Advertisement

NCRB Report ದೇಶದಲ್ಲಿ ಎದುರಾಗಿದೆ ಪ್ರಾಕೃತಿಕ ಸಂಪತ್ತಿಗೆ ಆಪತ್ತು

12:55 AM Dec 19, 2023 | Team Udayavani |

ಅನನ್ಯ ಪ್ರಾಕೃತಿಕ ಸಂಪತ್ತು, ವನ್ಯ ಶ್ರೀಮಂತಿಕೆ ಹಾಗೂ ಸಹಸ್ರಾರು ವನ್ಯಜೀವಿಗಳಿಗೆ ಭಾರತ ನೆಲೆಯಾಗಿದೆ. ಪ್ರತೀ ರಾಜ್ಯವು ತನ್ನದೇ ಆದ ನೈಸರ್ಗಿಕ ವೈಶಿಷ್ಟ್ಯವನ್ನು ಹೊಂದಿದೆ. ಈ ವಿಭಿನ್ನತೆಗಳೇ ಭಾರತವನ್ನು ವಿಶ್ವದಲ್ಲಿಯೇ ಗುರುತಿಸುವಂತೆ ಮಾಡಿದೆ. ನೈಸರ್ಗಿಕ ಸಂಪನ್ಮೂಲ ದೇಶದ ಪ್ರಮುಖ ಆದಾಯ ಮೂಲವಾಗಿದ್ದು ಇದರ ಬಳಕೆ ಮಿತಿಮೀರಿರುವುದರಿಂದ ದಿನೇದಿನೇ ನಮ್ಮ ಪರಿಸರ ವ್ಯವಸ್ಥೆ ಹದಗೆಡುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿನ ಪ್ರಾಕೃತಿಕ ಸಂಪತ್ತಿಗೆ ಆಪತ್ತು ಎದುರಾಗಿದೆ. ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ)ಯ ವರದಿಯಲ್ಲಿ ದೇಶದಲ್ಲಿ ದಾಖಲಾಗಿರುವ ಪರಿಸರ ಸಂಬಂಧಿತ ಪ್ರಕರಣಗಳು ಹಾಗೂ ವಿಲೇವಾರಿಗೆ ಬಾಕಿ ಇರುವ ಪ್ರಕರಣಗಳ ಬಗೆಗೆ ಉಲ್ಲೇಖಿಸಲಾಗಿದೆ. ಇದು ದೇಶದಲ್ಲಿ ಪರಿಸರದ ಮೇಲಣ ದೌರ್ಜನ್ಯ, ಕ್ರೌರ್ಯ ಹೆಚ್ಚುತ್ತಿರುವುದನ್ನು ಬೆಟ್ಟು ಮಾಡಿದೆ.

Advertisement

ಎನ್‌ಸಿಆರ್‌ಬಿ ವರದಿಯಲ್ಲಿ ಏನಿದೆ?
ಭಾರತದ ಸರಕಾರಿ ಸಂಸ್ಥೆಯಾದ ನ್ಯಾಶನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ ( ಎನ್‌ಸಿಆರ್‌ಬಿ ) ಕಳೆದ ವಾರ ಹೊರತಂದಿರುವ ತನ್ನ ವಾರ್ಷಿಕ ವರದಿಯಲ್ಲಿ ಭಾರತದಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪರಿಸರ ಸಂಬಂಧಿತ ಪ್ರಕರಣಗಳು ಹಾಗೂ ದೇಶದಲ್ಲಿ ನಡೆಯುತ್ತಿರುವ ಪರಿಸರ ವಿರೋಧಿ ಚಟುವಟಿಕೆಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. 1986ರಲ್ಲಿ ರಚನೆಯಾದ ಎನ್‌ಸಿಆರ್‌ಬಿ ದೇಶದಲ್ಲಿನ ಅಪರಾಧ ಹಾಗೂ ಅಪರಾಧಿಗಳ ಮಾಹಿತಿಯನ್ನು ಕಲೆಹಾಕಿ ದಾಖಲೀಕರಣಗೊಳಿಸುತ್ತ ಬಂದಿದೆ.

ಈ ಬಾರಿಯ ಎನ್‌ಸಿಆರ್‌ಬಿ ವರದಿಯ ಪ್ರಕಾರ ದೇಶದಲ್ಲಿ ಪರಿಸರ ಅಪರಾಧಗಳು 2021ಕ್ಕೆ ಹೋಲಿಸಿದರೆ 2022ರಲ್ಲಿ ಶೇ. 18ರಷ್ಟು ಇಳಿಕೆಯನ್ನು ಕಂಡಿದೆ. 2021ರಲ್ಲಿ 64,471ರಷ್ಟಿದ್ದ ಪರಿಸರ ಅಪರಾಧಗಳು 2022ರಲ್ಲಿ 52,920ಕ್ಕೆ ಇಳಿಕೆಯಾಗಿವೆ. ಆದರೆ ಪಂಜಾಬ್‌ನಲ್ಲಿ ಶೇ.50ರಷ್ಟು ಹಾಗೂ ಹರಿಯಾಣದಲ್ಲಿ ಶೇ.40ರಷ್ಟು ಏರಿಕೆಯಾಗಿದೆ. ಪಂಜಾಬ್‌ ಹಾಗೂ ಹರಿಯಾಣಕ್ಕೆ ಹೋಲಿಸಿದರೆ ಹಿಮಾಚಲ ಪ್ರದೇಶದಲ್ಲಿ ಅಪರಾಧಗಳು ಇಳಿಕೆಯಾಗಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ. ಲಕ್ಷ ಜನಸಂಖ್ಯೆಗೆ ಅನುಸಾರವಾಗಿ ಅಂಕಿಅಂಶಗಳನ್ನು ಪರಿಗಣಿಸಿದರೆ ಪಂಜಾಬ್‌, ಹರಿಯಾಣಗಳಲ್ಲಿ ಶೇ.0.2ರಷ್ಟು ಪರಿಸರ ಸಂಬಂಧಿತ ಅಪರಾಧಗಳು ದಾಖಲಾದರೆ, ಹಿಮಾಚಲ ಪ್ರದೇಶದಲ್ಲಿ ಶೇ.1.5 ರಷ್ಟು ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೇಸು
ಪರಿಸರ ಸಂರಕ್ಷಣ ಕಾಯಿದೆಯ ಅಡಿ 2022ರಲ್ಲಿ ಮಹಾರಾಷ್ಟ್ರದಲ್ಲಿ ಅತೀಹೆಚ್ಚು ಕೇಸುಗಳು ದಾಖಲಾಗಿವೆ. ಕಳೆದ ವರ್ಷ ಇಡೀ ದೇಶದಲ್ಲಿ ಈ ಕಾಯಿದೆಯಡಿ 559 ಕೇಸುಗಳು ದಾಖಲಾಗಿವೆ. ಆದರೆ 2021ರಲ್ಲಿ 489 ಕೇಸುಗಳು ದಾಖಲಾಗಿದ್ದವು. ಮಹಾರಾಷ್ಟ್ರದಲ್ಲಿ ಎರಡು ದಿನಕ್ಕೆ ಒಂದು ಕೇಸಿನಂತೆ ಒಟ್ಟಾರೆ 198 ಕೇಸುಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ 103 ಹಾಗೂ ತೆಲಂಗಾಣದಲ್ಲಿ 9 ಹಾಗೂ ಗೋವಾದಲ್ಲಿ 4 ಕೇಸುಗಳು ದಾಖಲಾಗಿವೆ.

ಕಾರಣವೇನು?
ಅತಿಯಾದ ನಗರೀಕರಣ ಪರಿಸರ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚಲು ಮುಖ್ಯ ಕಾರಣವಾಗಿವೆ. ಜತೆಗೆ ಸ್ಥಳೀಯ ಹಂತಗಳಲ್ಲಿ ಪರಿಸರ ರಕ್ಷಣೆಯ ನಿಯಮಗಳ ಅಸಮರ್ಪಕ ನಿರ್ವಹಣೆ ಹಾಗೂ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು, ನಗರೀಕರಣಕ್ಕೆ ಪೂರಕವಾಗಿ ನಡೆಯುವ ಅರಣ್ಯ ನಾಶ, ಅನೈತಿಕ ವಾಗಿ ಎಲ್ಲೆಂದರೆಲ್ಲಿ ಕಸಗಳನ್ನು ಸುಡುವುದು, ಜಲ ಮೂಲ ಮಾಲಿನ್ಯ ಹಾಗೂ ಇತರ ಚಟುವಟಿಕೆಗಳು ಇದಕ್ಕೆ ಇನ್ನಿತರ ಪ್ರಮುಖ ಕಾರಣಗಳಾಗಿವೆ.

Advertisement

– 2021-22ರಲ್ಲಿ ಪರಿಸರ ಸಂರಕ್ಷಣ ಕಾಯಿದೆ ಅಡಿ ದಾಖಲಾದ ಪ್ರಕರಣದಲ್ಲಿ ಶೇ.31ರಷ್ಟು ಹೆಚ್ಚಳವಾಗಿದೆ. ಅದೇ ಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯಿದೆಯಡಿ, ವಾಯು ಹಾಗೂ ಜಲ ಮಾಲಿನ್ಯ ಪ್ರಕರಣಗಳು ಶೇ.42ರಷ್ಟು ಏರಿಕೆಯಾಗಿವೆ.
– ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ವನ್ಯಜೀವಿ ಅಪರಾಧಗಳು ಇಳಿಕೆಯಾಗಿವೆ. ಇನ್ನು ಉಳಿದ ವನ್ಯಜೀವಿ ಪ್ರಕರಣಗಳನ್ನು ಪರಿಹರಿಸಲು 14 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
– 2020-22ರಲ್ಲಿ ಅರಣ್ಯ ಕಾಯಿದೆಯಡಿ ದಾಖಲಾದ ಪ್ರಕರಣಗಳಲ್ಲಿ ಶೇ.19 ರಷ್ಟು ಏರಿಕೆಯಾಗಿದೆ. 2020ರಲ್ಲಿ 1,921ರಷ್ಟು ದಾಖಲಾಗಿದ್ದ ಪ್ರಕರಣಗಳು, 2022ರಲ್ಲಿ 2,287ಕ್ಕೆ ಏರಿಕೆ ಕಂಡಿದೆ.
– ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಹರಿ ಯಾಣ ರಾಜ್ಯಗಳಲ್ಲಿ ಅರಣ್ಯ ಸಂಬಂಧಿ ಅಪರಾಧಗಳು ಏರಿಕೆ ಕಂಡಿದ್ದು, ಇತರ 13 ರಾಜ್ಯಗಳು ಇಳಿಕೆಯನ್ನು ಕಂಡಿವೆ.
-ಬಿಹಾರ, ಪಂಜಾಬ್‌, ಮಿಜೋರಾಂ, ರಾಜಸ್ಥಾನ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ವನ್ಯಜೀವಿ ಅಪರಾಧ ಪ್ರಕರಣಗಳು ಏರಿಕೆ ಕಂಡಿವೆ ಎಂದು ವರದಿಯ ಅಂಕಿಅಂಶಗಳು ಹೇಳಿವೆ.

80,000 ಪ್ರಕರಣಗಳು ವಿಲೇವಾರಿಗೆ ಬಾಕಿ
ಇನ್ನು ಭಾರತದ ನ್ಯಾಯಾಲಯಗಳಲ್ಲಿ 2022ರಲ್ಲಿ ಸುಮಾರು 88,400 ಪರಿಸರ ಸಂಬಂಧಿತ ಕೇಸುಗಳು ವಿಲೇವಾರಿಗೆ ಬಾಕಿ ಉಳಿದಿವೆ. ಒಂದು ವರ್ಷದ ಈ ಬಾಕಿಯನ್ನು ತೆರವುಗೊಳಿಸಲು ನ್ಯಾಯಾಲಯವು ದಿನಕ್ಕೆ ಕನಿಷ್ಠ 242 ಪ್ರಕರಣಗಳನ್ನು ವಿಲೇವಾರಿ ಮಾಡಬೇಕಾಗಿದೆ. ಕಳೆದ ವರ್ಷ ನ್ಯಾಯಾಲಯವು ದಿನಕ್ಕೆ ಸರಾಸರಿ 129 ಪ್ರಕರಣಗಳನ್ನು ಪರಿಹರಿಸಿದೆ. ಈಗಿನ ಪರಿಸ್ಥಿತಿಯಲ್ಲಿ ನ್ಯಾಯಾಲಯಗಳಿಗೆ ಪ್ರಕರಣಗಳನ್ನು ಪರಿಹರಿಸಲು 8 ರಿಂದ 33 ವರ್ಷಗಳು ಬೇಕಾಗಬಹುದು ಎಂದು ಹೇಳಲಾಗಿದೆ. ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪರಿಸರ ಸಂಬಂಧಿತ ಅಪರಾಧ:
7 ಕಾಯಿದೆಗಳ ಅಡಿ ಪ್ರಕರಣ ದಾಖಲು
-ಅರಣ್ಯ ಕಾಯಿದೆ 1927
– ಅರಣ್ಯ ಸಂರಕ್ಷಣ ಕಾಯಿದೆ 1980
– ವನ್ಯಜೀವಿ ರಕ್ಷಣ ಕಾಯಿದೆ 1972
– ಪರಿಸರ ಸಂರಕ್ಷಣ ಕಾಯಿದೆ 1986
– ವಾಯು ಮತ್ತು ಜಲ ನಿಯಂತ್ರಣ ಹಾಗೂ ಮಾಲಿನ್ಯ ತಡೆ ಕಾಯಿದೆ , ಸಿಗರೇಟ್‌ ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯಿದೆ 2003
– ಶಬ್ದ ಮಾಲಿನ್ಯ ತಡೆ ಕಾಯಿದೆ 2000
-ನ್ಯಾಶನಲ್‌ ಗ್ರೀನ್‌ ಟ್ರಿಬ್ಯುನಲ್‌ ಆಕ್ಟ್ 2010

-ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next