Advertisement

ವರ್ಷವಾದರೂ ದುರಸ್ತಿಯಾಗದ ನೀರಿನ ಘಟಕ

02:18 PM May 04, 2019 | Team Udayavani |

ರೋಣ: ಪಟ್ಟಣದ ಹೃದಯ ಭಾಗವೆಂದು ಕರೆಯಿಸಿಕೊಳ್ಳುವ ಪೋತರಾಜನಕಟ್ಟೆಯ ಪಕ್ಕದಲ್ಲಿರುವ ಶುದ್ಧ ನೀರಿನ ಘಟಕ ಬಂದಾಗಿ ವರ್ಷ ಕಳೆದರೂ ಇಲ್ಲಿನ ಪುರಸಭೆ ಅದರ ರಿಪೇರಿಗೆ ಮುಂದಾಗಿಲ್ಲ. ಇದು ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಪಟ್ಟಣಕ್ಕೆ ಎಂಟು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ನೀರಿಗಾಗಿ ಪಟ್ಟಣದ ಜನತೆ ಬೀದಿಗಿಳಿದು ಪ್ರತಿಭಟಿಸುವ ಸ್ಥಿತಿ ಬಂದೊದಗಿದೆ.

Advertisement

ಸದ್ಯ ಪಟ್ಟಣಕ್ಕೆ ಮಲಪ್ರಭಾ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಹತ್ತಿರವಿರುವ ಜಾಕ್‌ವೆಲ್ ಮೂಲಕ ಪಟ್ಟಣಕ್ಕೆ ನೀರನ್ನು ತಂದು ಇಲ್ಲಿ ಶುದ್ಧಿಕರಿಸಿ ನಂತರ ವಾರ್ಡ್‌ಗಳಿಗೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೆ ಪಟ್ಟಣದಲ್ಲಿ ಒಟ್ಟು 42 ಬೋರ್‌ವೆಲ್ಗಳಿದ್ದು, ಅವುಗಳಲ್ಲಿ 31 ಚಾಲ್ತಿಯಲ್ಲಿವೆ.

ಕುಡಿಯುವ ನೀರಿನ ಇಲಾಖೆಯ ತಜ್ಞರು ಹೇಳುವಂತೆ ಒಂದು ಬೋರ್‌ವೆಲ್ನಿಂದ ಒಂದು ತಾಸಿಗೆ 4 ಸಾವಿರ ಲೀಟರ್‌ ನೀರು ಹೊರ ಬರುತ್ತದೆ. ಒಂದು ಬೋರ್‌ವೆಲ್ ದಿನಕ್ಕೆ 8 ಗಂಟೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದು, ಒಂದು ಬೋರ್‌ವೆಲ್ ದಿನಕ್ಕೆ 32 ಸಾವಿರ ಲೀಟರ್‌ ನೀರನ್ನು ಒದಗಿಸುತ್ತವೆ. ಒಟ್ಟು 31 ಬೋರ್‌ವೆಲ್ ಸೇರಿದರೆ ದಿನವೊಂದಕ್ಕೆ 10,24,000 ಲೀಟರ್‌ ನೀರು ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿವೆ. ಇದು ಪಟ್ಟಣದ ಬೋರ್‌ವೆಲ್ಗಳಿಂದ ಸಿಗುವ ನೀರಿನ ಅಂಕಿ ಅಂಶವಾದರೆ, ಇನ್ನು ಚೊಳಚಗುಡ್ಡ ಜಾಕ್ವೆಲ್ನಲ್ಲಿ 50 ಎಚ್ಪಿ ಯಂತ್ರದ ಮೂಲಕ ನದಿಯಲ್ಲಿ ನೀರಿನ ಸಂಪನ್ಮೂಲ ಸರಿಯಾಗಿ ಇದ್ದರೆ ದಿನಕ್ಕೆ 10 ಲಕ್ಷ ಲೀಟರ್‌ ನೀರು ಪೂರೈಕೆ ಮಾಡ ಬಹುದಾಗಿದೆ.

ಪುರಸಭೆ ಮೇಲೆ ಸಂಶಯ: ಪಟ್ಟಣದ 23 ವಾರ್ಡ್‌ಗಳು ಸೇರಿ 25,500 ಜನಸಂಖ್ಯೆ ಹೊಂದಿದೆ. ನಗರ ಪ್ರದೇಶದಲ್ಲಿ ಒಬ್ಬ ಮನುಷ್ಯನಿಗೆ ದಿನ ಬಳಕೆಗೆ 100 ಲೀಟರ್‌ ಅಂದರೆ, ಒಟ್ಟು ಜನಸಂಖ್ಯೆಗೆ ಅನುಗುಣವಾಗಿ 26 ಲಕ್ಷ ಲೀಟರ್‌ ನೀರಿನ ಅವಶ್ಯಕತೆಯಿದ್ದು, ಸದ್ಯ 20 ಲಕ್ಷ ಲೀಟರ್‌ಗೂ ಹೆಚ್ಚು ನೀರು ದೊರೆಯುತ್ತದೆ. ಇದರಿಂದ ಕನಿಷ್ಠ 2-3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬಹುದಾಗಿದೆ. ಆದರೆ ಈಗ ಪಟ್ಟಣಕ್ಕೆ 8 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಪಟ್ಟಣದ ಜನತೆಗೆ ಪೂರೈಸಬೇಕಾದ ನೀರನ್ನು ಪುರಸಭೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಎಲ್ಲಿ ಹರಿಸುತ್ತಿದ್ದಾರೆ ಎಂಬ ಸಂಶಯ ಜನರಿಗೆ ಕಾಡುತ್ತಿದೆ.

ರೋಣ: ಪಟ್ಟಣದ ಪೋತರಾಜನಕಟ್ಟೆಯ ಬಳಿ ಸ್ಥಗಿತಗೊಂಡಿರುವ ಶುದ್ಧನೀರಿನ ಘಟಕ.

Advertisement

ಶೀಘ್ರ ರಿಪೇರಿಗೆ ಸೂಚನೆ

ತಕ್ಷಣವೇ 4ನೇ ವಾರ್ಡ್‌ನಲ್ಲಿ ಬರುವ ಪೋತರಾಜನಕಟ್ಟೆಯ ಪಕ್ಕದಲ್ಲಿರುವ ಶುದ್ಧ ನೀರಿನ ಘಟಕವನ್ನು ರಿಪೇರಿ ಮಾಡಿ ಅಲ್ಲಿನ ಸಾರ್ವಜನಿಕರಿಗೆ ಶುದ್ಧ ನೀರನ್ನು ನೀಡುವಂತೆ ಕೂಡಲೆ ರೋಣ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡುತ್ತೇನೆ.
•ಕಳಕಪ್ಪ ಬಂಡಿ, ರೋಣ ಶಾಸಕ

ಸ್ಥಗಿತಗೊಂಡು ವರ್ಷ ಕಳೆಯಿತು

ಪಟ್ಟಣದ ಹೃದಯವೆಂದು ಕರೆಯಿಸಿಕೊಳ್ಳುವ ಹಾಗೂ ಹೆಚ್ಚು ಕೃಷಿ ಕೂಲಿಕಾರ್ಮಿಕನ್ನು ಹೊಂದಿರುವ ಪೋತರಾಜನಕಟ್ಟೆಯ ಪಕ್ಕದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ವರ್ಷ ಕಳೆಯಿತು. ಆದರೂ ರಿಪೇರಿಯಾಗಿಲ್ಲ. ಇದರಿಂದ ಇಲ್ಲಿನ ಜನತೆ ದೂರದ ವಾರ್ಡ್‌ನಿಂದ ನೀರನ್ನು ತರಬೇಕಾಗಿದೆ.
•ವಿಜಯಕುಮಾರ ಸಜ್ಜನ್‌, ಸ್ಥಳೀಯ ನಿವಾಸಿ

ಕುಡಿಯುವ ನೀರಿಗೆ ಹಾಹಾಕಾರ

ಎಲ್ಲ ಕಾಲದಲ್ಲೂ ಪಟ್ಟಣದ ಜನರಿಗೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಸದಾ ಕಾಡುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ಹುಡಕಿ ಪಟ್ಟಣದ ಜನರಿಗೆ ಸಮರ್ಪಕ ನೀರನ್ನು ಒದಗಿಸಲು ಮುಂದಾದರೆ ಸಾಕು.
•ಜಯಪ್ರಕಾಶ ಬಳಗಾನೂರ, ಯುವ ಮುಖಂಡ
Advertisement

Udayavani is now on Telegram. Click here to join our channel and stay updated with the latest news.

Next