Advertisement

ಯುವಕನ ಮೇಲೆ ಹಲ್ಲೆ, ಠಾಣೆಯಲ್ಲಿ ಟಾರ್ಚರ್‌

09:17 AM Apr 23, 2019 | Lakshmi GovindaRaju |

ಬೆಂಗಳೂರು: ಯುವಕನೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ ಆರೋಪ ಪ್ರಕರಣದಲ್ಲಿ ಡಿ.ಜೆ ಹಳ್ಳಿ ಪೊಲೀಸ್‌ ಠಾಣೆಯ ಪಿಎಸ್‌ಐ ಸಂತೋಷ್‌, ಪೊಲೀಸ್‌ ಪೇದೆ ಅಯ್ಯಪ್ಪರನ್ನು ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

Advertisement

ಕಾವಲ್‌ಭೈರಸಂದ್ರ ನಿವಾಸಿ ಮೊಹಮ್ಮದ್‌ ತನ್ವೀರ್‌ (23) ಎಂಬ ಯುವಕನ ಮೇಲೆ ಏ.9ರಂದು ರಾತ್ರಿ ಪಿಎಸ್‌ಐ ಸಂತೋಷ್‌ ಹಾಗೂ ಪೇದೆ ಅಯ್ಯಪ್ಪ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಸದ್ಯ, ಮೊಹಮದ್‌ ತನ್ವೀರ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮೊಹಮದ್‌ ತನ್ವೀರ್‌ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಪಿಎಸ್‌ಐ ಸಂತೋಷ್‌ ಹಾಗೂ ಪೇದೆ ಅಯ್ಯಪ್ಪರನ್ನು ಅಮಾನತುಗೊಳಿಸಲಾಗಿದೆ. ಇಬ್ಬರ ವಿರುದ್ಧವೂ ಡಿ.ಜೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೂರ್ವವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ “ಉದಯವಾಣಿ’ಗೆ ಖಚಿತಪಡಿಸಿದರು.

ಪೊಲೀಸರ ವಿರುದ್ಧ ಎಫ್ಐಆರ್‌!: ತನ್ವೀರ್‌ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪ ಸಂಬಂಧ ಪಿಎಸ್‌ಐ ಸಂತೋಷ್‌ ಹಾಗೂ ಪೇದೆ ಅಯ್ಯಪ್ಪ ಹಾಗೂ ಇತರೆ ಪೊಲೀಸರ ವಿರುದ್ಧ, ಐಪಿಸಿ 324 ( ಮಾರಕಾಸ್ತ್ರ ಬಳಸಿ ಹಲ್ಲೆ) 323 (ಹಲ್ಲೆ) 504, 149 ಕಲಂಗಳ ಅಡಿಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಆರೋಪಿಗಳಾದ ಪಿಎಸ್‌ಐ ಸಂತೋಷ್‌ ಹಾಗೂ ಪೇದೆ ಅಯ್ಯಪ್ಪ ಯುವಕನ ಮೇಲೆ ಹಲ್ಲೆ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಹೀಗಾಗಿ ಅಮಾನತು ಮಾಡಲಾಗಿದೆ. ತನಿಖೆ ಮುಂದುವ ರಿದಿದ್ದು ಈ ಕೃತ್ಯದಲ್ಲಿ ಇತರೆ ಅಧಿಕಾರಿ ಅಥವಾ ಸಿಬ್ಬಂದಿ ಪಾತ್ರವೂ ಕಂಡು ಬಂದರೆ ಅವರು ಅಮಾನತಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಔಷಧಿ ತರಲು ಹೋದವನಿಗೆ ಹಿಡಿದು ಹೊಡೆದ ಪೊಲೀಸ್‌!: ಕಾವಲ್‌ ಭೈರಸಂದ್ರದ ರತನ್‌ ಸಿಂಗ್‌ ಲೇಔಟ್‌ ನಿವಾಸಿಯಾದ ಮೊಹಮದ್‌ ತನ್ವೀರ್‌ ಏ.9 ರಂದು ರಾತ್ರಿ ನೆರೆಮನೆಯ ನಿವಾಸಿಗೆ ಅಗತ್ಯವಿದ್ದ ಔಷಧಿ ತರುವ ಸಲುವಾಗಿ ಸ್ನೇಹಿತನ ಜತೆ ಬೈಕ್‌ನಲ್ಲಿ 1.45ರ ಸುಮಾರಿಗೆ ಸುಮಾರಿಗೆ ಹೊರಗಡೆ ಬಂದಿದ್ದರು.

ಈ ವೇಳೆ, ಗಸ್ತಿನಲ್ಲಿದ್ದ ಪೇದೆ ಅಯ್ಯಪ್ಪ ಅವರನ್ನು ತಡೆದಿದ್ದರು. ಬಳಿಕ ಕ್ಷುಲ್ಲಕ ಕಾರಣಕ್ಕೆ ಅಯ್ಯಪ್ಪ, ತನ್ವೀರ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಹೊಯ್ಸಳ ವಾಹನದಲ್ಲಿ ಆಗಮಿಸಿದ ಪಿಎಸ್‌ಐ ಸಂತೋಷ್‌ ಹಾಗೂ ಇತರೆ ಸಿಬ್ಬಂದಿ ಕೂಡ ತನ್ವೀರ್‌ನನ್ನು ಠಾಣೆಗೆ ಕರೆದೊಯ್ದು ಲಾಠಿ ಹಾಗೂ ಪೈಪ್‌ನಿಂದ ಹಲ್ಲೆ ನಡೆಸಿದ್ದರು ಎಂಬ ಆರೋಪವಿದೆ.

ಕ್ರಮ ಜರುಗಿಸಲು ಆಯುಕ್ತರಿಗೆ ದೂರು: ಮಾರನೇ ದಿನ ತನ್ವೀರ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಹಲವು ದಿನಗಳ ಬಳಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಪೊಲೀಸರು ನಡೆಸಿದ ಹಲ್ಲೆಯ ಕುರಿತು ಕ್ರಮ ಜರುಗಿಸುವಂತೆ ತನ್ವೀರ್‌ ಸಹೋದರ ಮೊಹಮದ್‌ ಮುಸಾವೀರ್‌ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಅವರಿಗೆ ದೂರು ನೀಡಿದ್ದರು.

ಈ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿಗೆ ಆಯುಕ್ತರು ಸೂಚನೆ ನೀಡಿದ್ದರು. ಡಿಸಿಪಿ ನೀಡಿದ ವರದಿ ಆಧರಿಸಿ ಇಬ್ಬರನ್ನೂ ಅಮಾನತುಗೊಳಿಸಿದ್ದು ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next