ಹೂವಿನಹಡಗಲಿ: ಜಾತ್ರೆಗಳನ್ನು ಆಚರಿಸುವ ಸಂದರ್ಭದಲ್ಲಿ ದೇವರ ಹೆಸರಲ್ಲಿ ನಡೆಯುತ್ತಿರುವ ಪ್ರಾಣಿ ಹಿಂಸೆ ಸಲ್ಲದು. ಯಾವ ದೇವರು ಸಹ ಪ್ರಾಣಿ ಹಿಂಸೆ ಮಾಡುವುದನ್ನು ಒಪ್ಪುವುದಿಲ್ಲ ಎಂದು ಕಾಗಿನೆಲೆ ಗುರುಪೀಠದ ಜಗದ್ಗರು ಶ್ರೀನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಮೀರಾಕೊರ್ನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ದರ್ಶನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಹಬ್ಬಗಳ ನೆಪದಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಯಾವ ಧರ್ಮ ಗ್ರಂಥಗಳು, ಉಪನಿಷತ್ಗಳಲ್ಲಿ ಹೇಳಿಲ್ಲ. ಆದರೆ ಸಮಾಜದಲ್ಲಿ ಹಿಂದುಳಿದವರು ಆಚರಣೆ ಮೂಲಕ ಪ್ರಾಣಿ ಬಲಿ ಕೊಡುವುದು ಪಾಲಿಸುತ್ತಾ ಬಂದಿರುವುದು ಒಂದು ಕಂದಾಚಾರವಾಗಿದೆ. ಈ ಕೂಡಲೇ ಇಂತಹ ಕಂದಾಚಾರವನ್ನು ನಿಲ್ಲಿಸಬೇಕು. ಪ್ರತಿಯೊಬ್ಬರೂ ಸಹ ದುಶ್ಚಟದಿಂದ ದೂರವಿದ್ದರೆ ಮಾತ್ರ ಸಮಾಜ, ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಮರಿ ಹಬ್ಬಗಳು ಕೆಲ ವರ್ಗದ ಸಮುದಾಯಗಳಿಗೆ ಮಾತ್ರ ಯಾಕೇ ಮೀಸಲಾಗಿವೆ ಎನ್ನುವುದು ವಿಸ್ತೃತ ಚರ್ಚೆಯಾಗಬೇಕಾಗಿದೆ. ಪ್ರತಿಯೊಬ್ಬರು ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ಹಬ್ಬಗಳ ನೆಪದಲ್ಲಿ ಮಾಡುವ ದುಂದು ವೆಚ್ಚವನ್ನು ನಿಮ್ಮ ಮನೆಯಲ್ಲಿನ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಿ. ನಿಮ್ಮ ಮನೆಯಲ್ಲಿನ ಹೆಣ್ಣು ಮಗು ಶಿಕ್ಷಣ ಕಲಿತರೆ ಇಡೀ ಕುಟುಂಬ ಸುಶಿಕ್ಷಿತವಾಗಿರುತ್ತದೆ. ಇದನ್ನು ನಮ್ಮ ಕೆಳ ವರ್ಗದ ಸಮುದಾಯಗಳು ತಿಳಿದುಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಲುಮತ ಸಮುದಾಯದ ಮುಖಂಡರಾದ ಎಂ. ಪರಮೇಶ್ವರಪ್ಪ, ಬಿ. ಹನುಮಂತಪ್ಪ, ಹೋಸ್ಕೇರಿ ಬೀರಪ್ಪ, ಈಟಿ ಲಿಂಗರಾಜು, ತಾಪಂ ಮಾಜಿ ಅಧ್ಯಕ್ಷ ಎಸ್. ಹಾಲೇಶ್, ಆರ್.ಫಕ್ಕೀರಪ್ಪ, ಹನುಮೇಶ್ ಇನ್ನಿತರರಿದ್ದರು.
ಗ್ರಾಮದರ್ಶನ: ಕಾಗಿನೆಲೆ ಶ್ರೀಗಳು ತಾಲೂಕಿನಲ್ಲಿ ದೇವಗೊಂಡನಹಳ್ಳಿ, ಗುಜನೂರು, ಮೀರಾಕೊರ್ನಹಳ್ಳಿ, ವಿನೋಬನಗರ, ಉಪನಾಯ್ಕನಹಳ್ಳಿ, ಮಾನ್ಯರ ಮಸಲವಾಡ, ಹಿರೇಕೊಳಚಿ, ಹಿರೇಹಡಗಲಿ, ತುಂಬಿನಕೇರಿ, ಹಗರನೂರು, ಕೆ. ಅಯ್ಯನಹಳ್ಳಿ, ಶಿವಪುರ, ಹಾಲ್ ತಿಮ್ಲಾಪುರ, ತಿಪ್ಪಾಪುರ ಗ್ರಾಮಗಳಿಗೆ ತೆರಳಿ ಗ್ರಾಮದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.