Advertisement

ನಾಡಕಚೇರಿಗೆ ಅಧಿಕಾರಿಗಳೇ ಬರಲ್ಲ

02:44 PM Nov 17, 2019 | Team Udayavani |

ಕೋಲಾರ: ತಾಲೂಕಿನ ನರಸಾಪುರ ನಾಡಕಚೇರಿಗೆ ಸರಿಯಾಗಿ ಬಾರದೇ, ಜನರ ಕೈಗೂ ಸಿಗದ ಅಧಿಕಾರಿಗಳನ್ನು ಹುಡುಕಿ ಕೊಟ್ಟು, ಅಕ್ರಮಗಳಿಗೆ ಕಡಿವಾಣ ಹಾಕಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ನಾಡ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಹರ್ಷದ್‌ ಆಲಿಗೆ ಮನವಿ ನೀಡಲಾಯಿತು.

Advertisement

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜನ ಸಾಮಾನ್ಯರ ನಾಡಕಚೇರಿಯಲ್ಲಿ ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರ ಪಡೆಯಬೇಕಾದರೆ ಒಂದು ದಲ್ಲಾಳಿಗಳನ್ನು ಅವಲಂಬಿಸಬೇಕು. ಇಲ್ಲವೇ ಕೂಲಿ ಬಿಟ್ಟು ದಿನದ 24 ಗಂಟೆ ನಾಡಕಚೇರಿಯಲ್ಲಿ ಕಾಯಬೇಕು. ಅಧಿಕಾರಿಗಳಿಗಾಗಿ ಜನ ಸಾಮಾನ್ಯರು ಕಾದು ಕಾದು ಸುಸ್ತಾಗಿ, ಸರ್ಕಾರದ ಯೋಜನೆಗಳು ಬೇಡ ಎನ್ನುವ ಮಟ್ಟಕ್ಕೆ ಬಂದಿದ್ದಾರೆ ಎಂದು ಆಪಾದಿಸಿದರು.

ದಾಖಲೆ ಬೇಕಿದ್ರೆ ಲಂಚ ಕೊಡ್ಬೇಕು: ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ತಮ್ಮ ವೈಯಕ್ತಿಕ ಕೆಲಸಗಳಲ್ಲಿ ತೊಡಗಿ, ಜನ ಸಾಮಾನ್ಯರನ್ನು ಹಿಂಸೆ ಮಾಡುತ್ತಿದ್ದಾರೆ. ಮತ್ತೂಂದೆಡೆ ಸರ್ಕಾರದ ಯೋಜನೆಗಳನ್ನು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇಕಾಗುವ ವಿವಿಧ ದಾಖಲೆಗಳನ್ನು ಪಡೆಯಬೇಕಾದರೆ ತಿಂಗಳಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಾಡಕಚೇರಿಯಲ್ಲಿದೆ. ಅದರ ಜೊತೆಗೆ ಆಧಾರ್‌ ಪಡೆಯಬೇಕಾದರೆ ಲಂಚ ನೀಡಬೇಕು ಎಂದು ಆರೋಪಿಸಿದರು.

ಗಮನ ಹರಿಸುತ್ತಿಲ್ಲ: ಜಿಲ್ಲಾ ಮುಖಂಡ ಕೆ.ಇ.ಬಿ.ಚಂದ್ರು ಮಾತನಾಡಿ, ನಾಡಕಚೇರಿ ಮೂಲ ಸೌಕರ್ಯ ಇಲ್ಲದೆ, ಭೂತಬಂಗಲೆಯಾಗಿದೆ. ಜನ ಸಾಮಾನ್ಯರು ಕೆಲಸಗಳಿಗೆ ಅಲ್ಲಿನ ಸಿಬ್ಬಂದಿಯ ಉತ್ತರ ಸರ್ವರ್‌, ವಿದ್ಯುತ್‌ ಮತ್ತಿತರ ನೂರೊಂದು ಸಮಸ್ಯೆ ಹೇಳಿ ಜನ ಸಾಮಾನ್ಯರ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದರೂ, ಹಿರಿಯ ಅ ಧಿಕಾರಿಗಳು ನಾಡ ಕಚೇರಿಗಳತ್ತ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಅಕ್ರಮಗಳಿಗೆ ಕಡಿವಾಣ ಹಾಕುವ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಅ ಧಿಕಾರಿ ಹರ್ಷದ್‌ ಆಲಿ,ನಾಡ ಕಚೇರಿಯಲ್ಲಿ ಸಿಬ್ಬಂದಿಯ ಕೊರತೆಯ ಜೊತೆಗೆ ಅವ್ಯವಸ್ಥೆಗಳು ಇರುವುದು ನಿಜ ಸಿಬ್ಬಂದಿಯನ್ನು ಇತರೆ ಕೆಲಸಗಳಿಗೆ ನೇಮಕ ಮಾಡುತ್ತಾರೆ. ನಮಗೂ ಕೆಲಸದ ಒತ್ತಡ ಹೆಚ್ಚಾಗುತ್ತಿರುವುದರಿಂದ ಜನ ಸಾಮಾನ್ಯರಿಗೆ ಸ್ಪಂದಿಸಲು ಆಗುತ್ತಿಲ್ಲ. ಈ ಮನವಿಯನ್ನು ಮೇಲಧಿಕಾರಿಗಳಿಗೆ ತಲುಪಿಸಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಅಕ್ರಮಗಳಿಗೆ ಕಡಿವಾಣ ಹಾಕುವ ಭರವಸೆ ನೀಡಿದರು.

Advertisement

ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ರೆಹಮಾನ್‌, ಹೊಸಹಳ್ಳಿ ಮಂಜುನಾಥರೆಡ್ಡಿ, ಅಮರನಾರಾಯಣಸ್ವಾಮಿ,ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಈಕಂಬಳ್ಳಿ ಮಂಜುನಾಥ ನರಸಿಂಹ, ನಾಗೇಶ್‌, ಸತೀಶ್‌, ಅಂಜನ್‌, ರವಿ, ರಾಜು, ಟಿಪ್ಪು, ವೆಂಕಟೇಶ್‌, ಮಂಜುನಾಥ್.ಟಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next