ತೆಕ್ಕಟ್ಟೆ : ಮೊದಲ ಮಳೆಗೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಕ್ಕಟ್ಟೆ ರಾ.ಹೆ.66 ರಲ್ಲಿ ಒಳಚರಂಡಿ ಸಮಸ್ಯೆಯಿಂದಾಗಿ ರಸ್ತೆ ಇಕ್ಕೆಲಗಳಲ್ಲಿ ಮಳೆ ನೀರು ಶೇಖರಣೆಯಾಗುವ ಪರಿಣಾಮ ಪಾದಚಾರಿಗಳು ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಅವ್ಯವಸ್ಥಿತ ಒಳಚರಂಡಿ
ಮುಂಗಾರು ಮಳೆ ಆಗಮನದ ನಿರೀಕ್ಷೆಯಲ್ಲಿ ರುವ ರೈತಾಪಿ ವರ್ಗ ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ರಾ.ಹೆ.66ರ ಬದಿಯಲ್ಲಿ ಸಮರ್ಪಕವಾದ ಒಳಚರಂಡಿ ಸಮಸ್ಯೆಯಿಂದಾಗಿ ತೆಕ್ಕಟ್ಟೆ ಪ್ರಮುಖ ಭಾಗದ ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ, ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮೀಪ, ಕನ್ನುಕೆರೆ ಮಸೀದಿ ಎದುರು ಹಾಗೂ ತೆಕ್ಕಟ್ಟೆ ಪ್ರಮುಖ ಸರ್ಕಲ್ನಲ್ಲಿ ಮಳೆ ನೀರು ಸಮರ್ಪಕವಾಗಿ ಹರಿಯದೇ ರಸ್ತೆಯ ಇಕ್ಕೆಲದಲ್ಲೇ ನಿಂತಿರುವ ಪರಿಣಾಮ ಇಲ್ಲಿನ ಮೆಡಿಕಲ್, ಹೋಟೆಲ್, ದಿನಸಿ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಪ್ರಮುಖ ಪೇಟೆಗೆ ಆಗಮಿಸುವ ಸ್ಥಳೀಯರು ಹಾಗೂ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಎಚ್ಚೆತ್ತುಕೊಳ್ಳದ ಹೆ. ಪ್ರಾಧಿಕಾರ
ಜಿಲ್ಲೆಯ ರಾ.ಹೆ.66ರ ಒಳಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಸಂಗ್ರಹವಾಗಿರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯದೇ ಗ್ರಾಮೀಣ ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಸಾರ್ವಜನಿಕರು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಳಚರಂಡಿ ನಿರ್ವಹಣೆ ಕೊರತೆ ಕಾಣುತ್ತಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಗ್ರಾ.ಪಂ. ವ್ಯಾಪ್ತಿಯಲ್ಲಿನ ರಾ.ಹೆ. 66ರಲ್ಲಿನ ಒಳಚರಂಡಿ ಸಮಸ್ಯೆಗಳ ಬಗ್ಗೆ ಗ್ರಾ.ಪಂ. ಅನುದಾನ ಬಳಸಲು ಅವಕಾಶವಿಲ್ಲ. ಈಗಾಗಲೇ ಹೆದ್ದಾರಿ ಪ್ರಾಧಿಕಾರದವರು ರಸ್ತೆಯ ಎರಡು ಕಡೆಗಳಲ್ಲಿ ಸುಮಾರು 40 ಮೀಟರ್ ಅಂತರವನ್ನು ಸ್ವಾಧೀನಪಡಿಸಿಕೊಂಡಿ ರುವುದರಿಂದ ಹೆದ್ದಾರಿ ಪ್ರಾಧಿಕಾರದವರು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ಕೂಡ ತರಲಾಗುವುದು.
-ಮಮತಾ ದೇವಾಡಿಗ, ಅಧ್ಯಕ್ಷರು, ಗ್ರಾ.ಪಂ. ತೆಕ್ಕಟ್ಟೆ
Related Articles
ತುರ್ತು ಕ್ರಮ ಅಗತ್ಯ
ಈಗಾಗಲೇ ತೆಕ್ಕಟ್ಟೆ ಪ್ರಮುಖ ಭಾಗ ಸೇರಿದಂತೆ ರಾ.ಹೆ.66 ಸಮರ್ಪಕ ಒಳಚರಂಡಿಗಳೇ ಇಲ್ಲದೇ ಇರುವ ಪರಿಣಾಮ ಮಳೆಗಾಲದ ಸಂದರ್ಭದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಸಂಭವನೀಯ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತುರ್ತುಕ್ರಮ ಕೈಗೊಳ್ಳಬೇಕಾಗಿದೆ. – ಶ್ರೀನಾಥ ಶೆಟ್ಟಿ ಮೇಲ್ತಾರು ಮನೆ, ಸ್ಥಳೀಯರು
– ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ