುಸ್ತಕಗಳು ಉಳಿದಿದ್ದು, ಧೂಳು ಹಿಡಿದಿವೆ. ಆ ಮೂಲಕ ಉತ್ತಮ ಕಾರ್ಯಕ್ರಮವೊಂದು ಕೊನೆಯ ದಿನಗಳನ್ನು ಎಣಿಸುತ್ತಿದೆ.

ಧೂಳಿನಿಂದ ರಕ್ಷಣೆಗೆ
ಪುಸ್ತಕದ ಪುಟ!
ಗೂಡಿನಲ್ಲಿರುವ ಪುಸ್ತಕಗಳನ್ನು ನಿಗಾ ವಹಿಸಿಲು ಹತ್ತಿರದ ಅಂಗಡಿ ಗಳಲ್ಲಿರುವವರಿಗೆ ಸೂಚಿಸಲಾಗಿತ್ತು. ಈ ಕುರಿತು “ಉದಯವಾಣಿ ಸುದಿನ’ ಜತೆ ಮಾತನಾಡಿದ ಪುಸ್ತಕ ಗೂಡೊಂದರ ಪಕ್ಕದ ಅಂಗಡಿಯಲ್ಲಿದ್ದ ಮಹಿಳೆಯೊಬ್ಬರು, ಪುಸ್ತಕಗಳನ್ನು ಹಾಳು ಮಾಡುವವರನ್ನು ಪ್ರಶ್ನಿಸಲು ಹೋದರೆ “ನೀವ್ಯಾರು ಕೇಳಲು’ ಎಂದು ಗದರಿಸುತ್ತಾರೆ. ಅದಕ್ಕಾಗಿ ಕೇಳುವುದನ್ನೇ ಬಿಟ್ಟುಬಿಟ್ಟಿದ್ದೇನೆ. ಬಸ್‌ ತಂಗುದಾಣದಲ್ಲಿ ಧೂಳು ಇದೆ ಎಂದು ಪುಸ್ತಕದ ಪುಟ ತೆಗೆದು ನೆಲಕ್ಕೆ ಹಾಸಿ ಕುಳಿತುಕೊಂಡವರೂ ಇದ್ದಾರೆ ಎಂದರು.

Advertisement

ಯೋಜನೆ ಮುಂದುವರಿಸಿ
ಪುಸ್ತಕ ಗೂಡು ಸೇರಿದಂತೆ ಜಿ.ಪಂ. ವತಿಯಿಂದ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ಯಾವುದೇ ಯೋಜನೆಯನ್ನು ಅರ್ಧಕ್ಕೆ ನಿಲ್ಲಿಸಬಾರದು. ಪಿಡಿಒ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಇದರ ಜವಾಬ್ದಾರಿ ವಹಿಸಿಕೊಂಡು ಯೋಜನೆ ಮುಂದುವರಿಸಬೇಕು. – ಡಾ| ಕುಮಾರ್‌, ನಿರ್ಗಮಿತ ಸಿಇಒ

ಏನಿದು ಪುಸ್ತಕ ಗೂಡು?
ಪಂಚಾಯತ್‌ ವ್ಯಾಪ್ತಿಯ ಬಸ್‌ ನಿಲ್ದಾಣಗಳಲ್ಲಿ ಶೆಲ್ಫ್ ಅಳವಡಿಸಿ ಪುಸ್ತಕಗಳನ್ನು ಜೋಡಿಸಿ ಇಟ್ಟು, ಆಸಕ್ತರು ತೆಗೆದು ಓದಲು ಅವಕಾಶ ಕಲ್ಪಿಸುವುದೇ ಪುಸ್ತಕ ಗೂಡು ಯೋಜನೆ. ಬಸ್‌ ತಂಗುದಾಣದಲ್ಲಿ ಹರಟೆ ಹೊಡೆಯುವುದು, ಮೊಬೈಲ್‌ ನೋಡುತ್ತಾ ಕಾಲಹರಣ ಮಾಡುವ ಬದಲು ಪುಸ್ತಕ ತೆರೆದು ಕನಿಷ್ಠ ಎರಡು ಪುಟ ಓದುವ ಮೂಲಕ ಸಾರ್ವಜನಿಕರು, ವಿದ್ಯಾರ್ಥಿಗಳು ಓದಿನತ್ತ ಮರಳಬೇಕು ಎನ್ನುವುದೇ ಯೋಜನೆಯ ಉದ್ದೇಶ. ಪುಸ್ತಕಗಳನ್ನು ಓದಿ ಮತ್ತೆ ಅಲ್ಲೇ ಇಟ್ಟು ಹೋಗಬೇಕು ಎನ್ನುವ ನಿಯಮ ರಚಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next