Advertisement

ಮುಧೋಳ ಗ್ರಂಥಾಲಯಗಳಿಗಿಲ್ಲ ಸೌಕರ್ಯ

11:52 AM Oct 29, 2019 | Suhan S |

ಮುಧೋಳ: ನಗರದಲ್ಲಿ ಎರಡು ಗ್ರಂಥಾಲಯಗಳಿದ್ದು, ಗಾಂಧಿ  ಸರ್ಕಲ್‌ನಲ್ಲಿರುವ ಕೇಂದ್ರ ಗ್ರಂಥಾಲಯ ಶಿಥಿಲಾವಸ್ಥೆಯಲ್ಲಿದೆ. ಅಂಬೇಡ್ಕರ್‌ ಸರ್ಕಲ್‌ ಹತ್ತಿರ ಇನ್ನೊಂದು ಕವಿಚಕ್ರವರ್ತಿ ರನ್ನ ಹೆಸರಿನಲ್ಲಿ ರನ್ನ ಗ್ರಂಥಾಲಯ ಸ್ಥಾಪಿಸಲಾಗಿದೆ. ಇಲ್ಲಿ ಕುಡಿಯುವ ನೀರಿನ ಸೌಕರ್ಯವಿಲ್ಲ. 10 ವರ್ಷಗಳಿಂದ ಸುಣ್ಣ ಬಣ್ಣ ಕಂಡಿಲ್ಲ.

Advertisement

ಶತಮಾನದ ಹಿಂದೆಯೇ ರಾಜಾ ಮಾಲೋಜಿರಾವ್‌ ಘೋರ್ಪಡೆ ನಗರದಲ್ಲಿ ಕೇಂದ್ರ ಗ್ರಂಥಾಲಯ ಸ್ಥಾಪಿಸಿದ್ದರು. 1976ರಿಂದ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುವ ಗ್ರಂಥಾಲಯ ಗಾಂಧಿ  ಸರ್ಕಲ್‌ನಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಮಳೆಗಾಲ ಸಂದರ್ಭದಲ್ಲಿ ಕಟ್ಟಡವಿಡಿ ಸೋರುತ್ತಿದೆ. ಗ್ರಂಥಾಲಯಕ್ಕೆ ಹೊಸ ಕಟ್ಟಡದ ಅವಶ್ಯಕತೆಯಿದೆ. ಮುಧೋಳ ಮೀಸಲು ಕ್ಷೇತ್ರವಾಗಿದ್ದು, ಕಟ್ಟಡಕ್ಕೆ ವಿಶೇಷ ಅನುದಾನ ದೊರೆಯಲಿದೆ. ಭೂ ಸೇನಾ ನಿಗಮದಿಂದ ನೀಲನಕ್ಷೆ ತಯಾರಿಸಲಾಗಿದ್ದು, ಉಪಮುಖ್ಯಮಂತ್ರಿಗೋವಿಂದ ಕಾರಜೋಳ ಶಿಫಾರಸು ಪತ್ರ ಪಡೆದು ಸರ್ಕಾರಕ್ಕೆ ಕಳುಹಿಲಾಗುವುದು ಎಂದು ಗ್ರಂಥಾಲಯ ಸಿಬ್ಬಂದಿತಿಳಿಸುತ್ತಾರೆ.  ಸುಮಾರು 30-35 ಲಕ್ಷ ರೂ.ಗಳಲ್ಲಿ ನೂತನ ಕಟ್ಟಡದ ನೀಲನಕ್ಷೆ ಸಿದ್ಧಗೊಂಡಿದ್ದು, ಸರ್ಕಾರದ ಅನುಮೋದನೆ ಇನ್ನೂ ದೊರೆತಿಲ್ಲ.

ಸಿಬ್ಬಂದಿ ಕೊರತೆ: 2009ರಲ್ಲಿ ನಗರದ ರಾಜ್ಯಹೆದ್ದಾರಿಯ ಮೇಲೆ ಅಂಬೇಡ್ಕರ್‌ ಸರ್ಕಲ್‌ ಹತ್ತಿರ ಇನ್ನೊಂದು ಕವಿಚಕ್ರವರ್ತಿ ರನ್ನನ ಹೆಸರಿನಲ್ಲಿ ರನ್ನಗ್ರಂಥಾಲಯ ಸ್ಥಾಪಿಸಲಾಗಿದೆ. ನಗರದ ಕೆಇಬಿ ಹಿಂದುಗಡೆ ಇರುವಸರ್ಕಾರಿ ಶಾಲೆಯಲ್ಲಿ ಇತ್ತೀಚೆಗಷ್ಟೇ ಗ್ರಂಥಾಲಯವನ್ನು ಹಿರಿಯ ನಾಗರಿಕ ಹಿತರಕ್ಷಣಾ ಹಾಗೂ ಅಭಿವೃದ್ಧಿ ವೇದಿಕೆ ವತಿಯಿಂದ ಆರಂಭಿಸಲಾಗಿದೆ.

ಹಾಜಿರಾ ನಸರಿನ್‌ ಸಹ ಗ್ರಂಥಪಾಲಕಿಯಾಗಿ ಹಾಗೂ ರಾಮಚಂದ್ರ ಅಸುದೆ ಸಹಾಯಕರಾಗಿ, ಪ್ರಭಾರಿಯಾಗಿ ರಾಜು ಬಟಕುರ್ಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಪ್ರಭಾರಿಯಾಗಿದ್ದ ಸದಾ ಹೊರಟ್ಟಿ ಅವರನ್ನು ಇಂಗಳಗಿ ಸರ್ಕಾರಿ ಶಾಲೆಗೆ ಕಾರ್ಯ ನಿರ್ವಹಣೆಗಾಗಿ ನೇಮಿಸಲಾಗಿದೆ. ಹೀಗಾಗಿ ಮುಧೋಳದಲ್ಲಿ ಎರಡು ಗ್ರಂಥಾಲಯಗಳಿಗೆ ಇಬ್ಬರೇ ಕಾರ್ಯ ನಿರ್ವಹಿಸುತ್ತಿದ್ದು, ಸಿಬ್ಬಂದಿ ಕೊರತೆಯಿದೆ.ಗ್ರಂಥಾಲಯ ಸಹಾಯಕ ರಾಮಚಂದ್ರ ಅಸೂದೆ ಮೂರು ದಿನ ಮುಧೋಳದಲ್ಲಿ ಇನ್ನು ಮೂರು ದಿನ ಜಮಖಂಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಚೆಗೆ ಮುಧೋಳ ಕೆಇಬಿ ಹತ್ತಿರ ಇನ್ನೊಂದು ಗ್ರಂಥಾಲಯ ಉದ್ಘಾಟನೆಯಾಗಿದ್ದು, ಇಬ್ಬರೇ ನೋಡಿಕೊಳ್ಳಬೇಕಾಗಿದೆ. ಒಬ್ಬ ಗ್ರಂಥಪಾಲಕ, ಇಬ್ಬರು ಸಹಾಯಕರು, 4 ಜನ ಸಹಾಯಕರು ಹಾಗೂ 3 ಜನ ಅಟೆಂಡರುಗಳು ಬೇಕು. ಆದರೆ ಈಗ ಒಬ್ಬರು ಸಹ ಗ್ರಂಥಪಾಲಕಿ, ಒಬ್ಬರು ಗ್ರಂಥಾಲಯ ಸಹಾಯಕರು, ಇಬ್ಬರು ಮಹಿಳೆಯರನ್ನು ಸ್ವಚ್ಛತೆಗಾಗಿ ರನ್ನ ಗ್ರಂಥಾಲಯದಲ್ಲಿ, ನಗರದಲ್ಲಿರುವ ಗ್ರಂಥಾಲಯದಲ್ಲಿ ಗುರುನಾಥ ಎಂಬ ಅಂಗವಿಕಲರೊಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ರನ್ನ ಗ್ರಂಥಾಲಯದಲ್ಲಿ 29,093 ಪುಸ್ತಕಗಳು ಹಾಗೂ ಎಲ್ಲ ವೃತ್ತಪತ್ರಿಕೆಗಳು ಲಭ್ಯವಿವೆ.

Advertisement

ಸುಣ್ಣ-ಬಣ್ಣವಿಲ್ಲ: ನಗರದಲ್ಲಿ ರಾಜ್ಯ ಹೆದ್ದಾರಿ ಮೇಲೆ 2009ರಲ್ಲಿ ನಿರ್ಮಾಣಗೊಂಡಿರುವ ಭವ್ಯ ಕಟ್ಟಡ ರನ್ನ ಗ್ರಂಥಾಲಯ ಉದ್ಘಾಟನೆಗೊಂಡು 10 ವರ್ಷಗಳಾದರೂ ಆಮೇಲೆ ಒಮ್ಮೆಯೂ ಸುಣ್ಣ ಬಣ್ಣ ಕಂಡಿಲ್ಲ. ನಗರಸಭೆಯ ನಲ್ಲಿಯಿಂದ ಕುಡಿಯುವ ನೀರು ಪಡೆಯಲಾಗುತ್ತಿದೆ. ಹಾಜಿರಾ ನಸರಿನ್‌ ಅವರೇ ವಿಶೇಷ ಆಸಕ್ತಿ ವಹಿಸಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಿಬ್ಬಂದಿ ಕೊರತೆಯಿದ್ದರೂ ಕಂಡುಬರುತ್ತಿಲ್ಲ. ಹಣ ಪೂರೈಸದ ನಗರಸಭೆ: ನಗರದ ಕಟ್ಟಡಗಳಿಗೆ ತೆರಿಗೆ ವಸೂಲಿ ಮಾಡುವಾಗ ಗ್ರಂಥಾಲಯ ಕರವೆಂದು ಶೇ. 6 ವಸೂಲಿ ಮಾಡಲಾಗುತ್ತದೆ. ಅದರಲ್ಲಿ ಶೇ.5.4 ಗ್ರಂಥಾಲಯಗಳಿಗೆ ಹಾಗೂ 0.6 ನಿರ್ವಹಣೆಗಾಗಿ ನಗರಸಭೆಗೆ ಸೇರಬೇಕು. ಆದರೆ ನಗರಸಭೆ ವಸೂಲಿ ಮಾಡಿದ ಹಣವನ್ನು ಗ್ರಂಥಾಲಯಕ್ಕೆ ಸಮರ್ಪಕವಾಗಿ ನೀಡುತ್ತಿಲ್ಲ. ಸುಮಾರು 20 ಲಕ್ಷಕ್ಕೂ ಅಧಿ ಕ ಹಣ ನಗರಸಭೆ ಗ್ರಂಥಾಲಯಕ್ಕೆ ನೀಡಬೇಕು. ಆದರೆ, ಮಧ್ಯ-ಮಧ್ಯೆ 1 ಲಕ್ಷ ರೂ. ನೀಡಿದೆ. ತಾಲೂಕಿನ ಇಂಗಳಗಿಯಲ್ಲಿ ಸಾರ್ವಜನಿಕ ಗ್ರಂಥಾಲಯವಿದ್ದು, ಅಲ್ಲಿ ಪ್ರಭಾರಿಯಾಗಿ ರಮೇಶ ಜಂಬಗಿ ಎಂಬುವವರು ಕಾರ್ಯ ನಿರ್ವಹಿಸುತ್ತಿದ್ದಾರೆ.

 

-ಮಹಾಂತೇಶ ಈ. ಕರೆಹೊನ್ನ

Advertisement

Udayavani is now on Telegram. Click here to join our channel and stay updated with the latest news.

Next