Advertisement

ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಧ್ವನಿಯಾಗಬೇಕಿದೆ

05:47 PM Jul 21, 2020 | mahesh |

ಬಡತನ, ಹೆತ್ತವರ ಒತ್ತಡ ಅಥವಾ ಅಸಡ್ಡೆ, ಯಾವುದೋ ಆಸೆ, ಆಮಿಷಗಳ ಪರಿಣಾಮ ವಿಶ್ವಾದ್ಯಂತ ಕೋಟ್ಯಂತರ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ಸಾಗಿಸುವಂತಾಗಿದೆ. ಬಾಲ್ಯದ ಆಟ-ಪಾಠಗಳಿಲ್ಲದೆ ತಂದೆ-ತಾಯಿಯ ಮಮತೆ, ಪ್ರೀತಿಗಳಿಲ್ಲದೆ ಈ ಮಕ್ಕಳ ಬದುಕು ಮುದುಡಿ ಹೋಗುತ್ತಿರುವುದು ನಾಗರಿಕ ಸಮಾಜದ ವಿಪರ್ಯಾಸವೇ ಸರಿ.

Advertisement

ಮನಸ್ಸು ಎನ್ನುವುದು ಯೋಚನೆ, ಜೀವನ ಶೈಲಿಗಳ ಪ್ರಭಾವ ಮತ್ತು ಆಚರಣೆಯ ಸಂಗ್ರಹ ರೂಪ. ಅದಕ್ಕೆ ಆಕಾರ ಕೊಡುವುದು, ವಿಕಾರಗೊಳಿಸುವುದು ನಮ್ಮ ಕೈಯಲ್ಲೇ ಇದೆ. ಹೀಗೆ ರೂಪುಗೊಳ್ಳುವ ವಿಶೇಷ ಕಾಲ ಘಟ್ಟವೇ ಬಾಲ್ಯ. ಬಸ್‌ ಚಾಲಕರನ್ನು ನೋಡಿ, ತಾನೂ ಹಾಗಾಗಬೇಕು ಅನ್ನೋ ರೀತಿ ಕಣ್ಣೆದುರು ವಿಭಿನ್ನವಾಗಿ ಕಂಡದ್ದನ್ನೆಲ್ಲ ಕಣ್ಣರಳಿಸಿ, ತಾನೂ ಹಾಗಾಗಬೇಕು ಎಂದು ಕನಸು ಕಾಣುವ ಮಕ್ಕಳು ಹದಗೊಳಿಸಿ ಮುದ್ದೆಮಾಡಿಟ್ಟ ಒದ್ದೆ ಮಣ್ಣಿನಂತೆ. ಎಸೆದ ಕಲ್ಲಾದರೂ ಸರಿ, ಇಟ್ಟ ಕೈಯಾದರೂ ಸರಿ, ಅದರ ಆಕಾರ ಪಡೆದುಕೊಳ್ಳುವ ಕಾಲವೇ ಬಾಲ್ಯ. ಇಂಥ ಬಾಲ್ಯವೇ ದುಡಿಮೆ, ಹಿಂಸೆಗಳ ಆಗರವಾದರೆ ಅವರ ಭವಿಷ್ಯ ಇನ್ನೂ ಬರ್ಬರ ಹಾದಿ ಹಿಡಿಯುತ್ತದೆ.

ಬಾಲ ಕಾರ್ಮಿಕ ನಿರ್ಮೂಲನೆಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯೂ ಪ್ರತಿ ವರ್ಷದ ಜೂನ್‌ 12ರಂದು ಬಾಲ ಕಾರ್ಮಿಕ ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ. ಮಕ್ಕಳ ಶೋಷಣೆಯ ವಿರುದ್ಧ ಎದ್ದ ಕೂಗಿನ ಪ್ರತಿಫ‌ಲವೇ ಈ ಆಚರಣೆ. ಈ ದಿನದಂದು ಬಾಲ ಕಾರ್ಮಿಕತನದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ 4.5 ಮಿಲಿಯನ್‌ ಬಾಲ ಕಾರ್ಮಿಕರಿದ್ದಾರೆ.

ಗಮನಿಸಬೇಕಾದ ವಿಚಾರವೆಂದರೆ ಈ ಮಕ್ಕಳು 5 ರಿಂದ 15 ವರ್ಷದೊಳಗಿನವರು ಎಂದು ತಿಳಿದುಬಂದಿದೆ. ಅಪಾಯಕಾರಿ ಕಾರ್ಖಾನೆಗಳಲ್ಲಿ, ಬೇರೆಯವರ ಮನೆಯ ಕೆಲಸದಲ್ಲಿ, ಕಟ್ಟಡ ನಿರ್ಮಾಣದಂತಹ ಕೆಲಸಗಳಲ್ಲಿ ಅತಿ ಹೆಚ್ಚು ಮಕ್ಕಳು ದುಡಿಯುತ್ತಿದ್ದಾರೆ. ಅದು ಅವರ ಆರೋಗ್ಯದ ಮೇಲೂ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಭಾರತ ಸರಕಾರವು 2006 ಆಗಸ್ಟ್‌ 1ರಂದು ಬಾಲ ಕಾರ್ಮಿಕ ಪದ್ಧತಿಯನ್ನು ನಿಷೇಧಿಸಿತು. ಈ ಕಾಯ್ದೆಯನ್ನು ಅಕ್ಟೋಬರ್‌ 10ರಂದು ಜಾರಿಗೊಳಿಸಲಾಗಿದೆ. ಇದರನ್ವಯ 16 ವರ್ಷದೊಳಗಿನ ಮಕ್ಕಳನ್ನು ಕಾರ್ಖಾನೆ, ಹೊಟೇಲ್‌ಗಳಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಇದು ಅಪರಾಧ ಎಂದು ಪರಿಗಣಿಸಿ, ಅವರಿಗೆ ಕಠಿನ ಶಿಕ್ಷೆ ನೀಡಲಾಗುತ್ತದೆ.

ಜಗತ್ತಿನಾದ್ಯಂತ ಬಾಲ ಕಾರ್ಮಿಕರ ಸಮಸ್ಯೆ ಇಂದು ಹೆಚ್ಚು ಬಿಗಡಾಯಿಸಿದೆ. ಶಿಕ್ಷಣ ಪಡೆದು ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಬೇಕಾದ ಮಕ್ಕಳು ತಮ್ಮ ಕುಟುಂಬ ನಿರ್ವಹಣೆ, ಮೂರು ಹೊತ್ತಿನ ಊಟಕ್ಕಾಗಿ ದುಡಿಮೆಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ವಿರುದ್ಧ ಧ್ವನಿಯಾಗಬೇಕಿದೆ. ಹೆತ್ತವರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಅವರಿಗೆ ಮಕ್ಕಳ ಭವಿಷ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಇದು ಇಂದು ಆಗಬೇಕಾದ ತುರ್ತು ಕಾರ್ಯ.

Advertisement


ದಿನೇಶ ಎಂ. ಎಸ್‌ಡಿಎಂ ಸ್ನಾತಕೋತ್ತರ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next